ಕರ್ನಾಟಕ

karnataka

ಬೆಂಗಳೂರಲ್ಲಿ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ಪತ್ತೆ

By

Published : Dec 19, 2022, 3:28 PM IST

Updated : Dec 19, 2022, 7:49 PM IST

ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

law-student-commits-suicide-by-jumping-from-college-building-in-bengaluru
ಕಾಲೇಜು ಕಟ್ಟಡದಿಂದ ಜಿಗಿದು ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು : ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿ.ವಿ. ಪುರಂನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು‌ ಕ್ಯಾಂಪಸ್ ನಲ್ಲಿ ನಡೆದಿದೆ. ಬನಶಂಕರಿ‌ ನಿವಾಸಿ ವಾಣಿ (23) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿ. ಮೃತ ವಿದ್ಯಾರ್ಥಿನಿ ಡೆತ್​ನೋಟ್​ ಬರೆದಿರುವುದು ಪತ್ತೆಯಾಗಿದೆ. ಭಾವಿ ಗಂಡನ ವರ್ತನೆಗೆ ನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬಹಿರಂಗವಾಗಿದೆ.

ವಿ.ವಿ ಪುರಂ ಬಿಟಿಎಸ್ ಕಾಲೇಜಿನಲ್ಲಿ‌ ಪ್ರಥಮ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ವಾಣಿ ಇವತ್ತು ಬೆಳಗ್ಗೆ ಕಾಲೇಜಿಗೆ ಬಂದವಳೇ ಸಾವಿಗೆ ಶರಣಾಗಿದ್ದಾರೆ. ಕಾಲೇಜು ಆಡಳಿತ ಮಂಡಳಿಯವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವಾಣಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಮೃತ ವಾಣಿಗೆ ಕಳೆದ‌ ಒಂದು ತಿಂಗಳ ಹಿಂದೆ ಗಿರಿನಗರದ ನಿವಾಸಿ ಚಂದ್ರಶೇಖರ್ ಎಂಬವರೊಂದಿಗೆ ನಿಶ್ಚಿತಾರ್ಥವಾಗಿತ್ತು. ಈ ಬಳಿಕ ಯುವತಿಯೊಂದಿಗೆ ಫೋನ್​ ಮೂಲಕ ಸಂಪರ್ಕದಲ್ಲಿದ್ದ ಚಂದ್ರಶೇಖರ್, ಹೊರಗೆ ಸುತ್ತಾಡಲು ಕರೆಯುತ್ತಿದ್ದನಂತೆ. ಇದನ್ನು ವಾಣಿ ನಯವಾಗಿ ತಿರಸ್ಕರಿಸುತ್ತಿದ್ದರು.‌ ಇದರಿಂದ ಅಸಮಾಧಾನಗೊಂಡ ಚಂದ್ರಶೇಖರ್ ನಿನ್ನೆ ಆಕೆಯ ಮನೆಗೆ ಹೋಗಿ ತಗಾದೆ ತೆಗೆದಿದ್ದ. ಹೊರಗೆ ತಿರುಗಾಡಲು ನನ್ನ ಜೊತೆ ಬರಲು ಆಗುವುದಿಲ್ಲ. ನಿನಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂದು ನಿಂದಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ‌. ಇದರಿಂದ ಮನನೊಂದು ವಾಣಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಡೆತ್ ನೋಟ್ ನಲ್ಲಿ ಏನಿದೆ ?: 'ನನಗೆ ಚಂದ್ರಶೇಖರ್ ಎಂಬಾತನ ಜೊತೆಗೆ ನಿಶ್ಚಿತಾರ್ಥವಾಗಿತ್ತು. ಆತ ನನಗೆ ಹೊರಗೆ ಸುತ್ತಾಡಲು ಕರೆಯುತ್ತಿದ್ದ. ಆದರೆ ಹೊರಗೆ ಹೋಗಲು ನನಗೆ ಇಷ್ಟವಿರಲಿಲ್ಲ. ನಾನು ಬರೋದಿಲ್ಲ ಎಂದು ಆತನಿಗೆ ಹೇಳಿದ್ದೆ. ಹೀಗಿರುವಾಗ ಒಂದು ದಿನ ಆತ ಮನೆ ಬಳಿಗೆ ಬಂದಿದ್ದ. ನೀನು‌‌‌ ನನ್ನ ಜೊತೆಗೆ ಸುತ್ತಾಡಲು ಬರುತ್ತಿಲ್ಲ. ನಿನಗೆ ಬೇರೆಯ ಅಕ್ರಮ ಸಂಬಂಧವಿದೆ. ಹಾಗಾಗಿ ನನ್ನ ಜೊತೆಗೆ ಸುತ್ತಾಡಲು ಬರ್ತಿಲ್ಲ ಎಂದು ನಿಂದಿಸಿದ್ದ‌. ಇದರಿಂದ ಸಾಕಷ್ಟು ಅವಮಾನಕ್ಕೆ ಒಳಗಾದೆ. ಏರಿಯಾದಲ್ಲಿ ಓಡಾಡಲು ಸಾಧ್ಯವಾಗ್ತಿಲ್ಲ, ನನ್ನನ್ನು ಕ್ಷಮಿಸಿ'. ಎಂದು ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ವಿ.ವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಚಿಕ್ಕಬಳ್ಳಾಪುರ: ರೇಷ್ಮೆ ಕೃಷಿ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ!

Last Updated : Dec 19, 2022, 7:49 PM IST

ABOUT THE AUTHOR

...view details