ಕರ್ನಾಟಕ

karnataka

ಸಹೋದರರ ನಡುವೆ ಜಗಳ: ಬೆಂಗಳೂರಿನಲ್ಲಿ ಕುಡಿದ ನಶೆಯಲ್ಲಿ ಅಣ್ಣನ ಕೊಂದ ತಮ್ಮ

By

Published : Jun 13, 2023, 5:34 PM IST

Updated : Jun 13, 2023, 6:32 PM IST

ಸ್ವಂತ ಅಣ್ಣನನ್ನು ಚಾಕುವಿನಿಂದ ಇರಿದು ತಮ್ಮ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಣ್ಣನನ್ನೇ ಕೊಂದ ತಮ್ಮ
ಅಣ್ಣನನ್ನೇ ಕೊಂದ ತಮ್ಮ

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಶುರುವಾದ ಸಹೋದರರ ನಡುವಿನ ಕಾಳಗ ಕೊಲೆಯಲ್ಲಿ ಅಂತ್ಯವಾಗಿದೆ. ಅಣ್ಣನನ್ನೇ ತಮ್ಮ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕದಿರಪ್ಪ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಾರ್ತಿಕ್ (28) ಕೊಲೆಯಾದ ದುರ್ದೈವಿ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪ್ರತಿನಿತ್ಯ ಮದ್ಯ ಸೇವಿಸಿ ಅಣ್ಣ- ತಮ್ಮ ಇಬ್ಬರೂ ಪರಸ್ಪರ ಜಗಳವಾಡುತ್ತಿದ್ದರು. ಇಂದು (ಮಂಗಳವಾರ) ಕೂಡ ಕುಡಿದ ನಶೆಯಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಮನೆಯಲ್ಲಿದ್ದ ಚಾಕುವಿನಿಂದ ಕಾರ್ತಿಕ್‌ನ ಹೊಟ್ಟೆ, ಎದೆ ಹಾಗೂ ಇನ್ನಿತರ ಭಾಗಗಳಿಗೆ ಇರಿದು ಆರೋಪಿ ತಮ್ಮ ಹತ್ಯೆ ಮಾಡಿದ್ದಾನೆ. ಆ ಬಳಿಕ ಬಂಧನ ಭೀತಿಯಿಂದ ಪರಾರಿಯಾಗಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದ್ದಾರೆ.

ಆಸ್ತಿಗಾಗಿ ಅಕ್ಕನ ಕೊಲೆ ಮಾಡಿದ ತಮ್ಮ:ಕೆಲವು ದಿನಗಳ ಹಿಂದೆ ದಾವಣಗೆರೆಯಲ್ಲಿ ಆಸ್ತಿ ವಿಚಾರವಾಗಿ ಅಕ್ಕನನ್ನೇ ತಮ್ಮ ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಘಟನೆ ಜಿಲ್ಲೆಯ ‌ಚನ್ನಗಿರಿ ತಾಲೂಕಿನ ಗುಳ್ಳೇಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಆಸ್ತಿ ವಿಚಾರಕ್ಕೆ ಅಕ್ಕ ಮತ್ತು ತಮ್ಮನ ನಡುವೆ ಜಗಳ ಪ್ರಾರಂಭವಾಗಿತ್ತು. ಈ ಸಂದರ್ಭದಲ್ಲಿ ಪ್ರಭಾಕರ ಎಂಬ ಆರೋಪಿ ಮಕ್ಕಳ ಜೊತೆ ಸೇರಿ ತನ್ನ ಅಕ್ಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳಾದ ಪ್ರಭಾಕರ, ಆತನ ಪುತ್ರ ದಿಲೀಪ್​​ ಮತ್ತು ಪುತ್ರಿ ತ್ರಿವೇಣಿ ಎಂಬವರನ್ನು ಬಂಧಿಸಿದ್ದರು.

ಪ್ರಯಾಣಿಕನ ಹತ್ಯೆಗೈದ ಆಟೋ ಚಾಲಕ :ಡಬಲ್​ ಬಾಡಿಗೆ ಕೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಅಸ್ಸೋಂ ಮೂಲದ ವ್ಯಕ್ತಿಯೋಬ್ಬನನ್ನು ಆಟೋ ಚಾಲಕ ಹತ್ಯೆ ಮಾಡಿರುವ ಘಟನೆ ಜೂನ್​ 11 ರ ತಡರಾತ್ರಿ ಯಶವಂತಪುರದ ಸೋಫ್ ಫ್ಯಾಕ್ಟರಿ ಬಳಿ ನಡೆದಿತ್ತು. ಘಟನೆಯಲ್ಲಿ ಆರೋಪಿ ಆಟೋ ಚಾಲಕ ಅಶ್ವಥ್ ಎಂಬಾತನಿಂದ ಹಲ್ಲೆಗೊಳಗಾದ ಅಸ್ಸೋಂ ಮೂಲದ ಅಹ್ಮದ್ (28) ಸಾವನ್ನಪ್ಪಿದರೆ, ಆತನ ಸಹೋದರ ಆಯೂಬ್ ಗಾಯಗೊಂಡಿದ್ದರು.

ಇದನ್ನೂ ಓದಿ :Living Together: ರಾಜಧಾನಿಯ ನಿದ್ದೆಗೆಡಿಸಿದ ಲಿವಿಂಗ್ ಟುಗೆದರ್: ಕೆಲ ತಿಂಗಳಲ್ಲಿ‌ ನಡೆದ ಸಂಗಾತಿಗಳ ಕೊಲೆಗಳು ಎಷ್ಟು?

ಕೆಲಸ ಹುಡುಕಿಕೊಂಡು ರಾಜಧಾನಿ ಬೆಂಗಳೂರಿಗೆ ಬಂದಿದ್ದ ಅಹ್ಮದ್ ಹಾಗೂ ಆಯೂಬ್ ಸಹೋದರರು ಯಶವಂತಪುರದಲ್ಲಿ ವಾಸವಿದ್ದರು. ಅಂದಿನ ತಡರಾತ್ರಿ ಕೆಲಸ ಮುಗಿಸಿ ಆಟೋ ಪಡೆದು ಮನೆಗೆ ಹೊರಟಿದ್ದಾಗ ಚಾಲಕ ಅಶ್ವಥ್, ಡಬಲ್ ಬಾಡಿಗೆ ಕೇಳಿದ್ದಾರೆ. ಡಬಲ್ ಮೀಟರ್ ಯಾಕೆ.? ಎಂದು ಪ್ರಶ್ನಿಸಿದ ಸಹೋದರರ ಮೇಲೆ ಆರೋಪಿ ಹಲ್ಲೆ ಮಾರಕಾಸ್ತ್ರಗಳಿಂದ ನಡೆಸಿದ್ದನು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅಹ್ಮದ್ ಸಾವನ್ನಪ್ಪಿದ್ದು, ಆಯೂಬ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಟೋ ಚಾಲಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ :ಹೆತ್ತ ತಾಯಿ ಕೊಂದು ಸೂಟ್​ ಕೇಸ್​ನಲ್ಲಿ ಶವ ತಂದು ಪೊಲೀಸರಿಗೆ ಶರಣಾದ ಮಗಳು

Last Updated :Jun 13, 2023, 6:32 PM IST

ABOUT THE AUTHOR

...view details