ಕರ್ನಾಟಕ

karnataka

ಪಕ್ಷ ಬಲವರ್ಧನೆಗೆ ದಳಪತಿಗಳ ಚಿಂತನೆ: ಎಲ್ಲಾ ಸಮುದಾಯದ ನಾಯಕರನ್ನು ಹುಟ್ಟುಹಾಕಲು ಸಜ್ಜಾಗುತ್ತಿರುವ ಜೆಡಿಎಸ್‌

By

Published : Jul 29, 2023, 8:14 PM IST

JDS gears up to strengthen party: ಈ ಹಿಂದೆ ಎಲ್ಲ ಸಮುದಾಯದ ನಾಯಕರನ್ನೊಳಗೊಂಡ ಪಕ್ಷವಾಗಿದ್ದ ಜೆಡಿಎಸ್, ಇತ್ತೀಚಿನ ವರ್ಷದಲ್ಲಿ ಒಕ್ಕಲಿಗ ಸಮುದಾಯದ ಪಕ್ಷ ಎಂಬ ಹಣೆಪಟ್ಟಿ ಹೊಂದಿದೆ. ಇದನ್ನು ಕಳಚಲು ಹೆಚ್.ಡಿ ಕುಮಾರಸ್ವಾಮಿ ಹರಸಾಹಸ ಪಡುತ್ತಿದ್ದು, ಇದೀಗ ಈ ಪ್ರಯತ್ನಕ್ಕೆ ಮತ್ತಷ್ಟು ವೇಗ ಸಿಕ್ಕಿದೆ.

JDS
ಜೆಡಿಎಸ್‌

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಜೆಡಿಎಸ್‌, ಮತ್ತೆ ಮೇಲೆದ್ದು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಚಿಂತನೆ ನಡೆಸಿದೆ. ಪಕ್ಷ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಜೆಡಿಎಸ್​ ಹಿರಿಯ ಶಾಸಕ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ರಚಿಸಲು ಮುಂದಾಗಿರುವ ಸಮಿತಿಯಲ್ಲಿ ಎಲ್ಲ ಸಮುದಾಯದ ನಾಯಕರಿಗೆ ಅವಕಾಶ ನೀಡುವ ಕುರಿತು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ.

ಮುಂಬರುವ ಚುನಾವಣೆಗೆ ಸಿದ್ಧತೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿದೇಶಿ ಪ್ರವಾಸ ಮುಗಿಸಿ ಮುಂದಿನ ವಾರ ವಾಪಸ್ ಆಗಲಿದ್ದಾರೆ. ನಂತರ ಜಿ.ಟಿ ದೇವೇಗೌಡ ನೇತೃತ್ವದಲ್ಲಿ ಸಮಿತಿ ರಚನೆಯಾಗಲಿದೆ. ಪಕ್ಷದ ಸಂಘಟನೆಗೊಳಿಸುವ ದೃಷ್ಟಿಯಿಂದ ಕಾರ್ಯತಂತ್ರ ರೂಪಿಸಲು ಸಮಿತಿ ರಚನೆ ಮಾಡಲಾಗುತ್ತದೆ. ಸಮಿತಿ ಮೂಲಕ ಜಿಲ್ಲಾ, ತಾಲೂಕು ಮಟ್ಟದಲ್ಲಿ ಪಕ್ಷ ಸದೃಢಗೊಳಿಸುವುದರ ಜತೆಗೆ ಪಕ್ಷದಲ್ಲಿನ ಸಮುದಾಯ ನಾಯಕರ ಕೊರತೆ ನೀಗಿಸುವಲ್ಲಿಯೂ ವರಿಷ್ಠರು ಹೆಚ್ಚಿನ ಗಮನ ಹರಿಸಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣೆ ವೇಳೆ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂಬರುವ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾರ್ಯತಂತ್ರ ರೂಪಿಸಲು ಸಮಿತಿ ರಚನೆ: ಈ ಹಿಂದೆ ಎಲ್ಲ ಸಮುದಾಯದ ನಾಯಕರನ್ನೊಳಗೊಂಡ ಪಕ್ಷವಾಗಿದ್ದ ಜೆಡಿಎಸ್, ಇತ್ತೀಚಿನ ವರ್ಷದಲ್ಲಿ ಒಕ್ಕಲಿಗ ಸಮುದಾಯದ ಪಕ್ಷ ಎಂಬ ಹಣೆಪಟ್ಟಿ ಹೊಂದಿದೆ. ಇದನ್ನು ಕಳಚಲು ಹೆಚ್.ಡಿ ಕುಮಾರಸ್ವಾಮಿ ಹರಸಾಹಸ ಪಡುತ್ತಿದ್ದು, ಇದೀಗ ಈ ಪ್ರಯತ್ನಕ್ಕೆ ಮತ್ತಷ್ಟು ವೇಗ ಸಿಕ್ಕಿದೆ. ಹಾಗಾಗಿಯೇ ಹಿರಿಯ ನಾಯಕ, ಶಾಸಕ ಜಿ.ಟಿ.ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕಾರ್ಯತಂತ್ರ ರೂಪಿಸಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ.

ಸಮಿತಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಮುಖಂಡರಾದ ಅನ್ನದಾನಿ, ಬಿ.ಎಂ.ಫಾರೂಕ್ ಸೇರಿದಂತೆ ಇತರ ಸಮುದಾಯದ ನಾಯಕರಿಗೆ ಅವಕಾಶ ಸಿಗಲಿದೆ. ಅಲ್ಲದೇ, ಪಕ್ಷಕ್ಕೆ ನಿಷ್ಠರಾಗಿರುವ ಯುವ ನಾಯಕರನ್ನು ಸಹ ಪಕ್ಷದಲ್ಲಿ ಹೆಚ್ಚಿನ ಅವಕಾಶ ನೀಡಲು ವರಿಷ್ಠರು ಆಸಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಪಕ್ಷದಲ್ಲಿ ಸಮುದಾಯದ ನಾಯಕರನ್ನು ಹುಟ್ಟು ಹಾಕಿ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ಪಡೆಯುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲು ವರಿಷ್ಠರು ಮುಂದಾಗಿದ್ದಾರೆ. ಸಮಿತಿ ರಚನೆಯಾದ ಬಳಿಕ ಜಿಲ್ಲಾ, ತಾಲೂಕು ಮಟ್ಟದಲ್ಲಿ ನಾಯಕರು ಸಭೆ ನಡೆಸಿ ಪಕ್ಷವನ್ನು ಸದೃಢಗೊಳಿಸಬೇಕಾಗಿದೆ. ಪಕ್ಷಕ್ಕೆ ಹೊಸ ಪದಾಧಿಕಾರಿಗಳನ್ನು ಸಹ ನೇಮಕ ಮಾಡುವ ನಿಟ್ಟಿನಲ್ಲಿ ಸಮಿತಿ ಕಾರ್ಯ ನಿರ್ವಹಿಸಲಿದೆ.

ಇತರ ಸಮುದಾಯಕ್ಕೆ ನಾಯಕತ್ವ: ಮಾಜಿ ಸಿಎಂ ಹೆಚ್​ಡಿಕೆ ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರ ಸಮ್ಮುಖದಲ್ಲಿ ಶಾಸಕರ ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿದ್ದರು. ದಲಿತ, ಲಿಂಗಾಯತ, ಮುಸ್ಲಿಂ ಸೇರಿದಂತೆ ಇತರ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಾಯಕತ್ವವು ಪಕ್ಷದಲ್ಲಿಲ್ಲ. ಒಂದು ಸಮುದಾಯವನ್ನು ಪಕ್ಷದತ್ತ ಸೆಳೆಯುವಂತಹ ನಾಯಕತ್ವ ಗುಣಗಳುಳ್ಳ ಮುಖಂಡರು ಪಕ್ಷದಲ್ಲಿ ಇಲ್ಲದಿರುವುದು ಸಹ ಪಕ್ಷವು ಚುನಾವಣೆಯಲ್ಲಿ ಸೋಲನುಭವಿಸಲು ಕಾರಣ. ಈ ಹಿನ್ನೆಲೆ ಇದೀಗ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದರ ಜೊತೆಗೆ ಇತರ ಸಮುದಾಯಕ್ಕೆ ನಾಯಕತ್ವ ನೀಡಿ ಆ ಸಮುದಾಯಗಳನ್ನು ಸೆಳೆಯುವ ಕಾರ್ಯತಂತ್ರ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಪಂಚರತ್ನ ಕಾರ್ಯಕ್ರಮಗಳ ಕುರಿತು ಪ್ರಚಾರ: ಶ್ರಾವಣ ಮಾಸದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಜೆಡಿಎಸ್ ಮುಂದಾಗಿದೆ. ಮುಂದಿನ ಲೋಕಸಭೆ ಚುನಾವಣೆವರೆಗೆ ಪ್ರವಾಸಗಳು ವಿವಿಧ ಹಂತದಲ್ಲಿ ನಡೆಯಲಿದೆ. ಪ್ರವಾಸದ ವೇಳೆ ಪಂಚರತ್ನ ಕಾರ್ಯಕ್ರಮಗಳ ಕುರಿತು ಮತ್ತಷ್ಟು ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ. ಜಿಲ್ಲಾವಾರು, ತಾಲೂಕುವಾರು ಭೇಟಿ ನೀಡಿ ಕುಮಾರಸ್ವಾಮಿ ಅವರ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ. ಬೆಂಗಳೂರಿಗೂ ವಿಶೇಷ ಒತ್ತು ನೀಡಿ ಎಂದು ದೇವೇಗೌಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ?: ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಿಷ್ಟು..

ABOUT THE AUTHOR

...view details