ಕರ್ನಾಟಕ

karnataka

ಸಿಡಿ ಬಾಂಬೆ ಡೀಲ್‌ಗೊಳಪಟ್ಟಿತ್ತಾ, ಪ್ಯಾಕೇಜ್ ಇತ್ತಾ ಎಂದ ಇಬ್ರಾಹಿಂ.. ಶ್ರೀರಾಮಚಂದ್ರ ಯಾರೆಂದರು ತೇಜಸ್ವಿನಿ..

By

Published : Mar 24, 2021, 5:02 PM IST

ಸಿಡಿಯಲ್ಲಿ ಏನು ಕಂಟೆಂಟ್ ಇದೆ ಎಂದು ಹೇಳಬೇಕು, ಬಾಂಬೆ ಡೀಲ್‌ಗೆ ಒಳಪಟ್ಟಿತ್ತಾ, ಪ್ಯಾಕೇಜ್ ಇತ್ತಾ ಎನ್ನುವುದನ್ನು ಬಹಿರಂಗಪಡಿಸಬೇಕು. ಅಷ್ಟೇ ಅಲ್ಲ, ಆರು ಜನ‌ ಮಂಚ‌ ಮುರಿದು ಎನ್ನುವ ಪದ ಪ್ರಯೋಗಿಸಿದರು ಕಾಂಗ್ರೆಸ್‌ನ ಸಿಎಂ ಇಬ್ರಾಹಿಂ. ಇದಕ್ಕೆ ಬಿಜೆಪಿಯ ಭಾರತಿ ಶೆಟ್ಟಿ ಮತ್ತು ತೇಜಸ್ವಿನಿಗೌಡ ಆಕ್ಷೇಪಿಸಿದರು..

Ruckus in Council over Jarakiholi CD case
ಸಿಡಿ ಪ್ರಕರಣದ ಚರ್ಚೆಗೆ ಕಾಂಗ್ರೆಸ್​ ಆಗ್ರಹ

ಬೆಂಗಳೂರು :ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಚರ್ಚೆಗೆ ಪಟ್ಟು ಹಿಡಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದ್ದರಿಂದ‌ ವಿಧಾನಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಲಾಯಿತು.

ಭೋಜನ ವಿರಾಮದ ನಂತರ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು. ಸಿಡಿ ಪ್ರಕರಣದ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಸಿ ಎಂ ಇಬ್ರಾಹಿಂ, ಸಿಡಿಯಲ್ಲಿ ಏನು ಕಂಟೆಂಟ್ ಇದೆ ಎಂದು ಹೇಳಬೇಕು, ಬಾಂಬೆ ಡೀಲ್‌ಗೆ ಒಳಪಟ್ಟಿತ್ತಾ, ಪ್ಯಾಕೇಜ್ ಇತ್ತಾ ಎನ್ನುವುದನ್ನು ಬಹಿರಂಗಪಡಿಸಬೇಕು ಎಂದರು.

ಅಷ್ಟೇ ಅಲ್ಲ, ಆರು ಜನ‌ ಮಂಚ‌ ಮುರಿದು ಎನ್ನುವ ಪದ ಪ್ರಯೋಗಿಸಿದರು. ಇದಕ್ಕೆ ಬಿಜೆಪಿಯ ಭಾರತಿ ಶೆಟ್ಟಿ ಮತ್ತು ತೇಜಸ್ವಿನಿಗೌಡ ಆಕ್ಷೇಪಿಸಿದರು. ಇಂತಹ ಹೇಳಿಕೆ ಕೇಳಲು ಸಾಧ್ಯವಿಲ್ಲ, ನಾವು ಸಭಾತ್ಯಾಗ ಮಾಡುತ್ತೇವೆ ಎಂದರು.

ತೇಜಸ್ವಿನಿ ಗೌಡ ಮಾತನಾಡಿ, ಈ ಚರ್ಚೆ ನಡೆಯುವಾಗ ಸದನದ ಬಾವಿಯಲ್ಲಿರುವ ಎಲ್ಲಾ ಸದಸ್ಯರು ಬಂದು ಗ್ಯಾಲರಿಯಲ್ಲಿ ಕುಳಿತುಕೊಳ್ಳಲಿ, ನಾನೂ ಚರ್ಚೆಯಲ್ಲಿ ಭಾಗಿಯಾಗುವೆ. ಅವರಿಗೆ ತಾಕತ್ತಿದ್ದರೆ ಕುಟುಂಬ ಸದಸ್ಯರನ್ನು ಕರೆ ತರಲಿ. ಯಾರು ಶ್ರೀರಾಮಚಂದ್ರ ಎಂದು ಗೊತ್ತಾಗಲಿದೆ ಎಂದು ಸವಾಲೆಸೆದು ಸಭಾತ್ಯಾಗ ಮಾಡಿದರು.

ಓದಿ: ಪರಿಷತ್​ನಲ್ಲಿ ಕಾಂಗ್ರೆಸ್​ ಧರಣಿ, ಜೆಡಿಎಸ್ ಸಭಾತ್ಯಾಗದ ನಡುವೆ ಧನವಿನಿಯೋಗ ವಿಧೇಯಕಕ್ಕೆ ಅಂಗೀಕಾರ

ನಂತರ ಸದನದಲ್ಲಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಸಿಡಿ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ಜಾರಕಿಹೊಳಿ‌ ಸಿಡಿ ಆರೋಪಕ್ಕೆ ಪ್ರತಿಯಾಗಿ ಮೇಟಿ ಪ್ರಕರಣ ಪ್ರಸ್ತಾಪಿಸಿ ಬಿಜೆಪಿ ಸದಸ್ಯರು ತಿರುಗೇಟು ನೀಡಿದರು.

ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ರಾಷ್ಟ್ರಗೀತೆಯೊಂದಿಗೆ ಅನಿರ್ದಿಷ್ಟಾವಧಿಗೆ ಮುಂದೂಡಿದರು.

ABOUT THE AUTHOR

...view details