ಕರ್ನಾಟಕ

karnataka

ಅಂಗಾಂಗ ದಾನ ದಿನಾಚರಣೆಗೆ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜಕುಮಾರ್​ಗೆ ಆಹ್ವಾನ: ಸಚಿವ ದಿನೇಶ್ ಗುಂಡೂರಾವ್

By

Published : Jul 23, 2023, 8:01 PM IST

ಡಾ.ರಾಜಕುಮಾರ್ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವುದನ್ನು ಗಮನಿಸಿ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮಾರ್
ಅಶ್ವಿನಿ ಪುನೀತ್ ರಾಜಕುಮಾರ್

ಬೆಂಗಳೂರು :ರಾಜ್ಯದಲ್ಲಿ ಅಂಗಾಂಗ ದಾನ ಕುರಿತ ಜಾಗೃತಿಗೆ ರಾಯಭಾರಿಯಾಗುವಂತೆ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಹ್ವಾನಿಸಿದ್ದಾರೆ. ರಾಜ್ಯದಲ್ಲಿ ದೊಡ್ಮನೆ ಕುಟುಂಬ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿರುವುದನ್ನು ಗಮನಿಸಿರುವ ಸಚಿವರು, ಆರೋಗ್ಯ ಇಲಾಖೆಯ ವತಿಯಿಂದ ಅಗಸ್ಟ್ 3 ರಂದು ಆಚರಿಸುವ ಅಂಗಾಂಗ ದಾನ ದಿನಾಚರಣೆಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ.

ವರನಟ ಡಾ. ರಾಜಕುಮಾರ್ ಅವರಂತೆಯೇ ನಟ ಪುನೀತ್ ರಾಜ್​ಕುಮಾರ್ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದರು. ಪುನೀತ್ ರಾಜ್​ಕುಮಾರ್ ಅವರ ಕಣ್ಣುಗಳ ದಾನದಿಂದಾಗಿ ರಾಜ್ಯದಲ್ಲಿ ಸಾವಿರಾರು ಜನರಿಗೆ ಅಂಗಾಂಗ ದಾನ ಮಾಡಲು ಪ್ರೇರಣೆಯಾಗಿತ್ತು. ಅಲ್ಲದೇ ಅಂಗಾಂಗ ದಾನ ಪ್ರಮಾಣ ಏರಿಕೆ ಕೂಡಾ ಕಂಡಿತ್ತು. ಅನೇಕರು ದಿ.ಪುನೀತ್ ರಾಜ್​ಕುಮಾರ್ ಅವರನ್ನೇ ಮಾದರಿಯಾಗಿ ಇಟ್ಟುಕೊಂಡು ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ. ಹೀಗಾಗಿ ​ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರಿಗೆ ಅಂಗಾಂಗ ದಾನ ಜಾಗೃತಿಗೆ ರಾಯಭಾರಿಯಾಗುವಂತೆ ಆರೋಗ್ಯ ಇಲಾಖೆ ಆಹ್ವಾನ ನೀಡಿದೆ.

