ಬೆಂಗಳೂರು:108 ಆರೋಗ್ಯ ಕವಚ ತುರ್ತು ಆಂಬ್ಯುಲೆನ್ಸ್ ಸೇವೆಯಡಿ ನೂತನ 262 ಆಂಬ್ಯುಲೆನ್ಸ್ಗಳನ್ನು ಸಿಎಂ ಸಿದ್ದರಾಮಯ್ಯ ಇಂದು ಲೋಕಾರ್ಪಣೆ ಮಾಡಿದ್ದಾರೆ. ವಿಧಾನಸೌದದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಯಾರೂ ತುರ್ತು ಚಿಕಿತ್ಸೆ ಸಿಗದೇ ಮೃತಪಡಬಾರದು. ಅಪಘಾತದ ನಂತರ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಲಭಿಸಬೇಕು. ಹೆರಿಗೆ ಸಂದರ್ಭದಲ್ಲಿ ಚಿಕಿತ್ಸೆ ಸಿಗದೇ ತಾಯಿ, ಮಗು ಸಾಯಬಾರದು. ಹೃದಯಾಘಾತ ಆದಾಗ ಚಿಕಿತ್ಸೆ ಸಿಗದೇ ಸಾವನ್ನಪ್ಪುವ ಪ್ರಕರಣಗಳು ನಡೆಯಬಾರದು. ಅದಕ್ಕಾಗಿಯೇ 2008ರಲ್ಲಿ ತುರ್ತು ಆರೋಗ್ಯಸೇವೆ ತರಲಾಯಿತು. ರಾಜ್ಯದಲ್ಲಿ 236 ತಾಲ್ಲೂಕುಗಳಿವೆ. ತಾಲೂಕಿಗೆ ತಲಾ ನಾಲ್ಕರಂತೆ ಕನಿಷ್ಟ 840 ಆಂಬ್ಯುಲೆನ್ಸ್ ಇರಬೇಕು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕರೆ ಬಹಳ ಅನುಕೂಲ ಆಗುತ್ತದೆ'' ಎಂದರು.
''ಹೆಚ್ಚುವರಿ ಆಂಬ್ಯುಲೆನ್ಸ್ ಖರೀದಿಗೆ ಹಣಕಾಸು ಒದಗಿಸ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಎಮ್ಆರ್ಐ ಸ್ಕ್ಯಾನಿಂಗ್ ಸೌಲಭ್ಯ ಇರಬೇಕಿತ್ತು. ವಿವಿಧ ಸ್ಕ್ಯಾನ್ಗಳಿಗೆ ಬಡವರು ವೆಚ್ಚ ಭರಿಸಲು ಆಗಲ್ಲ. ಇಲ್ಲಿಯವರೆಗೆ 25 ಕೋಟಿ ಜನರಿಗೆ ಸಿಎಂ ನಿಧಿಯಡಿ ಪರಿಹಾರ ಕೊಡುವ ಕೆಲಸ ಆಗಿದೆ. ನಾನು ಸಿಎಂ ನಿಧಿಯಡಿ 1/4 ವೆಚ್ಚ ಭರಿಸ್ತೇನೆ. ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡ್ತಾರೆ ಅನ್ನೋ ಭಾವನೆ ಇದೆ. ಜಯದೇವ ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆ ಇದೆ ಅಂದ್ರೆ ಬೇರೆ ಕಡೆಯೂ ಕೊಡೋಕ್ಕಾಗುತ್ತೆ. ಈಗ ಸರ್ಕಾರಿ ವೈದ್ಯ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಿದ್ದೇನೆ. ಈಗ ಮೆಡಿಕಲ್ ಕಾಲೇಜುಗಳು ಜಾಸ್ತಿಯಾಗಿ ಡಾಕ್ಟರ್ಗಳೂ ಜಾಸ್ತಿಯಾಗಿ ಬಿಟ್ಟಿದ್ದಾರೆ. ವೈದ್ಯರ ಹುದ್ದೆ ಭರ್ತಿಗೆ ಉತ್ತರ ಕರ್ನಾಟಕಕ್ಕೂ ಹೆಚ್ಚು ಗಮನ ಕೊಡಲು ಹೇಳಿದ್ದೇನೆ'' ಎಂದು ಹೇಳಿದರು.
