ಕರ್ನಾಟಕ

karnataka

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವಕ್ಕೆ ಅಧಿಕೃತ ಗ್ರೀನ್ ಸಿಗ್ನಲ್

By

Published : Jan 25, 2023, 10:56 PM IST

ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ-ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ.

ಚಾಮರಾಜಪೇಟೆ ಆಟದ ಮೈದಾನ
ಚಾಮರಾಜಪೇಟೆ ಆಟದ ಮೈದಾನ

ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸಲು ಕೊನೆಗೂ ಅಧಿಕೃತ ಗ್ರೀನ್ ಸಿಗ್ನಲ್ ದೊರೆತಿದ್ದು, ನಾಳೆ ಬೆಳಗ್ಗೆ 8 ಗಂಟೆಗೆ ಬೆಂಗಳೂರು ಉತ್ತರ ವಿಭಾಗದ ಎ. ಸಿ ಡಾ. ಎಂ. ಜಿ ಶಿವಣ್ಣ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಚಾಮರಾಜಪೇಟೆ ನಾಗರೀಕ ಒಕ್ಕೂಟದಿಂದ ಸ್ವಾತಂತ್ರ್ಯ ದಿನ ಆಚರಣೆಗೆ ಅನುಮತಿ ನೀಡುವಂತೆ ಕೋರಲಾಗಿತ್ತು. ಆದರೆ, ಒಕ್ಕೂಟಕ್ಕೆ ಅನುಮತಿ ನೀಡದೆ ಕಂದಾಯ ಇಲಾಖೆಯಿಂದಲೇ ಆಚರಿಸಲಾಗಿತ್ತು. ಇದೀಗ ಮತ್ತೆ ಕಂದಾಯ ಇಲಾಖೆಯಿಂದ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದಿದ್ದಾರೆ.

ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ 1 ಗಂಟೆಯ ಸಮಾರಂಭ ನಡೆಸಲು ನಿರ್ಧರಿಸಲಾಗಿದೆ. ಇಂದು ಬೆಳಗ್ಗೆಯಿಂದ ಮೈದಾನವನ್ನು ಸ್ವಚ್ಛಗೊಳಿಸಿ, ವಿದ್ಯುತ್ ದೀಪಗಳ ಮೂಲಕ ಸಿಂಗರಿಸುವ ಕೆಲಸ ಮಾಡಲಾಗಿದೆ. ಮೈದಾನದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ಥಳೀಯ ಸಂಸದರು, ಶಾಸಕರು ಸೇರಿದಂತೆ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಭದ್ರತೆ:ಕಾರ್ಯಕ್ರಮದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಪೂರ್ವ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಿಗಿ ನೇತೃತ್ವದಲ್ಲಿ 3 ಜನ ಇನ್ಸ್​ಪೆಕ್ಟರ್​ ಮತ್ತು 50 ಜನ ಕಾನ್​ಸ್ಟೇಬಲ್​​ಗಳನ್ನು ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಮೈದಾನದ ಸುತ್ತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 50 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಸರ್ಕಾರಕ್ಕೆ ಪತ್ರ ಬರೆದಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್

ಗಣರಾಜ್ಯೋತ್ಸವವನ್ನು ಬೆಂಗಳೂರಿನ ಮೈಸೂರು ವೃತ್ತದ ಸಮೀಪವಿರುವ ಈದ್ಗಾ ಮೈದಾನದಲ್ಲಿ ಆಚರಿಸುವಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸರ್ಕಾರಕ್ಕೆ ನಿನ್ನೆ (ಮಂಗಳವಾರ) ಮನವಿ ಮಾಡಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಗೆ ಪತ್ರ ಬರೆದಿದ್ದ ಅವರು, ಗಣರಾಜ್ಯೋತ್ಸವವನ್ನು ಈ ವರ್ಷ ಇದೇ ಮೈದಾನದಲ್ಲಿ ಅದ್ಧೂರಿಯಾಗಿ ಆಚರಿಸಬೇಕು. ಕೂಡಲೇ ಸರ್ಕಾರ ಇದಕ್ಕೆ ನಿರ್ದೇಶನ ನೀಡಿ ಸರ್ಕಾರದ ವತಿಯಿಂದಲೇ ಕಾರ್ಯಕ್ರಮ ನಡೆಸಬೇಕು ಎಂದು ಕೋರಿದ್ದರು.

