ಕರ್ನಾಟಕ

karnataka

ಗ್ಯಾರಂಟಿ ವಿಚಾರದಲ್ಲಿ ಮಾತು ತಪ್ಪಿದರೆ, ಕಾಂಗ್ರೆಸ್ ವಿರುದ್ಧ ವಚನಭ್ರಷ್ಟ ಪೋಸ್ಟರ್ ರಿಲೀಸ್: ಎನ್.ರವಿಕುಮಾರ್

By

Published : Jun 1, 2023, 3:43 PM IST

ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 85 ಸಾವಿರ ಕೋಟಿ ರೂಪಾಯಿ ವೆಚ್ಚ ಆಗಲಿದೆ. ಇದನ್ನು ಎಲ್ಲಿಂದ ತರುತ್ತೀರಾ? ಈ ಹಣ ಹೇಗೆ ಹೊಂದಿಸುತ್ತೀರಾ? ಕೆಎಸ್‍ಆರ್​ಟಿಸಿ ಈಗಾಗಲೇ ನಷ್ಟದಲ್ಲಿದೆ. ವೇತನ, ಡೀಸೆಲ್, ಬಸ್ ಪಂಕ್ಚರ್​ಗೂ ದುಡ್ಡಿಲ್ಲದ ಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ಉಚಿತ ಬಸ್ ಪ್ರಯಾಣ ಎಂದಿದ್ದೀರಿ'' ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

N Ravikumar
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್

ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿದರು.

ಬೆಂಗಳೂರು:''ಕಾಂಗ್ರೆಸ್ ಪಕ್ಷದವರು ಗ್ಯಾರಂಟಿ ವಿಚಾರದಲ್ಲಿ ನುಡಿದಂತೆ ನಡೆಯದೇ ಇದ್ದರೆ ನಾವು ನಿಮಗೆ ವಚನಭ್ರಷ್ಟ ಪಟ್ಟ ಕಟ್ಟುತ್ತೇವೆ. ಜೊತೆಗೆ ವಚನಭ್ರಷ್ಟ ಪೋಸ್ಟರ್ ರಿಲೀಸ್ ಮಾಡುತ್ತೇವೆ'' ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಎಚ್ಚರಿಕೆ ನೀಡಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ''ಗ್ಯಾರಂಟಿ ಸರಕಾರದ ಕ್ಯಾಬಿನೆಟ್ ನಾಳೆ ನಡೆಯಲಿದೆ. ಈಗಾಗಲೇ ಸರಕಾರ ರಚನೆ ಆಗುವ ಮೊದಲು, ಅಧಿಕಾರಕ್ಕೆ ಬರುವ ಮೊದಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಕರ್ನಾಟಕದ ಜನತೆಗೆ ಏನು ಮಾತು ಕೊಟ್ಟಿದ್ದಾರೋ, ವಚನ ನೀಡಿದ್ದಾರೋ ಆ ಪ್ರಕಾರ ನಡೆಯಬೇಕೆಂದು ಬಿಜೆಪಿ ಆಗ್ರಹಿಸುತ್ತದೆ'' ಎಂದು ತಿಳಿಸಿದರು.

''ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂದಿದ್ದರು. ಈಗ ಏನೇನೋ ಕಂಡಿಷನ್ ಹಾಕುತ್ತಿದ್ದಾರೆ. ಅಂದರೆ ಅದು ವಚನಭ್ರಷ್ಟತೆ. ಎಲ್ಲ ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ., ಎಲ್ಲ ನಿರುದ್ಯೋಗಿ ಡಿಪ್ಲೊಮ ಪಡೆದವರಿಗೆ 1,500 ರೂಪಾಯಿ ಕೊಡುವುದಾಗಿ ತಿಳಿಸಿದ್ದರು. ಈಗ ಕಂಡಿಷನ್ ಹಾಕುತ್ತಿದ್ದು, ವಚನಭ್ರಷ್ಟತೆ ಕಾಣುತ್ತಿದೆ. 200 ಯೂನಿಟ್ ಕರೆಂಟ್ ಫ್ರೀ, ಮಹದೇವಪ್ಪ ನಿನ್ಗೂ ಫ್ರೀ, ನನಗೂ ಫ್ರೀ ಎಂದಿದ್ದರು. ಅದರಂತೆ ನಡೆಯದಿದ್ದರೆ ವಚನಭ್ರಷ್ಟತೆ'' ಎಂದು ಆರೋಪಿಸಿದರು.

