ಕರ್ನಾಟಕ

karnataka

ಬೆಂಗಳೂರು: ಸಿಗರೇಟ್ ಸೇಲ್ಸ್ ಮ್ಯಾನ್​ಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದ ಐವರ ಬಂಧನ

By ETV Bharat Karnataka Team

Published : Dec 14, 2023, 4:32 PM IST

ಯಲಹಂಕದಲ್ಲಿ ಸೇಲ್ಸ್ ಮ್ಯಾನ್​ನನ್ನು ಬೆದರಿಸಿ ನಡೆಸಿದ ದರೋಡೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ದರೋಡೆ ಮಾಡುತ್ತಿದ್ದ ಐವರ ಬಂಧನ
ದರೋಡೆ ಮಾಡುತ್ತಿದ್ದ ಐವರ ಬಂಧನ

ಬೆಂಗಳೂರು : ಮಾರಕಾಸ್ತ್ರ ಹಿಡಿದು ಸೇಲ್ಸ್ ಮ್ಯಾನ್​ಗಳನ್ನು ದೋಚುತ್ತಿದ್ದ ಗ್ಯಾಂಗ್​ವೊಂದನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಕ್ಮಲ್, ವಸೀಂ, ಬಕಾಸ್, ಅಜರ್, ಮತ್ತು ಅಲಿ ಬಂಧಿತ ಆರೋಪಿಗಳಾಗಿದ್ದು, ಪ್ರಮುಖ ಆರೋಪಿ ಸಮೀರ್ ತಲೆಮರೆಸಿಕೊಂಡಿದ್ದಾನೆ.

ಪ್ರಮುಖ ಆರೋಪಿ ಸಮೀರ್, ತನಗೆ ಹಣ ಬೇಕಾದಾಗ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುವ ಸೇಲ್ಸ್ ಮ್ಯಾನ್​ಗಳನ್ನು ಗುರುತಿಸಿಕೊಂಡು ಉಳಿದ ಆರೋಪಿಗಳಿಗೆ ಸೂಚನೆ ಕೊಡುತ್ತಿದ್ದನು. ಮಾರಕಾಸ್ತ್ರಗಳ ಸಮೇತ ಸಮೀರ್ ಕೊಟ್ಟ ಟಾರ್ಗೆಟ್ ತಲುಪುತ್ತಿದ್ದ ಆರೋಪಿಗಳು, ಸಿಗರೇಟು ಮತ್ತಿತರ ಅಂಗಡಿ ಸಾಮಗ್ರಿಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಬಳಿಕ ಆ ಸಾಮಗ್ರಿಗಳನ್ನು ವಿಲೇವಾರಿ ಮಾಡುತ್ತಿದ್ದ ಸಮೀರ್, ಉಳಿದ ಆರೋಪಿಗಳಿಗೆ ಕಮೀಷನ್ ರೂಪದಲ್ಲಿ‌ ಹಣ ನೀಡುತ್ತಿದ್ದ.

ಇದೇ ರೀತಿ ಇತ್ತೀಚಿಗೆ ಯಲಹಂಕದ ಕೊಂಡಪ್ಪ ಲೇಔಟ್ ಬಳಿ‌ಯಿರುವ ಶಿವಚೇತನ ಪ್ರಾವಿಷನ್ ಸ್ಟೋರ್ ಬಳಿ ಶಾಂತಿ ಪ್ರಸಾದ್ ಎಂಬ ಸೇಲ್ಸ್ ಮ್ಯಾನ್​ ಅನ್ನು ಬೆದರಿಸಿದ್ದ ಆರೋಪಿಗಳು ಸುಮಾರು 66 ಸಾವಿರ ರೂ ಮೌಲ್ಯದ ಸಿಗರೇಟುಗಳನ್ನು ದೋಚಿದ್ದರು. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಐವರು ಆರೋಪಿಗಳನ್ನ ಬಂಧಿಸಿದ್ದಾರೆ.