ಅಂಗಾಂಗ ದಾನದ ಮೂಲಕ ಒಬ್ಬ ದಾನಿ ತನ್ನ ಸಾವಿನ ಬಳಿಕವೂ 8 ಜನರಿಗೆ ಜೀವದಾನ ಮಾಡಬಹುದಾಗಿದೆ. ಅಲ್ಲದೇ ಅಂಗಾಂಶ ದಾನದ ಮೂಲಕ 50 ಜನರ ಜೀವವನ್ನು ಉಳಿಸಬಹುದಾಗಿದೆ. ಜೀವನದ ಸಾರ್ಥಕತೆ ಕಾಣಬಹುದಾದ ಅಂಗಾಂಗ ದಾನಕ್ಕೆ ಸರ್ಕಾರದಿಂದ ಹೆಚ್ಚು ಪ್ರೋತ್ಸಾಹ ನೀಡುವತ್ತ ಕಾರ್ಯಕ್ರಮಗಳನ್ನು ರೂಪಿಸಲು ಅಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಕರೆ ನೀಡಿದ್ದಾರೆ. ಅಗಸ್ಟ್​ 3 ರಂದು ಅಂಗಾಂಗ ದಾನ ದಿನಾಚರಣೆ ಆಚರಿಸುತ್ತಿರುವ ರಾಜ್ಯ ಆರೋಗ್ಯ ಇಲಾಖೆ, ಅಂಗಾಂಗ ದಾನ ಮಾಡಿದ ರಾಜ್ಯದ 150 ಕುಟುಂಬಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂಗಾಂಗ ದಾನದ ಪ್ರಮಾಣ ಪ್ರತಿ ಮಿಲಿಯನ್‌ ಜನಸಂಖ್ಯೆಗೆ 0.08 ರಷ್ಟಿದ್ದು, ಸುಮಾರು 3 ಲಕ್ಷ ಜನರು ಮೂತ್ರಪಿಂಡ ಕಸಿಗಾಗಿ ಕಾಯುತ್ತಿದ್ದಾರೆ. ಆದರೆ ಪ್ರತಿ ವರ್ಷ ಕೇವಲ 10,000 ಜನರು ಮಾತ್ರ ಕಸಿ ಪಡೆಯುತ್ತಾರೆ. ಭಾರತದಲ್ಲಿ ಸುಮಾರು 50,000 ರೋಗಳಿಗೆ ಹೃದಯ ಕಸಿ ಅಗತ್ಯವಿದೆ. ಆದರೆ 1% ಜನರಿಗೆ ಮಾತ್ರ ಅಂಗಾಂಗವನ್ನು ಪಡೆಯುತ್ತಿದ್ದಾರೆ. 2 ಲಕ್ಷ ಭಾರತೀಯರಿಗೆ ಕಾರ್ನಿಯಾ ಕಸಿ ಅಗತ್ಯವಿದ್ದು, ಪ್ರತಿ ವರ್ಷ ಕೇವಲ 50,000 ಕಾರ್ನಿಯಗಳನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ.

ಇದರಿಂದ ರಾಜ್ಯ ಸರ್ಕಾರವು ಮಾನವ ಅಂಗಾಂಗಗಳ ಕೊರತೆಯನ್ನು ನೀಗಿಸಲು ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಸೇರಿದಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾನವ ಅಂಗಾಂಗ ಹಿಂಪಡೆಯುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಅಂಗಾಂಗ ಹಿಂಪಡೆಯುವಿಕೆ ಪ್ರಾರಂಭಿಸಲಾಗಿದೆ. ಮೆದುಳು ನಿಷ್ಕ್ರಿಯ ಹೊಂದಿದ ರೋಗಿಗಳನ್ನು ಗುರುತಿಸಿ ಅಂಗಾಂಗ ದಾನ ಮಾಡುವ ಕುರಿತು ಸಮಾಲೋಚನೆಗಳನ್ನ ಸಂಬಂಧಿಸಿದವರೊಂದಿಗೆ ನಡೆಸಲಾಗುತ್ತಿದೆ.‌ ಸರ್ಕಾರದ ವತಿಯಿಂದ ಬಡರೋಗಳಿಗೆ ಉಚಿತ ಅಂಗಾಂಗ ಕಸಿ ಮಾಡುವ ಯೋಜನೆ ಆರಂಭಿಸಲಾಗಿದ್ದು, ಇದುವರೆಗೂ 73 ರೋಗಿಗಳು ಪ್ರಯೋಜನ ಪಡೆದಿದ್ದಾರೆ. ಸರ್ಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ ನರವಿಜ್ಞಾನ ಸಂಸ್ಥೆ ಹಾಗೂ ಕರ್ನಾಟಕ ವೈದ್ಯಕೀಯ ಸಂಸ್ಥೆ, ಕಿಮ್ಸ್ ಹುಬ್ಬಳ್ಳಿಯಲ್ಲಿ ಕಿಡ್ನಿ ಕಸಿ ಮಾಡಲಾಗುತ್ತಿದೆ.

ಇದನ್ನೂ ಓದಿ :ಅಂಗಾಂಗ ದಾನ ಜಾಗೃತಿಯಿಂದ ಜೀವ ರಕ್ಷಣಾ ಪ್ರಕ್ರಿಯೆಗೆ ಯಶಸ್ಸು: ಡಾ. ಕುಮುದ್ ಧಿತಾಲ್

ABOUT THE AUTHOR

...view details