ಕರ್ನಾಟಕ

karnataka

ರಾಜಕಾರಣ ಎಷ್ಟು ಮಾಡಬೇಕೋ ಅಷ್ಟೇ ಮಾಡಬೇಕು, ನೀರು ಹರಿಸುವ ಬೀಗ ನಮ್ಮ ಬಳಿ ಇದೆಯೇ?: ಡಿಸಿಎಂ ಡಿಕೆಶಿ

By

Published : Aug 16, 2023, 7:07 PM IST

Updated : Aug 16, 2023, 8:22 PM IST

Cauvery River water issue: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡಿರುವ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

ಡಿಸಿಎಂ ಡಿ.ಕೆ ಶಿವಕುಮಾರ್
ಡಿಸಿಎಂ ಡಿ.ಕೆ ಶಿವಕುಮಾರ್

ಕಾವೇರಿ ನದಿ ನೀರಿನ ಸಮಸ್ಯೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಬೆಂಗಳೂರು :ತಮಿಳುನಾಡಿಗೆ ಯಾಕೆ ನೀರು ಬಿಟ್ಟಿರಿ ಎಂದರೆ, ಬೀಗ ನಮ್ಮ ಬಳಿ ಇದೆಯೇ?, ರಾಜಕಾರಣ ಎಷ್ಟು ಮಾಡಬೇಕೋ ಅಷ್ಟು ಮಾಡಬೇಕು, ಜಾಸ್ತಿ ರಾಜಕಾರಣ ಮಾಡಬಾರದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದು, ನಿಮಗೂ ಅರ್ಜಿ ಹಾಕಲು ಅವಕಾಶವಿದೆ, ಸುಪ್ರೀಂ ಕೋರ್ಟ್​ಗೆ ಹೋಗಿ ಎಂದು ಪ್ರತಿಭಟನಾನಿರತ ರೈತರಿಗೂ ಪರೋಕ್ಷವಾಗಿ ಟಕ್ಕರ್ ಕೊಟ್ಟರು.

ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಯಾರ ನಿಯಂತ್ರಣದಲ್ಲಿದೆ, ನೀರು ಹರಿಸುವ ಜವಾಬ್ದಾರಿ ಯಾರ ಬಳಿ ಇದೆ. ಇದೆಲ್ಲ ನಾನು ಈಗ ಚರ್ಚೆ ಮಾಡುವುದಿಲ್ಲ. 30 ವರ್ಷ 40 ವರ್ಷದ ಲೆಕ್ಕ ಹಾಕಿದರೆ ಈ ವರ್ಷ ಮಳೆ ಕಡಿಮೆಯಾಗಿದೆ. ರೈತರಿಗೆ ಈ ಬಗ್ಗೆ ಮೊದಲೇ ತಿಳಿಸಿದ್ದೇವೆ. ಆದರೆ ಪ್ರತಿಭಟನೆ ಮಾಡುತ್ತಿದ್ದಾರೆ. ನೀರು ಬಿಡಬೇಡಿ ಎನ್ನುತ್ತಿದ್ದಾರೆ. ಕೋರ್ಟ್ ಕೇಳಬೇಕಲ್ಲ. ಅವರಿಗೂ ಕೋರ್ಟಿಗೆ ಹೋಗಲು ಅವಕಾಶವಿದೆ ಹೋಗಲಿ, ನಮಗೆ ಈ ರೀತಿ ಸಮಸ್ಯೆಯಾಗುತ್ತಿದೆ ಎಂದು ಹೋಗಲಿ, ಹಿಂದೆಲ್ಲ ಹೋರಾಟಗಳು ನಡೆದಿವೆ ಎಂದು ರೈತರನ್ನೇ ಕಾನೂನು ಹೋರಾಟ ನಡೆಸುವಂತೆ ತಿಳಿಸಿದರು.

ಸರ್ಕಾರ ಎಲ್ಲಾ ವಿಚಾರವನ್ನು ಗಮನಿಸಿ ಕೆಲಸ ಮಾಡಬೇಕು. ರಾಜ್ಯದ ಹಿತ ಹಾಗು ರೈತರ ಹಿತ ಕಾಪಾಡಲು ನಾನು ಸಚಿವನಾದ ನಂತರ ಎರಡು ಬಾರಿ ಬೆಳೆಗಳು ಹಾಳಾಗಬಾರದು ಎಂದು ನೀರು ಬಿಡಿಸಿದ್ದೇನೆ. ಈಗ ಸುಪ್ರೀಂ ಕೋರ್ಟ್​ನಲ್ಲಿ ನಾವು ನಮ್ಮ ಕಾನೂನು ತಜ್ಞರು ಏನು ಹೇಳುತ್ತಾರೆ ಎನ್ನುವುದನ್ನು ಕೇಳಬೇಕಲ್ಲ. ಅದಕ್ಕಾಗಿ ಕಾಯಬೇಕಿದೆ ಎಂದು ಡಿಸಿಎಂ ಹೇಳಿದರು.

ನೀರು ಹರಿಸುವ ವಿಚಾರದ ಕುರಿತ ಸಭೆ ವೇಳೆ ರಾಜ್ಯದ ನಿರ್ಧಾರ ಖಂಡಿಸಿ ತಮಿಳುನಾಡು ಪ್ರತಿನಿಧಿಗಳು ಸಭಾತ್ಯಾಗ ಮಾಡಿದ್ದಾರೆ. 27 ಟಿಎಂಸಿ ನೀರು ಬೇಕು ಎಂದು ಕೇಳಿದ್ದಾರೆ. ಎಲ್ಲವೂ ಕಾನೂನು ರೀತಿ ನಡೆಯಲಿದೆ. ಈಗಲೂ ನಾವು ಅವರು ಕೇಳಿದಷ್ಟು ನಾವು ನೀರು ಬಿಡುತ್ತಿಲ್ಲ. ನಾವು ಕಾನೂನಿಗೂ ಗೌರವ ಕೊಡುತ್ತೇವೆ ಎಂದು ತೋರಿಸಲು ಅಲ್ಪ ಪ್ರಮಾಣದ ನೀರು ಬಿಡುತ್ತಿದ್ದೇವೆ ಎಂದರು.

ರೈತರ ಪ್ರತಿಭಟನೆ:ಮತ್ತೊಂದೆಡೆ,ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿರುವುದನ್ನು ಖಂಡಿಸಿ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ವೃತ್ತದಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕೆಲ ಹೊತ್ತು ರಸ್ತೆ ತಡೆ ನಡೆಸಿದ ರೈತರು, ರಾಜ್ಯ ಸರ್ಕಾರದ ಹಾಗೂ ಕಾವೇರಿ ನ್ಯಾಯ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಇದನ್ನೂ ಓದಿ :Cauvery Water: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ

Last Updated : Aug 16, 2023, 8:22 PM IST

ABOUT THE AUTHOR

...view details