ಕರ್ನಾಟಕ

karnataka

ಅಕ್ಬೋಬರ್ 25ರ ನಂತರ ನಿಗಮ ಮಂಡಳಿ, ನೂತನ ಕಾರ್ಯಾಧ್ಯಕ್ಷರ ನೇಮಕ: ಡಿಸಿಎಂ ಡಿ.ಕೆ.ಶಿವಕುಮಾರ್

By ETV Bharat Karnataka Team

Published : Oct 23, 2023, 7:29 PM IST

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು​ ನಿಗಮ, ಮಂಡಳಿ ಹಾಗೂ ನೂತನ ಕಾರ್ಯಾಧ್ಯಕ್ಷರ ನೇಮಕಾತಿ ಕುರಿತು ಮಾಹಿತಿ ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು:ಅ.25 ರ ನಂತರ ಸಭೆ ನಡೆಸಿ ನಿಗಮ, ಮಂಡಳಿ ಹಾಗೂ ನೂತನ ಕಾರ್ಯಾಧ್ಯಕ್ಷರ ನೇಮಕಾತಿ ಬಗ್ಗೆ ತೀರ್ಮಾನಿಸಲಾಗುವುದು ಎಂದು ಡಿಸಿಎಂ‌ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಶಾಸಕರಿಗೆ, ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎನ್ನುವ ಹಂಬಲ ನಮಗೂ ಇದೆ. ನಾನೂ ಒಬ್ಬ ಕಾರ್ಯಕರ್ತನಾಗಿ ಈ ಮಾತು ಹೇಳುತ್ತಿದ್ದೇನೆ. ಅ.20 ರಂದು ಸಿಎಂ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಬೇಕು ಎಂದು ಸಮಯ ನಿಗದಿಯಾಗಿತ್ತು. ಆದರೆ ಆ ದಿನ ಬೇರೆ ಕೆಲಸಗಳ ನಿಮಿತ್ತ ಚರ್ಚೆ ನಡೆಯಲಿಲ್ಲ. ಹಬ್ಬ ಮುಗಿದ ನಂತರ ನಾವಿಬ್ಬರೂ ಕುಳಿತು ಚರ್ಚೆ ನಡೆಸುತ್ತೇವೆ. ದೆಹಲಿಯಿಂದ ಹೈಕಮಾಂಡಿನವರೂ ಬರುತ್ತಾರೆ. ನಮ್ಮ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಗಳು ರಾಜಸ್ಥಾನ ಸೇರಿದಂತೆ ಇತರೆ ರಾಜ್ಯಗಳ ಟಿಕೆಟ್ ಹಂಚಿಕೆಯಲ್ಲಿ ಇದ್ದಾರೆ. ನಾಳೆ ಟಿಕೆಟ್ ಘೋಷಣೆ ಆಗುವ ಸಾಧ್ಯತೆಯಿದ್ದು, ಅಷ್ಟರಲ್ಲಿ ನಾವು ಸಭೆ ನಡೆಸಿ ಮಾತುಕತೆ ನಡೆಸಿರುತ್ತೇವೆ ಎಂದರು.

ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಜನರ ಸೇವೆ ಮಾಡುವಂತಹ ಭಾಗ್ಯ ಕೊಟ್ಟು, ನಮ್ಮ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ. ಅಧಿಕಾರವನ್ನು ಬಹಳ ಜವಾಬ್ದಾರಿಯಿಂದ ನಿರ್ವಹಿಸಿ, ನುಡಿದಂತೆ ನಡೆದು, ಉತ್ತಮ ಆಡಳಿತ ನೀಡುತ್ತಿದ್ದೇವೆ. ರಾಜ್ಯದ ಮುಖ್ಯಮಂತ್ರಿಗಳ, ಶಾಸಕರ, ಸಂಪುಟ ಸಹೋದ್ಯೋಗಿಗಳ ಪರವಾಗಿ ನಾನು ವಿಜಯದಶಮಿಯ ದಿನ ರಾಜ್ಯದ ಜನರಿಗೆ ಉತ್ತಮ‌ ಆಡಳಿತದ ಆಶ್ವಾಸನೆ ನೀಡುತ್ತೇನೆ ಎಂದು ಹೇಳಿದರು.

