ಕರ್ನಾಟಕ

karnataka

ಕೋವಿಡ್ ಹಿನ್ನೆಲೆ ಸ್ಥಗಿತವಾಗಿದ್ದ 'ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮ: ಪುನಾರಂಭಕ್ಕೆ ಮೀನಮೇಷ

By

Published : Sep 11, 2021, 6:40 PM IST

ಕೋವಿಡ್ ಹಿನ್ನೆಲೆ ಸ್ಥಗಿತವಾಗಿದ್ದ ಈ ಜನಸ್ನೇಹಿ ಕಾರ್ಯಕ್ರಮವನ್ನು ಶೀಘ್ರ ಪುನಾರಂಭಿಸುವುದಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಕೋವಿಡ್ ನಿರ್ಬಂಧಗಳು ಕೆಲ ಜಿಲ್ಲೆಗಳಲ್ಲಿ ಮುಂದುವರೆದಿತ್ತು. ಕೆಲವೆಡೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿತ್ತು..

dc village stay programme to be resume again
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

ಬೆಂಗಳೂರು : 'ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ‌ ಕಡೆ' ಎಂಬ ವಿನೂತನ ಕಾರ್ಯಕ್ರಮವನ್ನು ಕಂದಾಯ ಇಲಾಖೆ ಕಳೆದ ಫೆಬ್ರವರಿಯಲ್ಲಿ ಪ್ರಾರಂಭಿಸಿತ್ತು. ಜಿಲ್ಲಾಧಿಕಾರಿಗಳು ಹಳ್ಳಿಗಳಿಗೆ ಹೋಗಿ ಸಮಸ್ಯೆಯನ್ನು ಸ್ಥಳದಲ್ಲೇ ಪರಿಹರಿಸುವ ಕಾರ್ಯಕ್ರಮ ಇದಾಗಿದೆ.

ಆದರೆ, ಕೋವಿಡ್ 2ನೇ ಅಲೆ ಹಿನ್ನೆಲೆ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಬಹುತೇಕ ಜಿಲ್ಲೆಗಳಲ್ಲಿ ಅನ್‌ಲಾಕ್ ಆಗಿ ತಿಂಗಳುಗಳೇ ಕಳೆದಿದ್ದರೂ ಕಂದಾಯ ಇಲಾಖೆ ಇನ್ನೂ ಕಾರ್ಯಕ್ರಮವನ್ನು ಪುನಾರಂಭಿಸಿಲ್ಲ.

'ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ', ಕಂದಾಯ ಇಲಾಖೆ ಚಾಲನೆ‌ ನೀಡಿದ ಜನಸ್ನೇಹಿ ಕಾರ್ಯಕ್ರಮ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕಂದಾಯ ಸಚಿವರು ಈ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಜಿಲ್ಲಾಡಳಿತವನ್ನು ಹಳ್ಳಿ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಈ ಕಾರ್ಯಕ್ರಮಕ್ಕೆ ಕಳೆದ ಫೆಬ್ರವರಿ ತಿಂಗಳ 3ನೇ ಶನಿವಾರ ಚಾಲನೆ ದೊರಕಿತ್ತು.

ಪ್ರತಿ ತಿಂಗಳ 3ನೇ ಶನಿವಾರ ಒಂದು ಗ್ರಾಪಂಗೆ ಭೇಟಿ:

ಜಿಲ್ಲಾಧಿಕಾರಿಗಳ ನಡೆ - ಹಳ್ಳಿ ಕಡೆ ಯೋಜನೆಯ ಅನುಸಾರ ಡಿಸಿಗಳು ಪ್ರತಿ ತಿಂಗಳ 3ನೇ ಶನಿವಾರ ಒಂದು ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಅಲ್ಲಿನ ಹಳ್ಳಿಯ ಜನರ ಅಹವಾಲು ಸ್ವೀಕರಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು.

ಪಿಂಚಣಿ, ಆಶ್ರಯ ಯೋಜನೆ, ಸ್ಮಶಾನ, ಫೌತಿ ಖಾತೆ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಪರಿಶೀಲನೆ ಹಾಗೂ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ಹಂಚಿಕೆ, ಪೋಡಿ ಪ್ರಕರಣ ಇತ್ಯರ್ಥ, ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದ ಅಡೆತಡೆ ನಿವಾರಣೆ ಸಂಬಂಧ ಡಿಸಿಗಳ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

