ಕರ್ನಾಟಕ

karnataka

ಕಲ್ಲು ಕ್ವಾರಿಯಲ್ಲಿ ಹಫ್ತಾ ವಸೂಲಿ ಎಗ್ಗಿಲ್ಲದೆ ನಡೆಯುತ್ತಿದೆ: ಎಸ್​​.ಆರ್.ಪಾಟೀಲ್​​​

By

Published : Mar 16, 2021, 6:15 PM IST

ವಿಧಾನ ಪರಿಷತ್​​​ ಕಲಾಪದಲ್ಲಿಂದು ಕಲ್ಲು ಕ್ವಾರಿ ಸ್ಫೋಟ ಪ್ರರಕಣ ಕುರಿತು ಗಂಭೀರ ಚರ್ಚೆಯಾಗಿದ್ದು, ರಾಜ್ಯದ ನಾನಾ ಕಲ್ಲು ಕ್ವಾರಿಗಳಲ್ಲಿ ಹಫ್ತಾ ವಸೂಲಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಪ್ರತಿಪಕ್ಷ ಸದಸ್ಯರು ಆರೋಪಿಸಿದ್ದಾರೆ.

SR Patil
ಎಸ್​​.ಆರ್ ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಕಲ್ಲು ಕ್ವಾರಿಗಳ ಅಕ್ರಮ ನಿಲ್ಲಿಸಲು ಸ್ವತಃ ಮುಖ್ಯಮಂತ್ರಿಗಳೇ ಅಸಹಾಯಕರಾಗುವ ಸ್ಥಿತಿ ಬಂದಿದೆ. ಸಿಎಂಗೆ ಚಾಲೆಂಜ್ ಮಾಡುವ ಕುಳಗಳು ಈ ಸರ್ಕಾರದಲ್ಲಿವೆ. ಹಫ್ತಾ ವಸೂಲಿ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ‌ ಎಸ್.ಆರ್.ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಸರಹದ್ದಿನಲ್ಲಿ ಬರುವ ಹಿರೇನಾಗವಲ್ಲಿ ಗ್ರಾಮದ ಬಳಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಗಣಿಗಾರಿಕೆ ಕುರಿತು ನಿಯಮ‌ 68ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಗಣಿ ದುರಂತ ಪದೇ ಪದೆ ಆಗುತ್ತಿರುವುದಕ್ಕೆ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ರಾಜಕೀಯ ಭ್ರಷ್ಟಾಚಾರವೇ ಕಾರಣ ಎಂದು ನೇರ ಆರೋಪ ಮಾಡಿದರು.

ಸರ್ಕಾರ, ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿಲ್ಲ. ಇದೇನು ಮೊದಲ ಘಟನೆ ಅಲ್ಲ. ಹಿಂದೆ ಶಿವಮೊಗ್ಗ ಜಿಲ್ಲೆ‌ಯ ಘಟನೆ ಮಾಸುವ ಮೊದಲೇ ಚಿಕ್ಕಬಳ್ಳಾಪುರ ಘಟನೆ ನಡೆದಿದೆ. ಕ್ರಷರ್ ಮತ್ತು ಕಲ್ಲು ಗಣಿಗಾರಿಕೆ ಜಾಗದಲ್ಲಿ ಘಟನೆ ನಡೆದಿದೆ. ಕೇವಲ ಒಂದು ತಿಂಗಳಿನಲ್ಲಿ ಎರಡು ಘಟನೆ ನಡೆದಿದೆ ಎಂದರು.

ಕಲ್ಲು ಕ್ವಾರಿಯಲ್ಲಿ ಹಫ್ತಾ ವಸೂಲಿ ಎಗ್ಗಿಲ್ಲದೆ ನಡೆಯುತ್ತಿದೆ: ಎಸ್​​.ಆರ್.ಪಾಟೀಲ್ ಆರೋಪ

ಪೊಲೀಸರ ದಾಳಿಯ ಭಯ

ಭ್ರಮರವಾಸಿನಿ ಕ್ರಷರ್ ಮಾಲೀಕರ ವಿರುದ್ಧ ಆರೋಪ ಕೇಳಿಬಂದಿತ್ತು. ಫೆ. 7ರಂದು ಎಸ್​​​​ಪಿ ಭೇಟಿ ನೀಡಿದ್ದಾಗ ಕಾನೂನು ಬಾಹಿರ ವಸ್ತು ಇಟ್ಟಿದ್ದ ಮಾಹಿತಿ ಲಭ್ಯವಾಗಿತ್ತು. ಸ್ಫೋಟಕ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿತ್ತು. ಆದರೆ ಯಾರನ್ನೂ ಬಂಧಿಸಿರಲಿಲ್ಲ. ಸ್ಫೋಟಕ ವಶಕ್ಕೆ ಪಡೆದರೂ ಯಾಕೆ ಬಂಧಿಸಿರಲಿಲ್ಲ ಎಂದು ಪ್ರಶ್ನಿಸಿದರು.

