ಕರ್ನಾಟಕ

karnataka

'ರೌಡಿ ಮೋರ್ಚಾ' ಕಾಂಗ್ರೆಸ್ ಹೇಳಿಕೆಗೆ ಬಿಜೆಪಿ ಕಿಡಿ: ಕೈ ನಾಯಕರಿಗೆ ಹಲವು ಪ್ರಶ್ನೆ!

By

Published : Dec 6, 2022, 10:19 PM IST

ರೌಡಿಗಳನ್ನು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಸ್ಪಷ್ಟಪಡಿಸಿದ್ದರೂ ಕಾಂಗ್ರೆಸ್ ನಾಯಕ ಡಿ. ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪದೇ ಪದೆ ನಾಲಗೆ ಹರಿಬಿಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಬೆಂಗಳೂರು: ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವಿನ ರೌಡಿ ಸಂಸ್ಕೃತಿ ಹೇಳಿಕೆ, ಪ್ರತಿ ಹೇಳಿಕೆ ಮುಂದುವರೆದಿದೆ. ಇದೀಗ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹಲವು ಪ್ರಶ್ನೆಗಳನ್ನು ಕಾಂಗ್ರೆಸ್‌ ಮುಂದಿಟ್ಟಿದ್ದು, ಮೊದಲು ಈ ಪ್ರಶ್ನೆಗಳಿಗೆ ಉತ್ತರಿಸಿ ನಂತರ ರೌಡಿ ಕುರಿತ ಚರ್ಚೆ ನಡೆಸೋಣ ಎಂದು ಸವಾಲೆಸೆದಿದ್ದಾರೆ.

1. ದೇವರಾಜ್ ಅರಸು ಕಾಲದಲ್ಲಿ ಅವತ್ತಿನ ಭೂಗತ ರೌಡಿಗಳೊಂದಿಗೆ ಪವಿತ್ರ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತುಕೊಂಡು ಪೊಲೀಸರಿಂದ ಎಳನೀರು ತರಿಸಿ ಕೊಡುತ್ತಿದ್ದವರು ಯಾವ ಪಕ್ಷದಲ್ಲಿದ್ದರು ಎಂದು ಹೇಳಬಹುದೇ ಸಿದ್ದರಾಮಯ್ಯ ಅವರೇ?

2. ಯಲಹಂಕದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಸೋಲಿಸಲು ಆಗುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿಯೊಬ್ಬ ಮನೆಯಲ್ಲೇ ಕುಳಿತು ಹತ್ಯೆಗೆ ಸಂಚು ರೂಪಿಸಿದ್ದ ಆಡಿಯೋ ಬಿಡುಗಡೆ ಆಗಿದ್ದರ ಬಗ್ಗೆ ಏನು ಹೇಳುತ್ತೀರಿ ಸಿದ್ದರಾಮಯ್ಯ ಅವರೇ?

3. ಯಾರೋ ಕೆಲವರು ಕಾಂಗ್ರೆಸ್ ಪಕ್ಷದ ಬ್ಯಾನರ್ ಹರಿದು ಹಾಕಿದಾಗ, ರಾಜ್ಯದಲ್ಲಿ ಬಿಜೆಪಿಯವರಿಗೆ ಒಂದೂ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಬೀದಿ ರೌಡಿಯ ರೀತಿ ತಾವು ಆವಾಜ್ ಹಾಕಿದ್ದು ಯಾವ ಸಂಸ್ಕೃತಿ ಡಿ. ಕೆ ಶಿವಕುಮಾರ್‌ ಅವರೇ?

4. ಟಿಪ್ಪು ಕುರಿತು ನಿಮ್ಮ ಕುರುಡು ಪ್ರೇಮವನ್ನು ಖಂಡಿಸಿ ಕೊಡಗಿನ ಜನ ನಿಮ್ಮ ಕಾರಿಗೆ ಕಲ್ಲು ಹೊಡೆದಾಗ ಅದಕ್ಕೆ ಪ್ರತೀಕಾರವಾಗಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ತಾವು ಹೇಳಿದ್ದು ರೌಡಿ ಸಂಸ್ಕೃತಿಯ ಲಕ್ಷಣ ಅಲ್ಲವೇ ಸಿದ್ದರಾಮಯ್ಯ ಅವರೇ?

