ಕರ್ನಾಟಕ

karnataka

Family politics: ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಬೇಡವೆಂದು ಕೇಂದ್ರ, ರಾಜ್ಯ ಸರ್ಕಾರಗಳು ಬಿಲ್ ತರಲಿ: ಹೆಚ್ ಡಿ ರೇವಣ್ಣ

By

Published : Aug 8, 2023, 5:57 PM IST

Updated : Aug 8, 2023, 6:35 PM IST

ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳ ಕುಟುಂಬದವರ ಸ್ಪರ್ಧೆ ಬೇಡವೆಂದು ಬಿಲ್ ಮಂಡನೆ ಮಾಡಿದರೆ ಬೇಷರತ್ ಬೆಂಬಲ ನೀಡುತ್ತೇನೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

hd-revanna-reaction-on-family-politics
ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಬೇಡವೆಂದು ಕೇಂದ್ರ, ರಾಜ್ಯ ಸರ್ಕಾರಗಳು ಬಿಲ್ ತರಲಿ: ಹೆಚ್ ಡಿ ರೇವಣ್ಣ

ಮಾಜಿ ಸಚಿವ ಹೆಚ್ ಡಿ ರೇವಣ್ಣ

ಬೆಂಗಳೂರು: ಚುನಾವಣೆಯಲ್ಲಿ ಕುಟುಂಬದವರ ಸ್ಪರ್ಧೆ ಬೇಡವೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಲ್ ತರಲಿ, ಅದನ್ನು ಬಿಟ್ಟು ಬೆಳಗ್ಗೆ ಎದ್ದರೆ ದೇವೇಗೌಡರ ಕುಟುಂಬದ ಹೆಸರೇ ಬರುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ದೇವೇಗೌಡರ ಕುಟುಂಬ ಒಂದೆನಾ ಇರೋದು. ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳಲ್ಲಿ ಕುಟುಂಬದವರ ಸ್ಪರ್ಧೆ ಬೇಡವೆಂದು ಬಿಲ್ ತರಲಿ ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಆ ಬಿಲ್​ಅನ್ನು ಮಂಡನೆ ಮಾಡಲಿ, ಅದಕ್ಕೆ ನಾನು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಬೇಷರತ್ ಆಗಿ ಬೆಂಬಲ ನೀಡುತ್ತೇವೆ. ಇನ್ನು ರಾಜ್ಯಸಭೆಯಲ್ಲೂ ಬಿಲ್ ತರಲಿ ದೇವೇಗೌಡರು ಅದಕ್ಕೆ ಒಪ್ಪಿಗೆ ನೀಡುತ್ತಾರೆ. ಇಲ್ಲದಿದ್ದರೆ ಪ್ರಾದೇಶಿಕ ಪಕ್ಷಗಳಲ್ಲಿ ಕುಟುಂಬದರ ಸ್ಪರ್ಧೆ ಬೇಡವೆಂದು ಬಿಲ್ ತರಲಿ ಎಂದು ಹೆಚ್​ ಡಿ ರೇವಣ್ಣ ಕುಟುಕಿದರು.