ಅಲ್ಲದೆ ಆಗ ಕ್ರಮ ಕೈಗೊಂಡು ಮಾಲೀಕರನ್ನು ಬಂಧಿಸಿದ್ದರೆ ಘಟನೆ ನಡೆಯುತ್ತಿರಲಿಲ್ಲ. ಮತ್ತೊಮ್ಮೆ ಪೊಲೀಸರ ದಾಳಿಯ ಭಯಕ್ಕೆ ಸ್ಫೋಟಕಗಳನ್ನು ಸಾಗಾಣಿಕೆ ಮಾಡಿದ್ದಾರೆ. ಜಿಲೆಟಿನ್, ಡಿಟೋನೇಟರ್​​ಗಳನ್ನು ಪೊಲೀಸರ ಕಣ್ತಪ್ಪಿಸಿ ಇಡುವ ಪ್ರಯತ್ನ ಮಾಡಿದ್ದಾರೆ. ಬೆಂಕಿ ಹಚ್ಚಿ ಸ್ಫೋಟಕಗಳನ್ನು ಬೆಂಕಿಯಲ್ಲಿ ಹಾಕಿದ್ದಾರೆ. ಆಗ ಅವು ಸ್ಫೋಟಗೊಂಡು ಕಾರ್ಮಿಕರ ದೇಹ ಛಿದ್ರವಾಗಿವೆ ಎಂದರು.

ರಾಜ್ಯದಲ್ಲಿ 2,493 ಕಲ್ಲು ಗಣಿಗಾರಿಕೆ ಮಂಜೂರು ಮಾಡಲಾಗಿದೆ. ಇದರಲ್ಲಿ 18,061 ಗುತ್ತಿಗೆ ಪ್ರದೇಶದಲ್ಲಿ ಸ್ಫೋಟಕ ಬಳಕೆ ಮಾಡಲು ಅನುಮತಿ ಇದೆ. 744 ಗಣಿಗಳಿಗೆ ಸ್ಫೋಟಕ ಇಲ್ಲದೆ ಗಣಿಗಾರಿಕೆ ಮಾಡಬೇಕು. ಇದರ ಜೊತೆ ಕೇವಲ 344 ಗಣಿ ಮಾತ್ರ ಸ್ಫೋಟಕ ಬಳಸುವ ಲೈಸೆನ್ಸ್ ಪಡೆದಿವೆ. 1,059 ಜನ ಲೈಸೆನ್ಸ್ ಹೊಂದಿದರುವವರೊಂದಿಗೆ ಸ್ಫೋಟಕ ಬಳಸಿಕೊಳ್ಳಲು ಒಡಂಬಡಿಕೆ ಮಾಡಿಕೊಂಡಿದ್ದಾರೆ.

ಮನಸೋ ಇಚ್ಚೆ ಸ್ಫೋಟಕ ಬಳಕೆ

ಯಾರು ಲೈಸೆನ್ಸ್ ಹೊಂದಿದ್ದಾರೋ ಅವರು ಸ್ಫೋಟಕ ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೆ ಲೈಸೆನ್ಸ್ ಇಲ್ಲದೇ ಇರುವವರು ಲೈಸೆನ್ಸ್ ಇರುವವರ ಬಳಿ ಒಡಂಬಡಿಕೆ ಮಾಡಿಕೊಂಡು ಸ್ಫೋಟಕ ತರಿಸಿಕೊಂಡು ಸ್ಫೋಟ ಮಾಡುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 177 ಕಲ್ಲು ಕ್ವಾರಿ ಇದ್ದು, ಅದರಲ್ಲಿ 111 ಗಣಿಗಳು ಸಕ್ರಿಯವಾಗಿವೆ. ಅವುಗಳಲ್ಲಿ ಕೇವಲ 21 ಮಾತ್ರ ಸ್ಫೋಟಕ ಪರವಾನಗಿ ಪಡೆದಿವೆ. ಉಳಿದ 90 ಜನ ಮನಸೋ ಇಚ್ಛೆ ಸ್ಫೋಟಕ ಬಳಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಬೇರೆ ಬೇರೆ ರಾಜ್ಯದಿಂದ ಸ್ಫೋಟಕಗಳು ಬರುತ್ತಿವೆ. ಅಕ್ರಮವಾಗಿ ತರಿಸಿಕೊಳ್ಳಲಾಗುತ್ತಿದೆ. ರಾಜ್ಯದ ಗಡಿ‌ ದಾಟಿ ಹೇಗೆ ಬರಲಿವೆ, ಗುಪ್ತಚರ ದಳ ಕಣ್ತಪ್ಪಿಸಿ ಬರಲು ಸಾಧ್ಯವಾ? ಕಲ್ಲು ಗಣಿಗಳಿಂದ ತಿಂಗಳ ಹಫ್ತಾ ವಸೂಲಿ ಮಾಡಲಾಗುತ್ತಿದೆ. ಹಾಗಾಗಿ ಅನಾಯಾಸವಾಗಿ ಅಕ್ರಮವಾಗಿ ಸ್ಫೋಟಕಗಳು ಗಣಿ ತಲುಪುತ್ತಿವೆ ಎಂದು ಆರೋಪಿಸಿದರು.

