ಕರ್ನಾಟಕ

karnataka

ಶಾಸನಬದ್ಧವಾಗಿ ಸಿಕ್ಕಿರುವ ನೀರನ್ನು ಉಪಯೋಗಿಸಿಕೊಳ್ಳಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ: ಸಚಿವ ಕಾರಜೋಳ

By

Published : Jan 2, 2023, 9:57 PM IST

ಮಹದಾಯಿ ಯೋಜನೆಗೆ ಗೋವಾ ಕ್ಯಾತೆ- ನ್ಯಾಯಾಧೀಕರಣ ನದಿ ನೀರು ಹಂಚಿಕೆ ಮಾಡಿದಾಗ ಅದಕ್ಕೆ ಯಾರೂ ಕೂಡ ತಕರಾರು ಮಾಡಬಾರದು- ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ಸಚಿವ ಕಾರಜೋಳ
ಸಚಿವ ಕಾರಜೋಳ

ಬೆಂಗಳೂರು: ಶಾಸನಬದ್ಧವಾಗಿ ಸಿಕ್ಕಿರುವ ನೀರನ್ನು ಉಪಯೋಗಿಸಿಕೊಳ್ಳಲು ಯಾವ ದೊಣ್ಣೆ ನಾಯಕನ ಅಪ್ಪಣೆನೂ ಬೇಕಾಗಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಗೋವಾ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಒಕ್ಕೂಟದ ವ್ಯವಸ್ಥೆಯಲ್ಲಿ ಇದ್ದೇವೆ. ನ್ಯಾಯಾಧೀಕರಣ ನದಿ ನೀರು ಹಂಚಿಕೆ ಮಾಡಿದಾಗ ಅದನ್ನು ಯಾರೂ ಕೂಡ ತಕರಾರು ಮಾಡಬಾರದು. ಕುಡಿಯುವ ನೀರಿಗಾಗಿ ತಕರಾರು ಮಾಡುವುದು ಎಷ್ಟು ಸರಿ ಹೇಳಿದರು. ಇನ್ನು ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಕಳಸಾ ಬಂಡೂರಿ ಯೋಜನೆಗಾಗಿ ಕಾಂಗ್ರೆಸ್ ನವರು ಹೋರಾಟ ಶುರು ಮಾಡಿದ್ದಾರೆ. 2018ರ ವರೆಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆ ಸಂದರ್ಭದಲ್ಲಿ 1080 ದಿನ ಅಲ್ಲಿನ ಜನರು ಹೋರಾಟ ಮಾಡಿದ್ದರು. ಹೋರಾಟ ಮಾಡಿದ ಜನರನ್ನು ಹೊಡೆದು ಜೈಲಿಗೆ ಕಳುಹಿಸಿದರು. ಈಗ ಅವರು ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದ್ದರು.

ಹಿಂದೆ ಗೋವಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು, ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ಒಂದು ಹನಿಯೂ ಕೊಡಲ್ಲ ಎಂದು ಹೇಳಿದ್ದರು. ಆಗ ರಾಜ್ಯ ಕಾಂಗ್ರೆಸ್ ನಾಯಕರು ಬಾಯಿಗೆ ಕಡುಬು ತುರುಕಿಕೊಂಡು ಕೂತಿದ್ದರು. ತಡೆ ಗೋಡೆ ಕಟ್ಟಿದವರು ಇವತ್ತು ಹೋರಾಟ ಮಾಡ್ತಿದ್ದಾರೆ. ಅದು ಅನಾಥ ಶಿಶುವೂ ಅಲ್ಲ, ಕಾಂಗ್ರೆಸ್ ವಾರಸ್ದಾರರ ಶಿಶುನೂ ಅಲ್ಲ, ಕಾಂಗ್ರೆಸ್ ಗೆ ಯಾರು ವಾರಸ್ದಾರ? ಎಂದು ಪ್ರಶ್ನಿಸಿದರು.

ಒಂದು ತಿಂಗಳಲ್ಲಿ ಕಾಮಗಾರಿ ಆರಂಭ: ಕಳಸಾ ಬಂಡೂರಿ ಯೋಜನೆಯ ಕಾಮಗಾರಿ ಒಂದು ತಿಂಗಳಲ್ಲಿ ಆರಂಭಿಸುತ್ತೇವೆ. ಕಾಂಗ್ರೆಸ್ ನಾಯಕರಿಗೂ ಆಹ್ವಾನ ನೀಡುತ್ತೇವೆ. ಅವರು ಬೇಕಿದ್ದರೆ ಕಾಮಗಾರಿ ಕಾರ್ಯಕ್ರಮಕ್ಕೆ ಬರಲಿ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಮಾಡುತ್ತೇವೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಸಹ್ಯಾದ್ರಿ ಬೆಟ್ಟಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಮಹದಾಯಿ ನದಿಯೂ ಒಂದು. ಖಾನಾಪುರ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ನದಿಯು ಕರ್ನಾಟಕದಲ್ಲಿ 29 ಕಿಮೀ. ಹಾಗೂ ಗೋವಾದಲ್ಲಿ 51.5 ಕಿ.ಮೀ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಜಲಾಯೋಗದ ಸಮೀಕ್ಷೆಯಂತೆ ಈ ನದಿಯಲ್ಲಿ ಸುಮಾರು 200 ಟಿಎಂಸಿ ಅಡಿ ನೀರು ಲಭ್ಯವಿದೆ.

