ಬೆಂಗಳೂರು: ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಿರುವ ಕೇಂದ್ರ ಸರ್ಕಾರಕ್ಕೆ ಕಾಲವೇ ಉತ್ತರ ನೀಡಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಚುನಾವಣಾ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪ್ರಜೆಗಳ ತೀರ್ಪಿಗೆ ತಲೆಬಾಗಬೇಕಿದೆ. ಗುಜರಾತ್ ಚುನಾವಣೆಯಲ್ಲಿ ನಮ್ಮ ಪಕ್ಷದ ನಿರೀಕ್ಷೆ ಹುಸಿಯಾಗಿದೆ. ಜನತೆ ಮಾಡಿದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಸಾಲು ಸಾಲು ಅಕ್ರಮಗಳು, ಆಡಳಿತ ಯಂತ್ರದ ದುರ್ಬಳಕೆ, ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕೇಂದ್ರದ ಪ್ರಭುತ್ವಕ್ಕೆ ಕಾಲ ಉತ್ತರಿಸಲಿದೆ ಎಂದಿದ್ದಾರೆ.
ಪ್ರತಿಪಕ್ಷಗಳ ಹಾಲಿ ಶಾಸಕ ಅಭ್ಯರ್ಥಿಗಳ ಮೇಲೆಯೇ ಬಿಜೆಪಿ ಪಕ್ಷದ ಕಾರ್ಯಕರ್ತರು ನಡೆಸಿದ ಹಲ್ಲೆ, ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯನ್ನೇ ಅಪಹರಣ ಮಾಡಿದ ಘಟನೆ, ಪ್ರಧಾನಿ ಮೋದಿಯವರ ಚುನಾವಣೆ ಯಾತ್ರೆಗೆ ಸಹಕಾರ, ಚುನಾವಣೆ ದಿನವೂ ರೋಡ್ ಶೋ ಸೇರಿದಂತೆ ಅನೇಕ ಘಟನೆಗಳಿಗೆ ಚುನಾವಣೆ ಆಯೋಗ ತೋರಿದ ಅಸಹಾಯಕತೆಯ ಸಾಕ್ಷಿಯೇ ಗುಜರಾತಿನ ಫಲಿತಾಂಶ.
ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತಿದೆ, ಸತ್ತಿಲ್ಲ. ನಮ್ಮ ಪಕ್ಷದ ಬೆನ್ನೆಲುಬಾಗಿರುವ ಕಾರ್ಯಕರ್ತರ ಜೊತೆಗೆ ಪಕ್ಷ ಬಲವಾಗಿ ನಿಲ್ಲಲಿದೆ. ಕೋಮು ಅಜೆಂಡಾಗಳು,ಮತೀಯ ಭಾವನೆಗಳು, ಹುಸಿ ಭರವಸೆಗಳು, ಕಾರ್ಯಕರ್ತರ ಕುಟುಂಬಗಳಿಗೆ ಹುಟ್ಟಿಸಿದ ಭಯದ ವಾತಾವರಣವನ್ನೂ ಮೀರಿಯೂ ಗುಜರಾತ್ ಜನತೆ ನಮಗೆ ಮತ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಎಂದಿದ್ದಾರೆ.