ಕರ್ನಾಟಕ

karnataka

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ: ಸಿಎಂ ಬೊಮ್ಮಾಯಿ‌

By

Published : Jan 30, 2023, 1:10 PM IST

Updated : Jan 30, 2023, 2:35 PM IST

ಹುತಾತ್ಮರ ದಿನದ ನಿಮಿತ್ತ ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

CM basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಮಗಿಂತ ಜಾಸ್ತಿ ನೀವೆ ಚರ್ಚೆ ಮಾಡುತ್ತೀರಿ. ದೆಹಲಿಗೆ ಹೋಗಿ ಏನು ಹೇಳಬೇಕೋ ಅದನ್ನು ಹೈಕಮಾಂಡ್​ಗೆ ಹೇಳಿದ್ದೇವೆ. ಅವರು ಸೂಕ್ತ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ವಿಧಾನಸೌಧ ಮತ್ತು ವಿಕಾಸಸೌಧದ ನಡುವಿನ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮುಗಿದ ಅಧ್ಯಾಯವೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದರು.

ಜನರಪರವಾದ ಬಜೆಟ್ ಆಗಲಿದೆ:ಸಿಎಂ ಬೊಮ್ಮಾಯಿ ಫೆ.17ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೊಮ್ಮಾಯಿ ಜನಪರ ಬಜೆಟ್ ಮಂಡಿಸಲಿದ್ದಾರೆ ಎನ್ನಲಾಗಿದೆ. ಈ ಬಾರಿ ಜನಪರ ಬಜೆಟ್ ಮಂಡನೆ ಆಗಲಿದ್ದು, ಬಜೆಟ್​ನಲ್ಲಿ ಎಲ್ಲ ವರ್ಗದವರಿಗೆ ಆದ್ಯತೆ ನೀಡಲಾಗುತ್ತದೆ. ರೈತರು, ಮಹಿಳೆಯರು, ಕಾರ್ಮಿಕರು ಎಲ್ಲರಿಗೂ, ವಿಶೇಷವಾಗಿ ದುಡಿಯುವ ವರ್ಗಕ್ಕೆ ಆದ್ಯತೆ ನೀಡಲಾಗುತ್ತದೆ. ಆರ್ಥಿಕವಾಗಿ ಅವರನ್ನು ಮೇಲೆತ್ತುವ ಕೆಲಸ ಪ್ರಾಥಮಿಕವಾಗಿ ಆಗಬೇಕು. ದುಡಿಯುವ ವರ್ಗಕ್ಕೆ ಆರ್ಥಿಕವಾಗಿ ಹೆಚ್ಚು ಗಮನ ನೀಡಲಾಗುತ್ತದೆ‌. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳು ಇರಲಿವೆ ಎಂದು ಸಿಎಂ ಇದೇ ವೇಳೆ, ಸ್ಪಷ್ಟಪಡಿಸಿದರು.

ಗಾಂಧಿ ಮಾರ್ಗದಲ್ಲಿ ನಡೆಯುವ ಸಂಕಲ್ಪ ಮಾಡಬೇಕು:ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ಈ ದಿನದ ಬಗ್ಗೆ ನಾವು ಚಿಂತನೆ ಮಾಡಿ ಆತ್ಮಾವಲೋಕನ ಮಾಡಿಕೊಂಡು ಗಾಂಧೀಜಿ ಅವರ ಮಾರ್ಗದಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಮಹಾತ್ಮ ಗಾಂಧಿ ಅವರು ಹೇಳಿರುವಂತೆ ಅವರ ಜೀವನವೇ ಒಂದು ಸಂದೇಶ. ಅವರ ಜೀವನವನ್ನು ಓದಿ, ತಿಳಿದುಕೊಂಡು, ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಅವರ ಜೀವನದ ಆಧಾರ ನೈತಿಕತೆ ಮತ್ತು ಸತ್ಯ, ಇವೆರಡನ್ನೂ ಅತ್ಯಂತ ಶುದ್ಧವಾಗಿ ಪ್ರತಿಪಾದಿಸಿದ್ದರು. ಸದಾಕಾಲ ತಮ್ಮನ್ನು ತಾವೇ ಪರೀಕ್ಷೆಗೆ ಒಳಪಡಿಸಿಕೊಂಡು ಪರಿಶುದ್ಧವಾಗುತ್ತಿದ್ದರು. ಇಂಥ ಪ್ರಕ್ರಿಯೆ ಗಾಂಧೀಜಿಯವರು ಜೀವನದ ಉದ್ದಕ್ಕೂ ನಡೆಸಿಕೊಂಡು ಬಂದಿರುವುದನ್ನು ನಾವು ನೋಡುತ್ತೇವೆ. ಅಹಿಂಸೆಯಲ್ಲಿ ಬಹಳ ದೊಡ್ಡ ಶಕ್ತಿ ಇದೆ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಗಾಂಧೀಜಿ. ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವವರಲ್ಲಿ ಮುಂಚೂಣಿಯಲ್ಲಿದ್ದರು ಎಂದರು.

ಹೊಸ ದಿಕ್ಸೂಚಿ:ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಅನಾಮಧೇಯರು ತಮ್ಮ ಆಸ್ತಿಪಾಸ್ತಿಗಳನ್ನು ತ್ಯಾಗ ಮಾಡಿದ್ದರು. ಗಟ್ಟಿ ನಿಲುವು ತೆಗೆದುಕೊಂಡು ಹೋರಾಟಕ್ಕೆ ಹೊಸ ದಿಕ್ಸೂಚಿ ನೀಡಿದ ಸುಭಾಶ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಲೋಕಮಾನ್ಯ ತಿಲಕ್ ಮುಂತಾದವರೂ ಕೂಡ ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಇವೆಲ್ಲವನ್ನೂ ಕ್ರೋಢಿಕರಿಸಿ ಜನಸಾಮಾನ್ಯರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿ, ಸತ್ಯಾಗ್ರಹ ನಡೆಸಿ, ಆಂದೋಲನ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟ ಪರಿವರ್ತನೆ ಮಾಡಿ, ಬ್ರಿಟಿಷರ ಜೊತೆ ಕಠಿಣ ಮಾತುಕತೆ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದರು.

ಗಾಂಧೀಜಿ ಅವರ ತತ್ವ ಆದರ್ಶಗಳನ್ನು ನೋಡಿ ಈ ದೇಶದ ಸಾರ್ವಜನಿಕ ಜೀವನದಲ್ಲಿ ನೈತಿಕತೆ ಬರುವುದು ಅಗತ್ಯವಿದೆ. ಒಂದು ರೀತಿಯಲ್ಲಿ ರಾಷ್ಟ್ರೀಯ ವ್ಯಕ್ತಿತ್ವ ಗಾಂಧೀಜಿಯವರಲ್ಲಿ ಇತ್ತು.‌ ದೇಶಕ್ಕೆ ಬಹಳ ದೊಡ್ಡ ಚರಿತ್ರೆ ಇದೆ, ಬೇಕಾಗಿರುವುದು ಚಾರಿತ್ರ್ಯ. ಅವರಿಗೆ ಭಾವಪೂರ್ವಕವಾಗಿ, ಹೃದಯಾಂತರಾಳದಿಂದ, ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದರು.

ಇದನ್ನೂ ಓದಿ:ಮಹಾತ್ಮ ಗಾಂಧಿ ಪುಣ್ಯಸ್ಮರಣೆ: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಗೌರವ ನಮನ

Last Updated : Jan 30, 2023, 2:35 PM IST

ABOUT THE AUTHOR

...view details