ಬಂಧಿತರಲ್ಲಿ ಅಕ್ಮಲ್ ನಾಲ್ಕು ಕೊಲೆ ಯತ್ನ, ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳು ಈ ಹಿಂದೆ ಜೈಲುವಾಸ ಅನುಭವಿಸಿ ಹೊರ ಬಂದರೂ ಮತ್ತದೇ ಕೃತ್ಯ ಎಸಗುತ್ತಿದ್ದು, ರೌಡಿ ಪಟ್ಟಿ ತೆರೆಯಲು ಪೊಲೀಸರು ಚಿಂತನೆ ಮಾಡುತ್ತಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 2 ಲಕ್ಷ ಮೌಲ್ಯದ ಸಿಗರೇಟು, ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್‌ಗಳು, ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ಸಮೀರ್ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ತಿಳಿದು ಬಂದಿದೆ.

ರಾತ್ರಿ ವೇಳೆ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಆರೋಪಿಗಳ ಸೆರೆ :ವಿಳಾಸ ಕೇಳುವ ನೆಪದಲ್ಲಿ ರಾತ್ರಿ ವೇಳೆ ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಅಡ್ಡಗಟ್ಟಿ ಚಾಕು ತೋರಿಸಿ ಫೋನ್ ಸೇರಿದಂತೆ ಬೈಕ್ ಎಟಿಎಂ ಕಾರ್ಡ್​ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಡಿ.12 ರಂದು ಮಹದೇವಪುರ ಠಾಣೆ‌ ಪೊಲೀಸರು ಬಂಧಿಸಿದ್ದರು. ಸುಲಿಗೆಗೆ ಒಳಗಾಗಿದ್ದ ಮೊಹಮ್ಮದ್ ಫೈದಲ್ ದೂರು ನೀಡಿದ ಹಿನ್ನೆಲೆ ಆರೋಪಿಗಳಾದ ರವಿಕುಮಾರ್, ಅಮೀನ್ ಹಾಗೂ ಪ್ರಶಾಂತ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ 16 ಲಕ್ಷ ಬೆಲೆ ಬಾಳುವ ಯಮಹಾ ಬೈಕ್ ಸೇರಿ ಒಂದು ಆ್ಯಪಲ್ ಪೋನ್ ವಶಕ್ಕೆ ಪಡೆದಿದ್ದರು.

ನವೆಂಬರ್ 28ರಂದು ಮೊಹಮ್ಮದ್ ಫೈದಲ್ ಸ್ನೇಹಿತನೊಂದಿಗೆ ವೈಟ್ ಫೀಲ್ಡ್ ಗೆ ಹೋಗುತ್ತಿದ್ದ ಮಾರ್ಗ ಮಧ್ಯೆ ವಿಳಾಸ ಕೇಳುವ ನೆಪದಲ್ಲಿ ಅಡ್ಡಗಟ್ಟಿದ್ದ ಆರೋಪಿಗಳು, ಚಾಕು ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಫೋನ್, ಬೈಕ್ ಹಾಗೂ ಎಟಿಎಂ ಕಾರ್ಡ್​ ಕಸಿದುಕೊಂಡಿದ್ದಾರೆ. ನಂತರ ಆತಂಕಕ್ಕೊಳಗಾಗಿ ಫೈದಲ್ ಓಡಿ ಹೋಗಿದ್ದರು. ಈ ಸಂಬಂಧ ಮೊಹಮ್ಮದ್ ಫೈದಲ್ ದೂರು ದಾಖಲಿಸಿದ್ದರು. ದೂರು ದಾಖಲಾದ ಬಳಿಕ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ :ವಿಳಾಸ ಕೇಳುವ ನೆಪದಲ್ಲಿ ಬೈಕ್ ಅಡ್ಡಗಟ್ಟಿ ಸುಲಿಗೆ, ನಾಲ್ವರು ಆರೋಪಿಗಳ ಬಂಧನ

ABOUT THE AUTHOR

...view details