ಬೆಂಗಳೂರು:ಹಣ ಬದಲಾಯಿಸಲು ಹೊರಟಿದ್ದ ತಂಡವನ್ನು ವಿಚಾರಣೆ ನೆಪದಲ್ಲಿ ತಡೆದು 10 ಲಕ್ಷ ರೂ. ಕಳ್ಳತನ ಮಾಡಿದ್ದ ಆರೋಪದಡಿ ಹೆಡ್ ಕಾನ್ಸ್ಟೇಬಲ್ ಮಹೇಂದ್ರಗೌಡ ಎಂಬುವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಂದ್ರಾ ಲೇಔಟ್ ಠಾಣೆಯಲ್ಲಿ ಹಲವು ತಿಂಗಳಿನಿಂದ ಮಹೇಂದ್ರಗೌಡ ಕೆಲಸ ಮಾಡುತ್ತಿದ್ದರು. ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುವ ವೇಳೆ ವಿಚಾರಣೆ ನೆಪದಲ್ಲಿ ಹಣ ಎಗರಿಸಿದ್ದ ಆರೋಪ ಇವರ ಮೇಲಿದೆ.
ನೋಟು ಬದಲಾವಣೆ ಜಾಲ:ಚನ್ನಪಟ್ಟಣ ತಾಲೂಕಿನ ರಾಮಪುರದವರಾದ ಕೃಷಿಕ ಲಿಂಗೇಶ್, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಇವರಿಗೆ ಬೆಂಗಳೂರಿನ ಪ್ರದೀಪ್ ಎಂಬುವವರ ಪರಿಚಯವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಲಿಂಗೇಶ್ಗೆ ಕರೆ ಮಾಡಿದ್ದ ಪ್ರದೀಪ್ 2,000 ಮುಖಬೆಲೆಯ ನೋಟುಗಳು ಕೆಲವೇ ದಿನಗಳಲ್ಲಿ ರದ್ದಾಗುವ ಸಾಧ್ಯತೆ ಇದೆ. ನನ್ನ ಪರಿಚಯಸ್ಥರೊಬ್ಬರ ಬಳಿ 2,000 ಮುಖಬೆಲೆಯ ನೂರಾರು ಕೋಟಿ ರೂಪಾಯಿ ಹಣವಿದೆ. ಅವರಿಗೆ 500 ಮುಖಬೆಲೆಯ ನೋಟುಗಳನ್ನು ನೀಡಿದರೆ, ಶೇ 10ರಷ್ಟು ಕಮಿಷನ್ ಕೊಡುತ್ತಾರೆ ಎಂದಿದ್ದ. ಇದನ್ನು ನಂಬಿದ್ದ ಲಿಂಗೇಶ್ 50 ಲಕ್ಷ ನೀಡಲು ಸಿದ್ಧರಾಗಿದ್ದರು.
ಎಗರಿಸಿ ನಂತರ ಪ್ರಕರಣ ದಾಖಲು:ಅ. 2ರಂದು 50 ಲಕ್ಷ ಸಮೇತ ನಗರಕ್ಕೆ ಬಂದಿದ್ದ ಲಿಂಗೇಶ್, ಪ್ರದೀಪ್ ಅವರ ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರಕ್ಕೆ ಹೋಗಿದ್ದರು. ನೋಟು ಬದಲಾವಣೆ ಜಾಲದ ಸದಸ್ಯರು ಎನ್ನಲಾದ ವೆಟ್ರಿವೇಲು ಹಾಗೂ ಇತರರು ಈ ಸ್ಥಳದಲ್ಲಿ ಹಣ ಬದಲಾವಣೆ ಸಾಧ್ಯವಿಲ್ಲ. ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ಹೋಗೋಣ ಎಂದು ಲಿಂಗೇಶ್ ಹಾಗೂ ಪ್ರದೀಪ್ನನ್ನು ಕರೆದುಕೊಂಡು ಅಲ್ಲಿಂದ ಹೊರಟಿದ್ದರು.