ಗಣಿಗಳಲ್ಲಿ ಶೇ. 35ರ ಪಾಲುದಾರಿಕೆ ಕೇಳುತ್ತಾರೆ. ಒಪ್ಪದೆ ಇದ್ದಾಗ ದಾಳಿ ಮಾಡುತ್ತಾರೆ. 111ರಲ್ಲಿ ಕೇವಲ ಒಂದು ಕಡೆ ಮಾತ್ರ ಯಾಕೆ ದಾಳಿ ಮಾಡಿದ್ದರು, ದಾಳಿಗೆ ಯಾರು ಹೇಳಿದ್ದರು ಎಂದು ಪ್ರಶ್ನಿಸಿದರು.

ಅಧಿಕಾರಿಗಳು, ಅಧಿಕಾರೇತರು ಒಂದಾಗಿ ಭ್ರಷ್ಟಾಚಾರ ನಡೆಸಿದರೆ ಯಾವ ವ್ಯವಸ್ಥೆ ಕೂಡ ನಿಲ್ಲಿಸಲು ಸಾಧ್ಯವಿಲ್ಲ. ಅಧಿಕಾರಿಗಳಿಗೆ ಗಣಿ ಮಾಲೀಕರು ಉಚಿತವಾಗಿ ಸ್ಯಾಂಡ್, ಜಲ್ಲಿ ಎಲ್ಲಾ ಕೊಡಬೇಕು. ಹೀಗಾದರೆ ಅವರೇನು ಮಾಡುತ್ತಾರೆ, ಪಾಲುದಾರಿಕೆ ಕೊಡದೇ ಇದ್ದಲ್ಲಿ ಹೇಗೆ ನಡೆಸುತ್ತೀಯಾ ಎಂದು ಬೆದರಿಕೆ ಹಾಕುತ್ತಾರೆ. ಹಾಗಾಗಿ ಗಣಿ ಮಾಲೀಕರು ಅಕ್ರಮದಲ್ಲಿ ತೊಡಗುತ್ತಾರೆ. ಕ್ವಾರಿಗಳ‌ ಅವ್ಯವಹಾರ, ಭ್ರಷ್ಟಾಚಾರ ಎಷ್ಟಾಗಿದೆಯೆಂದರೆ ಸ್ವತಃ ಮುಖ್ಯಮಂತ್ರಿಗಳೇ ಇದನ್ನು ನಿಲ್ಲಿಸಲು ಅಸಹಾಯಕರಾಗುವ ಸ್ಥಿತಿ ಬಂದಿದೆ. ಸಿಎಂಗೆ ಚಾಲೆಂಜ್ ಮಾಡುವ ಕುಳಗಳು ಈ ಸರ್ಕಾರದಲ್ಲಿವೆ. ನಿರಾಣಿ ಅವರಿಗೆ ಇದೆಲ್ಲಾ ಗೊತ್ತಿಲ್ಲ ಅಂತಾ ಅಲ್ಲ. ಆದರೆ ಅಸಹಾಯಕತೆ ಇದೆ, ಇದನ್ನು ನಿಲ್ಲಿಸಲು ಅಸಾಧ್ಯವಾದ ವ್ಯವಸ್ಥೆಗೆ ಬಂದು ತಲುಪಿದೆ ಎಂದರು.

