ಕರ್ನಾಟಕ

karnataka

ಡಾ ಸಿ ಆರ್ ಚಂದ್ರಶೇಖರ್​ಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ.. ಬಹುಮಾನದ ಹಣ ನಿಮ್ಹಾನ್ಸ್​ಗೆ ನೀಡಿದ ವೈದ್ಯ

By

Published : Oct 2, 2022, 4:16 PM IST

Mahatma Gandhi Seva Award to Dr CR Chandrasekhar
ಡಾ ಸಿ ಆರ್ ಚಂದ್ರಶೇಖರ್​ಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ()

ಪ್ರಶಸ್ತಿಯಿಂದ ಬಂದ ನಗದನ್ನು ನನ್ನ ನಿವೃತ್ತಿಯಿಂದ ನಂತರ ಬಂದ 1.09 ಕೋಟಿ ಮತ್ತು ನನ್ನ ಎರಡು‌ ಮನೆಗಳು ಮತ್ತು ನಿವೇಶನಗಳ ಹಣ ಸಹ ನಿಮ್ಹಾನ್ಸ್​ಗೆ ನೀಡಲಾಗುವುದು ಎಂದು ಗಾಂಧಿ ಪ್ರಶಸ್ತಿ ಪುರಸ್ಕೃತ ಖ್ಯಾತ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರು ಘೋಷಿಸಿದರು.

ಬೆಂಗಳೂರು: ಕರ್ನಾಟಕ ಸರ್ಕಾರದ ವತಿಯಿಂದ ಈಗಾಗಲೇ 23 ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಿಸಲಾಗಿದ್ದು, ಇನ್ನೂ ಏಳು ಜಿಲ್ಲೆಗಳಲ್ಲಿ ನಿರ್ಮಾಣವಾಗಬೇಕಿದೆ. ಈ ಏಳು ಜಿಲ್ಲೆಗಳಲ್ಲಿ ಒಂದು ವರ್ಷದೊಳಗೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಗಾಂಧಿಸ್ಮಾರಕ ನಿಧಿ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿಭವನದ ಮಹಾದೇವ ದೇಸಾಯಿ ಸಭಾಂಗಣದಲ್ಲಿ ಮಹಾತ್ಮಗಾಂಧಿ ಜಯಂತಿ ಕಾರ್ಯಕ್ರಮಕ್ಕೆ‌ ಚಾಲನೆ ನೀಡಿ ಮಾತನಾಡಿದ ಅವರು, ಬಾಕಿ ಇರುವ ಈ ಜಿಲ್ಲೆಗಳಲ್ಲಿ ಗಾಂಧಿಭವನ ನಿರ್ಮಾಣಕ್ಕೆ ಬೇಕಾದ ನಿವೇಶನ ಮತ್ತು ಅನುದಾನ ಒದಗಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಗಾಂಧಿ ಪ್ರತಿಮೆಗೆ ಪುಷ್ಪನಮನ

ಖಾದಿ‌, ಗ್ರಾಮೀಣ ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿ‌ಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಮೂಲಕ ಮಾರುಕಟ್ಟೆ ಒದಗಿಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ಅವರು ಸುಪ್ರಸಿದ್ಧ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರಿಗೆ ಬಂದಿರುವುದರಿಂದ ಪ್ರಶಸ್ತಿಗೆ ಮೌಲ್ಯ ಬಂದಿದೆ. ಅವರ ಸೇವೆಯನ್ನು ನಮ್ಮ ಸರ್ಕಾರ ಬಳಸಿಕೊಳ್ಳಲಿದೆ ಎಂದರು.