''10 ಕೆಜಿ ಅಕ್ಕಿ ವಿಚಾರದಲ್ಲೂ ಈಗ ಕೇಂದ್ರವನ್ನು ಕೇಳುವುದಾಗಿ ಹೇಳುತ್ತಿದ್ದಾರೆ. ಮುಂಚೆ ಇದನ್ನು ಹೇಳಿದ್ದರೇ ಎಂದು ಕೇಳಿದರು. ನಿಮ್ಮ ಪ್ರಣಾಳಿಕೆ, ಭಾಷಣ, ಘೋಷಣೆಯಂತೆ ನಡೆಯಬೇಕು ಎಂದು ಆಗ್ರಹಿಸಿದರು. ಅತ್ತೆಗೂ, ಸೊಸೆಗೂ ಉಚಿತ ಬಸ್ ಪ್ರಯಾಣ. ಹಾಸನಕ್ಕಾದ್ರೋ ಹೋಗಿ, ಧರ್ಮಸ್ಥಳಕ್ಕಾದ್ರೂ ಹೋಗಿ ಎಂದಿದ್ದರು. ಈಗ 60 ಕಿ.ಮೀಗೆ ಮಿತಿ ಹೇರುವ ಮಾತನಾಡುತ್ತಿದ್ದಾರೆ'' ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕೆಎಸ್‍ಆರ್​ಟಿಸಿ ಈಗಾಗಲೇ ನಷ್ಟದಲ್ಲಿದೆ:''ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 85 ಸಾವಿರ ಕೋಟಿ ರೂಪಾಯಿ ವೆಚ್ಚ ಆಗಲಿದೆ. ಇದನ್ನು ಎಲ್ಲಿಂದ ತರುತ್ತೀರಾ? ಈ ಹಣ ಹೇಗೆ ಹೊಂದಿಸುತ್ತೀರಾ? ಕೆಎಸ್‍ಆರ್​ಟಿಸಿ ಈಗಾಗಲೇ ನಷ್ಟದಲ್ಲಿದೆ. ವೇತನ, ಡೀಸೆಲ್, ಬಸ್ ಪಂಕ್ಚರ್​ಗೂ ದುಡ್ಡಿಲ್ಲದ ಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ಉಚಿತ ಬಸ್ ಪ್ರಯಾಣ ಎಂದಿದ್ದೀರಿ'' ಎಂದು ಪ್ರಶ್ನೆ ಮುಂದಿಟ್ಟರು.

ನಾವು ಕಾದು ನೋಡುತ್ತೇವೆ:''ಅಧಿಕಾರಕ್ಕೆ ಬಂದ 24 ಗಂಟೆ ಎಂದು ಹೇಳಿದ್ದೀರಿ. ಈಗೇನಾಗಿದೆ? 24 ಗಂಟೆ ಅಲ್ಲ. 14 ದಿನಗಳೇ ಕಳೆದಿವೆ. ಹಾಗಾಗಿ ನಾಳೆ ಕ್ಯಾಬಿನೆಟ್ ನಿರ್ಧಾರವನ್ನು ಕಾಯಲಿದೆ. ನೀವು ನುಡಿದಂತೆ ನಡೆಯದೇ ಇದ್ದರೆ ನಾವು ನಿಮಗೆ ವಚನಭ್ರಷ್ಟ ಪಟ್ಟ ಕಟ್ಟುತ್ತೇವೆ. ವಚನಭ್ರಷ್ಟ ಪೋಸ್ಟರ್ ರಿಲೀಸ್ ಮಾಡುತ್ತೇವೆ'' ಎಂದರು.

ಕಾಂಗ್ರೆಸ್​ ವಿರುದ್ಧ ತೀವ್ರ ಅಸಮಾಧಾನ:''ಕಾಂಗ್ರೆಸ್ ಪಕ್ಷದ ಸರಕಾರ ರಾಜಸ್ತಾನದಲ್ಲೂ ಇದೆ. ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ವಚನ ಕೊಟ್ಟಿದ್ದರು. ಆದರೆ, ಸಾಲಮನ್ನಾ ಮಾಡಿಲ್ಲ. ಇದರಿಂದ ರೈತರು ಸಾಲವನ್ನೂ ಕಟ್ಟಿಲ್ಲ. ಪರಿಣಾಮವಾಗಿ ಸರಕಾರವು 6 ಸಾವಿರ ಹೆಕ್ಟೇರ್ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದೆ. ವಚನಭ್ರಷ್ಟ ಪಾರ್ಟಿ ನಿಮ್ಮದಲ್ಲವೇ? ರಾಹುಲ್ ಗಾಂಧಿಯವರೇ ನಾಚಿಕೆ ಆಗುವುದಿಲ್ಲವೇ ನಿಮಗೆ? ಅದೇ ಥರ ರಾಜಸ್ಥಾನದ 19 ಲಕ್ಷ ಪದವೀಧರರಿಗೆ 3,500 ರೂ. ಪ್ರತಿತಿಂಗಳು ಕೊಡುವುದಾಗಿ ಹೇಳಿದ್ದೀರಿ? ಈಗ 1.90 ಲಕ್ಷ ಪದವೀಧರರನ್ನು ಮಾತ್ರ ಗುರುತಿಸಿ 8 ತಿಂಗಳು ಕೊಡುತ್ತಿದ್ದಾರೆ. ರಾಜಸ್ತಾನದ ಮಾದರಿಯಲ್ಲಿ ಇಲ್ಲೂ ವಚನಭ್ರಷ್ಟ ಸರಕಾರ ಬರಲಿದೆ ಎಂದು ಜನರನ್ನು ಎಚ್ಚರಿಸಿದರು. ಈಗ 3 ಘೋಷಣೆಗಳನ್ನು ಮಾತ್ರ ಶರ್ತದೊಂದಿಗೆ ಅನುಷ್ಠಾನಕ್ಕೆ ತರುವ ಮುನ್ಸೂಚನೆ ಸಿಕ್ಕಿದೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ವಚನಭ್ರಷ್ಟ ಮತ್ತು ಪ್ರಪಂಚದಲ್ಲಿ ಭಾರತದ ಮಾನ ಕಳೆಯುವ ಪಕ್ಷ'' ಎಂದು ಟೀಕಿಸಿದರು.

ಇದನ್ನೂ ಓದಿ:ಸಮಾಜದ ಶಾಂತಿ ಕದಡುವವರ ವಿರುದ್ಧ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್

ABOUT THE AUTHOR

...view details