ಕರ್ನಾಟಕ

karnataka

ಒತ್ತುವರಿಯಾದ ಕೆರೆಗಳ ಮರುಸಮೀಕ್ಷೆ ನಡೆಸಿ ಮಾರ್ಕಿಂಗ್ ಮಾಡಿಕೊಡಿ: ಭೂಮಾಪನ ಇಲಾಖೆಗೆ ಬಿಬಿಎಂಪಿ ಪತ್ರ

By

Published : Oct 2, 2022, 12:15 PM IST

BBMP

ಒತ್ತುವರಿಯಾದ ಕರೆಗಳ ಮರು ಸಮೀಕ್ಷೆ ನಡೆಸಿ ತುರ್ತಾಗಿ ಮಾರ್ಕಿಂಗ್ ಮಾಡಿಕೊಡುವಂತೆ ಬಿಬಿಎಂಪಿ ಲೇಕ್ ಡಿವಿಷನ್​​ನಿಂದ ಭೂಮಾಪನ ಇಲಾಖೆಗೆ ಪತ್ರ ಬರೆಯಲಾಗಿದೆ.

ಬೆಂಗಳೂರು: ನಗರ ಜಿಲ್ಲೆಯ ಪೂರ್ವ ತಾಲೂಕು ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿಯನ್ನು ತುರ್ತಾಗಿ ಮರು ಸಮೀಕ್ಷೆ ನಡೆಸಿ ಮಾರ್ಕಿಂಗ್ ಮಾಡಿಕೊಡುವಂತೆ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಬಿಬಿಎಂಪಿ ಕೆರೆಗಳ ವಿಭಾಗದಿಂದ ಪತ್ರ ಬರೆಯಲಾಗಿದೆ.

ಬಿಬಿಎಂಪಿ ಕಳೆದ ಒಂದು ತಿಂಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿದೆ. ಒಟ್ಟು 94 ಪ್ರಕರಣಗಳನ್ನು ತೆರವುಗೊಳಿಸಲಾಗಿದೆ. ಈ ಪೈಕಿ ಪೂರ್ವ ವಲಯದಲ್ಲಿನ ಮಹದೇವಪುರ, ಕೆಆರ್​ಪುರಂ, ಮುನೇಕೊಳಾಲು, ಬೆಳ್ಳಂದೂರು, ವೈಟ್‌ಫೀಲ್ಡ್, ಬೆನ್ನಿಗಾನಹಳ್ಳಿ, ಕಸವನಹಳ್ಳಿ, ದೊಡ್ಡನೆಕ್ಕುಂದಿ ಮುಂತಾದೆಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಭರದಿಂದ ಸಾಗಿದೆ.

ಇದೇ ಅವಧಿಯಲ್ಲಿ ಕೆರೆಯ ಒತ್ತುವರಿಯನ್ನು ತೆರವು ಮಾಡಲು ಚಿಂತನೆ ನಡೆಸಲಾಗಿದೆ. ಈ ಹಿನ್ನೆಲೆ ಪೂರ್ವ ತಾಲೂಕು ವ್ಯಾಪ್ತಿಯಲ್ಲಿನ 30 ಕೆರೆಗಳ ಒತ್ತುವರಿಯನ್ನು ಮರು ಸಮೀಕ್ಷೆ ಮಾಡಿ ತೆರವು ಮಾಡಬೇಕಿರುವ ಭಾಗವನ್ನು ಮಾರ್ಕಿಂಗ್ ಮಾಡುವಂತೆ ತಿಳಿಸಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವಿದ್ದು, ಒತ್ತುವರಿ ಮತ್ತು ತೆರವು ಕಾರ್ಯದ ಬಗ್ಗೆ ಮಾಹಿತಿ ನೀಡಬೇಕಿರುವ ಹಿನ್ನೆಲೆ ಈ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಬಿಬಿಎಂಪಿ ಲೇಕ್ ಡಿವಿಷನ್​​ನಿಂದ ಭೂಮಾಪನ ಇಲಾಖೆಗೆ ಪತ್ರ

