ಕರ್ನಾಟಕ

karnataka

ಕಾಂಗ್ರೆಸ್ ನಿಲುವಳಿ ಸೂಚನೆ ತಿರಸ್ಕರಿಸಿದ ಸಭಾಪತಿ : ಬಾವಿಗಿಳಿದ ಪ್ರತಿಪಕ್ಷ ಸದಸ್ಯರು

By

Published : Feb 16, 2022, 2:21 PM IST

Updated : Feb 16, 2022, 4:30 PM IST

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರು ಮಂಡಿಸಿದ ನಿಲುವಳಿ ಸೂಚನೆಯನ್ನು ಸಭಾಪತಿ ಬಸವರಾಜ್ ಹೊರಟ್ಟಿಯವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸದಸ್ಯರು ಬಾಳಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಆಗ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು..

Opposition leaders protest in session
ವಿಧಾನಪರಿಷತ್ ಬಾವಿಗಿಳಿದ ಪ್ರತಿಪಕ್ಷ ಸದಸ್ಯರು

ಬೆಂಗಳೂರು :ವಿಧಾನ ಪರಿಷತ್ ಕಲಾಪ ಮರು ಆರಂಭವಾದರೂ ಆಡಳಿತ-ಪ್ರತಿಪಕ್ಷ ನಡುವಿನ ಗದ್ದಲ ಕಡಿಮೆ ಆಗಲಿಲ್ಲ. ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಿಲುವಳಿ ಸೂಚನೆಗೆ ಒತ್ತಾಯಿಸಿ ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಅವಧಿಗೂ ಮುನ್ನ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿ ಪ್ರತಿಪಕ್ಷ ನಾಯಕರು ಗದ್ದಲ ನಡೆಸಿದರು. ಆಗ ಸಭಾಪತಿಗಳು ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್

ನಿಲುವಳಿ ಸೂಚನೆ ಮಂಡನೆಗೆ ಮುಂದಾದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಿರುದ್ಧ ಆಡಳಿತ ಪಕ್ಷ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಹರಿಪ್ರಸಾದ್ ಅವರು, ನಾಗಪುರವನ್ನು ಹಾವಿನಪುರ ಎಂದು ಉಚ್ಛರಿಸಿದಾಗ ಗದ್ದಲ ಮತ್ತೆ ಹೆಚ್ಚಾಯಿತು.

ಬಿಜೆಪಿ ನಮ್ಮಿಂದ ಸಾಕ್ಷಿ ಕೇಳಿದೆ, ಅದನ್ನು ತಿಳಿಸುತ್ತೇನೆ ಎಂದ ಹರಿಪ್ರಸಾದ್, ಆರ್​ಎಸ್​ಎಸ್​​​ ಮುಖವಾಣಿ ಆರ್ಗನೈಸರ್​​​​ನಲ್ಲಿ ಬಂದ ವರದಿ ಓದಿದರು. ಹರಿಪ್ರಸಾದ್ ಅವರು ನಿಲುವಳಿ ಸೂಚನೆಗೆ ಸಂಬಂಧಿಸಿ ವಿಷಯಕ್ಕೆ ಸೀಮಿತವಾಗಿ ಮಾತನಾಡಬೇಕೆಂದು ನಿಯಮದಲ್ಲಿದೆ ಎಂದು ಸಚಿವ ಮಾಧುಸ್ವಾಮಿ ನಿಯಮ ಓದಿ ತಿಳಿಸಿದರು.

ತ್ರಿವರ್ಣ ಧ್ವಜದ ಬಗ್ಗೆ ಅರಿವು ಬಿಜೆಪಿಯವರಿಗೆ ಇಲ್ಲ ಎಂದಾಗ ಮತ್ತೆ ಗಲಾಟೆಯಾಯಿತು. ಬಳಿಕ ಸಿ ಎಂ ಇಬ್ರಾಹಿಂ ಮಾತನಾಡಿ, ನಿನ್ನೆ ಶೂನ್ಯವೇಳೆಯಲ್ಲಿ ಇದೇ ವಿಚಾರದ ಮೇಲೆ ಅವಕಾಶ ಕೋರಿದಾಗ ನೀಡಿದ್ದರೆ ಮುಗಿದು ಹೋಗುತ್ತಿತ್ತು. ಅನಗತ್ಯವಾಗಿ ಇಷ್ಟು ಗದ್ದಲಕ್ಕೆ ಅವಕಾಶ ಮಾಡಿಕೊಟ್ಟಿರಿ ಎಂದರು.

57 ವರ್ಷ ಇವರು ಆರ್​​ಎಸ್​ಎಸ್​​​ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಲಿಲ್ಲ ಎಂದಾಗ ಗದ್ದಲ ಹೆಚ್ಚಾಯಿತು. ನಿಲುವಳಿ ಸೂಚನೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾದರೆ ಇದು ಪರಿಷತ್ ಗೌರವಕ್ಕೆ ಧಕ್ಕೆ ಆಗಲಿದೆ. ನಿಲುವಳಿ ಸೂಚನೆಯನ್ನು ತಿರಸ್ಕಾರ ಮಾಡಬೇಕೆಂದು ಸಚಿವ ಮಾಧುಸ್ವಾಮಿ ಸಲಹೆ ನೀಡಿದರು.

