ಕರ್ನಾಟಕ

karnataka

ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಆರೋಪಿಗಳ ಬ್ಯಾಂಕ್ ಖಾತೆ ಸ್ಥಗಿತ, ಕಾರು ಜಪ್ತಿ

By ETV Bharat Karnataka Team

Published : Sep 18, 2023, 10:30 AM IST

Updated : Sep 18, 2023, 3:40 PM IST

ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಆಕಾಂಕ್ಷಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಚೈತ್ರಾ ಕುಂದಾಪುರ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಆರೋಪಿಗಳು ಖರೀದಿಸಿದ್ದ ಕಿಯಾ ಕಾರನ್ನು ಈಗಾಗಲೇ ಸಿಸಿಬಿ ವಶಕ್ಕೆ ಪಡೆದಿದ್ದು, ಬ್ಯಾಂಕ್‌ ಖಾತೆಗಳನ್ನೂ ಸ್ಥಗಿತಗೊಳಿಸಲಾಗಿದೆ.

ಚೈತ್ರಾ ಕುಂದಾಪುರ ವಂಚನೆ ಪ್ರಕರಣ
ಚೈತ್ರಾ ಕುಂದಾಪುರ ವಂಚನೆ ಪ್ರಕರಣ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಹಂತ-ಹಂತವಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿಗಳ ಆಸ್ತಿ ಶೋಧ ಪ್ರಕ್ರಿಯೆಯನ್ನು ಸಿಸಿಬಿ ಪೊಲೀಸರು ಮುಂದುವರಿಸಿದ್ದಾರೆ. ಆರೋಪಿಗಳ ಬ್ಯಾಂಕ್‌ ಖಾತೆಯಲ್ಲಿದ್ದ ಠೇವಣಿ ಹಾಗೂ ಕಾರು ಜಪ್ತಿ ಮಾಡಲಾಗಿದೆ. ಶನಿವಾರ, 81 ಲಕ್ಷ ನಗದು ಜಪ್ತಿ ಮಾಡಲಾಗಿದ್ದು, ನಂತರ ಆರೋಪಿಗಳ ಎಫ್.ಡಿ ಖಾತೆಯಲ್ಲಿ ಒಟ್ಟು 1.08 ಕೋಟಿ ಠೇವಣಿ ಪತ್ತೆಯಾಗಿದೆ. ಬ್ಯಾಂಕ್‌ಗಳ ಮೂಲಕ ಠೇವಣಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಂದ ಪಡೆದಿದ್ದ 3.50 ಕೋಟಿ ರೂಪಾಯಿ ಹಣವನ್ನು ಚೈತ್ರಾ ಕುಂದಾಪುರ, ಶ್ರೀಕಾಂತ್ ಮತ್ತಿತರ ಆರೋಪಿಗಳು ಹಂಚಿಕೊಂಡಿದ್ದರು. ಹಣವನ್ನು ಆರೋಪಿಗಳು ಹಲವೆಡೆ ಹೂಡಿಕೆ ಮಾಡಿದ್ದರು. ಹೀಗಾಗಿ, ಅವರ ಖಾತೆಗಳಿರುವ ಬಾಗಲಕೋಟೆ, ಕುಂದಾಪುರ ಹಾಗೂ ಇತರೆಡೆಯ ಬ್ಯಾಂಕ್‌ಗಳಲ್ಲಿ ಭಾನುವಾರ ಶೋಧ ನಡೆದಿತ್ತು. ವಂಚನೆ ಹಣದಲ್ಲಿ ಆರೋಪಿಗಳು 12 ಲಕ್ಷ ರೂ ಮೌಲ್ಯದ ಕಿಯಾ ಕಾರು ಖರೀದಿಸಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ, ಸೊಲ್ಲಾಪುರದ ಬಾರ್‌ವೊಂದರ ಎದುರು ಕಾರು ನಿಲ್ಲಿಸಲಾಗಿತ್ತು. ಚೈತ್ರಾ ಸ್ನೇಹಿತ ಬಾಗಲಕೋಟೆ ಮೂಲದ ಕಿರಣ್, ಕಾರು ತೆಗೆದುಕೊಂಡು ಬಂದು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ವಾಹನ ಚಾಲನಾ ತರಬೇತಿ ಕೇಂದ್ರ ನಡೆಸುತ್ತಿರುವ ಕಿರಣ್, ಅದೇ ಕಾರು ಬಳಸುತ್ತಿದ್ದರು. ಅವರ ಬಳಿ ಕಾರು ಇರುವುದು ಗೊತ್ತಾಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾರು ಜಪ್ತಿ ಮಾಡಿದ್ದಾರೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ನನಗೆ ಕರೆ ಮಾಡಿದ್ದ ಚೈತ್ರಾ ಕುಂದಾಪುರ, "ಕಾರನ್ನು ಸ್ವಲ್ಪ ದಿನ ಇಟ್ಟುಕೊಳ್ಳುವಂತೆ ಹೇಳಿದ್ದರು. ಹೀಗಾಗಿ, ತಂದು ನನ್ನ ಬಳಿ ಇಟ್ಟುಕೊಂಡಿದ್ದೆ. ವಂಚನೆಗೂ ನನಗೂ ಯಾವುದೇ ಸಂಬಂಧವಿಲ್ಲ" ಎಂದು ಕಿರಣ್‌ ತಿಳಿಸಿರುವುದಾಗಿ ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಉದ್ಯಮಿಯೊಬ್ಬರಿಗೆ ವಿಧಾನಸಭೆ ಚುನಾವಣೆ ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಗಂಭೀರ ಆರೋಪ ಪ್ರಕರಣದಲ್ಲಿ ಸೆಪ್ಟೆಂಬರ್​ 14ರಂದು ಬೆಂಗಳೂರು ಸಿಸಿಬಿ ಪೊಲೀಸರು ಹಿಂದೂಪರ ಹಾಗೂ ಸಾಮಾಜಿಕ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ಆರು ಮಂದಿ ಆರೋಪಿಗಳನ್ನು ಉಡುಪಿಯಲ್ಲಿ ಬಂಧಿಸಿದ್ದರು. ಮೋಸಹೋದ ಉದ್ಯಮಿ ಗೋವಿಂದ ಬಾಬು ಪೂಜಾರಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ 3 ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡ ಸಿಸಿಬಿ ಪೊಲೀಸರು ಕಲಬುರಗಿ, ಚಿಕ್ಕಮಗಳೂರು, ಉಡುಪಿಯಲ್ಲಿ ಶೋಧ ನಡೆಸಿದ್ದರು.

ಇದನ್ನೂ ಓದಿ :ಚೈತ್ರಾ ಕುಂದಾಪುರಗೆ ಸೇರಿದ ಕಾರು ಮುಧೋಳದಲ್ಲಿ ಪತ್ತೆ.. ಟಿಕೆಟ್ ಡೀಲ್ ಪ್ರಕರಣ ಜಾಲ ಇಡೀ ರಾಷ್ಟ್ರದಲ್ಲಿ ಇರಬಹುದು: ಸಚಿವ ಆರ್​ ಬಿ ತಿಮ್ಮಾಪುರ

Last Updated :Sep 18, 2023, 3:40 PM IST

ABOUT THE AUTHOR

...view details