ಕರ್ನಾಟಕ

karnataka

ಲಿಂಗಸೂಗೂರು: ಅ.15ರಿಂದ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ‌ ದರ್ಬಾರ್.. 10 ದಿನ ವಿವಿಧ ಕಾರ್ಯಕ್ರಮ

By ETV Bharat Karnataka Team

Published : Oct 14, 2023, 10:50 PM IST

ಅಕ್ಟೋಬರ್ 14ರಂದು ಸಂಜೆ ಆಗಮಿಸುವ ರಂಭಾಪುರಿ ಜಗದ್ಗುರು ಡಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಗಜದಂಡ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

Gajadanda Shivacharya Swamiji spoke at a press conference.
ಶ್ರೀ ಗಜದಂಡ ಶಿವಾಚಾರ್ಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಯಚೂರು: ಆಧ್ಯಾತ್ಮಿಕ ತಳಹದಿ ಮೇಲೆ ಸಾತ್ವಿಕ ಸತ್ವಶೀಲ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಲಿಂಗಸೂಗೂರು ಪಟ್ಟಣದಲ್ಲಿ ಶರನ್ನವರಾತ್ರಿ ದಸರಾ‌ ದರ್ಬಾರ್​ನ್ನು ಆಯೋಜಿಸಲಾಗಿದೆ ಎಂದು ದೇವರಭೂಪುರ ಮಠದ ಶ್ರೀ ಗಜದಂಡ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ 1970, 1998ರಲ್ಲಿ ರಂಭಾಪುರ ಶ್ರೀಗಳ ಸಾನಿಧ್ಯದಲ್ಲಿ ದಸರಾ ಧರ್ಮ ಸಮ್ಮೇಳನ ಆಯೋಜಿಸಲಾಗಿತ್ತು. ಈ ಬಾರಿಯೂ ರಂಭಾಪುರಿ ಪೀಠದ ಜಗದ್ಗುರುಗಳ ಶರನ್ನವರಾತ್ರಿ ದಸರಾ‌ ದರ್ಬಾರ್ 3ನೇಯ ಸಮ್ಮೇಳನ ಅಕ್ಟೋಬರ್ 15ರಿಂದ 24ರ ವರೆಗೆ ನಡೆಯಲಿದೆ ಎಂದು ತಿಳಿಸಿದರು.

ರಂಭಾಪುರಿ ಜಗದ್ಗುರು ಡಾ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಅಕ್ಟೋಬರ್ 15 ರಿಂದ 24ರ ವರೆಗೆ ಪ್ರತಿದಿನ ಬೆಳಗ್ಗೆ ಈಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಇಷ್ಠಲಿಂಗ ಪೂಜೆ ನೆರವೇರಲಿದೆ. ಪ್ರತಿನಿತ್ಯ ಸಂಜೆ 7ಕ್ಕೆ ಧರ್ಮ ಸಭೆ ನಡೆಯಲಿದೆ ಎಂದು ಹೇಳಿದರು.

ಅ.15ರಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಸೇರಿದಂತೆ ವಿವಿಧ ಇಲಾಖೆಯ ಸಚಿವರು, ಸಂಸದರು, ಶಾಸಕರು ಜನಪ್ರತಿನಿಗಳು ಧರ್ಮಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ವಿದ್ವಾಂಸರಿಂದ ವಿಶೇಷ ಉಪನ್ಯಾಸ, ರಾಜ್ಯದ ವಿವಿಧ ಭಾಗಗಳಿಂದ ಶಿವಾಚಾರ್ಯರು, ಕಲಾವಿದರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅ.24ರಂದು ಮಧ್ಯಾಹ್ನ 3ಕ್ಕೆ ಜಗದ್ಗುರುಗಳ ಸೀಮೋಲ್ಲಂಘನ ಕಾರ್ಯಕ್ರಮ ಜರುಗಲಿದೆ. ಇನ್ನು ಇದಕ್ಕಾಗಿ ಈಗಾಗಲೇ ಪಟ್ಟಣದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಮ್ಮೇಳನದ ಮುಖ್ಯ ವೇದಿಕೆಯನ್ನು ನಿರ್ಮಿಸಲಾಗಿದೆ. 10 ದಿನ ಕಾಲ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಲಿಂಗಸೂಗೂರು ಪಟ್ಟಣವನ್ನು ನವವಧುವನಂತೆ ಶೃಂಗಾರಗೊಂಡಿದ್ದು, ಧಾರ್ಮಿಕ ಭಕ್ತಿ ಕೇಂದ್ರವಾಗಿ ಕಂಡು ಬರುತ್ತಿದೆ ಎಂದು ವಿವರಿಸಿದರು.

ಇದನ್ನೂಓದಿ:ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ನಾದಬ್ರಹ್ಮ ಹಂಸಲೇಖ - ವಿಡಿಯೋ

ABOUT THE AUTHOR

...view details