ಕರ್ನಾಟಕ

karnataka

ಕರ್ನಾಟಕ - ಮಹಾ ಗಡಿ ವಿವಾದ ಮತ್ತೆ ಮುನ್ನೆಲೆಗೆ: ಇಂದಿನಿಂದ ಸುಪ್ರೀಂ ಅಂಗಳದಲ್ಲಿ ಉಭಯ ರಾಜ್ಯಗಳ ವಾದ - ಪ್ರತಿವಾದ!

By

Published : Nov 23, 2022, 4:20 AM IST

1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ಇಂದು ನಡೆಯಲಿದೆ.

Karnataka Maharashtra border issue
ಮಹಾರಾಷ್ಟ್ರ ಕರ್ನಾಟಕದ ಗಡಿ ವಿವಾದ

ಬೆಂಗಳೂರು: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಮತ್ತೆ ತಾರಕಕ್ಕೇರಿದೆ. ಇಂದು ಸುಪ್ರೀಂ ಕೋರ್ಟ್​ನಲ್ಲಿ ಎರಡು ರಾಜ್ಯಗಳ ಗಡಿ ವಿವಾದದ ಅಂತಿಮ ವಿಚಾರಣೆ ಆರಂಭವಾಗಲಿದೆ. ಎರಡೂ ರಾಜ್ಯಗಳು ಕೋರ್ಟ್ ಕಟೆಕಟೆಯಲ್ಲಿ ತಮ್ಮ ಪರವಾಗಿ ವಾದ ಮಂಡಿಸಲು ಸಕಲ ಸಿದ್ಧತೆ ಮಾಡಿಕೊಂಡಿವೆ.

ಇಂದಿನಿಂದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ಅಂತಿಮ ವಿಚಾರಣೆ ಆರಭವಾಗಲಿದ್ದು, ಮತ್ತೆ ನೆರೆ ರಾಜ್ಯಗಳ ಗಡಿ ವಿವಾದ ಮುನ್ನಲೆಗೆ ಬಂದಿದೆ‌. ದಶಕಗಳಿಂದ ಎರಡೂ ರಾಜ್ಯಗಳು ಗಡಿ ವಿವಾದ ಜೀವಂತವಾಗಿವೆ. ಮಹಾರಾಷ್ಟ್ರ ಕರ್ನಾಟಕದ ಕೆಲ ಭಾಗ ತಮಗೆ ಸೇರಬೇಕೆಂದು ಪದೇ‌ ಪದೆ ಕ್ಯಾತೆ ತೆಗೆಯುತ್ತಲೇ‌ ಇದೆ. ಇತ್ತ ಕರ್ನಾಟಕವೂ ಮಹಾರಾಷ್ಟ್ರದ ಗಡಿ ಕ್ಯಾತೆಗೆ ಟಕ್ಕರ್ ನೀಡುತ್ತಲೇ ಇದೆ.

ಏ‌ನಿದು ಉಭಯ ರಾಜ್ಯಗಳ ಗಡಿ ಕ್ಯಾತೆ ವಿವಾದ?:ಮಹಾರಾಷ್ಟ್ರ-ಕರ್ನಾಟಕದ ಗಡಿ ವಿವಾದ ಪ್ರಾರಂಭವಾಗಿದ್ದು 1953ರಲ್ಲಿ. ಭಾಷಾವಾರು ಪ್ರಾಂತ್ಯ ರಚನೆಗೆ 1953ರಲ್ಲಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿ ರಚನೆಯಾಯಿತು. ಈ ಸಮಿತಿ ನೀಡಿದ ವರದಿಯ ಪ್ರಕಾರ ಮುಂಬೈ ಪ್ರಾಂತ್ಯದಲ್ಲಿದ್ದ 865 ಗ್ರಾಮಗಳು (ಬೆಳಗಾವಿಯೂ ಸೇರಿ) ಆಗಿನ ಮೈಸೂರು ರಾಜ್ಯಕ್ಕೆ ಸೇರಿದವು. ಇದಕ್ಕೆ ಮಹಾರಾಷ್ಟ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

1956ರಲ್ಲಿ ರಾಜ್ಯಗಳ ಪುನರ್ವಿಂಗಡನೆಯ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯನ್ನು, ಆಗ ಹೊಸದಾಗಿ ಸ್ಥಾಪಿಸಲಾಗಿದ್ದ ಮೈಸೂರು ರಾಜ್ಯದೊಂದಿಗೆ ವಿಲೀನ ಗೊಳಿಸಲಾಯಿತು. ಆದರೆ, ಇದನ್ನು ಮಹಾರಾಷ್ಟ್ರ ಸರ್ಕಾರ ವಿರೋಧಿಸಿತು. ಹೀಗಾಗಿ ಬೆಳಗಾವಿ ಗಡಿ ವಿವಾದ 1956ರಿಂದಲೇ ಆರಂಭಗೊಂಡಿತು. ಮಹಾರಾಷ್ಟ್ರ ಸರ್ಕಾರದ ಒತ್ತಾಯದ ಮೇರೆಗೆ, ಕೇಂದ್ರ ಸರ್ಕಾರ ಜಸ್ಟಿಸ್ ಮೆಹರ್‌ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಮಹಾಜನ್ ಆಯೋಗವನ್ನು ಸ್ಥಾಪಿಸಿತು.

