ಕರ್ನಾಟಕ

karnataka

C T Ravi: ರಾಜ್ಯಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಲ್ಲ, ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವೆ: ಸಿ.ಟಿ.ರವಿ

By

Published : Jul 30, 2023, 1:06 PM IST

Karnataka BJP state President Post: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಸದ್ಯದಲ್ಲೇ ನೇಮಕಾತಿ ನಡೆಯಲಿದೆ ಎನ್ನಲಾಗುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಈ ಹುದ್ದೆಗೆ ಸಿ.ಟಿ.ರವಿ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

CT Ravi
ಸಿ.ಟಿ.ರವಿ

ಬೆಂಗಳೂರು: "ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಎಂದಿಗೂ ನಾನು ಪಕ್ಷದ ಕಾರ್ಯಕರ್ತ. ಆದರೆ, ಪಕ್ಷವು ನನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ ನಾನು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ" ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

ಕುರುಬರಹಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡುತ್ತಾರೆ ಅನ್ನುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಸದ್ಯ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾತ್ರ. ರಾಜ್ಯಾಧ್ಯಕ್ಷ ಸ್ಥಾನ ಅನ್ನೋದು ಒಂದು ದೊಡ್ಡ ಜವಾಬ್ದಾರಿ. ಅದನ್ನು ಕೇಳಿ ಪಡೆಯಲು ಆಗುವುದಿಲ್ಲ. ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಅಲ್ಲ. ವರಿಷ್ಠರು ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ನಿಭಾಯಿಸುತ್ತೇನೆ" ಎಂದು ಹೇಳಿದರು.

"ನನ್ನನ್ನು ರಾಜ್ಯಾಧ್ಯಕ್ಷ ಮಾಡುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಭವಿಷ್ಯ ಎನ್ನುವುದು ನಿರೀಕ್ಷೆ ಮತ್ತು ಆಕಾಂಕ್ಷೆ. ಭವಿಷ್ಯದ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ ಕೊಡಬೇಕು ಮತ್ತು ಯಾವಾಗ ಕೊಡಬೇಕು ಎಂಬುದನ್ನು ದೊಡ್ಡವರು ನಿರ್ಧಾರ ಮಾಡುತ್ತಾರೆ" ಎಂದರು.

ಸಿ.ಟಿ.ರವಿ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ದೇವೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ದೇವೇಗೌಡರು ನಮ್ಮ ರಾಜ್ಯದ ಹಿರಿಯರು. ದೇವೇಗೌಡರು ಅಂತಿಮ ನಿರ್ಣಯ ಆಗಿದೆ ಅಂತ ಹೇಳಿಲ್ಲ, ಚರ್ಚೆ ಆಗಿದೆ ಎಂದಷ್ಟೇ ಹೇಳಿದ್ದಾರೆ. ಹೈಕಮಾಂಡ್​ ತೀರ್ಮಾನ ಏನು ಎಂಬುದು ಗೊತ್ತಿಲ್ಲ" ಎಂದು ನುಡಿದರು.

ಯಡಿಯೂರಪ್ಪ ಭೇಟಿ ಬಗ್ಗೆ..: "ನಾನು 35 ವರ್ಷಗಳಿಂದಲೂ ಬಿಜೆಪಿಯಲ್ಲಿದ್ದೇನೆ. ಆಗಿನಿಂದಲೂ ಬಿ.ಎಸ್​.ಯಡಿಯೂರಪ್ಪರ ಆಶೀರ್ವಾದವನ್ನು ಪಡೆಯುತ್ತಾ ಬಂದಿದ್ದೇನೆ. ಈಗಲೂ ಆಶೀರ್ವಾದ ಪಡೆದುಕೊಂಡಿದ್ದೇನೆ. ಇದರಲ್ಲಿ ವಿಶೇಷವೇನೂ ಇಲ್ಲ" ಎಂದು ಯಡಿಯೂರಪ್ಪ ಭೇಟಿ ಬಗ್ಗೆ ಸಿ.ಟಿ.ರವಿ ಸ್ಪಷ್ಟನೆ ನೀಡಿದರು.

ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟ ವಿಚಾರದ ಕುರಿತು ಮಾತನಾಡಿ, "ಯಾವ ಹುದ್ದೆಯೂ ಶಾಶ್ವತ ಅಲ್ಲ. ಹಲವು ಹುದ್ದೆಗಳಲ್ಲಿ ಸ್ಥಾನ ಕೊಟ್ಟಿದ್ದಾರೆ. ನಾನು ಯಾವಾಗಲೂ ಪಕ್ಷದ ಕಾರ್ಯಕರ್ತ, ಆಗಲೂ ಈಗಲೂ ಮುಂದೆಯೂ ನಾನೊಬ್ಬ ಕಾರ್ಯಕರ್ತ. ಈಗಲೂ ಅದೇ ಸೇವಾಭಾವದಿಂದ ಕೆಲಸ ಮಾಡುತ್ತಿದ್ದೇನೆ" ಎಂದರು. "ದೆಹಲಿಯಲ್ಲಿ ನನ್ನ ಕಚೇರಿ ಖಾಲಿ ಮಾಡಬೇಕು. ಹಾಗಾಗಿ ದೆಹಲಿಗೆ ಹೋಗುತ್ತಿದ್ದೇನೆ. ಇದರಲ್ಲಿ ವಿಶೇಷ ಏನೂ ಇಲ್ಲ" ಎಂದು ನಾಳೆ ದೆಹಲಿ ಭೇಟಿ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿದರು.

"ಪ್ರಧಾನಿಯವರ 103ನೇ ಮನ್ ಕಿ ಬಾತ್ ಕೇಳಿದೆವು. ಪ್ರಧಾನಿಯವರು ಯಾವತ್ತೂ ಮನ್ ಕಿ ಬಾತ್​ನಲ್ಲಿ ರಾಜಕೀಯ ಮಾತನಾಡಲ್ಲ. ದೇಶ ವಿದೇಶಗಳ ವಿಚಾರ ಮಾತನಾಡುತ್ತಾರೆ. ಇದರಿಂದ ನಮಗೆ ಪ್ರೇರಣೆ, ಮಾಹಿತಿ ಸಿಗುತ್ತದೆ. ಪ್ರಧಾನಿಯವರೇ ಮಾತನಾಡಿ ಅನ್ನೋರು ಇದನ್ನು ನೋಡಬೇಕು. ಜನರ ಜೊತೆ ಯಾವತ್ತೂ ಪ್ರಧಾನಿ ಸಂಪರ್ಕದಲ್ಲಿರುತ್ತಾರೆ" ಎಂದರು.

ಬಳಿಕ, 40% ಕಮೀಷನ್ ಆರೋಪದ ಬಗ್ಗೆ ತನಿಖೆಗೆ ನಿರ್ಧಾರ ಮಾಡಿದ ವಿಚಾರದ ಕುರಿತು, "ಖಂಡಿತ ತನಿಖೆ ಮಾಡಲಿ, ಸತ್ಯ ಬಯಲಿಗೆಳೆಯಲಿ. 40% ಯಾರು ಯಾರಿಗೆ ಕೊಟ್ಟಿದ್ದಾರೆ ಎಂಬುದು ತನಿಖೆಯಾಗಲಿ. ಯಾರಿಗೂ ಇದರ ಮಾಹಿತಿ‌ ಇಲ್ಲ. ಯಾರ ಮೇಲೆ ಆರೋಪ ಇತ್ತು ಎಂಬುದನ್ನು ಸರ್ಕಾರ ಬಹಿರಂಗಪಡಿಸಲಿ. ಹಾಗೆಯೇ ನೈಸ್ ಅಕ್ರಮ ಬಗ್ಗೆ ಸದನ ಸಮಿತಿ ವರದಿ ಕೊಟ್ಟಿದೆ. ಅರ್ಕಾವತಿ ರೀಡೂ ಅಕ್ರಮ ಬಗ್ಗೆಯೂ ವರದಿ ಕೊಡಲಾಗಿದೆ. ಅದರ ಮೇಲೆ ಸರ್ಕಾರ ತನಿಖೆ ಮಾಡಲಿ, ಆಗ ಈಗಿನ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗುತ್ತೆ. ಇಲ್ಲದಿದ್ದರೆ ಒಳಸಂಚು ಮಾಡಿರುವ ಅನುಮಾನ ಬರುತ್ತದೆ" ಎಂದು ಹೇಳಿದರು.

ಇದನ್ನೂ ಓದಿ:ಮುಂದೆ ಪಕ್ಷ ನೀಡುವ ಯಾವುದೇ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾದಿಂದ ನಿರ್ವಹಿಸುವೆ: ಸಿ ಟಿ ರವಿ

ABOUT THE AUTHOR

...view details