ಕರ್ನಾಟಕ

karnataka

ಬೆಂಗಳೂರು: ಎಗ್​ರೈಸ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ಯತ್ನ, ರೌಡಿಶೀಟರ್ ಬಂಧನ

By ETV Bharat Karnataka Team

Published : Aug 22, 2023, 10:32 PM IST

ಬೆಂಗಳೂರಿನಲ್ಲಿ ನಡೆದ ಅಪರಾಧ ಪ್ರಕರಣಗಳ ವರದಿ ಇಲ್ಲಿದೆ. ಒಂದೆಡೆ, ಎಗ್‌ರೈಸ್‌ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ

ಯುವಕನ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್ ಅರೆಸ್ಟ್
ಯುವಕನ ಮೇಲೆ ಹಲ್ಲೆ ನಡೆಸಿದ್ದ ರೌಡಿಶೀಟರ್ ಅರೆಸ್ಟ್

ಬೆಂಗಳೂರು: ಶತ್ರುವಿಗೆ ರೂಮ್​ನಲ್ಲಿ ಆಶ್ರಯ ಕೊಟ್ಟನೆಂದು ಮನೆಗೆ ನುಗ್ಗಿ ಯುವಕನಿಗೆ ಹಲ್ಲೆ ನಡೆಸಿದ್ದ ರೌಡಿಶೀಟರ್‌ವೋರ್ವನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ನವೀನ್ ಆಲಿಯಾಸ್ ಸ್ಟಾರ್ ನವೀನ್ ಬಂಧಿತ ರೌಡಿಶೀಟರ್. ಸಿದ್ದಾಪುರದ ಕನಕನಪಾಳ್ಯದ ನಿವಾಸಿ ರಾಜೇಶ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಈತನನ್ನು ಬಂಧಿಸಲಾಗಿದೆ‌.‌‌ ಕನಕನಪಾಳ್ಯದಲ್ಲಿ ಕಳೆದ‌ ಒಂದು ವರ್ಷದಿಂದ ಎಗ್​ರೈಸ್ ಅಂಗಡಿ ಇಟ್ಟುಕೊಂಡಿದ್ದ ರಾಜೇಶ್ ಎಂಬವರ ಮನೆಗೆ ಆಗಸ್ಟ್ 17 ರಂದು ಆರೋಪಿ ಹಾಗೂ ಸಹಚರರು ಬಂದಿದ್ದಾರೆ. ತನ್ನ ಶತ್ರು ವರುಣ್​ಗೆ ರೂಮ್​ನಲ್ಲಿ ಆಶ್ರಯ ಕೊಡ್ತೀಯಾ ಎಂದು ಆರೋಪಿಸಿ ಲಾಂಗ್‌ನಿಂದ ಹಲ್ಲೆಗೆ ಮುಂದಾಗಿದ್ದಾರೆ.

ಹಲ್ಲೆಯಿಂದ ತಪ್ಪಿಸಿಕೊಂಡ ರಾಜೇಶ್, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನೀಡಿದ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸ್ಟಾರ್ ನವೀನ್ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಈ ಹಿಂದೆ ಜಾಮೀನಿನ‌ ಮೇರೆಗೆ ಹೊರಬಂದಿದ್ದ ಈತ ಕೆಲಸವಿಲ್ಲದೆ ಅಲೆದಾಡುತ್ತಿದ್ದ. ಮಾನವೀಯತೆಯ ಆಧಾರದ ಮೇಲೆ‌ ಪೊಲೀಸರು ಧನಸಹಾಯ ಮಾಡಿ ಕೆಲಸ ನೋಡಿಕೊಳ್ಳುವಂತೆ ಸೂಚಿಸಿದ್ದರು. ಆದಾಗ್ಯಾ ಬುದ್ದಿ ಕಲಿಯದ ಆರೋಪಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸಕೋಟೆಯಲ್ಲಿ ವಿದ್ಯಾರ್ಥಿನಿ‌ ಸಾವು:ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಸಂಶಯಕ್ಕೆ ಕಾರಣವಾಗಿದೆ. ಹೊಸಕೋಟೆ ತಾಲೂಕಿನ ಕಣ್ಣೂರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹಿಮಾ (18) ಸಾವನ್ನಪ್ಪಿದ್ದಾರೆ. ಮೃತ ಯುವತಿ ಮುಳಬಾಗಿಲು ತಾಲೂಕಿನ ನಂಗಲಿ ಮೂಲದವರು. ಹೊಸಕೋಟೆಯ ಅಜ್ಜಿ ಮನೆಯಲ್ಲಿದ್ದು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇಂದು ಬೆಳಗ್ಗೆ ಅಜ್ಜಿ ಹೂವಿನ ವ್ಯಾಪಾರಕ್ಕೆ ಹೋದ ವೇಳೆ ಘಟನೆ ನಡೆದಿದೆ. ಮನೆಯಲ್ಲಿದ್ದ ಮೊಮ್ಮಗಳಿಗೆ ಅಜ್ಜಿ ಫೋನ್ ಮಾಡಿದ್ದಾರೆ. ಆದರೆ ಆಕೆ ಫೋನ್ ಕರೆ ಸ್ವೀಕರಿಸಿಲ್ಲ. ಪಕ್ಕದ ಮನೆಯವರನ್ನು ಕಳುಹಿಸಿ ನೋಡಿದಾಗ ಹಿಮಾ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆತ್ಮಹತ್ಯೆ ಪ್ರಕರಣ:ಯುವಕನ ಕೊಲೆ ಪ್ರಕರಣದಲ್ಲಿ ಪತಿ ಮತ್ತು ಮಗ ಜೈಲುಪಾಲಾದ ಹಿನ್ನೆಲೆಯಲ್ಲಿ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮತ್ತೊಂದೆಡೆ ಜೈಲಿನಲ್ಲಿದ್ದ ಪತಿ ತನ್ನ ಹೆಂಡತಿ ಸಾವಿನ ವಿಚಾರ ತಿಳಿದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತರನ್ನು ಸಾಮ್ರಾಟ್ ಹಾಗೂ ಆತ್ಮಹತ್ಯೆಗೆ ಶರಣಾದವರನ್ನು ಇಂದ್ರಾಣಿ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ಮೈಸೂರು ನಗರದ ವಿದ್ಯಾನಗರದಲ್ಲಿ ಬಾಲರಾಜ್ ಎಂಬ ಯುವಕನನ್ನು ಕ್ಷುಲ್ಲಕ ಕಾರಣಕ್ಕಾಗಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಬಾಲರಾಜ್ ಸ್ನೇಹಿತರಾದ ಸಂಜಯ್, ಕಿರಣ್ ತೇಜಸ್ ಹಾಗೂ ಆತನ ತಂದೆ ಸಾಮ್ರಾಟ್ ಎಂಬವರನ್ನು ಆರೋಪಿಗಳೆಂದು ಪೊಲೀಸರು ದೂರು ದಾಖಲಿಸಿದ್ದರು.

ಇದನ್ನೂ ಓದಿ:Heart attack: ಆಟೋ ಚಾಲನೆ ವೇಳೆ ದಿಢೀರ್​ ಎದೆನೋವು.. ಚಾಲಕ ಸ್ಥಳದಲ್ಲೇ ಸಾವು

ABOUT THE AUTHOR

...view details