ಕರ್ನಾಟಕ

karnataka

ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ದಿಢೀರ್ ಬುಲಾವ್

By

Published : Dec 11, 2022, 12:42 PM IST

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನವದೆಹಲಿಯಲ್ಲಿ ರಾಜ್ಯ ನಾಯಕರ ಸಭೆ ಜರುಗಲಿದೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆ, ರಥಯಾತ್ರೆ ಹಾಗು ಪಕ್ಷ ಸಂಘಟನೆ ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರಲಿದೆ ಎನ್ನಲಾಗಿದೆ.

KPCC President DK Shivakumar Leader of Opposition Siddaramaiah
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಮುಂದಿನ ಕೆಲವೇ ತಿಂಗಳಲ್ಲಿ ನಡೆಯಲಿದ್ದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ದಿಢೀರ್ ಬುಲಾವ್ ನೀಡಿದೆ. ದೆಹಲಿಗೆ ಬರುವಂತೆ ಸೂಚನೆ ಬಂದಿದ್ದು, ನಾಳೆ ತೆರಳಲಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ ಬಿ ಪಾಟೀಲ್, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಲೀಂ ಅಹಮ್ಮದ್, ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ, ಧ್ರುವ ನಾರಾಯಣ್ ಮತ್ತಿತರರು ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಲಿದ್ದಾರೆ.

ಚುನಾವಣೆಗೆ ರಣತಂತ್ರ ರೂಪಿಸುವ ಕುರಿತು ರಾಜ್ಯ ನಾಯಕರ ಜತೆ ಮಹತ್ವದ ಮಾತುಕತೆ ನಡೆಸಲಿರುವ ಹೈಕಮಾಂಡ್, ಅಭ್ಯರ್ಥಿಗಳ ಆಯ್ಕೆ ವಿಚಾರ, ರಥಯಾತ್ರೆ, ಪಕ್ಷ ಸಂಘಟನೆ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಲಿದೆ.

ರಥಯಾತ್ರೆ ದಿನಾಂಕ ನಿಗದಿ​:ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದ್ದು, ಜನವರಿಯಿಂದ ಸಿದ್ದರಾಮಯ್ಯ ರಥಯಾತ್ರೆ ಶುರುಮಾಡಲು ತೀರ್ಮಾನಿಸಿದ್ದಾರೆ. ಜನವರಿ 3ರಿಂದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಬಸ್ ರಥಯಾತ್ರೆ ಆರಂಭವಾಗಲಿದೆ. ರಾಜ್ಯದ ಮೂಲೆಮೂಲೆಗೆ ಸಂಚರಿಸಲಿರುವ ಈ ರಥಯಾತ್ರೆ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಕೆಲಸ ಮಾಡಲಿದೆ.

ಮಲ್ಲಿಕಾರ್ಜುನ ಖರ್ಗೆ ಭಾಗಿ:ರಾಜ್ಯದ 224 ಕ್ಷೇತ್ರಗಳಲ್ಲೂ ರಥಯಾತ್ರೆ ಸಂಚಾರ ಮಾಡಲಿದ್ದು, ರಾಜ್ಯ ನಾಯಕರ ಜತೆ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಭಾಗಿಯಾಗಲಿದ್ದಾರೆ. ರಾಜ್ಯದ ಉದ್ದಗಲಕ್ಕೂ ನಿರಂತರವಾಗಿ ಪ್ರಚಾರ ಮಾಡುವ ಕಾಂಗ್ರೆಸ್ ನಾಯಕರು ಮತದಾರರ ಮನೆಮನ ತಲುಪಲು ಪ್ರಯತ್ನ ಮಾಡಲಿದ್ದಾರೆ.

ರಾಷ್ಟ್ರೀಯ ನಾಯಕರೊಂದಿಗೆ ಸಭೆ: ಸಕಾಲಕ್ಕೆ ಕರೆಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈಗ ಹೈಕಮಾಂಡ್ ಬುಲಾವ್ ಕೊಟ್ಟಿದೆ. ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಸಹ ಈ ಸಭೆಯಲ್ಲಿ ಇರಲಿದ್ದಾರೆ.

ಹೊಸ ತಂತ್ರಗಾರಿಕೆಗೆ ಮಾರ್ಗದರ್ಶನ:ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮದ ಕುರಿತು ಹಾಗೂ ತಂತ್ರಗಾರಿಕೆಯ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆಯಾಗಲಿದೆ. ಬೇರೆ ಪಕ್ಷಗಳಿಂದ ಕಾಂಗ್ರೆಸ್​ಗೆ ಸೇರ ಬಯಸುವವರ ನಿಜವಾದ ಕಾಳಜಿ, ಅರ್ಹತೆ ಅರ್ಥ ಮಾಡಿಕೊಂಡು, ಪಕ್ಷಕ್ಕೆ ಅಗತ್ಯ ಅನ್ನಿಸಿದರೆ ಮಾತ್ರ ಸೇರ್ಪಡೆ ಮಾಡಿಕೊಳ್ಳುವಂತೆ ರಾಷ್ಟ್ರೀಯ ನಾಯಕರು ಮಾರ್ಗದರ್ಶನ ನೀಡಲಿದ್ದಾರೆ.

ಈಗ ಕಾಂಗ್ರೆಸ್ ಸೇರಿ ಗೆದ್ದು, ನಂತರ ಅಧಿಕಾರಕ್ಕಾಗಿ ಇನ್ನೊಂದು ಪಕ್ಷಕ್ಕೆ ಜಿಗಿಯುವ ಜಾಯಮಾನದವರಿಗೆ, ಸಾಕಷ್ಟು ಸಾರಿ ಪಕ್ಷಾಂತರ ಮಾಡಿದವರಿಗೆ ಮತ್ತೆ ಮಣೆ ಹಾಕದಂತೆ ಸೂಚಿಸಲಿದ್ದಾರೆ. ಒಟ್ಟಾರೆ ವಿವಿಧ ಹಂತದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾರ್ಗದರ್ಶನ ನೀಡಿ, ಹೇಗೆ ಚುನಾವಣೆಗೆ ಸಜ್ಜಾಗಬೇಕು ಎಂಬ ಕುರಿತು ಮಾಹಿತಿ ನೀಡಿ ಕಳುಹಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂಓದಿ:ಚುನಾವಣೆಗೆ ಐದಾರು ತಿಂಗಳು ಮುನ್ನವೇ ಸಂಭಾವ್ಯ 'ಕೈ' ಅಭ್ಯರ್ಥಿಗಳ ಪಟ್ಟಿ ರೆಡಿ: ವಿವರ ಇಲ್ಲಿದೆ..

ABOUT THE AUTHOR

...view details