ಗಾಂಧಿ ಜಯಂತಿ ಕಾರ್ಯಕ್ರಮ

ಗ್ರಾಮಗಳ ಅಭಿವೃದ್ಧಿ ಬಹಳ ಮುಖ್ಯವಾಗಿದ್ದು, ಕರ್ನಾಟಕ ಈ ವಿಷಯದಲ್ಲಿ ಬಹಳ ಮುಂದೆ ಇದೆ. ಹಳ್ಳಿಗಳಲ್ಲಿ ಕೂಡ‌ ಡಿಜಿಟಲ್ ಕ್ರಾಂತಿಯಿಂದ ಬಹಳಷ್ಟು ಅನುಕೂಲಗಳಾಗುತ್ತಿವೆ. ತಂತ್ರಜ್ಞಾನ ಕ್ರಾಂತಿಯಿಂದ ಹಳ್ಳಿಗಳಲ್ಲಿ ಸರ್ಕಾರದ ಅನೇಕ ಸೇವೆಗಳನ್ನು ಒದಗಿಸುತ್ತಿದ್ದು, ಇನ್ನಷ್ಟು ಸೇವೆಗಳನ್ನು ಒದಗಿಸಲು ಕ್ರಮವಹಿಸಲಾಗುವುದು. ಜನರ ಸುತ್ತಲು ಅಭಿವೃದ್ಧಿಯಾಗಬೇಕು. ಅಭಿವೃದ್ಧಿ ಸುತ್ತಲೂ ಜನ ಸುತ್ತಬಾರದು ಎನ್ನುವ ದೃಷ್ಟಿಕೋನದಿಂದ ನಮ್ಮ ಸರ್ಕಾರ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಮೋಹನದಾಸ್ ಕರಮಚಂದ ಗಾಂಧಿ ಅವರು‌ ಮಹಾತ್ಮರಾಗುವವರೆಗೆಗಿನ ಪಯಣ ಅತ್ಯಂತ ಅದ್ಭುತವಾದುದು. ಸತ್ಯದ ಮಾರ್ಗದಿಂದ ಇತರರಿಗೆ ದಾರಿದೀಪವಾಗಿ ಮತ್ತು ‌ಎಲ್ಲಕ್ಕಿಂತ ಹೆಚ್ಚಾಗಿ ದೇಶಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸದಿಸೆ ಒದಗಿಸಿದವರು. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೇ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಮಹಾತ್ಮ ಹೇಗಾಗಬಹುದು ಎನ್ನುವುದಕ್ಕೆ ರಾಷ್ಟ್ರಪಿತ ಮಹಾತ್ಮಗಾಂಧಿ ಉದಾಹರಣೆ ಎಂದರು.

ಸತ್ಯಾಗ್ರಹ ಎನ್ನುವುದು ವಿಜ್ಞಾನ; ಅದಕ್ಕೆ ವಿಚಾರಗಳು ತುಂಬಿದ್ದು ಮಹಾತ್ಮಗಾಂಧಿ ಅವರು. ಸಂವಿಧಾನ ಇಂದು ಗಟ್ಟಿಯಾಗಿ ಉಳಿಯಲಿಕ್ಕೆ‌ ಗಾಂಧೀಜಿ ಅವರ ವಿಚಾರಧಾರೆಗಳು ಕೂಡ ಕಾರಣ ಎಂದರು.

ಈ ವೇಳೆ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ 2022ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಹಾಗೂ 5 ಲಕ್ಷ ರೂ.ಗಳ ನಗದು ನೀಡಿ ಗೌರವಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎ ವಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿ ಡಾ ಸಿ ಆರ್ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಿತ್ತು.

ಗಾಂಧಿಭವನ ಪ್ರಕಾಶನದಿಂದ ಹೊರತರಲಾದ 5 ಪುಸ್ತಕಗಳನ್ನು ಹಾಗೂ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರ ಸ್ಕಿಲ್ಸ್ ಫಾರ್ ಸ್ಟೂಡೆಂಟ್ಸ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು

ಪ್ರಶಸ್ತಿ ಹಣ ನಿಮ್ಹಾನ್ಸ್​ಗೆ ನೀಡಿದ ಡಾಕ್ಟರ್​: ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯಿಂದ ಬಂದ ನಗದನ್ನು ನಿಮ್ಹಾನ್ಸ್​ಗೆ ನೀಡಲಾಗುವುದು ಎಂದು ಪ್ರಶಸ್ತಿ ಪುರಸ್ಕೃತ ಖ್ಯಾತ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರು ಘೋಷಿಸಿದರು. ನನ್ನ ನಿವೃತ್ತಿಯಿಂದ ನಂತರ ಬಂದ 1.09 ಕೋಟಿ ಮತ್ತು ನನ್ನ ಎರಡು‌ ಮನೆಗಳು ಮತ್ತು ನಿವೇಶನಗಳ ಹಣವನ್ನು ಸಹ ನಿಮ್ಹಾನ್ಸ್​ಗೆ ಒದಗಿಸಲಾಗುವುದು. ಮಾನಸಿಕ ಆರೋಗ್ಯ ಕ್ಷೇತ್ರ ಅತ್ಯಂತ ನಿರ್ಲಕ್ಷಿತ ಕ್ಷೇತ್ರವಾಗಿದ್ದು, ಇದಕ್ಕೆ ವಿಶೇಷ ಒತ್ತು ನೀಡುವ ಕೆಲಸವಾಗಬೇಕು ಎಂದು ಹೇಳಿದರು. ಮಾನಸಿಕ ಆರೋಗ್ಯ ಸೇವೆಗಳಲ್ಲಿ ಇಡೀ ದೇಶಕ್ಕೆ ಕರ್ನಾಟಕವೇ ಮಾದರಿಯಾಗಿದೆ ಎಂದರು.