5. ಕರ್ನಾಟಕ ಕಾಂಗ್ರೆಸ್​ನ ಯುವ ಘಟಕದ ಈಗಿನ ಅಧ್ಯಕ್ಷರು ತಮ್ಮ ಗ್ಯಾಂಗ್ ಜತೆ ಸೇರಿಕೊಂಡು ಒಬ್ಬ ಪಾಪದ ಹುಡುಗನಿಗೆ ಹಿಗ್ಗಾ ಮುಗ್ಗಾ ಬಡಿದಿದ್ದನ್ನು ಇಡೀ ರಾಜ್ಯ ನೋಡಿರುವುದು ಸುಳ್ಳು ಎನ್ನುತ್ತೀರೇ ಡಿ. ಕೆ ಶಿವಕುಮಾರ್ ಅವರೇ?

6. ಪ್ರತಿಭಟನೆ ಮಾಡೋಕೆ ಬಂದರೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇನೆ ಎಂದು ನಿಮ್ಮ ಪರಮಾಪ್ತ ಶಾಸಕ ರಮೇಶ್ ಕುಮಾರ್ ಹೇಳಿದ್ದು ತಾವು ಓದಿದ ಪ್ರಜಾಪ್ರಭುತ್ವದ ಯಾವ ಪುಸ್ತಕದ ಯಾವ ಹಾಳೆಯಲ್ಲಿದೆ ತಿಳಿಸಬಹುದೇ ಸಿದ್ದರಾಮಯ್ಯ ಅವರೇ?

7. ಅಖಿಲ ಭಾರತ ಕಾಂಗ್ರೆಸ್ ಘಟಕದ ಅಧ್ಯಕ್ಷರು ದೆಹಲಿಗೆ ಓಡಿಹೋಗಿ ಅವಿತುಕೊಳ್ಳುವುದಕ್ಕೂ ಮೊದಲು ಅದ್ಯಾವ ಸಾಮಾಜಿಕ ಸೇವೆಗಳಲ್ಲಿ ತೊಗಿಸಿಕೊಂಡಿದ್ದರು ಎನ್ನುವುದು ತಮಗೆ ತಿಳಿದಿಲ್ಲವೇ ಡಿ. ಕೆ ಶಿವಕುಮಾರ್‌ ಅವರೇ?

8. ಮಂಗಳೂರಿನ ನಟೋರಿಯಸ್ ಟಾರ್ಗೆಟ್ ಗ್ರೂಪ್ಪ ಕುಖ್ಯಾತ ರೌಡಿ ಇಲ್ಯಾಸ್, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ ಅಷ್ಟೇ ಅಲ್ಲದೆ ಶಾಸಕ ಯು ಟಿ ಖಾದರ್​ ಆಪ್ತ ಹೌದೋ ಅಲ್ಲವೋ ಉತ್ತರಿಸಬಹುದೇ ಸಿದ್ದರಾಮಯ್ಯ ಅವರೇ?

9. ಮೂಡುಬಿದರೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತಮ್ಮ ಶಿಷ್ಯ ಮಿಥುನ್ ಹಿನ್ನೆಲೆ ಏನು ಎಂದು ತಿಳಿಸಬಹುದೇ ಡಿ. ಕೆ ಶಿವಕುಮಾರ್ ಅವರೇ?

10. 'ಬಿಜೆಪಿಯವರು ಯಾರೂ ಕ್ಷೇತ್ರದಲ್ಲಿ ಓಡಾಡದ ಹಾಗೆ ಮಾಡ್ತೀನಿ' ಎಂದು ತಮ್ಮ ಸಂವಹನ ವಿಭಾಗದ ಮುಖ್ಯಸ್ಥ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿರುವುದು ಭಗವಾನ್ ಬುದ್ಧರ ಅದ್ಯಾವ ಉಪದೇಶದಲ್ಲಿ ಇದೇ ಹೇಳು ಎಂದು ಪ್ರಶ್ನೆ ಮಾಡಿದ್ದೀರ ಸಿದ್ದರಾಮಯ್ಯ ಅವರೇ?

11. ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಿ ಕಾರ್ಪೊರೇಟರ್ ಮಾಡಿದ್ದ ಕೆ. ಎಸ್. ಸಮಿವುಲ್ಲಾ ಹಿನ್ನೆಲೆ ಏನು ಎಂದು ಸ್ವಲ್ಪ ತಮ್ಮ ಬಾಯಿಂದಲೇ ಹೇಳಬಹುದೇ ಡಿ. ಕೆ ಶಿವಕುಮಾರ್ ಅವರೇ?