ಕೋವಿಡ್​ನಿಂದ ಕಾರ್ಯಕ್ರಮ ಸ್ಥಗಿತ

ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿತ್ತು.‌ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತಂದು, ಸ್ಥಳದಲ್ಲೇ ಬಗೆಹರಿಸುವ ಯತ್ನ ಮಾಡಲಾಗುತ್ತದೆ. ಫೆಬ್ರವರಿ ಮತ್ತು ಮಾರ್ಚ್​ನ 3ನೇ ಶನಿವಾರ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆದರೆ, ಏಪ್ರಿಲ್ ತಿಂಗಳಿಂದ ಕೋವಿಡ್ ಎರಡನೇ ಅಲೆ ಬೊಬ್ಬಿರಿದ ಕಾರಣ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಎರಡು ಶನಿವಾರ ನಡೆದ ಈ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಉತ್ತಮ‌ ಸ್ಪಂದನೆ ಲಭಿಸಿತ್ತು. ಇತ್ತ ಪ್ರತಿಪಕ್ಷದ ಶಾಸಕರೂ ಈ ಕಾರ್ಯಕ್ರಮದ ಮಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕಾರ್ಯಕ್ರಮವನ್ನು ಮುಂದುವರಿಸುವಂತೆ ಅಧಿವೇಶನದಲ್ಲೇ ಒತ್ತಾಯಿಸಿದ್ದರು.

ಪುನಾರಂಭವಾಗದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ

ಕೋವಿಡ್ ಅಬ್ಬರದ ಹಿನ್ನೆಲೆ ಏಪ್ರಿಲ್​​​ನಿಂದ ಈ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿತ್ತು.‌ ಆದರೆ, ಜುಲೈ ಬಳಿಕ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಅನ್‌ಲಾಕ್‌ ಆಗಿದ್ದು, ಜನ ಮನ್ನಣೆ ಗಳಿಸಿದ್ದ ಡಿಸಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪುನಾರಂಭ ಮಾಡಲು ಸಾಧ್ಯವಾಗಿಲ್ಲ. ಇತ್ತ ನಾಯಕತ್ವ ಬದಲಾವಣೆಯ ಕಸರತ್ತು ಹಿನ್ನೆಲೆ ರಾಜ್ಯದ ಆಡಳಿತಕ್ಕೆ ಹಿನ್ನಡೆಯಾಗಿತ್ತು.

ಬಿಎಸ್​ವೈ ಬದಲಿಗೆ ಬೊಮ್ಮಾಯಿ ಹೊಸ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇತ್ತ ಕಂದಾಯ ಸಚಿವ ಸ್ಥಾನವನ್ನು ಆರ್ ಅಶೋಕ್ ಅವರೇ ಉಳಿಸಿಕೊಂಡಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್ ಪ್ರಮಾಣ ಕಡಿಮೆಯಾಗಿ, ಆರ್ಥಿಕ ಚಟುವಟಿಕೆ, ಸರ್ಕಾರಿ ಕಚೇರಿಗಳು ಸಹಜ ಸ್ಥಿತಿಗೆ ಬಂದಿದ್ದರೂ, ಡಿಸಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಮಾತ್ರ ಪುನಾರಂಭಿಸುವ ಗೋಜಿಗೆ ಸರ್ಕಾರ ಹೋಗಿಲ್ಲ.‌

ಕೆಲ ಶಾಸಕರು, ಸಾರ್ವಜನಿಕರು ಈ ಕಾರ್ಯಕ್ರಮದ ಪುನಾರಂಭಕ್ಕೆ ಒತ್ತಾಯಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆ ಹೇರಲಾದ ಲಾಕ್‌ಡೌನ್​ನಿಂದ ಸರ್ಕಾರಿ ಕೆಲಸಗಳು ಸ್ಥಗಿತವಾದ ಕಾರಣ ಸಾರ್ವಜನಿಕರು ಪರದಾಡುವಂತಾಗಿತ್ತು. ಹೀಗಾಗಿ, ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲು ಈ ಕಾರ್ಯಕ್ರಮವನ್ನು ಆದಷ್ಟು ಬೇಗ ಪುನಾರಂಭಿಸುವಂತೆ ಹಲವೆಡೆಯಿಂದ ಒತ್ತಾಯ ಕೇಳಿ ಬರುತ್ತಿದೆ.

ಒಟ್ಟು ಇತ್ಯರ್ಥ ಪಡಿಸಿರುವ ಪ್ರಕರಣ ಎಷ್ಟು?

