ಕರ್ನಾಟಕ

karnataka

ಮೀಸಲಾತಿ ಜೇನುಗೂಡಿಗೆ ಕೈಹಾಕಿ ತುಪ್ಪ ತೆಗೆದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹಂಚಿದ್ದೇವೆ: ಕೋಟ ಶ್ರೀನಿವಾಸ ಪೂಜಾರಿ

By

Published : Apr 1, 2023, 2:20 PM IST

ನಾವು ಜೇನುಗೂಡಿಗೆ ಕೈ ಹಾಕಿ ಜೇನು ತೆಗೆದು ಸಾಮಾಜಿಕ ನ್ಯಾಯದಡಿ ಎಲ್ಲರಿಗೂ ಹಂಚಿದ್ದೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

kota srinivas poojary
ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರ ಜೇನುಗೂಡಿಗೆ ಕೈಹಾಕಿ ತುಪ್ಪ ತೆಗೆದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹಾಗೂ ಮುಖ್ಯವಾಹಿನಿಗೆ ಬರಲಾಗದೇ ಚಡಪಡಿಸುತ್ತಿದ್ದ ಮತ್ತು ಧ್ವನಿ ಇಲ್ಲದವರಿಗೆ ಹಂಚಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬಿಜೆಪಿಯ ಮಲ್ಲೇಶ್ವರಂ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಬಿಜೆಪಿ ಜೇನುಗೂಡಿಗೆ ಕೈಹಾಕಿದೆ. ಗೊಂದಲ ಸೃಷ್ಟಿಯಾಗಿದೆ ಎಂಬ ಚರ್ಚೆಗಳಾಗುತ್ತಿವೆ. ಆದರೆ, ನಮ್ಮ ಸರ್ಕಾರ ಜೇನುಗೂಡಿಗೆ ಕೈಹಾಕಿ ಜೇನನ್ನು ತೆಗೆದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಹಂಚಿದೆ. ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಆ ವಿಚಾರದಲ್ಲಿ ತೃಪ್ತಿ ಇದೆ. ಇದಕ್ಕಾಗಿ ಶ್ರಮ ವಹಿಸಿದ ಮುಖ್ಯಮಂತ್ರಿಯವರಿಗೆ ಅಭಿನಂದನೆಗಳು. ಒಂದು ಕಾಲದಲ್ಲಿ ದೇವರಾಜ ಅರಸು ಅವರು ಇಂಥ ಕೆಲಸ ಮಾಡಿದ್ದರು. ಅವರ ನಂತರ ಇಂತಹ ಕೆಲಸ ಮಾಡಿದ ಕೀರ್ತಿ ಬಿಜೆಪಿಗೆ ಮತ್ತು ಬೊಮ್ಮಾಯಿಯವರಿಗೆ ಸಿಗುತ್ತದೆ ಎಂದರು.

ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಕಾರ್ಯ ನಡೆದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗರು, ಲಿಂಗಾಯತರು ಸೇರಿ ಎಲ್ಲ ಅರ್ಹರಿಗೆ ಸಾಮಾಜಿಕ ನ್ಯಾಯ ಕೊಡುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ. ಕೆಲವು ಸಾರಿ ವಿರೋಧ ಪಕ್ಷಗಳು, ಕಾಂಗ್ರೆಸ್‍ನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜನತಾದಳದವರು ಮುಸ್ಲಿಮರಿಗೆ ಮೀಸಲಾತಿ ರದ್ದುಪಡಿಸಿದ್ದಾಗಿ ಆಕ್ಷೇಪಿಸಿದ್ದಾರೆ. ಶೇ 4ರ ಮೀಸಲಾತಿ ತೆಗೆದು ಶೇ 10 ಮೀಸಲಾತಿ ಇರುವ ಇಡಬ್ಲ್ಯುಎಸ್ ಅಡಿ ಅವರನ್ನು ತರಲಾಗಿದೆ. ಮುಸ್ಲಿಮರಿಗೆ ಅನ್ಯಾಯ ಆಗಿಲ್ಲ, ಸ್ವಾತಂತ್ರ ಭಾರತದ ಇತಿಹಾಸದಲ್ಲಿ ರಾಜ್ಯದಲ್ಲಿ ಶೇ 15 ಮೀಸಲಾತಿಯನ್ನು ಶೇ 17ಕ್ಕೆ ಏರಿಸಲಾಗಿದೆ. 3ರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 7ಕ್ಕೆ ಏರಿಸಿ, ಅದು ಅನುಷ್ಠಾನವೂ ಆಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆ

ಯಾರಿಗೂ ಅನ್ಯಾಯ ಆಗದಂತೆ ಮೀಸಲಾತಿ ಜಾರಿ ಮಾಡಿದ್ದೇವೆ. ಸದಾಶಿವ ಆಯೋಗದ ಉಲ್ಲೇಖಗಳನ್ನೂ ಗಮನಿಸಿದ್ದೇವೆ ಎಂದು ತಿಳಿಸಿದರು. ಎಡಗೈಯವರಿಗೆ 6%, ಬಲಗೈಯವರಿಗೆ ಶೇ 5.5, ದಲಿತರಿಗೆ 4.5 %, ಇತರರು- ಅಲೆಮಾರಿಗಳಿಗೆ ಶೇ 1ರಷ್ಟು ಮೀಸಲಾತಿ ಕೊಟ್ಟಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ, ವೈಜ್ಞಾನಿಕವಾಗಿ ಮೀಸಲಾತಿ ಜಾರಿ ಆಗಿದೆ. ಪರಿಷ್ಕೃತ ಆದೇಶವನ್ನು ಅದೇ ಹಿನ್ನೆಲೆಯಲ್ಲಿ ಮಾಡಿದ್ದೇವೆ ಎಂದರು.

ಇಷ್ಟು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರೂ, ಸಿದ್ದರಾಮಯ್ಯ ಸಿಎಂ ಆಗಿದ್ದರೂ ಸದಾಶಿವ ಆಯೋಗದ ವರದಿ ಯಾಕೆ ಜಾರಿ ಮಾಡಿಲ್ಲ?. ಅದನ್ನು ಯಾಕೆ ಬಿಡುಗಡೆ ಮಾಡಿಲ್ಲ?. ಸಾಮಾಜಿಕ ನ್ಯಾಯ ನೀಡಿದ ನಮ್ಮನ್ನು ಅಭಿನಂದಿಸದೇ ಇರಬಹುದು. ಆದರೆ, ವಾಸ್ತವಿಕ ಸತ್ಯ ಯಾಕೆ ಒಪ್ಪುತ್ತಿಲ್ಲ?. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಎಸೆದ ವಿಚಾರವಾಗಿ ಲಂಬಾಣಿ ಸಮುದಾಯವರು ಕ್ಷಮೆ ಕೇಳಿದ್ದಾರೆ. ಹಾಗಿದ್ದರೆ ಕಲ್ಲು ಹೊಡೆಯಲು ಪ್ರೇರಣೆ ಕೊಟ್ಟವರು ಯಾರು?, ಇದಕ್ಕೆ ಕಾಂಗ್ರೆಸ್ ಪಕ್ಷ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಹಿಂದೆ ಬಡವರ್ಗಕ್ಕೆ ಮೂಗಿಗೆ ತುಪ್ಪ ಹಚ್ಚುತ್ತಿದ್ದರು. ನಾವು ಜೇನುಗೂಡಿಗೆ ಕೈ ಹಾಕಿ ಜೇನು ತೆಗೆದು ಸಾಮಾಜಿಕ ನ್ಯಾಯದಡಿ ಹಂಚಿದ್ದೇವೆ. ಬಿಜೆಪಿಯ ಈ ಪ್ರಯತ್ನವನ್ನು ಬೆಂಬಲಿಸಿ. ಶಾಂತಾರಾಮ ಸಿದ್ದಿ, ಹೇಮಲತಾ ನಾಯಕರಿಗೆ ಎಂಎಲ್‍ಸಿ ಆಗಲು ಅವಕಾಶ, ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಸದಸ್ಯತ್ವ ಹೀಗೆ ವಿವಿಧ ಸಮುದಾಯಗಳನ್ನು ಬಿಜೆಪಿ ಗುರುತಿಸಿದೆ. ಯಡಿಯೂರಪ್ಪ ಅವರು ಪಿಂಜಾರ ಅಭಿವೃದ್ಧಿ ನಿಗಮ, ತಿಗಳ ಸಮುದಾಯ, ಬಲಿಜ, ಕಾಡುಗೊಲ್ಲರ ನಿಗಮ ಸೇರಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ನಿಗಮಗಳನ್ನು ರಚಿಸಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದ್ದೇವೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀತಿಯಡಿ ನಾವು ಕಾರ್ಯ ನಿರ್ವಹಿಸಿದ್ದೇವೆ. ಇದನ್ನು ಕಾಂಗ್ರೆಸ್‍ನವರು ರದ್ದು ಮಾಡಿ ಸಮಾಜಕ್ಕೆ ಅನ್ಯಾಯ ಮಾಡಲು ಸಿದ್ಧವೇ? ಎಂದು ಸವಾಲು ಹಾಕಿದರು.

ABOUT THE AUTHOR

...view details