2020ರಲ್ಲಿ ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ಜಿಲ್ಲಾಡಳಿತ ವತಿಯಿಂದ 4 ವಿಶೇಷ ತಹಶಿಲ್ದಾರರನ್ನು ನಿಯೋಜನೆ ಮಾಡಲಾಗಿತ್ತು. ಈ ವೇಳೆ ಕೆಲವು ಕೆರೆಗಳಲ್ಲಿ ಸಣ್ಣಪುಟ್ಟ ಒತ್ತುವರಿ ಮಾತ್ರ ತೆರವು ಮಾಡಿದ್ದಾರೆ. ಉಳಿದಂತೆ, ಒತ್ತುವರಿದಾರರಿಗೆ ನೋಟಿಸ್ ನೀಡಿ ತೆರವು ಕಾರ್ಯಕ್ಕೆ ಮುಂದಾದಾಗ ಮರು ಸಮೀಕ್ಷೆ ಮಾಡುವಂತೆ ಸ್ಥಳೀಯರು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಜತೆಗೆ, ಕೆಲವು ಒತ್ತುವರಿದಾರರು ಪಾಲಿಕೆ ಅಧಿಕಾರಿಗಳ ಮೇಲೆ ಜಾತಿ ನಿಂದನೆ, ದೌರ್ಜನ್ಯದ ಕೇಸ್‌ ದಾಖಲಿಸಿದ್ದರು. ಕೆರೆಗಳ ಮರು ಸಮೀಕ್ಷೆ ಮಾಡುವಂತೆ ಕಳೆದೆರಡು ವರ್ಷಗಳಿಂದ 4ಕ್ಕಿಂತ ಅಧಿಕ ಬಾರಿ ಜಿಲ್ಲಾಡಳಿತ ಮತ್ತು ಭೂಮಾಪನ ಇಲಾಖೆಗೆ ಪಾಲಿಕೆಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಮಾರ್ಕಿಂಗ್‌ಗೆ ಹಿಂದೇಟು: ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ರಾಜಕಾಲುವೆಗಳು ಮತ್ತು ಕೆರೆಗಳು ಒತ್ತುವರಿಯಾಗಿರುವ ಬಗ್ಗೆ 2016 ಮತ್ತು 2017ರಲ್ಲಿ ಸಮೀಕ್ಷೆ ಮಾಡಲಾಗಿದೆ. ಆದರೆ ಈ ವೇಳೆ ಒತ್ತುವರಿ ತೆರವುಗೊಳಿಸುವುದು ಅಥವಾ ಒತ್ತುವರಿ ಆಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಬೇಲಿ ನಿರ್ಮಾಣ ಕಾರ್ಯಕ್ಕೂ ಪಾಲಿಕೆ ಮುಂದಾಗಲಿಲ್ಲ. ಹೀಗಾಗಿ, ಕಳೆದ 5 ವರ್ಷಗಳ ಅವಧಿಯಲ್ಲಿ ಕೆರೆಗಳ ಒತ್ತುವರಿ ಪ್ರಮಾಣವೂ ಅಧಿಕವಾಗಿದ್ದು, ತೆರವು ಕಾರ್ಯಾಚರಣೆಯಲ್ಲಿ ಪಾಲಿಕೆಗೆ ಹಿನ್ನಡೆ ಉಂಟಾಗಿದೆ.

ಈ ಹಿಂದೆ ಕೆರೆಗಳ ಸಮೀಕ್ಷೆ ಮಾಡಲಾಗಿದ್ದರೂ ಮತ್ತಷ್ಟು ಒತ್ತುವರಿ ಆಗಿರುವ ಹಿನ್ನೆಲೆ ಮರು ಸಮೀಕ್ಷೆ ಅಗತ್ಯವಿದೆ. ಈಗಾಗಲೇ ಸಮೀಕ್ಷೆ ಮಾಡಿದ ಸ್ಥಳದಲ್ಲಿ ತೆರವು ಕಾರ್ಯದ ಸಲುವಾಗಿ ಮಾರ್ಕಿಂಗ್ ಮಾಡಲು ಅಧಿಕಾರಿ ವರ್ಗ ಹಿಂದೇಟು ಹಾಕುತ್ತಿದ್ದು, ಸ್ವತಃ ಸಮೀಕ್ಷೆ ಮಾಡದೇ ಮಾರ್ಕಿಂಗ್ ಮಾಡುವುದಿಲ್ಲ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪತ್ರದಲ್ಲಿ ತಿಳಿಸಿರುವಂತೆ ಒತ್ತುವರಿ ಮರುಸಮೀಕ್ಷೆಗೆ ಸೂಚಿಸಿದ ಕೆರೆಗಳ ವಿವರ

ಕೆರೆಗಳ ಸ್ಥಳ, ವಿಸ್ತೀರ್ಣ( ಎಕರೆ/ ಗುಂಟೆ):

  • ಭಟ್ಟರಹಳ್ಳಿ- 6.3
  • ಸಿದ್ದಾಪುರ- 24.12
  • ಮಹದೇವಪುರ- 26.25
  • ಬಾಣಸವಾಡಿ- 120.15
  • ಬಾಣಸವಾಡಿ- 223.30
  • ಭೈರಸಂದ್ರ- 3.09
  • ಕೈಕೊಂಡ್ರಹಳ್ಳಿ- 15.25
  • ಕಸವನಹಳ್ಳಿ- 11
  • ಕೌದೇನಹಳ್ಳಿ- 5.07
  • ಸೀಗೇಹಳ್ಳಿ- 38.04
  • ದೇವಸಂದ್ರ- 34.25
  • ಮುನೇಕೊಳಾಲು- 0.10
  • ವೈಟ್‌ಫೀಲ್ಡ್- 3.34
  • ಕಸವನಹಳ್ಳಿ- 21.04
  • ಹರಳೂರು- 0.26
  • ಕೆಆರ್​ಪುರಂ- 0.28
  • ಹರಳೂರು- 0.02
  • ಬೆಳ್ಳಂದೂರು- 22
  • ದೊಡ್ಡ ಕನ್ನಹಳ್ಳಿ- 0.25
  • ಕೈಕೊಂಡ್ರಹಳ್ಳಿ- 26.25
  • ಚಳ್ಳಕೆರೆ- 11.13
  • ಕುಂದಲಹಳ್ಳಿ- 0.35
  • ದೇವರಬೀಸನಹಳ್ಳಿ- 13.25
  • ಮಹದೇವಪುರ- 233.25
  • ವಿಭೂತಿಪುರ- 3.13
  • ಬೆನ್ನಿಗಾನಹಳ್ಳಿ- 9.33
  • ಬೋಗನಹಳ್ಳಿ- 0.23
  • ಹೂಡಿ- 1.29

ಇದನ್ನೂ ಓದಿ:ರಾಜಕಾಲುವೆ ಒತ್ತುವರಿ ತೆರವು ಮಾಡದಿದ್ದಲ್ಲಿ ಸೂಕ್ತ ಆದೇಶ ಹೊರಡಿಸಲಾಗುವುದು: ಬಿಬಿಎಂಪಿಗೆ ಹೈಕೋರ್ಟ್​ ಎಚ್ಚರಿಕೆ

ABOUT THE AUTHOR

...view details