ಕರ್ನಾಟಕ

karnataka

ಗೊಂಬೆಗಳಲ್ಲಿ ಮೂಡಿದ ಮಹಾಭಾರತ.. ಸಂಗೀತಗಾರ್ತಿಯಿಂದ ವಿಶಿಷ್ಟ ಪ್ರದರ್ಶನ

By ETV Bharat Karnataka Team

Published : Oct 17, 2023, 8:22 AM IST

Updated : Oct 17, 2023, 12:29 PM IST

ರಾಜ್ಯಾದ್ಯಂತ ನವರಾತ್ರಿ ಹಬ್ಬದ ಸಂಭ್ರಮ. ಈ ಹಬ್ಬದಂದು ಮನೆಗಳಲ್ಲಿ ಗೊಂಬೆಗಳ ಪ್ರದರ್ಶನವನ್ನ ನಡೆಸಲಾಗುತ್ತದೆ. ಅಂತೆಯೇ ಬೆಂಗಳೂರಿನ ಸಂಗೀತಗಾರ್ತಿಯೊಬ್ಬರು ಗೊಂಬೆಗಳನ್ನು ಬಳಸಿ ಮಹಾಭಾರತದ ಕಥೆಯನ್ನು ಹೇಳಿದ್ದಾರೆ.

mahabharata-in-puppets-a-unique-theme-by-a-musician in bengaluru
ಗೊಂಬೆಗಳಲ್ಲಿ ಮೂಡಿದ ಮಹಾಭಾರತ : ಸಂಗೀತಗಾರ್ತಿಯಿಂದ ವಿಶಿಷ್ಟ ಪ್ರದರ್ಶನ

ಗೊಂಬೆಗಳಲ್ಲಿ ಮೂಡಿದ ಮಹಾಭಾರತ : ಸಂಗೀತಗಾರ್ತಿಯಿಂದ ವಿಶಿಷ್ಟ ಪ್ರದರ್ಶನ

ಬೆಂಗಳೂರು :ರಾಜ್ಯಾದ್ಯಂತ ದಸರಾ ಹಬ್ಬದ ಸಂಭ್ರಮ ಸಡಗರ ಮನೆಮಾಡಿದೆ. ರಾಜ್ಯದಲ್ಲಿ ದಸರಾ ಎಂದಾಕ್ಷಣ ನೆನಪಿಗೆ ಬರುವುದೇ ಮೈಸೂರಿನ ಜಂಬೂಸವಾರಿ. ಇದರ ಜೊತೆಗೆ ಗೊಂಬೆ ಅಲಂಕಾರವೂ ಒಂದು ಪ್ರಮುಖ ಆಕರ್ಷಣೆ ಆಗಿದೆ. ಈ ಗೊಂಬೆ ಪ್ರದರ್ಶನವು ನಮ್ಮ ಸಂಸ್ಕೃತಿ ಸಂಪ್ರದಾಯಗಳ ಪ್ರತಿಬಿಂಬವಾಗಿದೆ. ದಸರಾ ಸಂದರ್ಭದಲ್ಲಿ ನಾಡಿನ ಮನೆ ಮನೆಗಳಲ್ಲಿ ಗೊಂಬೆಗಳನ್ನು ಅಲಂಕರಿಸಿ ಪ್ರದರ್ಶಿಸುವ ಆಚರಣೆ ಇಂದಿಗೂ ನಡೆದುಕೊಂಡು ಬಂದಿದೆ.

ಮೈಸೂರಿನಲ್ಲಿ ದಸರಾ ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಿಲಿಕಾನ್ ಸಿಟಿಯಲ್ಲಿ ವಿವಿಧ ಗೊಂಬೆಗಳನ್ನು ಮನೆ ಮನೆಯಲ್ಲಿ ಕೂರಿಸುವ ಮೂಲಕ ನವರಾತ್ರಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಇಲ್ಲಿನ ವಸಂತಪುರದ ಶಾರದಾ ನಗರದ ಸಂಗೀತಗಾರ್ತಿ ಸಿಂಧು ಸೀತಾರಾಮ ಅವರ ಮನೆಯ ಪ್ರಾಂಗಣದಲ್ಲಿ ಈ ಬಾರಿ ವಿಶೇಷವಾಗಿ ಮಹಾಭಾರತದ ಕಥೆಯನ್ನು ಬೊಂಬೆಗಳ ಮೂಲಕ ಬಿಂಬಿಸುವ ಪ್ರಯತ್ನ ಜನ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಮುಖ್ಯವಾಗಿ ದ್ರೌಪದಿ ಸ್ವಯಂವರ ಮತ್ತು ವಸ್ತ್ರಾಪಹರಣ ಪ್ರಹಸನ, ಮಹಾಭಾರತದ ಯುದ್ಧ, ಕೃಷ್ಣ ದ್ರೌಪದಿಯ ಮಾನವನ್ನು ರಕ್ಷಿಸುತ್ತಿರುವ ದೃಶ್ಯಗಳನ್ನು ಗೊಂಬೆಗಳ ಮೂಲಕ ಮನೋಜ್ಞವಾಗಿ ಬಿಂಬಿಸಲಾಗಿರುವುದು ಕಣ್ಮನ ಸೆಳೆಯುತ್ತಿದೆ.

ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ಸಿಂಧು ಸೀತಾರಾಮ, ಕಳೆದ 5- 6 ವರ್ಷದಿಂದ ದೊಡ್ಡದಾಗಿ ಗೊಂಬೆಗಳ ಪ್ರದರ್ಶನವನ್ನು ನಡೆಸುತ್ತಿದ್ದೇನೆ. ಮೊದಲು ಕೇವಲ ಮಕ್ಕಳಿಗಾಗಿ ಗೊಂಬೆಗಳ ಪ್ರದರ್ಶನ ಮಾಡುತ್ತಿದ್ದೆ. ಅವರು ದೊಡ್ಡವರಾದಂತೆ ಮತ್ತಷ್ಟು ದೊಡ್ಡದಾಗಿ ಹೆಚ್ಚು ಗೊಂಬೆಗಳನ್ನು ಪ್ರದರ್ಶಿಸಲು ಮುಂದಾದೆ ಎಂದು ಹೇಳಿದರು.

ಪ್ರತಿ ಬಾರಿಯೂ ಹೊಸ ಹೊಸ ಥೀಮ್​​ನಲ್ಲಿ ಗೊಂಬೆಗಳನ್ನು ಜೋಡಿಸುತ್ತಾ ಬಂದಿದ್ದೇನೆ. ಈ ಹಿಂದೆ ದುಷ್ಯಂತ ಶಕುಂತಲೆ, ವಿಷ್ಣುವಿನ ಅವತಾರಗಳ ಬಗ್ಗೆ ಮಾಡಿದ್ದೆ. ಈ ಬಾರಿ ನಮ್ಮ ಸಂಸ್ಕೃತಿಯ ಮಹಾಕಾವ್ಯವನ್ನು ಮಕ್ಕಳಿಗೆ ಯುವಕರಿಗೆ ಗೊಂಬೆಗಳ ಮೂಲಕ ತಿಳಿ ಹೇಳುವ ಪ್ರಯತ್ನವನ್ನು ಮಾಡಿದ್ದೇನೆ. ಎಷ್ಟೋ ಜನರಿಗೆ ಮಹಾಭಾರತದ ಕಥೆ ಗೊತ್ತಿಲ್ಲ. ಈ ಮೂಲಕ ಸ್ವಲ್ಪ ಜನರಿಗೆ ಮಹಾಭಾರತದ ಬಗ್ಗೆ ತಿಳಿದರೆ ನನ್ನ ಪ್ರಯತ್ನ ಸಾರ್ಥಕವಾಗಲಿದೆ ಎಂದು ತಿಳಿಸಿದರು.

ಎಲ್ಲ ಗೊಂಬೆಗಳು ಒಂದೇ ಕಡೆ ಸಿಗುವುದು ಕಷ್ಟ ಸಾಧ್ಯ. ಮೊದಲು ಯಾವ ಕಥೆಯನ್ನು ಹೇಳಬೇಕು ಎಂದು ಯೋಜಿಸಿ ನಂತರ ಅದಕ್ಕೆ ಸೂಕ್ತ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೇನೆ. ಕೆಲವು ಗೊಂಬೆಗಳನ್ನು ಕೈಯಲ್ಲಿ ತಯಾರಿಸುತ್ತೇನೆ. ಈ ಗೊಂಬೆಗಳನ್ನು ಸಮಾನ್ಯವಾಗಿ ಮಲ್ಲೇಶ್ವರ, ಗಾಂಧಿ ಬಜಾರ್ ಸೇರಿದಂತೆ ನಗರದ ಹಲವು ಕಡೆಗಳಿಂದ ಆಯ್ದು ತರುತ್ತೇನೆ ಎಂದು ವಿವರಿಸಿದರು.

ನನ್ನ ಪತಿ ಮುರಳಿ ಕೃಷ್ಣ ಕೂಡ ಈ ಕಾರ್ಯದಲ್ಲಿ ಸಹಕಾರ ನೀಡುತ್ತಾರೆ. ಚಾರ್ಟ್ ತಯಾರಿಸಿ ಮಣ್ಣಿನ ಗೊಂಬೆಗಳನ್ನು ಅತಿ ಜಾಗರೂಕತೆಯಿಂದ ತಂದುಕೊಡಲು ಸಹಾಯ ಮಾಡುತ್ತಾರೆ. ಇಬ್ಬರು ಸೇರಿ ಕನಿಷ್ಠ ಒಂದು ವಾರ ಕಾಲ ನವರಾತ್ರಿಯ ಗೊಂಬೆ ಪ್ರದರ್ಶನ ಮಾಡಲು ಮೀಸಲು ಇಡುತ್ತೇವೆ. ಗೊಂಬೆಗಳು ಮತ್ತು ಅಲಂಕಾರಿಕ ವಸ್ತುಗಳನ್ನು ತರಲು ಒಂದು ತಿಂಗಳು ಬೇಕಾಗುತ್ತದೆ ಎಂದರು.

ಸಿಂಧು ಅವರ ತಂದೆ ಸೀತಾರಾಮ ಮಾತನಾಡಿ, ವಸಂತಪುರದಲ್ಲಿ ಮಗಳ ಗೊಂಬೆ ಪ್ರದರ್ಶನ ತುಂಬಾ ಹೆಸರುವಾಸಿಯಾಗಿದೆ. ಅವಳ ಈ ಕಾರ್ಯ ಸಂತಸ ತಂದಿದೆ ಎಂದು ಹೇಳಿದರು.

ಇದನ್ನೂ ಓದಿ :ಆಹಾರ ದಸರಾ: 2 ನಿಮಿಷದಲ್ಲಿ 8 ಬಾಳೆಹಣ್ಣು, 6 ಕೊಟ್ಟೆ ಕಡುಬು ತಿಂದ ಆಹಾರಪ್ರಿಯರು

Last Updated : Oct 17, 2023, 12:29 PM IST

ABOUT THE AUTHOR

...view details