ಈ ನೀರನ್ನು ಉಪಯೋಗಿಸುವುದಕ್ಕಾಗಿ ಕಳಸಾ ಮತ್ತು ಬಂಡೂರಿ ನಾಲಾಗಳಿಗೆ ನೀರು ತಿರುಗಿಸಿ, ಮಲಪ್ರಭಾಗೆ ಸೇರಿಸುವುದೇ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ, ಈ ಯೋಜನೆಯನ್ನು ರೂಪಿಸಿದ್ದು ಕಾಂಗ್ರೆಸ್ ಸರ್ಕಾರ. ಎಚ್.ಕೆ. ಪಾಟೀಲ್ ಅವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಮಹದಾಯಿ ನದಿಯ ತನ್ನ ಪಾಲಿನ ನೀರಿನ ಬಳಕೆಗೆ ಗಂಭೀರವಾಗಿ ಚಿಂತನೆ ನಡೆಸಲಾಯಿತು.

ಯೋಜನೆಗಳನ್ನು ಹುಟ್ಟು ಹಾಕಿ, ಮಲಪ್ರಭಾ ನದಿಗೆ ನೀರುಹರಿಸುವ ಯೋಜನೆ ರೂಪಿಸಿತು. 1987 ಸೆಪ್ಟಂಬರ್ 11 ರಂದು ಮಹದಾಯಿ ನದಿಯ ಮೇಲೆ ವಿದ್ಯುತ್ ಉತ್ಪಾದನೆ ಮಾಡಲು ಯೋಜನೆಯೊಂದನ್ನು ರೂಪಿಸಲಾಗಿತ್ತು. ನಂತರ ಈ ಯೋಜನೆಗೆ ಗೋವಾ ರಾಜ್ಯ ಒಪ್ಪದೆ ಇದ್ದಾಗ ಯೋಜನೆಯನ್ನು ಕೈಬಿಡಲಾಗಿತ್ತು. 1989 ಮಾರ್ಚ್ 16 ರಂದು ಅಂದಿನ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು ಗೋವಾ ರಾಜ್ಯದ ಮುಖ್ಯಮಂತ್ರಿಗಳ ಸಭೆ ನಡೆಸಿ, 9 ಟಿಎಂಸಿ ನೀರಿನ ಬಳಕೆಯ ಮಹದಾಯಿ ಜಲ ವಿದ್ಯುತ್ ಯೋಜನೆಯನ್ನು ರೂಪಿಸಲು ಪ್ರಸ್ತಾಪಿಸಿದರು. ಕಣಿವೆಯಲ್ಲಿ ನ್ಯಾಯಾಧೀಕರಣವು ತೀರ್ಮಾನಿಸಿರುವಂತೆ 188 ಟಿಎಂಸಿ ನೀರಿನ ಪ್ರಮಾಣ ಲಭ್ಯವಿದೆ ಎಂದು ಸಚಿವರು ವಿವರಿಸಿದರು.

ಇನ್ನು ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳ ಪೂರ್ವ ಕಾರ್ಯಸಾಧ್ಯತಾ ವರದಿಗಳನ್ನು 2020 ಮೇ 22 ರಂದು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು. ಈ ಯೋಜನೆಯ ವರದಿಗಳನ್ನು ಪರಿಶೀಲಿಸಲಾಗಿದೆ. ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳ ಪರಿಷ್ಕೃತ ಪೂರ್ವ ಕಾರ್ಯಸಾಧ್ಯತಾ ವರದಿಗಳನ್ನು ಸಿದ್ದಪಡಿಸಿ 2022 ಜೂನ್ 16 ರಂದು ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯೂಸಿ) ಸಲ್ಲಿಸಲಾಗಿತ್ತು. ಇದನ್ನು ಪರಿಶೀಲಿಸಿದ ಕೇಂದ್ರ ಜಲ ಆಯೋಗವು 2022ನವೆಂಬರ್ 18 ರಂದು ತನ್ನ ಪತ್ರದಲ್ಲಿ ಡಿಪಿಆರ್ ಸಲ್ಲಿಸಲು ಸೂಚಿಸಿದೆ.

ನವೆಂಬರ್ 24 ರಂದು ಕಳಸಾ ನಾಲಾ ತಿರುವು ಯೋಜನೆಗಯ 995.30 ಕೋಟಿ ರೂ. ಮೊತ್ತದ ಡಿಪಿಆರ್ ಹಾಗೂ ನವೆಂಬರ್ 25 ರಂದು ಬಂಡೂರಿ ನಾಲಾ ತಿರುವು ಯೋಜನೆಯ 764 ಕೋಟಿ ರೂ. ಮೊತ್ತದ ಡಿಪಿಆರ್ ಅನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿತ್ತು. ಕೇಂದ್ರ ಜಲ ಆಯೋಗವು 29 ರಂದು ಈ ಯೋಜನೆಗೆ ಅನುಮತಿ ನೀಡಿದೆ ಎಂದು ಸ್ಪಷ್ಟಪಡಿಸಿದರು. ಡಿಸೆಂಬರ್ 29 ರಂದು ಈ ಯೋಜನೆಗೆ ಅನುಮತಿ ನೀಡಿದೆ ಎಂದು ಸಚಿವ ಕಾರಜೋಳ ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಯಶಸ್ವಿನಿ ವಿಮೆ ಯೋಜನೆ ನೋಂದಣಿ ಅವಧಿ ಜ.31 ವರೆಗೆ ವಿಸ್ತರಿಸಿ ಸರ್ಕಾರದ ಆದೇಶ

ABOUT THE AUTHOR

...view details