ಆಯೋಗ, ಕರ್ನಾಟಕ ಹಾಗೂ ಮಹಾರಾಷ್ಟ್ರದ ವಾದಗಳನ್ನು ಆಲಿಸಿ, ಗಡಿ ಪ್ರದೇಶದ 2,572 ಜನರನ್ನು ಸಂದರ್ಶಿಸಿ ಅವರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದ ಆಯೋಗವು ತನ್ನ ತೀರ್ಪನ್ನು ಪ್ರಕಟಿಸಿತು. ಬೆಳಗಾವಿ ಸೇರಿ 865 ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಮಹಾಜನ ಸಮಿತಿ ವರದಿ ಸಲ್ಲಿಸಿತು.

ಮಹಾಜನ್ ವರದಿ ಶಿಫಾರಸು ಏನು?:ಮಹಾಜನ ವರದಿಯಲ್ಲಿ ದಕ್ಷಿಣ ಸೋಲಾಪುರದ 65 ಹಳ್ಳಿಗಳು, ಸಂಪೂರ್ಣ ಅಕ್ಕಲಕೋಟೆ ತಾಲೂಕು, ಜತ್ತಾ ತಾಲೂಕಿನ 44 ಹಳ್ಳಿಗಳು, ಗಡ ಹಿಂಗ್ಲಜ ತಾಲೂಕಿನ 15 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು ಎಂದು ಸಮಿತಿ ಶಿಫಾರಸು ಮಾಡಿತು. ಕರ್ನಾಟಕ ಈ ಶಿಫಾರಸನ್ನು ಒಪ್ಪಿಕೊಂಡಿತು.

ಇತ್ತ ವರದಿಯಂತೆ ಬೆಳಗಾವಿ ತಾಲೂಕಿನ 12 ಹಳ್ಳಿಗಳು, ಖಾನಾಪುರ ತಾಲೂಕಿನ 152 ಹಳ್ಳಿಗಳು, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ 41 ಹಳ್ಳಿಗಳು, ಹುಕ್ಕೇರಿ ತಾಲೂಕಿನ 9 ಹಳ್ಳಿಗಳು, ಇತಿಹಾಸ ಪ್ರಸಿದ್ಧ ನಂದಗಡ, ಕಕ್ಕಸಕೊಪ್ಪ ಜಲಾಶಯ ಇವೆಲ್ಲಾ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿತ್ತು. ಕರ್ನಾಟಕ ಈ ವರದಿಯನ್ನು ಒಪ್ಪಿಕೊಂಡಿತು. ಆದರೆ ಬೆಳಗಾವಿಯನ್ನು ಕಳೆದುಕೊಂಡ ಮಹಾರಾಷ್ಟ್ರ ಇಂದಿಗೂ ಇದರ ವಿರುದ್ಧ ಅಪಸ್ವರ ಎತ್ತುತ್ತಿದೆ.

ಮಹಾಜನ್ ವರದಿಯನ್ನೂ ಒಪ್ಪದ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. 1956ರ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿದೆ. 2004ರಲ್ಲಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ 18 ವರ್ಷಗಳ ಬಳಿಕ ನಡೆಯಲಿದೆ. ಗಡಿ ವಿವಾದವನ್ನು ಸುಪ್ರೀಂ ಕೋರ್ಟಿನಲ್ಲಿ ತೆಗೆದುಕೊಳ್ಳಬೇಕೇ– ಬೇಡವೇ ಎಂಬ ವಿಚಾರವಾಗಿ ಇಂದು ಅಂತಿಮ ವಿಚಾರಣೆ ಆರಂಭವಾಗಲಿದೆ.

ಮಹಾರಾಷ್ಟ್ರ ವಾದ ಏನಿರಲಿದೆ?:ಈ ಹಿನ್ನೆಲೆ ಕೋರ್ಟ್ ಅಂಗಳದಲ್ಲಿ ಸಮರ್ಥ ವಾದ ಮಂಡಿಸಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಹಾರಾಷ್ಟ್ರ ಸರ್ಕಾರ ಮಾಡಿಕೊಂಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದಲ್ಲಿ ಸೋಮವಾರ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಾಯಿತು. ಸರ್ವ ಪಕ್ಷಗಳ ನಾಯಕರೂ ಸಭೆಯಲ್ಲಿ ಪಾಲ್ಗೊಂಡರು. ಮಹಾರಾಷ್ಟ್ರದ ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಹಾಗೂ ಅಬಕಾರಿ ಸಚಿವ ಶಂಭುರಾಜೇ ದೇಸಾಯಿ ಈ ಇಬ್ಬರನ್ನೂ ಗಡಿ ಉಸ್ತುವಾರಿ ಸಚಿವರಾಗಿಯೂ ನಿಯೋಜಿಸಿದ್ದಾರೆ.

