ಕರ್ನಾಟಕ

karnataka

ಬೆಂಗಳೂರು: ಆಟವಾಡುತ್ತಾ ಆಯತಪ್ಪಿ ನೀರಿನ ಸಂಪ್​ಗೆ ಬಿದ್ದು ಬಾಲಕ ಸಾವು

By ETV Bharat Karnataka Team

Published : Jan 14, 2024, 10:49 AM IST

ಬೆಂಗಳೂರಲ್ಲಿ ಕಾರ್ಮಿಕ ದಂಪತಿಗಳ ಮಗುವೊಂದು ನೀರಿ ಸಂಪ್​​ಗೆ ಬಿದ್ದು ಮೃತಪಟ್ಟಿದೆ. ​

ಬಾಲಕ ಸಾವು
ಬಾಲಕ ಸಾವು

ಬೆಂಗಳೂರು:ಆಟವಾಡುತ್ತಿದ್ದ ಬಾಲಕ ಆಯತಪ್ಪಿ ನೀರಿನ ಸಂಪ್​ಗೆ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ಗಂಗಮ್ಮನಗುಡಿಯ ಅಬ್ಬಿಗೆರೆಯ ಕಾರ್ಮಿಕರ ಶೆಡ್ ಬಳಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ಬಾಲಕನನ್ನು ಯಾದಗಿರಿ ಮೂಲದ ಶಬ್ಬೀರ್ (7) ಎಂದು ಗುರುತಿಸಲಾಗಿದೆ.

ಬಾಲಕನ ತಂದೆ ಸಂಶುದ್ದೀನ್ ಮತ್ತು ಕುಟುಂಬ ಗಂಗಮ್ಮನಗುಡಿಯ ಅಬ್ಬಿಗೆರೆಯ ಕಾರ್ಮಿಕರ ಶೆಡ್‌ನಲ್ಲಿ ವಾಸವಿತ್ತು. ಕಾರ್ಮಿಕರ ಬಳಕೆಗಾಗಿ ಶೆಡ್ ಸಮೀಪದಲ್ಲೇ ತೆರೆದ ನೀರಿನ ಸಂಪ್ ನಿರ್ಮಿಸಲಾಗಿತ್ತು. ಶುಕ್ರವಾರ ಸಂಜೆ ಆಟ ಆಡುವಾಗ ಆಯತಪ್ಪಿ ಸಂಪ್‌ಗೆ ಬಿದ್ದಿದ್ದ ಬಾಲಕ, ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಇತ್ತ ಪೋಷಕರು ತುಂಬಾ ಹೊತ್ತಾದರೂ ಬಾಲಕ ಕಾಣದೇ ಇದ್ದಾಗ ಎಲ್ಲಾ ಕಡೆ ಹುಡುಕಾಡಿದ್ದಾರೆ. ಬಳಿಕ ನೀರಿನ ಸಂಪ್​ ನೋಡಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ. ಇನ್ನು ಈ ಕುರಿತು ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಸಿಬಿ ಹರಿದು ಮೃತಪಟ್ಟ ಬಾಲಕ:ಇತ್ತೀಚೆಗೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಶಬ್ಬೀರ್ ನಗರದಿಂದ ಶಿರಹಟ್ಟಿ ಮಾಗಡಿ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲಿ ಬಾಲಕನೋರ್ವನ ಮೇಲೆ ಜೆಸಿಬಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಮನೆ ಮುಂದೆ ಆಟವಾಡುವ ವೇಳೆ ಜೆಸಿಬಿ ಹರಿದ ಪರಿಣಾಮ ಸ್ಥಳದಲ್ಲೇ ಬಾಲಕ ಅಸುನೀಗಿದ್ದನು. ಮನ್ವಿತ್​ ಮಂಜುನಾಥ್ ಏರಿಮನಿ (5) ಮೃತ ಬಾಲಕ. ಜೆಸಿಬಿ ಚಾಲಕನ ವಿರುದ್ಧ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿದ್ಯುತ್​ ತಂತಿ ತಗುಲಿ ಬಾಲಕ ಸಾವು :ಕಳೆದ ವರ್ಷ ನವೆಂಬರ್​ನಲ್ಲಿ ವಿದ್ಯುತ್ ತಂತಿ ತಗುಲಿ ಬಾಲಕನೋರ್ವ ಮೃತಪಟ್ಟ ಘಟನೆ ಧಾರವಾಡದ ಮದಿಹಾಳ ಬಡಾವಣೆಯಲ್ಲಿ ಜರುಗಿತ್ತು. ಶ್ರೇಯಸ್ ಸಿನ್ನೂರು (16) ಮೃತ ಬಾಲಕನಾಗಿದ್ದು, ವಿದ್ಯುತ್ ತಂತಿ ತಗುಲಿದ ತಕ್ಷಣ ಬಿಡಿಸಲು ಹೋಗಿದ್ದ ಮತ್ತೋರ್ವ ಬಾಲಕ ಪ್ರಣವ್ ಎಂಬಾತ ಗಾಯಗೊಂಡಿದ್ದನು. ಸಂಜೆ ಸಮಯ ಮನೆಯ ಮೇಲೆ ಹತ್ತಿದ ಬಾಲಕ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದು, ಇನ್ನು ಗಾಯಗೊಂಡ ಪ್ರಣವ್​ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಧಾರವಾಡ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಇದನ್ನೂ ಓದಿ :ಆರು ವರ್ಷ ಕೋಮಾದಲ್ಲಿದ್ದ ಬಾಲಕ ಸಾವು; ಆಸ್ಪತ್ರೆ ವಿರುದ್ಧ ದೂರು

ABOUT THE AUTHOR

...view details