ಗೊಂದಲದ ಗೂಡಾಗಿದ್ದ ವಿಧಾನಪರಿಷತ್​ ಕಲಾಪ..

ವಿಚಾರಕ್ಕೆ ಸೀಮಿತವಾಗಿ ಮಾತು ಮುಂದುವರಿಸಿದ ಹರಿಪ್ರಸಾದ್, ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ. ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ಲ. ತ್ರಿವರ್ಣ ಧ್ವಜ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಕೇಳಿಯೂ ಸಿಎಂ ಅಮಾನತು ಮಾಡದೆ ಮೌನವಹಿಸಿದ್ದಾರೆ.

ಈ ಕಾಲಘಟ್ಟದ ಧ್ವಜವನ್ನು 1947ರಲ್ಲಿ ಭಾರತೀಯ ಸಂವಿಧಾನದಲ್ಲಿ ಒಪ್ಪಿದ್ದಾರೆ. ಅದನ್ನು ಒಪ್ಪುವುದು ನಮ್ಮ ಧರ್ಮ. ಬೇರೆಯದನ್ನು ರಾಷ್ಟ್ರಧ್ವಜ ಅನ್ನುವ ಭಾವನೆ ಕೆಲವರಿಗೆ ಇರಬಹುದು. ಇದರಿಂದ ರಾಷ್ಟ್ರಧ್ವಜದ ಮಹತ್ವ ವಿವರಿಸುತ್ತಿದ್ದೇನೆ ಎಂದಾಗ ಆಗ ಪ್ರತಿಪಕ್ಷ ನಾಯಕರ ವಿವರಣೆಗೆ ಆಡಳಿತ ಪಕ್ಷ ಸದಸ್ಯರ ಆಕ್ಷೇಪದ ಜೊತೆ ಜೆಡಿಎಸ್ ಸದಸ್ಯ ಭೋಜೆಗೌಡರು ಸಹ ಆಕ್ಷೇಪ ವ್ಯಕ್ತಪಡಿಸಿದರು.

ಚಿಕ್ಕ ಮಕ್ಕಳಿಗೂ ಧ್ವಜದ ಬಗ್ಗೆ ಗೊತ್ತಿದೆ. ಸಚಿವರ ವಿಷಯಕ್ಕೆ ಬನ್ನಿ ಎಂದು ಒತ್ತಾಯಿಸಿದರು. ರಾಷ್ಟ್ರಧ್ವಜದ ಬಗ್ಗೆ ಸದನದಲ್ಲಿ ಮಾತನಾಡುವುದು ಬೇಡ ಅಂದರೆ ರಾಜೀನಾಮೆ ಕೊಟ್ಟು ಹೋಗ್ತೀನಿ ಎಂದು ಪ್ರತಿಪಕ್ಷ ನಾಯಕರು ಹೇಳಿದರು. ಕಾಂಗ್ರೆಸ್, ಜೆಡಿಎಸ್ ಸದಸ್ಯರಲ್ಲೇ ಪರ-ಆಕ್ಷೇಪದ ದನಿ ಕೇಳಿ ಬಂತು.

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ನಿಲುವಳಿ ಸೂಚನೆ ಮಂಡಿಸಿದ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್

ಈಶ್ವರಪ್ಪನವರ ಮೇಲೆ ತಕ್ಷಣವೇ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕಾನೂನಿನಡಿ ಕ್ರಮಕೈಗೊಳ್ಳಬೇಕು. ಸರ್ಕಾರ ತಕ್ಷಣವೇ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ, ರಾಜೀನಾಮೆ ಪಡೆದು ಜೈಲಿಗೆ ಕಳಿಸಬೇಕೆಂದು ಒತ್ತಾಯಿಸಿ ಹರಿಪ್ರಸಾದ್ ಮಾತು ಮುಗಿಸಿದರು. ನಮಗೂ ಮಾತಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯ ಮಾಡಿದರು.

ನಂತರ ಸಿ ಎಂ ಇಬ್ರಾಹಿಂ ಮಾತನಾಡಿ, ರಾಜ್ಯಪಾಲರು, ಮುಖ್ಯಕಾರ್ಯದರ್ಶಿ, ಡಿಜಿ ಆದರೂ ಕ್ರಮಕೈಗೊಳ್ಳಬೇಕಿತ್ತು. ಯಾರೇ ರಾಷ್ಟ್ರಧ್ವಜ ವಿರುದ್ಧ ಹೇಳಿಕೆ ನೀಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಕೀಳಾಗಿ ಮಾತನಾಡುವ ಕಾರ್ಯ ಮಾಡಬಾರದು. ಈಶ್ವರಪ್ಪ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯ ಮಾಡಿದರು.

