ಬೆಂಗಳೂರು: ಕೃಷಿ ಇಲಾಖೆ ಪ್ರಕಾರವೇ ಕಬ್ಬು ಉತ್ಪಾದನಾ ವೆಚ್ಚ 3,200 ರೂ. ಎಂದು ಅಂದಾಜಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಹತ್ತು ಇಳುವರಿಗೆ ಬರುವ ಕಬ್ಬಿಗೆ 2,900 ನಿಗದಿ ಮಾಡಿರುವುದು ಅವೈಜ್ಞಾನಿಕ. ಅದ್ದರಿಂದ ಕಬ್ಬಿನ ಎಫ್ಆರ್ಪಿ ದರ ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರು. ಅಲ್ಲದೇ ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದರು.
ಕಳೆದ ಎರಡು ವರ್ಷದಿಂದ ಕೇಂದ್ರ ಸರ್ಕಾರ ಎಫ್ಆರ್ಪಿ ದರ ಏರಿಕೆ ಮಾಡದೇ 21-22 ನೇ ಸಾಲಿಗೆ ಕೇವಲ ಕ್ವಿಂಟಲ್ಗೆ 5 ರೂ ಏರಿಕೆ ಮಾಡಿ, ಸಕ್ಕರ ಕಂಪನಿಗಳ ಒತ್ತಡಕ್ಕೆ ಮಣಿದು ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡ್ತಿದೆ. ಕಬ್ಬಿನ ಉತ್ಪಾದನೆ ವೆಚ್ಚ, ಸಾಗಣಿಕೆದಾರ, ಕಟಾವ್ ಕೂಲಿ, ರಸಗೊಬ್ಬರ, ಬೀಜ, ಕೃಷಿ ಕಾರ್ಮಿಕರ ಕೂಲಿ ದುಪ್ಪಟ್ಟು ಏರಿಕೆಯಾಗಿದೆ. ಕೃಷಿ ಇಲಾಖೆ ಪ್ರಕಾರವೇ ಕಬ್ಬು ಉತ್ಪಾದನಾ ವೆಚ್ಚ 3,200 ರೂ. ಎಂದು ಅಂದಾಜಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಇಳುವರಿ ಬರುವ ಕಬ್ಬಿಗೆ 2900 ನಿಗದಿ ಮಾಡಿರುವುದು ಅವೈಜ್ಞಾನಿಕ ಎಂದು ರೈತರು ಆಗ್ರಹಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಸಚಿವರು ಒಬ್ಬರೇ ಬಂದ್ರೇ ನಾವು ಸಂಧಾನಕ್ಕೆ ತಯಾರಿಲ್ಲ. ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ ಸಿಎಂ ಭರವಸೆ ಕೊಟ್ರಷ್ಟೇ ನಮ್ಮ ಹೋರಾಟ ನಿಲ್ಲಿಸುತ್ತೇವೆ. ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ರೇ ತಕ್ಕ ಪಾಠ ಕಲಿಸುತ್ತೇವೆ. ಕಬ್ಬಿನ ದರವನ್ನು ಕೇಂದ್ರ 2,900 ರೂ ನಿಗದಿ ಮಾಡಿ ನಮಗೆ ಮೋಸ ಮಾಡಿದೆ. ಈ ಎಫ್ ಆರ್ಪಿ ದರ ಕನಿಷ್ಟ ಪಕ್ಷ 3,500 ಮಾಡಲೇಬೇಕು. ಇಲ್ಲದೇ ಇದ್ರೇ ನಾವು ಹೋರಾಟ ನಿಲ್ಲಿಸೋದಿಲ್ಲ ಎಂದು ಕಿಡಿಕಾರಿದರು.
ರೈತರ ಮಾರಣಹೋಮ: ಕೇಂದ್ರ ಸರ್ಕಾರ ಉತ್ತರ ಪ್ರದೇಶದಲ್ಲಿ ರೈತರ ಮಾರಣಹೋಮ ಮಾಡಿದೆ. ಇದನ್ನ ನಾವು ತೀವ್ರವಾಗಿ ಖಂಡಿಸುತ್ತೇವೆ. ಅದೇ ಮಾದರಿಯಲ್ಲಿ ಇವತ್ತೇನಾದ್ರೂ ನಮ್ಮ ಹೋರಾಟ ಹತ್ತಿಕ್ಕಿದ್ರೇ ನಾವು ಪಾಠ ಕಲಿಸುತ್ತೇವೆ. ರಾಜ್ಯದ ವಿವಿಧ ಭಾಗಗಳಿಂದ ಕಬ್ಬು ಬೆಳೆಗಾರರು ಬಂದಿದ್ದೇವೆ, ವಿಧಾನಸೌಧ ಮುತ್ತಿಗೆ ಹಾಕ್ತೇವೆ. ಕಬ್ಬಿಗೆ ಬೆಂಬಲ ಬಲೆ ನೀಡ್ಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಸಕ್ಕರೆ ಕಾರ್ಖಾನೆ ವಿಚಾರವಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಪ್ರತಿಭಟನೆ ಮಾಡ್ತಾ ಇದ್ದೇವೆ ಎಂದರು.
ಎಲ್ಲಿಗೆ ಹೋಗ್ಬೇಕು ನಾವು: ಮಂತ್ರಿಗಳೇ ಇಲ್ಲಿಗೆ ಬರ್ತಾರೆ ಮಾತನಾಡಿ ಅಂತಾ ಪೊಲೀಸ್ರು ಹೇಳ್ತಾರೆ. ನಾವು ಒಂದು ತಿಂಗಳ ಮುಂಚೆನೆ ಮನವಿ ಕೊಟ್ಟಾಗ ಎಲ್ಲೋಗಿದ್ರು. ನಾವು ಹೋರಾಟ ಮಾಡ್ತಾ ಇದೀವಿ ಅಂತಾ ಬರ್ತಿನಿ ಅಂತಾರೆ. ಇದು ರೈತರ ಪರ ಸರ್ಕಾರವೇ..?, ಕಬ್ಬು ಬೆಳೆದು ಬೆಲೆ ನಿಗದಿ ಮಾಡುವ ಸಮಯದಲ್ಲಿ ನೀವು ಮೋಸ ಮಾಡ್ತಾ ಇದೀರಾ. ಒಂದು ಕಡೆ ಬ್ಯಾಂಕ್ ನವರ ಕಿರುಕುಳ. ಎಲ್ಲಿ ಹೋಗಬೇಕು ನಾವು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.