ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭೂ ಸ್ವಾಧೀನ ಅಧಿಕಾರಿಯಾಗಿದ್ದ ಡಾ.ಬಿ.ಸುಧಾ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪ: ಕೆಎಎಸ್ ಅಧಿಕಾರಿ ಸುಧಾ ಸಸ್ಪೆಂಡ್ ಸಾಧ್ಯತೆ!
ಕೆಎಎಸ್ ಅಧಿಕಾರಿ ಸುಧಾ ಮನೆ ಹಾಗೂ ಆಪ್ತರ ಮನೆ ಮೇಲೆ ದಾಳಿ ನಡೆಸಿದ್ದ ಎಸಿಬಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವರನ್ನು ಅಮಾನತು ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
![ಅಕ್ರಮ ಆಸ್ತಿ ಗಳಿಕೆ ಆರೋಪ: ಕೆಎಎಸ್ ಅಧಿಕಾರಿ ಸುಧಾ ಸಸ್ಪೆಂಡ್ ಸಾಧ್ಯತೆ! sudha](https://etvbharatimages.akamaized.net/etvbharat/prod-images/768-512-10284113-thumbnail-3x2-mng.jpg)
ಕೆಎಎಸ್ ಅಧಿಕಾರಿ ಹಾಗೂ ಪ್ರಸ್ತುತ ಜೈವಿಕ ತಂತ್ರಜ್ಞಾನ ಇಲಾಖೆಯ ಅಧಿಕಾರಿಯಾಗಿದ್ದ ಸುಧಾ ಅಕ್ರಮ ಆಸ್ತಿ ಸಂಪಾದನೆ ಸಂಬಂಧ ಕಳೆದ ವರ್ಷ ನವೆಂಬರ್ನಲ್ಲಿ ಎಸಿಬಿ ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಮನೆ ಸೇರಿದಂತೆ ರಾಜ್ಯದ ಉಡುಪಿ, ಮೈಸೂರು ಸೇರಿ ಒಟ್ಟು 6 ಕಡೆ ದಾಳಿ ನಡೆಸಿತ್ತು. ದಾಳಿ ವೇಳೆ, ಮಹತ್ವದ ದಾಖಲೆಗಳು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು.
ಎಸಿಬಿಯಲ್ಲಿ ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಸದ್ಯ ಅವ್ಯವಹಾರ ನಡೆಸಿದ ಆರೋಪದಡಿ ರಾಜ್ಯ ಸರ್ಕಾರ ಸುಧಾರನ್ನು ಅಮಾನತು ಮಾಡಲು ಮುಂದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಧಾ, ಅಮಾನತು ಆದೇಶ ಬಗ್ಗೆ ನನಗೇನೂ ಗೊತ್ತಿಲ್ಲ. ಆದೇಶ ಪತ್ರ ಬಂದಿಲ್ಲ.. ಒಂದು ವೇಳೆ ಆದೇಶ ಪತ್ರ ಬಂದರೆ ಕಾನೂನು ಹೋರಾಟ ನಡೆಸುವೆ ಎಂದಿದ್ದಾರೆ.