12. ಸ್ವತಃ ತಾವೇ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಸೀಮಾ ಅವರ ಗಂಡ ಹಾಗೂ ಕೆಪಿಸಿಸಿ ಲೇಬರ್ ಸೆಲ್ ಸದಸ್ಯ ಅಲ್ತಾಫ್ ಖಾನ್ ಒಬ್ಬ ರೌಡಿ ಶೀಟರ್ ಅಷ್ಟೇ ಅಲ್ಲದೇ ತಮ್ಮ ಶಿಷ್ಯ ಜಮೀರ್ ಅಹಮ್ಮದ್ ಖಾನ್ ಅವರ ಅತ್ಯಾಪ್ತ ಎನ್ನುವುದು ಗೊತ್ತಿಲ್ಲವೇ ಸಿದ್ದರಾಮಯ್ಯ ಅವರೇ?

13, ಕಾಂಗ್ರೆಸ್ ಮಾಜಿ ಶಾಸಕ ಆರ್. ವಿ ದೇವರಾಜ್‌ ಜತೆ ರೌಡಿ ಶೀಟರ್ಗಳು ಪೋಸ್‌ ಕೊಟ್ಟು ಏರಿಯಾದಲ್ಲೆಲ್ಲ ಪೋಸ್ಟರ್‌ ಅಂಟಿಸಿಕೊಳ್ಳುತ್ತಾರಲ್ಲ, ಅದು ಯಾವ ಜನಸೇವೆ ಎನ್ನುವುದನ್ನು ತಿಳಿಸಬಲ್ಲಿರ ಡಿ. ಕೆ ಶಿವಕುಮಾರ್ ಅವರೇ?

14. ತಾವು ಟಿ. ನರಸೀಪುರ ಶಾಸಕನನ್ನಾಗಿ ಮಾಡಲು ಹೊರಟಿರುವ ಸುನಿಲ್ ಬೋಸ್ ಎಂಬ ಕಾಂಗ್ರೆಸ್ ನಾಯಕನ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಕೇಸ್ ಬುಕ್ ಆಗಿತ್ತು ಎನ್ನುವುದು ಮರೆತು ಹೋಗಿದೆಯೇ ಸಿದ್ದರಾಮಯ್ಯ ಅವರೇ?

15. ಕಾಂಗ್ರೆಸ್ ಮಾಜಿಮಂತ್ರಿ ಮತ್ತು ಶಾಸಕ ವಿನಯ್ ಕುಲಕರ್ಣಿ ಇನ್ನು ಯಾವ ಕಾರಣಕ್ಕಾಗಿ ಕೋರ್ಟಿಗೆ ಅಲೆಯುತ್ತಿದ್ದಾರೆ? ಯಾವ ಸಮಾಜ ಸೇವೆಯನ್ನು ಮಾಡಿದ ಘನಾಂಧಾರಿ ಕೆಲಸಕ್ಕಾಗಿ ಧಾರವಾಡ ಜಿಲ್ಲೆಗೆ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಬಹುದೇ ಡಿ. ಕೆ ಶಿವಕುಮಾರ್‌ ಅವರೇ?

16. ತಮ್ಮ ಆಪ್ತ ಮಾಜಿ ಸಚಿವ ಕೆ. ಜೆ ಜಾರ್ಜ್ ಜತೆಯಾಗಿ ಬೆಂಗಳೂರು ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ಪರ ಪ್ರಚಾರ ಮಾಡಿದ್ದ ಕುಖ್ಯಾತ ರೌಡಿ 'ಬ್ರಿಗೇಡ್ ಆಝಮ್' ಕುರಿತು ತಮಗೆ ಮಾಹಿತಿ ಇರಲಿಲ್ಲವೇ ಸಿದ್ದರಾಮಯ್ಯ ಅವರೇ.

ಇದನ್ನೂ ಓದಿ:ಬಿಜೆಪಿಯವರಿಂದ ರೌಡಿ ಮೋರ್ಚಾ ಆರಂಭ: ಎಂ ಲಕ್ಷ್ಮಣ್​

ABOUT THE AUTHOR

...view details