ಶಾಸಕ ಎಚ್ ಕೆ ಪಾಟೀಲ್ ಮಾತನಾಡಿ, ಗ್ರಾಮಸ್ವರಾಜ್​ದಿಂದ ಮಾತ್ರ ರಾಷ್ಟ್ರ ಕಲ್ಯಾಣ ಸಾಧ್ಯ ಎಂದು ಹೇಳಿ ಪ್ರೇರಣೆ ನೀಡಿದವರು ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರು. ಗಾಂಧೀಜಿ ಅವರ ಗ್ರಾಮಸ್ವರಾಜ್ ಕನಸು‌ ನನಸು‌ ಮಾಡುವಲ್ಲಿ ನಮ್ಮ ರಾಜ್ಯದಲ್ಲಿ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಮಾಡಿದ್ದೇವೆ. ಇದರ ಸಂಪೂರ್ಣ ಅನುಷ್ಠಾನವಾಗಬೇಕು;ಅಂದಾಗ ಮಾತ್ರ ರಾಜ್ಯದಲ್ಲಿ ಗ್ರಾಮಸ್ವರಾಜ್ ನನಸಾಗಲು ಸಾಧ್ಯ. ಈ ಕುರಿತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಬೇಕು‌ ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಗಾಂಧಿಭವನ ನಿರ್ಮಾಣ ಮಾಡಬೇಕು ಎಂದು ನಿರ್ಧರಿಸಿ ಅನುಷ್ಠಾನಗೊಳಿಸಲಾಗಿತ್ತು. ಕೆಲ‌ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲಾಗಿಲ್ಲ. ಅಂತವುಗಳ ಕಡೆ ತಮ್ಮಿಂದ ನಿರ್ದೇಶನ ಹೋಗಬೇಕು ಎಂದು ಸಿಎಂ ಅವರಲ್ಲಿ ಮನವಿ ಮಾಡಿದರು. ಗಾಂಧಿ ಚಟುವಟಿಕೆಗಳಲ್ಲಿ ಸದಾ ನಿರಂತರವಾಗಿರುವ ಬೆಂಗಳೂರಿನ ಗಾಂಧಿ ಭವನಕ್ಕೆ‌ ಅಗತ್ಯ ಸಹಕಾರ ನೀಡಬೇಕು ಎಂದರು.

ಗಾಂಧಿಭವನ ಪ್ರಕಾಶನದಿಂದ ಹೊರತರಲಾದ 5 ಪುಸ್ತಕಗಳನ್ನು ಹಾಗೂ ಮನೋರೋಗ ತಜ್ಞ ಡಾ ಸಿ ಆರ್ ಚಂದ್ರಶೇಖರ್ ಅವರ ಸ್ಕಿಲ್ಸ್ ಫಾರ್ ಸ್ಟೂಡೆಂಟ್ಸ್ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಹಲವು ಮಹನೀಯರಿಗೆ ಕರ್ನಾಟಕ ಗಾಂಧಿ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಇದನ್ನೂ ಓದಿ:ಖಾದಿ ಎಂಪೋರಿಯಂನಲ್ಲಿ ಸಿಎಂ ಶಾಪಿಂಗ್.. ಏನೆಲ್ಲಾ ಖರೀದಿ ಮಾಡಿದ್ರು ಗೊತ್ತಾ?

ABOUT THE AUTHOR

...view details