ಕರ್ನಾಟಕ

karnataka

ಬಿಜೆಪಿಯಿಂದ ಮತದಾರರ ಚೇತನ ಮಹಾಭಿಯಾನ: ಶೋಭಾ ಕರಂದ್ಲಾಜೆ

By ETV Bharat Karnataka Team

Published : Aug 25, 2023, 6:23 PM IST

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿರ್ದೇಶನದಂತೆ ಹೊಸ ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

shobha-karandlaje-reaction-on-bjp-maha-chetana-abhiyana
ಬಿಜೆಪಿಯಿಂದ ಮತದಾರರ ಚೇತನ ಮಹಾಭಿಯಾನ: ಶೋಭಾ ಕರಂದ್ಲಾಜೆ

ಬೆಂಗಳೂರು: "ಲೋಕಸಭಾ ಚುನಾವಣೆಗೆ ಸಿದ್ಧತೆಯ ಭಾಗವಾಗಿ ರಾಜ್ಯದಲ್ಲಿ ಸೆಪ್ಟೆಂಬರ್ 1 ರಿಂದ 10 ರವರೆಗೆ ಮತದಾರರ ಚೇತನ ಮಹಾಭಿಯಾನ ನಡೆಸಲಾಗುತ್ತದೆ. ಅದಕ್ಕಾಗಿ ಪಕ್ಷದ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದ ತಂಡ ರಚಿಸಲಾಗಿದ್ದು, ಪರಿಣಾಮಕಾರಿಯಾಗಿ ಪಟ್ಟಿ ಪರಿಷ್ಕರಣೆ ಆಗುವಂತೆ ನೋಡಿಕೊಳ್ಳಲಾಗುತ್ತದೆ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

"ಮತದಾರರ ಚೇತನ ಮಹಾಭಿಯಾನಕ್ಕೆ ಪಕ್ಷವು ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಲೋಕಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಇದು ಚುನಾವಣಾ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯವಾದ ಪ್ರಕ್ರಿಯೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾರವರ ನಿರ್ದೇಶನದಂತೆ ಹೊಸ ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯ ಕಾರ್ಯವನ್ನು ಆದ್ಯತೆಯ ಮೇರೆಗೆ ಮಾಡಬೇಕಾಗಿದೆ. ರಾಜ್ಯದ 58 ಸಾವಿರಕ್ಕೂ ಹೆಚ್ಚು ಬೂತ್‍ಗಳಲ್ಲಿ ಈ ಕಾರ್ಯ ನಡೆಯಲಿದೆ" ಎಂದು ವಿವರಿಸಿದರು.

"ಪ್ರತಿ ಜಿಲ್ಲೆಯಲ್ಲಿ ಈ ಕಾರ್ಯಕ್ಕಾಗಿ 3 ಸದಸ್ಯರ ಜಿಲ್ಲಾ ಸಮಿತಿ ಮತ್ತು ವಿಧಾನಸಭೆ ಕ್ಷೇತ್ರಕ್ಕೆ 3 ಜನರ ಸಮಿತಿ ಮತ್ತು ಶಕ್ತಿ ಕೇಂದ್ರ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ. ವಿಧಾನಸಭಾ ಮಟ್ಟದಲ್ಲಿ ಬಿಎಲ್‍ಎ-1 ಮತ್ತು ಬೂತ್ ಮಟ್ಟದಲ್ಲಿ ಬಿಎಲ್‍ಎ-2 ನೇಮಕ ಮಾಡುತ್ತಿದ್ದೇವೆ.ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯಾಗಾರ ಮತ್ತು ಶಕ್ತಿ ಕೇಂದ್ರ ಮಟ್ಟದಲ್ಲಿ ಬಿಎಲ್‍ಎ-2 ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಜಿಲ್ಲೆಯ ಸಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ಬಿಎಲ್‍ಒಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಅಗತ್ಯಕ್ಕೆ ಅನುಗುಣವಾಗಿ ತಮ್ಮ ದೂರುಗಳನ್ನು ನೋಂದಾಯಿಸಬೇಕು. ಶಕ್ತಿ ಕೇಂದ್ರ ಮಟ್ಟದಲ್ಲಿ ತಾಂತ್ರಿಕ ಹಿನ್ನೆಲೆ ಹೊಂದಿರುವ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ನೇಮಿಸಲಾಗುತ್ತದೆ" ಎಂದರು.