ಸಲೀಂ ಅಹ್ಮದ್ ಮಾತನಾಡಿ, ಇಂತಹ ಹೇಳಿಕೆ ನೀಡಿದ ಈಶ್ವರಪ್ಪಗೆ ನಾಚಿಕೆ ಆಗಬೇಕು. ಸಿಎಂ ಯಾವ ಕ್ರಮಕೈಗೊಂಡಿದ್ದಾರೆ. ನಾಲ್ಕು ದಿನದಿಂದ ನಾವು ಪ್ರಸ್ತಾಪ ಮಾಡುತ್ತಲೇ ಇದ್ದೇವೆ. ಈಶ್ವರಪ್ಪ ವಿರುದ್ಧ ಸೆಡಿಷನ್ ಕೇಸು ಹಾಕಿ ಬಂಧಿಸಬೇಕು. ಬಿಜೆಪಿ ಸದಸ್ಯ ರವಿಕುಮಾರ್ ವಿರುದ್ಧ ಸಹ ಪ್ರಕರಣ ದಾಖಲಾಗಬೇಕು ಎಂದರು.

ನಂತರ ಸಚಿವ ಮಾಧುಸ್ವಾಮಿ ಮಾತನಾಡಿ, ಮಾಧ್ಯಮಗಳ ಪ್ರಶ್ನೆಗೆ ಇವತ್ತಲ್ಲಾ ನಾಳೆ ಕೇಸರಿ ಧ್ವಜ ರಾಷ್ಟ್ರಧ್ವಜ ಆಗಬಹುದು. 500 ವರ್ಷಕ್ಕೋ, ಸಾವಿರ ವರ್ಷಕ್ಕೋ ಆಗಬಹುದು. ಇಂದು ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜ ಎಂದು ಒಪ್ಪಿದ್ದೇವೆ. ಈಗ ಅದಕ್ಕೆ ಗೌರವಿಸಬೇಕು.

ಅವಹೇಳನಕಾರಿಯಾಗಿ ಯಾರೇ ಮಾತನಾಡಿದರೂ ಕಠಿಣ ಕ್ರಮ ಆಗಬೇಕು ಎಂದಿದ್ದಾರೆ. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಗೌರವ ನೀಡಿದ್ದಾರೆ. ಅವರ ಅರ್ಧ ಹೇಳಿಕೆ ಮೇಲೆ ಕ್ರಮಕೈಗೊಳ್ಳಿ ಎನ್ನುವುದು ಸರಿಯಲ್ಲ. ಪೂರ್ಣ ಹೇಳಿಕೆ ಮೇಲೆ ಮಾತಾಡಬೇಕು ಎಂದರು.

ಇನ್ನು ಅಂಬೇಡ್ಕರ್ ತಮ್ಮ ಬೆಂಬಲಿಗರ ಜೊತೆ ಬೌದ್ಧ ಧರ್ಮದ ಧೀಕ್ಷೆ ಪಡೆದ ಪುಣ್ಯಭೂಮಿ ನಾಗಪುರ. ಇಂತಹ ಸ್ಥಳಕ್ಕೆ ಹಾವಿನಪುರ ಅಂತಾ ಅವಮಾನಿಸಬೇಡಿ. ಈಶ್ವರಪ್ಪ ಹೇಳಿಕೆಯ ಎಲ್ಲಾ ಮಾಧ್ಯಮ ಪ್ರಕಟಣೆ ನೀಡುತ್ತೇನೆ. ನಿಲುವಳಿ ಸೂಚನೆ ಆರ್ಡರ್​​​​ನಲ್ಲಿ ಇಲ್ಲ. ತಿರಸ್ಕರಿಸಿ ಎಂದು ಮನವಿ ಮಾಡಿದರು.

ಬಳಿಕ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಎರಡೂ ಕಡೆ ಮಾಹಿತಿ ಗಮನಿಸಿದ್ದು ನಿಲುವಳಿ ಸೂಚನೆ ತಿರಸ್ಕರಿಸಿದರು. ಈ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಘೋಷಣೆ ಕೂಗಲು ಆರಂಭಿಸಿದಾಗ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನ 3ಕ್ಕೆ ಮುಂದೂಡಿದರು.

ಇದನ್ನೂ ಓದಿ: ಈಶ್ವರಪ್ಪ ಹೇಳಿಕೆ ಚರ್ಚೆಗೆ ಪರಿಷತ್​​​​​​​ನಲ್ಲಿ ಪ್ರತಿಪಕ್ಷ ಒತ್ತಾಯ: ಕಲಾಪ ಹತ್ತು ನಿಮಿಷ ಮುಂದೂಡಿಕೆ

Last Updated :Feb 16, 2022, 4:30 PM IST

ABOUT THE AUTHOR

...view details