ಮಹಾರಾಷ್ಟ್ರ ವಾದ ಕರ್ನಾಟಕದ ಮರಾಠಿ ಮಾತನಾಡುವ 814 ಗ್ರಾಮ ಮತ್ತು ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ನಗರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬುದಾಗಿದೆ. ಆ ಮೂಲಕ 2,806 ಸ್ಕ್ವೇರ್ ಮೈಲ್ಸ್ ಭೂ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿಸುವಂತೆ ವಾದಿಸುತ್ತಿದೆ. ಇದರ ಬದಲು ಕನ್ನಡ ಭಾಷಿಗರು ಹೆಚ್ಚಿರುವ ಮಹಾರಾಷ್ಟ್ರದ 260 ಗ್ರಾಮಗಳನ್ನು 1,160 ಸ್ಕ್ವೇರ್ ಮೈಲ್ಸ್ ಭೂ ಭಾಗವನ್ನು ಕರ್ನಾಟಕಕ್ಕೆ ಕೊಡಲು ಮುಂದಾಗಿದೆ. ಈ ಸಂಬಂಧ ಸಮರ್ಥ ವಾದ ಮಂಡಿಸಲು ಮಹಾರಾಷ್ಟ್ರ ಸರ್ಕಾರ ಸಜ್ಜಾಗಿದೆ.

ಕರ್ನಾಟಕ ವಾದ ಏನಿರಲಿದೆ?:ಇತ್ತ ಕರ್ನಾಟಕ ಸುಪ್ರೀಂ ಕೋರ್ಟ್​ನಲ್ಲಿ ಪ್ರಕರಣ ವಿಚಾರಣೆ ಬರುವ ವೇಳೆ ರಾಜ್ಯದ ಪರ ವಾದ ಮಂಡಿಸಲು ಹಿರಿಯ ವಕೀಲರ ತಂಡವನ್ನು ರಚನೆ ಮಾಡಲಾಗಿದೆ. ಇದರಲ್ಲಿ ಹಿರಿಯ ವಕೀಲರಾದ ಮುಕುಲ್​ ರೋಹ್ಟಗಿ , ಶ್ಯಾಂ ದಿವಾನ್, ಉದಯ್ ಹೊಳ್ಳ, ಬೆಳಗಾವಿಯ ಮಾರುತಿ ಜಿರ್ಲೆ, ವಕೀಲರಾದ ರಘುಪತಿ ಸೇರಿದಂತೆ ಹಲವರಿದ್ದಾರೆ. ಹಿರಿಯರ ತಂಡವು ಈಗಾಗಲೇ ಎರಡು ಮೂರು ಬಾರಿ ಸಭೆ ನಡೆಸಿದ್ದು, ನ್ಯಾಯಾಲಯದಲ್ಲಿ ಏನು ವಾದ ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಿದ್ದಾರೆ.

ಗಡಿ ವಿಚಾರವಾಗಿ ಮಹಾರಾಷ್ಟ್ರದಿಂದ ಸಲ್ಲಿಸಲಾದ ಅರ್ಜಿಗೆ ಇನ್ನೂ ಮಾನ್ಯತೆ ಸಿಕ್ಕಿಲ್ಲ. ಇದನ್ನು ಪರಿಗಣಿಸಬಾರದು ಎಂದು ನ್ಯಾಯಾಲಯದಲ್ಲಿ ವಾದ ಮಾಡಲು ಕರ್ನಾಟಕ ವಕೀಲರ ತಂಡ ಸಿದ್ಧವಾಗಿದೆ. ಸಂವಿಧಾನ ಬದ್ಧವಾಗಿ 3ನೇ ಕಲಂ ಪ್ರಕಾರ ರಾಜ್ಯ ಪುನರ್ ವಿಂಗಡನಾ ಕಾಯ್ದೆ ರಚನೆಯಾಯಿತು. ಕಾಯ್ದೆಯ ಪ್ರಕಾರ ಆಗಿದ್ದನ್ನು ಪುನರ್ ಪರಿಶೀಲನೆ ಮಾಡಿದ ಉದಾಹರಣೆ ಇಲ್ಲ. ಇದೇ ಆಧಾರದಲ್ಲಿ ವಾದ ಮಂಡಿಸಲು ಕರ್ನಾಟಕ ಮುಂದಾಗಿದೆ.

ಇದನ್ನೂ ಓದಿ:ಮಹಾರಾಷ್ಟ್ರ ಜತೆ ಗಡಿ ವಿವಾದ: ಕನ್ನಡದ ಗಡಿ ರಕ್ಷಣೆಗೆ ಸರ್ಕಾರ ಸಶಕ್ತ- ಬೊಮ್ಮಾಯಿ

ABOUT THE AUTHOR

...view details