"ಹೊಸ ಮತದಾರರ ನೋಂದಣಿಗೆ ಅರ್ಜಿ ನಮೂನೆ-6, ಸೇರ್ಪಡೆ ಆಗುವ ಹಾಗೂ ತೆಗೆದು ಹಾಕುವ ಕ್ರಿಯೆಗೆ ನಮೂನೆ-7, ವಿಳಾಸ ಬದಲಾವಣೆಗೆ ನಮೂನೆ-8 ಅರ್ಜಿಗಳನ್ನು ಅಗತ್ಯ ಪ್ರಮಾಣದಲ್ಲಿ ಮುದ್ರಿಸಿ ಬೂತ್ ಮಟ್ಟದಲ್ಲಿ ವಿತರಿಸಲಾಗುತ್ತದೆ. ಪಕ್ಷದ ಕಾರ್ಯಕರ್ತರಿಂದ ಮನೆ ಮನೆಗೆ ಪ್ರಚಾರವನ್ನು ಆಯೋಜಿಸಲಿದ್ದೇವೆ. ಇದಕ್ಕಾಗಿ ನಾವು 7 ದಿನಗಳ ಅಲ್ಪಾವಧಿಯ ವಿಸ್ತಾರಕ್ ಯೋಜನೆಯನ್ನು ಮಾಡಿಸಲಿದ್ದೇವೆ. ಇದಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನಗಳನ್ನು ಆಯೋಜಿಸಲಿದ್ದು, ಡಿಜಿಟಲ್ ವ್ಯವಸ್ಥೆಗಳನ್ನು ಬಳಸಿಕೊಳ್ಳಲಿದ್ದೇವೆ. ಹೊಸ ವಸತಿ ಪ್ರದೇಶಗಳು, ಬಹುಮಹಡಿ ಕಟ್ಟಡಗಳು, ಹಾಸ್ಟೆಲ್‍ಗಳಲ್ಲಿ, ಕಾರ್ಮಿಕ ವಸತಿ ಪ್ರದೇಶಗಳಲ್ಲಿ ವಿಶೇಷ ಅಭಿಯಾನಗಳನ್ನು ಕೈಗೊಳ್ಳಲಿದ್ದೇವೆ" ಎಂದು ಮಾಹಿತಿ ನೀಡಿದರು.

"ಮತದಾರರ ಪಟ್ಟಿಯಲ್ಲಿ ಹೊಸ ಮತದಾರರ ಸೇರ್ಪಡೆ, ನಕಲಿ ಮತದಾರರನ್ನು ತೆಗೆಸುವುದು ಮತ್ತು ವರ್ಗಾವಣೆ ಪ್ರಕ್ರಿಯೆಗೆ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸಾವಿರ, ಅದಕ್ಕಿಂತ ಚಿಕ್ಕ ಕ್ಷೇತ್ರಗಳಲ್ಲಿ 10 ಸಾವಿರ ಮತ್ತು ಸಣ್ಣ ಕ್ಷೇತ್ರಗಳಲ್ಲಿ 5 ಸಾವಿರ ಮತದಾರ ಗುರಿಯನ್ನು ನಿಗದಿಪಡಿಸಲಾಗಿದೆ. ಸಂಪೂರ್ಣ ಪ್ರಚಾರದ ಅಭಿಯಾನವನ್ನು ಚುನಾವಣಾ ಆಯೋಗವು ನಿಗದಿ ಪಡಿಸಿದ ದಿನಾಂಕಗಳಿಗೆ ಅನ್ವಯವಾಗುವಂತೆ ಯೋಜಿಸಲಾಗುತ್ತದೆ" ಎಂದರು.

"ಈ ಸಂಬಂಧ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ತಂಡ ರಚಿಸಿದ್ದು, ಸಂಸದ ತೇಜಸ್ವಿ ಸೂರ್ಯ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಪಿ.ರಾಜೀವ್, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ, ಮುಖಂಡ ಲೋಕೇಶ್ ಬಿಜ್ಜಾವರ ಅವರು ತಂಡದಲ್ಲಿದ್ದಾರೆ. ಬಿಜೆಪಿ ಇಂದು ವಿಶ್ವದ ಅತಿದೊಡ್ಡ ಸೈದ್ಧಾಂತಿಕ ಮತ್ತು ಕಾರ್ಯಕರ್ತ ಆಧಾರಿತ ಸಂಘಟನೆಯಾಗಿದ್ದು, ದೇಶದುದ್ದಗಲಕ್ಕೂ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ ಮತ್ತು ಸರ್ವವ್ಯಾಪಿ ಸರ್ವಸ್ಪರ್ಶಿಯಾಗಿದೆ" ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, "ಮತದಾನದ ಹಕ್ಕು, ಕರ್ತವ್ಯವನ್ನು ಮತದಾರರಿಗೆ ನೆನಪು ಮಾಡಿಕೊಡುವ ಉದ್ದೇಶದಿಂದ ನಿಮ್ಮ ಹೆಸರು ಈಗಾಗಲೇ ಮತದಾರರ ಪಟ್ಟಿಯಲ್ಲಿ ನೋಂದಣಿ ಆಗಿದ್ದರೆ ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಿ ಎಂದು ಮನವಿ ಮಾಡುತ್ತೇವೆ. ನೋಂದಣಿ ಆಗದೆ ಇದ್ದರೆ ದೇಶಕ್ಕಾಗಿ ಮತ ಎನ್ನುವ ಉದ್ದೇಶದಿಂದ ಹೆಸರು ನೋಂದಾಯಿಸಿಕೊಳ್ಳಿ ಎಂದು, ವಿಳಾಸ ಬದಲಾಗಿದ್ದಲ್ಲಿ ವಾಸವಾಗಿರುವ ಸ್ಥಳದಲ್ಲಿ ಹೆಸರು ಸೇರಿಸಿ, ಯುವಕರನ್ನು ಹೆಚ್ಚು ಹೆಚ್ಚಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಲು ಜಾಗೃತಿ ಮೂಡಿಸಲಾಗುತ್ತದೆ" ಎಂದು ತಿಳಿಸಿದರು.

ಇದನ್ನೂ ಓದಿ:ಕಾವೇರಿ ನೀರಿನ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸಿ: ಸಿಎಂಗೆ ಶೋಭಾ ಕರಂದ್ಲಾಜೆ ಆಗ್ರಹ

ABOUT THE AUTHOR

...view details