ಪಕ್ಷಕ್ಕೆ ಬಿಟ್ಟ ವಿಚಾರ: ಹಾಸನದಲ್ಲಿ ಪ್ರಜ್ವಲ್ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೇವಣ್ಣ, ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಭವಾನಿ ರೇವಣ್ಣನವರದ್ದು ಚರ್ಚೆ ಆಗಿತ್ತು. ಜನಾಭಿಪ್ರಾಯ ಇತ್ತು, ಟಿಕೆಟ್​ ಕೇಳಿದ್ದೆವು. ಲೋಕಸಭೆ ಚುನಾವಣೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ ಅವರು, ಹೆಚ್.ಡಿ. ದೇವೇಗೌಡರು ತೆಗೆದುಕೊಂಡ ತೀರ್ಮಾನವೇ ಅಂತಿಮ. ಕುಮಾರಣ್ಣ, ರೇವಣ್ಣ ಹೊಡೆದಾಡ್ತಾರಂದ್ರೆ ಅದು ಭ್ರಮೆ. ದೇವೇಗೌಡರದ್ದು ಮುಗಿದೇ ಹೋಯ್ತು ಅಂದ್ರು. ಕುಳಿತಲ್ಲೇ ಏನು ಮಾಡಬೇಕೆಂದು ಅವರಿಗೆ ಗೊತ್ತಿದೆ. ಅವರು ಮಾಡ್ತಾರೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ರೈತರನ್ನು ನಿರ್ಲಕ್ಷಿಸಿದ ಸರ್ಕಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳಾಗಿದ್ದು, ರೈತರನ್ನು ನಿರ್ಲಕ್ಷ್ಯ ಮಾಡಿದೆ. ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರವಸೆಗಳ ಅನುಷ್ಠಾನದಲ್ಲಿ ನಿರತವಾಗಿದೆ. ಗ್ಯಾರಂಟಿ ಅನುಷ್ಠಾನಗೊಳಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಅನ್ನದಾತರನ್ನು ನಿರ್ಲಕ್ಷಿಸಬಾರದು ಎಂದು ಹೇಳಿದರು.

ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ಇದುವರೆಗೂ ನೀರು ಹರಿಸಿಲ್ಲ. ನಾಳೆಯಿಂದಲೇ ನಾಲೆಗಳಿಗೆ ನೀರು ಹರಿಸಿ ರೈತರು ಬೆಳೆ ಬೆಳೆಯಲು ಅನುಕೂಲ ಮಾಡಿಕೊಡಬೇಕು. ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಜಲಾಶಯದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಅಲ್ಲದೆ, ತಕ್ಷಣ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಕರೆಯಬೇಕು. ಜಲಾಶಯದ ಯೋಜನಾ ವ್ಯಾಪ್ತಿಯ ಎಲ್ಲಾ ಶಾಸಕರನ್ನು ಈ ಸಭೆಗೆ ಆಹ್ವಾನಿಸಬೇಕು ಎಂದು ಸರ್ಕಾರಕ್ಕೆ ರೇವಣ್ಣ ಒತ್ತಾಯಿಸಿದರು.

ರೈತರನ್ನು ಯಾವುದೇ ಕಾರಣಕ್ಕೆ ನಿರ್ಲಕ್ಷಿಸಬೇಡಿ, ರೈತರ ಬೆಳೆಗಳಿಗೆ ನೀರು ಬಿಡಿ, ನಮ್ಮ ರೈತರನ್ನು ಯಾಕೆ ನಿರ್ಲಕ್ಷ್ಯ ಮಾಡುತ್ತೀರಾ, ರೈತರು ಅರ್ಧ ಎಕರೆ, ಒಂದು ಎಕರೆಯಲ್ಲಿ ಬೆಳೆ ಬೆಳೆದಿದ್ದಾರೆ. ಕೊಬ್ಬರಿ ಬೆಳೆಗಾರರಿಗೆ 15 ಸಾವಿರ ರೂಪಾಯಿ ಕೊಡ್ತೇವೆ ಅಂದ್ರು. ಆದ್ರೆ ಇಲ್ಲಿಯವರೆಗೆ ಹಣ ಕೊಟ್ಟಿಲ್ಲ. ತಮಿಳುನಾಡಿಗೆ ನೀರು ಬಿಡ್ತಿದ್ದೀರಾ, ನಿಮಗೆ ನೀರು ಬಿಡುವುದಕ್ಕೆ ಸಾಧ್ಯವಿಲ್ಲದಿದ್ದರೆ ಬೆಳೆ ಪರಿಹಾರವನ್ನಾದರೂ ರೈತರಿಗೆ ಕೊಡಿ ಎಂದು ಮಾಜಿ ಸಚಿವ ಹೆಚ್​ ಡಿ ರೇವಣ್ಣ ಹೇಳಿದರು.

