ಕರ್ನಾಟಕ

karnataka

ಕಾಂಡಿಮೆಂಟ್ಸ್ ಮಾಲೀಕನಿಗೆ ನಿದ್ರೆ ಮಾತ್ರೆ ಮಿಶ್ರಿತ ಟೀ ಕುಡಿಸಿ ಚಿನ್ನದ ಸರ ದೋಚಿದ್ದ ಇಬ್ಬರು ಆರೋಪಿಗಳ ಬಂಧನ

By ETV Bharat Karnataka Team

Published : Oct 7, 2023, 6:13 PM IST

ಮಲ್ಲೇಶ್ವರಂ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 6.5 ಲಕ್ಷ ಮೌಲ್ಯದ 115 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

Arrest two accused
ಬಂಧಿತ ಆರೋಪಿಗಳು

ಬೆಂಗಳೂರು: ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕಾಂಡಿಮೆಂಟ್ಸ್ ಮಾಲೀಕನ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡಿ ಪರಾರಿ ಆಗಿದ್ದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾರ್ತಿಕ್ ಹಾಗೂ ಮಂಜುಶ್ರೀ ಎಂಬುವರು ಬಂಧಿತರು. ಮಲ್ಲೇಶ್ವರಂನ ಕಾಂಡಿಮೆಂಟ್ಸ್ ಆ್ಯಂಡ್ ಚಾಟ್ಸ್ ಅಂಗಡಿಯ ಮಾಲೀಕನನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು, ಸೆಪ್ಟೆಂಬರ್ 22ರಂದು ಆತನೊಂದಿಗೆ ಒಟ್ಟಿಗೆ ಟೀ ಕುಡಿಯುವ ನೆಪದಲ್ಲಿ ಪ್ರಜ್ಞೆ ತಪ್ಪಿಸಿ ಮೈಮೇಲಿದ್ದ 35 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದರು.

ಸ್ನೇಹ ಬೆಳೆಸಿ ಮೈಮೇಲಿದ್ದ ಚಿನ್ನಾಭರಣ ಕದಿಯುವ ಆರೋಪಿಗಳು: ಈ ಇಬ್ಬರು ಆರೋಪಿಗಳು ರಸ್ತೆ ಬದಿ ವ್ಯಾಪಾರಿಗಳು, ಕಾಂಡಿಮೆಂಟ್ಸ್ ಅಂಗಡಿ ಮಾಲೀಕರನ್ನು ಟಾರ್ಗೆಟ್ ಮಾಡುತ್ತಿದ್ದರು. ಪದೇ ಪದೆ ಅಂಗಡಿಗೆ ಬಂದು ಪರಿಚಯ ಮಾಡಿಕೊಂಡು, ನಂತರ ಅವರ ಜಾತಿ, ಊರು ತಿಳಿದುಕೊಂಡು ನಮ್ಮದು ಅದೇ ಜಾತಿ ನಿಮ್ಮೂರಿನ ಪಕ್ಕದವರೇ ಎನ್ನುತ್ತ ಹತ್ತಿರವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ನಂತರ ಅವರ ಪ್ರಜ್ಞೆ ತಪ್ಪಿಸಿ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು.

ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 6.5 ಲಕ್ಷ ಮೌಲ್ಯದ 115 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪೈಕಿ ಕಾರ್ತಿಕ್, ಈ ಹಿಂದೆ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಹತ್ಯೆ ಪ್ರಕರಣ ಹಾಗೂ ವಿಜಯನಗರ ಠಾಣೆಯ ವ್ಯಾಪ್ತಿಯಲ್ಲಿ ಅಪಹರಣ ಪ್ರಕರಣವೊಂದರಲ್ಲಿ ಸೆರೆವಾಸ ಅನುಭವಿಸಿ ಹೊರಬಂದಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ‌. ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಇತ್ತೀಚಿನ ಪ್ರಕರಣ- ನಕಲಿ ದಾಖಲೆ ಪತ್ರ ಸೃಷ್ಟಿಸಿ ಮಾರುತ್ತಿದ್ದ ಆರೋಪಿ ಬಂಧನ..ನಕಲಿ ದಾಖಲೆ ಪತ್ರಗಳನ್ನು ತಯಾರಿಸಿ ಸಾರ್ವಜನಿಕರಿಗೆ ಅಕ್ರಮವಾಗಿ ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇತ್ತೀಚಿಗೆ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರದ ಬಜ್ಜೋಡಿ ಬಿರ್ಕನಕಟ್ಟೆ ಬರ್ನಾಡ್ ರೋಶನ್ ಮೆಸ್ಕರೆನಸ್ (41) ಬಂಧಿತ ವ್ಯಕ್ತಿ.

ಈತ ಮಂಗಳೂರು ನಗರದ ಕಂಕನಾಡಿ ವಿಶ್ವಾಸ್ ಕ್ರೌನ್ ಅಪಾರ್ಟ್​ಮೆಂಟ್​ನ ನೆಲ ಅಂತಸ್ತಿನ ಕೊಠಡಿಯೊಂದರಲ್ಲಿ 'ಹೆಲ್ಪ್ ಲೈನ್ ಮಂಗಳೂರು' ಎಂಬ ಹೆಸರಿನ ಸಂಸ್ಥೆ ಆರಂಭಿಸಿ, ಆಧಾರ್ ಕಾರ್ಡ್, ಪಡಿತರ ಚೀಟಿ (ರೇಷನ್ ಕಾರ್ಡ್), ಅಂಕ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸುತ್ತಿದ್ದನು.

ಮೂರು ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದುಕೊಂಡವರು ಅವುಗಳನ್ನು ಬ್ಯಾಂಕ್​ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿರುವುದು ಮಂಗಳೂರು ಸಿಸಿಬಿ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂಓದಿ:ಬೆಂಗಳೂರು: ಮಾಲೀಕನಿಂದ ಹಣ ಸುಲಿಗೆಗೆ ಕಿಡ್ನಾಪ್ ಪ್ರಹಸನ; ಕಾರ್ಮಿಕ ಸೇರಿ ಮೂವರ ಬಂಧನ

ABOUT THE AUTHOR

...view details