ವಿದ್ಯುತ್​ ಖರೀದಿ ಮಾಡಲು, ಈ ಬರಗಾಲದಲ್ಲಿ ವಿದ್ಯುತ್ ಅಭಾವವನ್ನು ಸೃಷ್ಟಿ ಮಾಡಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾರು ಅಂತಹ ಜ್ಞಾನ ಭಂಡಾರದಿಂದ, ಅನುಭವದ ಮಾತುಗಳನ್ನು ಆಡಿಸಿದರೊ ಗೊತ್ತಿಲ್ಲ. ನಮಗೆ ಚಿಂತೆಯಿಲ್ಲ ನಮ್ಮ ಜನರನ್ನು ಕಾಪಾಡುತ್ತೇವೆ, ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಉತ್ಪಾದನೆ ನಿಲ್ಲಬಾರದು ಎಂದು ಸೂಚನೆ ನೀಡಿದ್ದು, ಮಾತು ಕೊಟ್ಟಂತೆ ವಿದ್ಯುತ್ ನೀಡುತ್ತಿದ್ದೇವೆ. ಈ ವರ್ಷ ಬರಗಾಲ ಬಂದು 200ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಈ ಮೊದಲು 6 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. 2013ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ 7 ಗಂಟೆ ನೀಡಲು ತೀರ್ಮಾನ ಮಾಡಿತು. ಆದರೆ ನಂತರ ಸರ್ಕಾರಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡಲಿಲ್ಲ. ನಾವು ಏನೇ ತೊಂದರೆಯಾದರೂ ರೈತರಿಗೆ 5 ಗಂಟೆಗಳ ಕಾಲ ವಿದ್ಯುತ್ ನೀಡಲೇಬೇಕು ಎಂದು ಸೂಚನೆ ನೀಡಿದ್ದೇವೆ.

ಬಿಜೆಪಿಯಲ್ಲಿ ಇಷ್ಟುದಿನ ಇದ್ದಂತಹ ಗೊಂದಲ ದೂರವಾಗಿ 'ರಾಜ್ಯಾಧ್ಯಕ್ಷರಾಗಿ ಬಹುತೇಕ ಶೋಭಾ ಕರಂದ್ಲಾಜೆ' ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬೇರೆ ಪಕ್ಷದವರು ನಮ್ಮ ಪಕ್ಷದ ಬಗ್ಗೆ ಮಾತನಾಡಬಹುದು, ನಾನು ಮಾತನಾಡಲು ಹೋಗುವುದಿಲ್ಲ. ಅವರು ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಬಹಳ ಸಂತೋಷ. ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಪಕ್ಷದ ಅಧ್ಯಕ್ಷರ ಆಯ್ಕೆ ಪಕ್ಕಕ್ಕಿರಲಿ, ಆದರೆ ಐದು ತಿಂಗಳಾದರೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ.

ನಳಿನ್ ಕಟೀಲರು ಇನ್ನೂ ಅಧ್ಯಕ್ಷ ಸ್ಥಾನದಲ್ಲಿ ಇದ್ದಾರೆ. ವಿಧಾನಸಭಾ ಟಿಕೆಟ್ ಹಂಚಿಕೆ ವೇಳೆ ವ್ಯಾಪಾರ ನಡೆಯಿತು ಎಂದು ಬಿಜೆಪಿ ಪಕ್ಷದ ಕಾರ್ಯಕರ್ತರೇ ದೂರು ನೀಡಿ, ಎಫ್‌ಐಆರ್ ಆಗಿ, ತನಿಖೆ ಪ್ರಗತಿ ಹಂತದಲ್ಲಿದೆ. ಅಧ್ಯಕ್ಷ ಸ್ಥಾನ ಖಾಲಿಯಾಗಿಲ್ಲ, ಖಾಲಿಯಾದಾಗ ಮಾಡಬಹುದು. ಆದರೆ 65 ಸ್ಥಾನಗಳನ್ನು ಗೆದ್ದಂತಹ ಪಕ್ಷವೊಂದು ಚುನಾವಣೆ ಮುಗಿದು ಐದು ತಿಂಗಳಾದರೂ, ವಿರೋಧ ಪಕ್ಷದ ನಾಯಕನ್ನು ಆಯ್ಕೆ ಮಾಡಿಲ್ಲ ಎಂದರೆ ಪಕ್ಷದ ಒಳಗೆ ದೌರ್ಬಲ್ಯ ಏನಿದೆ ಎಂದು ನಾನು ಮಾತನಾಡಲು ಹೋಗುವುದಿಲ್ಲ ಎಂದರು.

ಹಾಗೇ ಮುಂದುವರೆದು, ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಶೋಭ ಕರಂದ್ಲಾಜೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸುತ್ತಾ, "ನಾವು ಜಾತಿ ಮೇಲೆ‌ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ". ನಮ್ಮ ಅಕ್ಕ ಅಧ್ಯಕ್ಷರಾದರೆ ಒಳ್ಳೆಯದಲ್ಲವೇ?. ಹಿರಿಯ ನಾಯಕರು, ಕೆಜೆಪಿ ಕಟ್ಟಿದ್ದಾರೆ, ಬಿಜೆಪಿ ಬೆಳೆಸಿದ್ದಾರೆ, ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ, ಅವರದೇ ಅನುಭವವಿದೆ, ಅವರು ಆದರೆ ಸಂತೋಷ ಎಂದು ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್ ಲೂಟಿ ಹೊಡೆದು ಬೇರೆ ರಾಜ್ಯಗಳಿಗೆ ಹಣ ಸಾಗಿಸುತ್ತಿದೆ: ಕೇಂದ್ರ ಸಚಿವ ಭಗವಂತ ಖೂಬಾ

ABOUT THE AUTHOR

...view details