ರಾಜ್ಯದಲ್ಲಿ 25 ಸ್ಥಾನ ಲೋಕಸಭೆಯಲ್ಲಿ ಗೆಲ್ಲುತ್ತೀರಾ. ತಮಿಳುನಾಡಿಲ್ಲೂ 25 ಸ್ಥಾನ ಗೆಲ್ಲಬಹುದು. ತಮಿಳುನಾಡಿಗೆ ನೀರು ಬಿಡಲು ಹೊರಟಿದ್ದೀರಾ, ಐದು ಗ್ಯಾರಂಟಿ ಜೊತೆ ಆರು ಮತ್ತು ಏಳನೇ ಗ್ಯಾರಂಟಿ ಕೊಡಿ. ರೈತರಿಗೆ ನೀರು ಬಿಟ್ಟು ಆರನೇ ಗ್ಯಾರಂಟಿ ಪೂರೈಸಿ. ಲೋಕಸಭೆಯಲ್ಲಿ 25 ಸ್ಥಾನಗಳನ್ನು ಗೆಲ್ಲಬಹುದು ಎಂದು ರಾಜ್ಯ ಸರ್ಕಾರದ ಕುರಿತು ಲೇವಡಿ ಮಾಡಿದ್ರು.

ಪ್ರಸ್ತುತ ಲೋಕೋಪಯೋಗಿ ಇಲಾಖೆಯಲ್ಲಿ 165 ಸಹಾಯಕ ಕಾರ್ಯಪಾಲಕ ಇಂಜಿನಿಯರ್​ಗಳ ಹುದ್ದೆ ಖಾಲಿ ಇದ್ದು, ಸಾಮಾನ್ಯ ವರ್ಗದ 170 ಸಹಾಯಕ ಇಂಜಿನಿಯರ್​ಗಳಿಗೆ ಮುಂಬಡ್ತಿ ನೀಡಲು ಬಾಕಿ ಇದೆ. ಯಾವ ಉದ್ದೇಶದಿಂದ ಮುಂಬಡ್ತಿ ವಿಳಂಬವಾಗುತ್ತಿದೆ. ಕಾಲಮಿತಿಯಲ್ಲಿ ಮುಂಬಡ್ತಿ ನೀಡಬೇಕು. ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 9 ಸಾವಿರ ಕೋಟಿ ಬಿಲ್ ಪೆಂಡಿಂಗ್ ಇದೆ. ತಾಳಿ, ಒಡವೆ ಎಲ್ಲ ಅಡ ಇಟ್ಟು ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಇನ್ನೂ ಬಿಲ್ ಕೊಟ್ಟಿಲ್ಲ ಎಂದು ರೇವಣ್ಣ ಆರೋಪಿಸಿದರು.

ಸಚಿವ ಪ್ರಿಯಾಂಕ್​ ಖರ್ಗೆ ದುಡ್ಡು ಹೊಡೆದವ್ರೆ ಅಂತ ಹೇಳಲ್ಲ. ಅವರು ಯಂಗ್​ಸ್ಟರ್ ಇದ್ದಾರೆ, ಕೆಲಸ ಮಾಡ್ತಾರೆ. ಆದರೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅವರ ಹೆಸರಿಗೆ ಕಳಂಕ ಬರಬಾರದಲ್ಲ. ನಮ್ಮ ಜಿಲ್ಲೆಯಲ್ಲಿ ಕೆಲವರು ಏನೇನೋ ಮಾಡ್ತಿದ್ದಾರೆ. ಹಾಗಾಗಿ ಅವರ ಗಮನ ಸೆಳೆಯೋಕೆ ಹೇಳ್ತಿದ್ದೇನೆ ಎಂದು ರೇವಣ್ಣ ತಿಳಿಸಿದರು.

ಇದನ್ನೂ ಓದಿ:ಚಲುವರಾಯಸ್ವಾಮಿ ಮಂತ್ರಿಯಾಗಿದ್ದನ್ನು ಕುಮಾರಸ್ವಾಮಿ ಸಹಿಸುತ್ತಿಲ್ಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Last Updated : Aug 8, 2023, 6:35 PM IST

ABOUT THE AUTHOR

...view details