ನಾರಾಯಣಸ್ವಾಮಿ, ಶ್ರೀಮಂತ ಪಾಟೀಲ್ ಜಟಾಪಟಿ
ಈ ಬಿಜೆಪಿ ಸರ್ಕಾರ ಅನೈತಿಕ ಶಿಶು. ವಿವಾಹೇತರ ಸಂಬಂಧದಿಂದ ಹುಟ್ಟಿದ ಶಿಶು ಈ ಸರ್ಕಾರ. ನಮ್ಮಲ್ಲಿದ್ದವರನ್ನು ಕರೆದುಕೊಂಡು ಹೋಗಿ ಸರ್ಕಾರ ರಚಿಸಿದರು. ನಮ್ಮವರನ್ನ ರಾಜೀನಾಮೆ ಕೊಡಿಸಿ ಚುನಾವಣೆಗೆ ನಿಲ್ಲಿಸಿದರು. ಆಗ ಲಿವಿಂಗ್ ಟುಗೆದರ್​​​ನಲ್ಲಿದ್ದರು. ಅನೈತಿಕ ಸಂಬಂಧದಿಂದ ಹುಟ್ಟಿದ ಶಿಶು ಇದು ಎಂದು ಎಸ್.ಆರ್.ಪಾಟೀಲ್ ಬಿಜೆಪಿ ಸರ್ಕಾರ ರಚನೆ ಹಾದಿಯನ್ನು ಟೀಕಿಸಿದರು.

ಈ ವೇಳೆ ಎದ್ದು ನಿಂತ ಸಚಿವ ಶ್ರೀಮಂತ ಪಾಟೀಲ್, ಈ ಬಗ್ಗೆ ಒಂದು ಗಂಟೆ ಚರ್ಚೆಗೆ ಅವಕಾಶ ನೀಡಿದರೆ ನಾವು ಏಕೆ ಹೋದ್ವಿ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು. ಕಾಂಗ್ರೆಸ್​ನ ಹರಿಪ್ರಸಾದ್, ಚರ್ಚೆಗೆ ಅವಕಾಶ ಕೊಡಿ. ಎಲ್ಲಾ ಚರ್ಚೆ ಆಗಲಿ ಎಂದು ಪಟ್ಟು ಹಿಡಿದರು. ಈ ವೇಳೆ ನಾರಾಯಣಸ್ವಾಮಿ ಮಾತನಾಡಿ, ಆಪರೇಷನ್ ಕಮಲದ ಸಂದರ್ಭದಲ್ಲಿ ಶಾಸಕರನ್ನು ನೋಡಿಕೊಳ್ಳುವ ಜವಾಬ್ದಾರಿ ನನಗೆ ಕೊಟ್ಟಿದ್ದರು. ನಮ್ಮ ಶಾಸಕರೆಲ್ಲಾ ಹೋಟೆಲ್​​ನಲ್ಲಿ ಇದ್ದೆವು. ಈ ಶ್ರೀಮಂತ ಪಾಟೀಲ್ ಟಾಯ್ಲೆಟ್​​ಗೆ ಹೋಗ್ತಿನಿ ಎಂದು ರಾತ್ರೋರಾತ್ರಿ ಓಡಿ ಹೋದರು ಎಂದು ಟೀಕಿಸಿದರು.

ಹಫ್ತಾ ವಸೂಲಿ ಸತ್ಯ

ಗಣಿಗಳಿಂದ ಹಫ್ತಾ ವಸೂಲಿ ಮಾಡುತ್ತಿರುವ ಕುರಿತು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾಡಿರುವ ಆರೋಪ ಸತ್ಯ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಒಪ್ಪಿಕೊಂಡರು. ಹಫ್ತಾ ವಸೂಲಿ ನಿಲ್ಲಿಸಲು ಕ್ರಮ ವಹಿಸಲಾಗುತ್ತಿದೆ. ನನ್ನ ಗಮನಕ್ಕೆ ಬಂದವರನ್ನು ಅಮಾನತು ಮಾಡಲಾಗಿದೆ. ಅನುಮಾನ ಇದ್ದವರಿಗೆ ನೋಟಿಸ್ ನೀಡಲಾಗಿದೆ. ನಿಮ್ಮ ಗಮನದಲ್ಲಿ ಇರುವವರ ಹೆಸರು ಹೇಳಿದರೆ ಅವರ ವಿರುದ್ಧ ಕ್ರಮಕ್ಕೆ ಸಹಕಾರಿಯಾಗಲಿದೆ ಎಂದು ಪ್ರತಿಪಕ್ಷ ನಾಯಕರಿಗೆ ಒತ್ತಾಯಿಸಿದರು.

ABOUT THE AUTHOR

...view details