''ಪಂಚ ಗ್ಯಾರಂಟಿಗಳಿಂದ ರಾಜ್ಯದ ಆರ್ಥಿಕತೆ ಹಾಳಾಗುತ್ತೆ ಎಂದು ಪ್ರಧಾನಿ ಮೋದಿ ಟೀಕೆ ಮಾಡುತ್ತಾರೆ. ಆದರೆ ಈಗ ಅವರೇ ಉಚಿತ ಯೋಜನೆಗಳನ್ನು ಕೊಡುತ್ತಿದ್ದಾರೆ. ರಾಜ್ಯದ ಆರ್ಥಿಕತೆ ಕುಸಿತವಾಗಿದ್ದರೆ, ನೂತನ ಆಂಬ್ಯುಲೆನ್ಸ್ಗಳನ್ನು ಕೊಡಲು ಸಾಧ್ಯವಾಗುತ್ತಿತ್ತಾ'' ಎಂದು ಇದೇ ವೇಳೆ ಪ್ರಶ್ನಿಸಿದರು.
ಖಾಸಗಿ ಆಸ್ಪತ್ರೆಗಳ ಜೊತೆ ಒಳಒಪ್ಪಂದ:''70ಕ್ಕೂ ಹೆಚ್ಚು ಮೆಡಿಕಲ್ ಕಾಲೇಜುಗಳು ನಮ್ಮ ರಾಜ್ಯದಲ್ಲಿದ್ದು 10 ಸಾವಿರಕ್ಕೂ ಹೆಚ್ಚು ವೈದ್ಯರನ್ನು ತಯಾರು ಮಾಡುತ್ತಿದ್ದೇವೆ. ಇಡೀ ಪ್ರಪಂಚದ ವಿವಿಧ ಭಾಗಗಳಲ್ಲಿ ನಮ್ಮ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಇರುವ ನಮ್ಮ ವ್ಯವಸ್ಥೆಯನ್ನು ಪರಿಗಣಿಸಿ ಬೇರೆ ರಾಜ್ಯಗಳು ಅದನ್ನು ಅನುಕರಣೆ ಮಾಡುತ್ತಿವೆ. ಇದರ ಜತೆಗೆ ನಮ್ಮಲ್ಲಿ ಅತಿ ಹೆಚ್ಚು ಖಾಸಗಿ ಮೆಡಿಕಲ್ ಕಾಲೇಜುಗಳು ಇವೆ. ಮೆಡಿಕಲ್ ಕಾಲೇಜುಗಳ ಮಾದರಿಯಲ್ಲಿ ಪ್ಯಾರಾಮೆಡಿಕಲ್ ಮತ್ತು ನರ್ಸಿಂಗ್ ಕಾಲೇಜುಗಳು ನಮ್ಮ ರಾಜ್ಯದಲ್ಲೇ ಹೆಚ್ಚಾಗಿವೆ'' ಎಂದು ಸಿಎಂ ತಿಳಿಸಿದರು.
''108 ಆಂಬ್ಯುಲೆನ್ಸ್ ಸೇವೆಗೆ ಹೊಸ ದಿಕ್ಕು ತೋರಲು ಆಧುನಿಕ ತಂತ್ರಜ್ಞಾನ ಅಳವಡಿಸಲು 262 ನೂತನ ಆಂಬ್ಯುಲೆನ್ಸ್ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಮಂತ್ರಿಗಳು ಹಾಗೂ ಕಾರ್ಯದರ್ಶಿಗಳಿಗೆ ಮನವಿ ಮಾಡುತ್ತೇನೆ. 108 ಅಂಬ್ಯುಲೆನ್ಸ್ ಚಾಲಕರು ಖಾಸಗಿ ಆಸ್ಪತ್ರೆಗಳ ಜೊತೆ ಒಳಒಪ್ಪಂದ ಮಾಡಿಕೊಂಡು ನಮ್ಮ ಕನಕಪುರ, ಮಳವಳ್ಳಿ ಚಾಮರಾಜನಗರ ಭಾಗದಲ್ಲಿ ಯಾವುದೇ ಅಪಘಾತವಾದರೂ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಾರೆ".