ಕರ್ನಾಟಕ

karnataka

ಬಿಎಸ್​​ವೈ ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ : ಸ್ವಪಕ್ಷದ ವಿರುದ್ಧವೇ ರೇಣುಕಾಚಾರ್ಯ ವಾಗ್ದಾಳಿ

By

Published : Jun 29, 2023, 2:26 PM IST

Updated : Jun 29, 2023, 7:15 PM IST

ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದರು.

ಸ್ವಪಕ್ಷದ ವಿರುದ್ಧವೇ ರೇಣುಕಾಚಾರ್ಯ ವಾಗ್ದಾಳಿ
ಸ್ವಪಕ್ಷದ ವಿರುದ್ಧವೇ ರೇಣುಕಾಚಾರ್ಯ ವಾಗ್ದಾಳಿ

ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ

ಬೆಂಗಳೂರು: ಯಡಿಯೂರಪ್ಪ ಅಧಿಕಾರದಿಂದ ಇಳಿಯದೇ ಇದ್ದಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ’’ಯಡಿಯೂರಪ್ಪ ಸೈಕಲ್ ಓಡಿಸಿ, ಸ್ಕೂಟರ್ ಓಡಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯದೇ ಇದ್ದಿದ್ದರೆ ನಾವು ಅಧಿಕಾರದಿಂದ ಇಳಿಯೋಕೆ ಆಗುತ್ತಿರಲಿಲ್ಲ. ಯಡಿಯೂರಪ್ಪ ಅಧಿಕಾರದಲ್ಲಿದ್ದ ವೇಳೆ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಲು ಅವರ ವಿರುದ್ದ ಮಾತನಾಡಿಸೋಕೆ ಬಿಟ್ಟರು. ಯಡಿಯೂರಪ್ಪ ಅವರನ್ನು ಯಾವ ಪುರುಷಾರ್ಥಕ್ಕಾಗಿ ಅಧಿಕಾರದಿಂದ ಕೆಳಗಿಳಿಸಿದ್ದೀರಿ..? ಮತ ಕೇಳೋಕೆ ಯಡಿಯೂರಪ್ಪರ ಮುಖ ಬೇಕು, ಅಧಿಕಾರ ಎಂಜಾಯ್ ಮಾಡಲು ಬಿಎಸ್​​ವೈ ಬೇಕು, ಪಕ್ಷ ಅಧಿಕಾರಕ್ಕೆ ತಂದ ನಂತರ ಯಡಿಯೂರಪ್ಪ ಬೇಡ ಅಲ್ಲವೇ‘‘ ಎಂದು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು.

ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ ಎಲ್ಲರನ್ನೂ ಮುಗಿಸಿಬಿಟ್ಟಿರಿ, ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದರು. ಆದರೆ, ಅವರ ಕೈಗಳನ್ನು ಕಟ್ಟಿ ಹಾಕಿದ್ದರು. ಅಣ್ಣಾ ಮಲೈ ಯಾರು? ಬೊಮ್ಮಾಯಿ‌ ಅವರ ಮಾತನ್ನು ಅಣ್ಣಾಮಲೈ ಕೇಳಬೇಕಿತ್ತು, ಅವರಿಂದ ಬೊಮ್ಮಾಯಿ ಸೆಲ್ಯುಟ್ ಹೊಡೆಸಿಕೊಳ್ಳುತ್ತಿದ್ದವರು. ಆದರೆ, ಈಗ ನೀವು ಬೊಮ್ಮಾಯಿ ಅವರನ್ನೇ ಅಣ್ಣಾ ಮಲೈ ಮಾತು ಕೇಳುವಂತೆ ಮಾಡಿದಿರಿ ಎಂದು ಆಕ್ರೋಶ ಹೊರಹಾಕಿದರು.

ನಾಯಕರ ವರ್ತನೆಗಳೇ ಪಕ್ಷದ ಸೋಲಿಗೆ ಕಾರಣ- ರೇಣುಕಾಚಾರ್ಯ:ಪಕ್ಷದ ನಾಯಕರ ವರ್ತನೆಗಳೇ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣ. ಪಕ್ಷ ಮತ್ತು ನಾಯಕರು ಸೂಜಿ ದಾರದಂತೆ ಕೆಲಸ ಮಾಡಬೇಕು. ಅದಕ್ಕಾಗಿಯೇ ಪಕ್ಷದ ಕಚೇರಿ ಕಟ್ಟಲಾಗಿದೆ. ಆದರೆ, ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಬರೀ ಕತ್ತರಿ ಹಾಕೋದೇ ಕೆಲಸವಾಗಿದೆ. ಯಾರು ಮಾತನಾಡುತ್ತಾರೋ ಅವರನ್ನು ಮುಗಿಸೋದು ಅವರ ಕೆಲಸವಾಗಿದೆ.

