ಕರ್ನಾಟಕ

karnataka

ಸರ್ಕಾರಿ ನೌಕರರಾದ್ರೆ ಕೆಲಸ ಮಾಡೋಣ ಬಿಡಿ ಅಂತ ಉದಾಸೀನ ಮಾಡ್ತಾರೆ: ಆನಂದ್ ಸಿಂಗ್

By

Published : Feb 28, 2023, 10:54 PM IST

ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಆನಂದ್ ಸಿಂಗ್ ಮಾತನಾಡಿದರು.

Tourism Minister Anand Singh
ಪ್ರವಾಸೋದ್ಯ‌ಮ ಸಚಿವ ಆನಂದ್ ಸಿಂಗ್

ಸಚಿವ ಆನಂದ್ ಸಿಂಗ್ ಸುದ್ದಿಗೋಷ್ಟಿ

ಬೆಂಗಳೂರು :ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ವೇಳೆ ಪ್ರವಾಸೋದ್ಯ‌ಮ ಇಲಾಖೆಯಲ್ಲಿ ಹೆಚ್ಚು ಗುತ್ತಿಗೆ ನೌಕರರು ಇರುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ಪ್ರವಾಸೋದ್ಯ‌ಮ ಸಚಿವ ಆನಂದ್ ಸಿಂಗ್ ಗೊಂದಲದ ಹೇಳಿಕೆ ನೀಡಿದರು. ಕಾಂಟ್ರಾಕ್ಟ್ ಬೇಸಿಸ್ ಮೇಲೆ ಇದ್ರೆ ಓಡಿ ಬಂದು ಕೆಲಸ ಮಾಡುತ್ತಾರೆ, ಅವರಿಗೆ ಒಂದು ಭಯ ಇರುತ್ತದೆ. ಆದರೆ ಸರ್ಕಾರಿ ನೌಕರರಾದರೆ ಮಾಡೋಣ ಬಿಡಿ ಅಂತ ಉದಾಸೀನ ಮಾಡುತ್ತಾರೆ ಎಂದು ಹೇಳಿದರು.

ಜಂಗಲ್ ಲಾಡ್ಜ್ ಬಗ್ಗೆ..:ಜಂಗಲ್ ಲಾಡ್ಜ್ ರೆಸಾರ್ಟ್ (ಜೆಎಲ್​ಆರ್​) ಸಂಸ್ಥೆ ಈ ವರ್ಷ ಲಾಭದಾಯಕವಾಗಿದೆ. ಅಂದಿನ ಸಿಎಂ ದೇವರಾಜ್ ಅರಸ್ ಅವರು ಜಂಗಲ್‌ ಲಾಡ್ಜ್ ಸ್ಥಾಪನೆ ಮಾಡಿದರು. ನಂತರ ನೇಪಾಳದಿಂದ ಟೈಗರ್ ಟಾಪರ್ಸ್ ಅವರು ಸಂಸ್ಥೆಯನ್ನು ನೋಡಿ ಜಂಗಲ್ ಲಾಡ್ಜ್ ನಡೆಸುವ ಬಗ್ಗೆ ಚರ್ಚೆ ಮಾಡಿದ್ದರು. 1980ರಲ್ಲಿ ಟೈಗರ್ ಟಾಪರ್ಸ್ ಸಂಸ್ಥೆಯವರು ಮುಂದೆ ಬಂದರೂ, ಇದಾದ ಸುಮಾರು 14 ವರ್ಷಗಳ ನಂತರ ಅಂದರೆ 1994ರಲ್ಲಿ ಜಂಗಲ್​ ಲಾಡ್ಜ್​ ನಡೆಸದೇ ವಾಪಸ್ ಹೋದರು. ಬಳಿಕ ಸರ್ಕಾರವೇ ಜಂಗಲ್ ಲಾಡ್ಜ್ ರೆಸಾರ್ಟ್ಸ್​ಗಳನ್ನು ಪ್ರಾರಂಭಸಲು ಮುಂದಾಯಿತು. ಇದೀಗ ಅರಣ್ಯ ಇಲಾಖೆಯಿಂದ ಜಾಗ ಗುರುತಿಸಿ ಪ್ರವಾಸೋದ್ಯಮ ಇಲಾಖೆಯಿಂದ ಜಂಗಲ್ ಲಾಡ್ಜ್ ರೆಸಾರ್ಟ್ಸ್ ಮಾಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯನ್ನು ಲಾಭದಾಯಕವಾಗಿ ಮಾಡುವುದಕ್ಕೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಆದರೆ ಈ ವರ್ಷ 15 ಕೋಟಿ ಲಾಭ ಬಂದಿದೆ. ಈ ಒಂದು ಸಂಸ್ಥೆಯ ಮೂಲಕ ಮಕ್ಕಳಿಗೆ ಸ್ಕಾಲರ್ ಶಿಪ್, ಕಾರ್ಮಿಕರಿಗೆ ಭದ್ರತೆ ದೃಷ್ಟಿಯಿಂದ ಇನ್ಶೂರೆನ್ಸ್ ಮಾಡಲಾಗಿದೆ. ಮೊದಲು ನನಗೆ ಅರಣ್ಯ ಇಲಾಖೆ ಕೊಟ್ಟರು, ಬಳಿಕ ವಕ್ಫ್ ಬೋರ್ಡ್ ಕೊಟ್ಟರು, ಕೊನೆಯಲ್ಲಿ ಪ್ರವಾಸೋದ್ಯಮ ಇಲಾಖೆ ನೀಡಿದರು. ನನಗೆ ಸಿಕ್ಕ ಕಡಿಮೆ ಸಮಯದಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿದ್ದೇವೆ‌ ಎಂದರು.