ಮಾಲೀಕತ್ವದ ವಿವಾದ: ಈದ್ಗಾ ಮೈದಾನ ವಿವಾದ ಕೋರ್ಟ್‌ನಲ್ಲಿದೆ. ಮಾಲೀಕತ್ವದ ವಿಚಾರಣೆ ನಡೆಯುತ್ತಿದ್ದು, ಸ್ಥಳ ಸರ್ಕಾರದ್ದು ಎಂದು ಕೋರ್ಟ್‌ ಹೇಳಿದೆ. ಇದರ ಆಧಾರದಲ್ಲಿ ಕಳೆದ ವರ್ಷ ಹಿಂದೂಪರ ಸಂಘಟನೆಗಳು ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಮುಂದಾಗಿದ್ದವು. ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಕಾರ್ಯಕ್ರಮ ತಡೆದು ಶಾಂತಿ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಜಿಲ್ಲಾಧಿಕಾರಿಗಳಿಗೆ ಸೂಚನೆ:ವಿವಾದಿತ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲು ಸರ್ಕಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಕಳೆದ ಬಾರಿ ಧ್ವಜಾರೋಹಣ ಮಾಡಿದ್ದ ಬೆಂಗಳೂರು ಉತ್ತರ ಎ.ಸಿ.ಶಿವಣ್ಣ ಅವರೇ ಈ ಬಾರಿಯೂ ಧ್ವಜಾರೋಹಣ ಮಾಡಲಿದ್ದಾರೆ ಎಂದು ಸಂಸದ ಪಿ.ಸಿ.ಮೋಹನ್ ಮಾಹಿತಿ ನೀಡಿದ ನಂತರ ಜಮೀರ್ ಕೂಡಾ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಆದೇಶ: ಬಿಬಿಎಂಪಿಯು ಈದ್ಗಾ ಮೈದಾನ ಕಂದಾಯ ಇಲಾಖೆಯ ಆಸ್ತಿ ಎಂದು ಘೋಷಣೆ ಮಾಡಿದ ತರುವಾಯ ಉಂಟಾದ ವಿವಾದಗಳ ನಡುವೆಯೇ ರಾಜ್ಯ ಸರ್ಕಾರದ ಪರ ವಿವಾದಿತ ಸ್ಥಳದಲ್ಲಿ ಉಪ ವಿಭಾಗಾಧಿಕಾರಿಗಳು ಕಳೆದ ಆಗಸ್ಟ್ 15 ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ವೇಳೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದರು. ​ಈ ಎಲ್ಲಾ ಬೆಳವಣಿಗೆಗಳಾದ ನಂತರ ಹಿಂದೂ ಜಾಗರಣ ವೇದಿಕೆಗಳು ಗಣಪತಿ ಹಬ್ಬದ ಆಚರಣೆಗೆ ಅವಕಾಶ ಮಾಡಿಕೊಡುವಂತೆ ಕೇಳಿದ್ದವು. ಈ ವಿಚಾರವಾಗಿ ಕೋರ್ಟ್‌ಗೂ ಹೋಗಿದ್ದರು. ಆದರೆ ಆಚರಣೆಗೆ ಅವಕಾಶ ನೀಡದೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್​ಗೆ ಮನವಿ ಸಲ್ಲಿಸಲಾಗಿತ್ತು. ಸುಪ್ರಿಂ ಕೂಡ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಅದರಂತೆ ಗಣೇಶ ಹಬ್ಬಕ್ಕೆ ಅವಕಾಶ ದೊರೆತಿರಲಿಲ್ಲ. ಈಗ ರಾಷ್ಟ್ರೀಯ ಹಬ್ಬದ ಆಚರಣೆಗಾಗಿ ಸಚಿವ ಜಮೀರ್​ ಅಹ್ಮದ್ ಖಾನ್ ಸರ್ಕಾರಕ್ಕೆ​ ಮನವಿ ಸಲ್ಲಿಸಿದ್ದಾರೆ.

ಓದಿ :ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಿಸುವಂತೆ ಸಿಎಂಗೆ ಶಾಸಕ ಜಮೀರ್ ಪತ್ರ

ABOUT THE AUTHOR

...view details