ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಸರ್ಕಾರ ಉತ್ತಮ ಆಡಳಿತ ನೀಡಿದ್ದು, ಬಜೆಟ್ನಲ್ಲಿ ಘೋಷಿಸಿದ ಶೇ. 85 ರಷ್ಟು ಯೋಜನೆಗಳನ್ನು ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಭರವಸೆ ನೀಡಿದ್ದಾರೆ. ಆದರೆ, ಅವರ ಭರವಸೆಯನ್ನು ಒಪ್ಪದ ಪ್ರತಿಪಕ್ಷ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದ್ದಲ್ಲದೇ ಸಭಾತ್ಯಾಗ ಮಾಡಿದ ಬೆಳವಣಿಗೆ ನಡೆದಿದೆ.
ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಇಂದು ಉತ್ತರಿಸಿದ ಮುಖ್ಯಮಂತ್ರಿಗಳು, ಕೊರೊನಾ ಸಂಕಷ್ಟದ ನಡುವೆಯೂ ತಮ್ಮ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ ಎಂದು ಸಮರ್ಥಿಸಿಕೊಂಡರು.
ನಾವು ಅಧಿಕಾರಕ್ಕೆ ಬಂದಾಗಿನಿಂದ ಸತತ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದೇವೆ. ಶುರುವಿನಲ್ಲೇ ನೂರಾ ಇಪ್ಪತ್ತಾರು ತಾಲೂಕುಗಳಲ್ಲಿ ಬರಗಾಲ ಇತ್ತು. ಈ ಪರಿಸ್ಥಿತಿಯನ್ನು ನಿಭಾಯಿಸುವ ಕಾಲಕ್ಕೆ ಅತಿವೃಷ್ಟಿ ಶುರುವಾಗಿ ಲಕ್ಷಾಂತರ ಜನ ಬೀದಿಗೆ ಬಿದ್ದರು. ಅವತ್ತು ಕಾರಣಾಂತರಗಳಿಂದ ಮಂತ್ರಿಮಂಡಲ ರಚನೆ ಆಗಿರಲಿಲ್ಲ. ಹೀಗಾಗಿ ನಾನೇ ರಾಜ್ಯ ಪ್ರವಾಸ ಮಾಡಿ ಪರಿಸ್ಥಿತಿಯನ್ನು ನಿಭಾಯಿಸಿದೆ. ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಿದೆ ಎಂದರು.
ಕಳೆದ ವರ್ಷ ಕೊರೊನಾ ಸಮಸ್ಯೆ ಎದುರಾಯಿತು. ರಾಜ್ಯ ಲಾಕ್ ಡೌನ್ ಆಯಿತು. ಆದಾಯ ಕುಸಿಯಿತು. ಜನ ಕಷ್ಟಕ್ಕೆ ಸಿಲುಕಿಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಎರಡು ಸಾವಿರ ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಕೊರೊನಾ ಸಂಕಷ್ಟವನ್ನು ಎದುರಿಸಲು ಬಳಸಿದೆವು. ವಸತಿ, ಲೋಕೋಪಯೋಗಿ, ಕೈಗಾರಿಕೆ, ಸಮಾಜ ಕಲ್ಯಾಣ, ಪ್ರವಾಸೋದ್ಯಮ ಸೇರಿದಂತೆ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಪರಿಣಾಮಕಾರಿಯಾದ ಸಾಧನೆ ಮಾಡಿದೆವು. ಇಂಧನ ಕ್ಷೇತ್ರದಲ್ಲಿ ನಮ್ಮ ಸಾಧನೆ ಗಣನೀಯವಾಗಿದೆ. ಹೆಚ್ಚುವರಿ ವಿದ್ಯುತ್ ಅನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುವ ಸ್ಥಿತಿಯಲ್ಲಿದ್ದೇವೆ. ನಮಗಿರುವ ಸಾಮರ್ಥ್ಯದಷ್ಟು ವಿದ್ಯುತ್ ಉತ್ಪಾದನೆ ಮಾಡದೇ ಇರಬಹುದು. ಆದರೆ, ಉತ್ಪಾದನೆ ಮಾಡಿದ ವಿದ್ಯುತ್ ನಲ್ಲೇ ಹೆಚ್ಚುವರಿಯಾದ ವಿದ್ಯುತ್ ಅನ್ನು ಮಾರಾಟ ಮಾಡುವ ಸ್ಥಿತಿಯಲ್ಲಿದ್ದೇವೆ ಎಂದು ತಿಳಿಸಿದರು.
ಕೈಗಾರಿಕೆಯಲ್ಲಿ ದೇಶದ ನಂಬರ್ ಟೂ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ ಎಂದು ಸಮರ್ಥಿಸಿಕೊಂಡ ಅವರು, ದೇಶದಲ್ಲಿ ಹೂಡಿಕೆಯಾಗುತ್ತಿರುವ ಕೈಗಾರಿಕಾ ಬಂಡವಾಳದ ಪೈಕಿ ಶೇಕಡ ನಲವತ್ತೊಂದರಷ್ಟು ಹಣ ಕರ್ನಾಟಕದಲ್ಲಿ ಹೂಡಿಕೆಯಾಗುತ್ತಿದೆ ಎಂದರು.
ಹಾಲಿನ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನ ಪಡೆದಿದೆ. ಇದಕ್ಕೆ ನಾವು ಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ರೈತರ ಹಾಲಿಗೆ ಪ್ರೋತ್ಸಾಹ ಧನ ನೀಡುವ ಕೆಲಸ ಆರಂಬಿಸಿದ್ದು ನಾನು. ಹೀಗಾಗಿ ಇಂದಿನ ಸಾಧನೆಗೆ ನಾನು ಕಾರಣ ಎಂದು ಹೇಳಿದರು.