ಕರ್ನಾಟಕ

karnataka

ನಾಲ್ಕು ಸಾವಿರ ಬಸ್ ಖರೀದಿ.. ನಷ್ಟವನ್ನು ತಪ್ಪಿಸಲು ನಾಲ್ಕೂ ನಿಗಮಗಳ ವಿಲೀನಕ್ಕೆ ಸಜ್ಜಾದ ಸರ್ಕಾರ

By

Published : Oct 17, 2022, 5:14 PM IST

ದಶಕಗಳ ಕಾಲದಿಂದ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟವನ್ನು ತಪ್ಪಿಸಲು ನಾಲ್ಕೂ ಸಾರಿಗೆ ನಿಗಮಗಳನ್ನು ವಿಲೀನಗೊಳಿಸಲು ಶ್ರೀನಿವಾಸಮೂರ್ತಿ ಸಮಿತಿ ಶಿಫಾರಸು ಮಾಡಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.

ಸಾರಿಗೆ ಸಚಿವ ಬಿ ಶ್ರೀರಾಮುಲು
ಸಾರಿಗೆ ಸಚಿವ ಬಿ ಶ್ರೀರಾಮುಲು

ಬೆಂಗಳೂರು:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹೊಸದಾಗಿ 4 ಸಾವಿರ ಬಸ್​ಗಳನ್ನು ಖರೀದಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಇದೇ ಕಾಲಕ್ಕೆ ಸಂಸ್ಥೆಯ ನಷ್ಟವನ್ನು ತಪ್ಪಿಸಲು ನಾಲ್ಕೂ ನಿಗಮಗಳನ್ನು ವಿಲೀನಗೊಳಿಸಲು ಸಜ್ಜಾಗಿದೆ.

ವಿಧಾನಸೌಧ‍ದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಶಕಗಳ ಕಾಲದಿಂದ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟವನ್ನು ತಪ್ಪಿಸಲು ನಾಲ್ಕೂ ಸಾರಿಗೆ ನಿಗಮಗಳನ್ನು ವಿಲೀನಗೊಳಿಸಲು ಶ್ರೀನಿವಾಸಮೂರ್ತಿ ಸಮಿತಿ ಶಿಫಾರಸು ಮಾಡಿದೆ ಎಂದು ಹೇಳಿದರು.

ನಾಲ್ಕು ನಿಗಮಗಳು ಅಸ್ತಿತ್ವದಲ್ಲಿರುವುದರಿಂದ ಆಡಳಿತಾತ್ಮಕ ಹೊರೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ನಿಗಮಗಳನ್ನು ವಿಲೀನಗೊಳಿಸಿ ಒಂದೇ ನಿಗಮ ಅಸ್ತಿತ್ವದಲ್ಲಿರುವಂತೆ ಮಾಡಿದರೆ ಸಾರಿಗೆ ಸಂಸ್ಥೆ ಅನುಭವಿಸುತ್ತಿರುವ ನಷ್ಟ ತಪ್ಪುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸ್ಸುಗಳ ಸಂಚಾರಕ್ಕೆ ಅವಕಾಶ:ಇವತ್ತು ನಾಲ್ಕು ಪ್ರತ್ಯೇಕ ನಿಗಮಗಳಿರುವುದರಿಂದ ಎಲ್ಲ ನಿಗಮಗಳು ತಮ್ಮ ತಮ್ಮ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳುತ್ತವೆ. ಹೀಗಾಗಿ ಬಹುತೇಕ ಸಂದರ್ಭಗಳಲ್ಲಿ ಬಸ್ಸುಗಳು ಕಡಿಮೆ ಪ್ರಯಾಣಿಕರೊಂದಿಗೆ ಸಂಚರಿಸುವಂತಾಗಿ ನಷ್ಟದ ಪ್ರಮಾಣ ಹೆಚ್ಚುತ್ತದೆ. ಎಲ್ಲ ನಿಗಮಗಳು ವಿಲೀನವಾದಾಗ ಅಗತ್ಯಕ್ಕನುಗುಣವಾಗಿ ಬಸ್ಸುಗಳ ಸಂಚಾರಕ್ಕೆ ಅವಕಾಶ ನೀಡಬಹುದು, ಕಡಿಮೆ ಪ್ರಯಾಣಿಕರಿದ್ದರೆ ಅಂತಹ ಬಸ್ಸುಗಳಲ್ಲಿದ್ದವರಿಗೆ ಅದೇ ಮಾರ್ಗದಲ್ಲಿರುವ ಬೇರೆ ಬಸ್ಸುಗಳಲ್ಲಿ ಸೀಟು ಕಲ್ಪಿಸಬಹುದು. ಕೋವಿಡ್ ಕಾಲದಲ್ಲಿ ಸಾರಿಗೆ ಸಂಸ್ಥೆ ಆದಾಯವಿಲ್ಲದೆ ಬಳಲಿತ್ತು. ಆದರೆ ಸಾರಿಗೆ ನೌಕರರ ವೇತನ ನೀಡುವ ಸಲುವಾಗಿ ರಾಜ್ಯ ಸರ್ಕಾರ 6000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಅನುಕೂಲ ಒದಗಿಸಿತು.

ಎಲೆಕ್ಟ್ರಿಕ್ ಬಸ್ಸುಗಳನ್ನು ಖರೀದಿಸಲು ಬಯಸಲಾಗಿದೆ: ಈಗ ಪರಿಸ್ಥಿತಿ ಸುಧಾರಿಸಿದ್ದರೂ ಸಾರಿಗೆ ಸಂಸ್ಥೆಯ ನಷ್ಟ ಮಾತ್ರ ತಪ್ಪಿಲ್ಲ. ಹೀಗಾಗಿ ಶ್ರೀನಿವಾಸ ಮೂರ್ತಿಯವರ ಶಿಫಾರಸಿನಂತೆ ಸಾರಿಗೆ ಸಂಸ್ಥೆಯ ಎಲ್ಲ ನಿಗಮಗಳನ್ನು ವಿಲೀನಗೊಳಿಸಲು ಬಯಸಲಾಗಿದೆ ಎಂದು ಹೇಳಿದರು. ಸಾರಿಗೆ ಸಂಸ್ಥೆಗೆ ಹೊಸತಾಗಿ ನಾಲ್ಕು ಸಾವಿರ ಬಸ್ಸುಗಳನ್ನು ಖರೀದಿಸಲಾಗುವುದು ಎಂದ ಅವರು, ಈಗಿರುವ ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ ತಲಾ ಒಂದು ಸಾವಿರ ಹೆಚ್ಚುವರಿ ಬಸ್​ಗಳ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು. ಈ ಮಧ್ಯೆ ಬಿಎಂಟಿಸಿಗೆ ಒಂದೂವರೆ ಸಾವಿರ ಎಲೆಕ್ಟ್ರಿಕ್ ಬಸ್​ಗಳನ್ನು ಖರೀದಿಸಲು ಚಿಂಇತಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುವುದು: ಈ ಮಧ್ಯೆ ನಾಲ್ಕೂ ನಿಗಮಗಳ ವ್ಯಾಪ್ತಿಯಲ್ಲಿ ಒಂಭತ್ತರಿಂದ ಹತ್ತು ಲಕ್ಷ ಕಿಲೋಮೀಟರ್ ವರೆಗೆ ಸಂಚರಿಸಿದ ಬಸ್ಸುಗಳಿದ್ದು, ಇವನ್ನು ತಲಾ ಮೂರುವರೆ ಲಕ್ಷ ರೂ. ಗಳ ವೆಚ್ಚದಲ್ಲಿ ಪುನರ್ ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ. ಟೈಯರ್​​, ಎಂಜಿನ್​ಗಳನ್ನು ಬದಲಿಸಿ ಹೊಸತಾಗಿ ಅಳವಡಿಸುವ ಮೂಲಕ ಪುನರ್ ನವೀಕರಣಗೊಂಡ ಬಸ್​ಗಳನ್ನು ಪ್ರಾಯೋಗಿಕವಾಗಿ ನಿಗಮಗಳಿಗೆ ಒದಗಿಸಲಾಗಿದ್ದು, ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.

ಓದಿ:ಸರ್ಕಾರ ಎಲ್ಲ ವರ್ಗದವರಿಗೆ ನ್ಯಾಯ ಕೊಡುವ ಕೆಲಸ ಮಾಡುತ್ತೆ: ಸಚಿವ ಗೋವಿಂದ ಕಾರಜೋಳ

ABOUT THE AUTHOR

...view details