ನಾನು ಸೋತಮೇಲೆ ಯಡಿಯೂರಪ್ಪ, ವಿಜಯೇಂದ್ರ‌ ನನ್ನನ್ನು ಕರೆದು ಮಾತನಾಡಿದರು. ಆದರೆ ರಾಜ್ಯಾಧ್ಯಕ್ಷರಾದವರು ಒಂದು ಬಾರಿ ಆದರೂ ಮಾತಾಡಿದ್ರಾ..? ಪಾರ್ಟಿ ಆಫೀಸ್​ನ್ನು ಕೆಲವರು ಕಾರ್ಪೊರೇಟ್ ಕಚೇರಿಯಾಗಿ ಮಾಡಿಕೊಂಡಿದ್ದರು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು:ಚುನಾವಣೆ ಸೋಲಿನ ಬಳಿಕ ನಳೀನ್ ಕುಮಾರ್ ಕಟೀಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು..? ಮೊನ್ನೆ ರಾಜೀನಾಮೆ ಅಂದರು, ಆಮೇಲೆ ಇಲ್ಲ ಅಂದರು ಏನು ನಿಮ್ಮ ಉದ್ದೇಶ..? ನೀವು ನಾಲ್ಕೈದು ಬಾರಿ ರಾಜ್ಯ ಪ್ರವಾಸ ಮಾಡಿದ್ರಲ್ಲ ಏನು ಪ್ರಯೋಜನವಾಗಿದೆ..? ಅದು ಏನು ಮತಗಳಾಗಿ ಪರಿವರ್ತನೆ ಆಯ್ತಾ..? ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

ನಾನು ಯಾವತ್ತಿಗೂ ಬಿಜೆಪಿ ವಿರುದ್ಧ ಮಾತನಾಡಿಲ್ಲ. ಬಿಜೆಪಿ ನನಗೆ ತಾಯಿಯ ಸಮಾನ, ಆದರೆ ಕೆಲವು ದೌರ್ಭಾಗ್ಯಗಳನ್ನು ಅನಿವಾರ್ಯವಾಗಿ ಮಾತಾಡಬೇಕಾಗುತ್ತದೆ. ಯಾರಿಗೋ ಅವಮಾನ ಮಾಡುವ ಅವಶ್ಯಕತೆ ನನಗಿಲ್ಲ. ನನಗೆ ಯಾವುದೇ ಭಯ ಇಲ್ಲ,‌ ನಾನು‌ ನಿರ್ಭಯವಾಗಿ ಮಾತನಾಡುತ್ತೇನೆ, ಚುನಾವಣೆಗೆ ಎರಡು ದಿನ ಇದ್ದ ವೇಳೆ ಆನ್​ಲೈನ್​ನಲ್ಲಿ ಸಭೆ ಮಾಡಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಆಗದವರು ನಮಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಬಿ.ಎಲ್ ಸಂತೋಷ್ ಹೆಸರೇಳದೆ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು, ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಅವರ ಹೆಸರು ಈಗ ನಾನು ಹೇಳಲ್ಲ ಸಮಯ ಬಂದಾಗ ಅವರ ಹೆಸರು ಹೇಳುತ್ತೇನೆ ಎಂದರು.

ರೇಣುಕಾಚಾರ್ಯ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಅದಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎನ್ನುವ ಮಾತು ಕೇವಲ ವದಂತಿ, ನಾನು ಬಿಜೆಪಿ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ, ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅಪೇಕ್ಷೆ ವ್ಯಕ್ತಪಡಿಸಿದ್ದೇನೆ, ಎಂಪಿ ಟಿಕೆಟ್ ಕೇಳಿದ್ದು ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದರು.

ಇದನ್ನೂ ಓದಿ:ಸರ್ಕಾರ ಮತ್ತು ಸಂಘಟನೆಯಲ್ಲಿ ಬದಲಾವಣೆ: ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ.. ಕರ್ನಾಟಕ ರಾಜ್ಯಾಧ್ಯಕ್ಷರ ನೇಮಕದ ಬಗ್ಗೆ ಚರ್ಚೆ!

Last Updated : Jun 29, 2023, 7:15 PM IST

ABOUT THE AUTHOR

...view details