ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಜೆಡಿಎಸ್ ತಿರುಗೇಟು ನೀಡಿದೆ. 'ಈ ವ್ಯಕ್ತಿ ರಾಜ್ಯದ ಉಪ ಮುಖ್ಯಮಂತ್ರಿ. ಅದೇ ಕನ್ನಡಿಗರ ಪಾಲಿನ ದೌರ್ಭಾಗ್ಯ' ಎಂದು ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿದೆ.
ಜೆಡಿಎಸ್ ಟೀಕಾಪ್ರಹಾರ: ಅವರು ರಾಜ್ಯಕ್ಕೆ ಉಪ ಮುಖ್ಯಮಂತ್ರಿ. ಅವರನ್ನು 'ಮೂರ್ಖ ಶಿಖಾಮಣಿ ' ಎನ್ನುವುದು ತರವಲ್ಲ. ಅಸಲಿಗೆ, ಹಾಗೆಂದು ಹೇಳಲು ನಮಗೂ ಇಷ್ಟವಿಲ್ಲ ಬಿಡಿ. ಲೂಟಿಯನ್ನೇ ನಿತ್ಯಕಾಯಕ, ದಂಧೆಯನ್ನೇ ದಿನವಹಿ ಧನಾರ್ಜನೆಗೆ ರಹದಾರಿ ಮಾಡಿಕೊಂಡಿರುವ, ಕಂಡ ಕಂಡವರ ಜಮೀನುಗಳಿಗೆ ಬೇಲಿ ಬಿಗಿದು ಅವರ ರಕ್ತ ಹಿರುತ್ತಿರುವ ವ್ಯಕ್ತಿ ರಾಜ್ಯಕ್ಕೆ ಉಪಮುಖ್ಯಮಂತ್ರಿ. ಇದಲ್ಲವೇ ಕನ್ನಡಿಗರ ದೌರ್ಭಾಗ್ಯ. ಅವರ 'ಅಂತ್ಯವಿಲ್ಲದ ಹೈಕಮಾಂಡ್ ಕೃಪಾಪೋಷಿತ ಅಕ್ರಮ'ಗಳಿಗೆ ಕೊನೆ ಎಂಬುದಿಲ್ಲವೇ? ಎಂದು ಜನ ಕೇಳುತ್ತಿದ್ದಾರೆ. ಕೊನೆ ಇದೆ, ಇದ್ದೇ ಇರುತ್ತದೆ. ಕಾಯಬೇಕಷ್ಟೇ. ವಾಕ್ಯ ಅಂದ ಮೇಲೆ ಪುಲ್ ಸ್ಟಾಪ್ ಇರಲೇಬೇಕು.
ಸೂರ್ಯ ಪಶ್ಚಿಮಕ್ಕೆ ವಾಲಿದೊಡನೆ ಕಂಡವರ ಪಕ್ಷಗಳವರ ಮನೆ ಬಾಗಿಲ ಮುಂದೆ ಪರ್ಸಂಟೇಜ್ ಪಟಾಲಂ ಪ್ರತ್ಯಕ್ಷ. ಇಂಥಾ ಕಲುಷಿತ ರಾಜಕಾರಣ ಶೋಭೆಯೇ? ನುಡಿದಂತೆ ನಡೆಯುತ್ತೇವೆ ಎಂದರೆ ಇದೇನಾ? ಜನರ ದುಡ್ಡು, ಇವರದ್ದು ಜಾತ್ರೆ. ಇದೇ ಇವತ್ತಿನ ಕರ್ನಾಟಕದ ಚಿತ್ರಣ. ರಾಜ್ಯದ ಜನರಿಗೆ ಇವರ ಭಂಡಾರವೆಲ್ಲ ಗೊತ್ತಾಗಿದೆ. ಆ ಭಂಡಾರ ಬಿಚ್ಚಿಕೊಂಡ ಕೂಡಲೇ ಬಾಲಸುಟ್ಟ ಬೆಕ್ಕಿನಂತೆ ವಿಲವಿಲನೆ ಒದ್ದಾಡಿದರೆ ಹೇಗೆ? ಅವರ ಫಸಲು, ಅವರವರ ಫಲ.