ನಂದಿಬೆಟ್ಟ ರೋಪ್ ವೇಗೆ ಅಡಿಗಲ್ಲು:ಮಾರ್ಚ್ 15ರೊಳಗೆ ರೋಪ್ ವೇ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದೇವೆ ಎಂದು ಇದೇ ವೇಳೆ ಆನಂದ್​ ಸಿಂಗ್​ ತಿಳಿಸಿದರು. ಈಗಾಗಲೇ ಸಿಎಂ ಜೊತೆ ಮಾತುಕತೆ ನಡೆಸಿದ್ದು, ಶೀಘ್ರವೇ ದಿನಾಂಕ ನಿಗಡಿಪಡಿಸಿ ಘೋಷಣೆ ಮಾಡುತ್ತೇವೆ. ಈ ಯೋಜನೆ ಸುಮಾರು 96 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ‌ಎಂದು ತಿಳಿಸಿದರು.

ಅಂಜನಾದ್ರಿ ಬೆಟ್ಟದಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಇಲ್ಲಿಯೂ ಕೂಡಾ ಶೀಘ್ರದಲ್ಲೇ ರೂಪ್ ವೇ ಆರಂಭವಾಗಲಿದೆ. ಕೊಡಚಾದ್ರಿ, ಯಾಣ ಈ ಎರಡು ಕೇಂದ್ರ ಸರ್ಕಾರದ ಪರ್ವತ ಮಾಲಾ ಯೋಜನೆಯಡಿ ಸೇರಿಸಿದ್ದು ಕೇಂದ್ರ ಸರ್ಕಾರವೇ ಅಭಿವೃದ್ಧಿ ಯೋಜನೆ ಮಾಡಲಿದೆ ಎಂದು ಹೇಳಿದರು.

ಪ್ರವಾಸಿ ಸೌಧ ನಿರ್ಮಾಣ:ಹಲಸೂರು ಕೆರೆ ಬಳಿ ಪ್ರವಾಸಿ ಸೌಧ ನಿರ್ಮಾಣ ಮಾಡಲಿದ್ದೇವೆ. ಪ್ರವಾಸೋದ್ಯಮ, ಜೆಎಲ್​ಆರ್​, ಕೆಎಸ್​ಟಿಡಿಸಿ(ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ) ಎಲ್ಲಾ ಇಲಾಖೆಗಳು ಒಂದೇ ಸೂರಿನಡಿ ತರಲು ಈ ಪ್ರವಾಸಿ ಸೌಧ ನಿರ್ಮಾಣ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ :ಮಾ.4ರಿಂದ 20ರವರೆಗೆ ಯೋಜನೆಗಳ ಫಲಾನುಭವಿಗಳ ಸಮಾವೇಶ: ಸಚಿವ ಆಚಾರ್

ABOUT THE AUTHOR

...view details