ಜಿಲ್ಲಾಧಿಕಾರಿಗಳು ಹಳ್ಳಿ ಕಡೆಗೆ ಹೋಗಿ ಗ್ರಾಮಸ್ಥರ ಅಹವಾಲು ಸ್ವೀಕರಿಸುವ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಎರಡು ಶನಿವಾರ 30 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮದ ಮೂಲಕ ಒಟ್ಟು 25,285 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ ಜಿಲ್ಲಾಧಿಕಾರಿಗಳು ಸ್ಥಳದಲ್ಲೇ ಒಟ್ಟು 12,845 ಅರ್ಜಿಗಳನ್ನು ಇತ್ಯರ್ಥ ಪಡಿಸಿದ್ದಾರೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮದಡಿ ಸ್ವೀಕರಿಸಲಾದ 1,075 ಅರ್ಜಿಗಳಲ್ಲಿ ಎಲ್ಲವನ್ನೂ ಅಧಿಕಾರಿಗಳು ಸ್ಥಳದಲ್ಲೇ ಇತ್ಯರ್ಥಪಡಿಸಿದ್ದರು.

ಇತ್ಯರ್ಥವಾಗದೇ ಬಾಕಿ ಉಳಿದ ಪ್ರಕರಣಗಳ ಸಂಖ್ಯೆಯೂ ಹೆಚ್ಚಿತ್ತು. ಸುಮಾರು 12,000 ಪ್ರಕರಣ ಇತ್ಯರ್ಥವಾಗದೇ ಉಳಿದುಕೊಂಡಿವೆ. ಕೋವಿಡ್ ಹಿನ್ನೆಲೆ ಕಾರ್ಯಕ್ರಮ ಸ್ಥಗಿತಗೊಳಿಸುವ ಮುನ್ನ ದ.ಕನ್ನಡ ಜಿಲ್ಲೆ 826, ಹಾಸನದಲ್ಲಿ 808 ಪ್ರಕರಣ, ಬಳ್ಳಾರಿ 746, ತುಮಕೂರು 751, ವಿಜಯಪುರ 717, ಕಲಬುರ್ಗಿ 587, ಬೆಂ.ಗ್ರಾಮಾಂತರದಲ್ಲಿ 526, ಗದಗ 485, ಚಿಕ್ಕಬಳ್ಳಾಪುರ 444, ರಾಯಚೂರು 482 ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿತ್ತು.

ಲಾಕ್‌ಡೌನ್ ಬಳಿಕ ಕೊರೊನಾ ನಿಯಂತ್ರಣ ಹಿನ್ನೆಲೆ ಅರ್ಜಿ ವಿಲೇವಾರಿಗೆ ಹೆಚ್ಚಿನ ಗಮನ ಹರಿಸಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಜಿಲ್ಲಾಧಿಕಾರಿಗಳು ಹಳ್ಳಿ ಕಡೆಗೆ ನಡೆಯಿರಿ ಕಾರ್ಯಕ್ರಮದಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಸಂಬಂಧಿತ ಇಲಾಖೆಗಳಿಗೆ ಕಳುಹಿಸಿಕೊಡಲಾಗಿತ್ತು.‌ ಅದರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಡತಗಳು ಇತ್ಯರ್ಥವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರ ಕಾರ್ಯಕ್ರಮ ಪುನಾರಂಭಕ್ಕೆ ನಿರ್ಧಾರ

ಕೋವಿಡ್ ಹಿನ್ನೆಲೆ ಸ್ಥಗಿತವಾಗಿದ್ದ ಈ ಜನಸ್ನೇಹಿ ಕಾರ್ಯಕ್ರಮವನ್ನು ಶೀಘ್ರ ಪುನಾರಂಭಿಸುವುದಾಗಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಕೋವಿಡ್ ನಿರ್ಬಂಧಗಳು ಕೆಲ ಜಿಲ್ಲೆಗಳಲ್ಲಿ ಮುಂದುವರೆದಿತ್ತು. ಕೆಲವೆಡೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿತ್ತು.

ಈಗ ಕೋವಿಡ್ ಪ್ರಮಾಣ ಕಡಿಮೆಯಾಗಿದೆ. ಶೇ.2ರಷ್ಟು ಪಾಸಿಟಿವಿಟಿ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಆದಷ್ಟು ಬೇಗ ಕಾರ್ಯಕ್ರಮ ಪುನಾರಂಭಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಮುಂದಿನ ತಿಂಗಳಿಂದ ಕಾರ್ಯಕ್ರಮ ಪುನಾರಂಭಿಸುವ ಸಂಬಂಧ ಕಂದಾಯ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ABOUT THE AUTHOR

...view details