ಕರ್ನಾಟಕ

karnataka

ನನ್ನ ತಂದೆಯನ್ನು ಅಪಘಾತದಲ್ಲಿ ಕಳೆದುಕೊಂಡ ನನಗೆ ಆ ನೋವಿನ ಅರಿವಿದೆ: ಕಾರು ಅಪಘಾತದ ಬಗ್ಗೆ ನಟ ನಾಗಭೂಷಣ ಮೊದಲ ಪ್ರತಿಕ್ರಿಯೆ

By ETV Bharat Karnataka Team

Published : Oct 9, 2023, 1:59 PM IST

Updated : Oct 9, 2023, 2:32 PM IST

ಕಾರು ಅಪಘಾತದಲ್ಲಿ ಮಹಿಳೆ ಮೃತ ಘಟನೆ ಬಗ್ಗೆ ನಟ ನಾಗಭೂಷಣ ಅವರು ಇಂದು ಮಾಹಿತಿ ನೀಡಿದರು.

Actor Nagabhushan
Actor Nagabhushan

ನಟ ನಾಗಭೂಷಣ ಮಾಧ್ಯಮಗೋಷ್ಟಿ

ಬೆಂಗಳೂರು: ತಮ್ಮ ಕಾರು ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿರುವುದರ ಕುರಿತು ನಟ ನಾಗಭೂಷಣ ವಿಷಾದ ವ್ಯಕ್ತಪಡಿಸಿದರು. 'ಅಪರಿಚಿತ ಚಾಲಕ ಎಸಗಿದ ಅಪಘಾತದಲ್ಲಿ ನಾನು ತಂದೆಯನ್ನು ಕಳೆದುಕೊಂಡಿರುವೆ. ಇನ್ನೂ ಆ ಅಪಘಾತ ಎಸಗಿದ ಚಾಲಕ ಯಾರೂ ಎನ್ನುವುದು ಸಹ ಗೊತ್ತಾಗಿಲ್ಲ. ಇನ್ನು ಇಲ್ಲಿ ಹೇಗೆ ಮೃತರ ಕುಟುಂಬದವರ ಮುಂದೆ ಹೋಗಿ ನಿಲ್ಲಲಿ? ಎಂದು ನಟ ಭಾವುಕರಾದರು.

ಮಾಧ್ಯಮಗೋಷ್ಟಿಯಲ್ಲಿ ಅವಘಡದ ಕುರಿತು ಮೊದಲ ಬಾರಿಗೆ ಮಾತನಾಡಿದ ನಾಗಭೂಷಣ್, 'ಬಹಳಷ್ಟು ಜನ ಅಪಘಾತದ ಕುರಿತು, ಆ ದಿನ‌ ಏನಾಯ್ತು ಎಂದು ನನ್ನ ಕಡೆಯಿಂದ ಸ್ಪಷ್ಟನೆ ಕೇಳಿದ್ದೀರಿ. ನಾನು ಮೊದಲೇ ನಿಮ್ಮ ಮುಂದೆ ಬಂದು ಮಾತನಾಡಬೇಕಿತ್ತು. ಆದರೆ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದರಿಂದ ಮಾತನಾಡಲು ಸಾಧ್ಯವಾಗಿರಲಿಲ್ಲ' ಎಂದರು.

ಹಿಟ್ & ರನ್ ಅಲ್ಲ, ನಾನೇ ಆಸ್ಪತ್ರೆಗೆ ದಾಖಲಿಸಿದ್ದೆ: ಅಪಘಾತದ ದಿನ ನಾನೇ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದೇನೆ. ಆ ದಿನ ಅಪಘಾತದ ರಭಸಕ್ಕೆ ನನ್ನ ಕಾರಿನ ಬಂಪರ್ ಕಿತ್ತು ಹೋಗಿದ್ದಲ್ಲ, ಜಖಂಗೊಂಡಿದ್ದ ಕಾರಿನ ಬಂಪರ್ ಕಿತ್ತು ಹಾಕಿ, ಅವರನ್ನು ಕಾರಲ್ಲಿ ಕರೆದೊಯ್ಯಲು ಯತ್ನಿಸಿದೆ. ಆದ್ರೆ ಸಾಧ್ಯವಾಗಲಿಲ್ಲ. ನಂತರ ಆಟೋದಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ಕರೆದೊಯ್ದೆ. ಮಾರ್ಗ ಮಧ್ಯದಲ್ಲಿ ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಆದರೆ ಆ ಮಹಿಳೆ ಮೃತಪಟ್ಟಿದ್ದಾರೆ ಎಂದು ಕೇಳಿದಾಗ ಆ ಕ್ಷಣ ನಾನೇ ಕುಸಿದು ಹೋಗಿದ್ದೆ. ನಂತರ ಪೊಲೀಸರು ಬಂದು ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನ ಮಾಡಿದರು, ಬೆಳಗ್ಗೆ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು ಎಂದು ಆ ದಿನದ ಘಟನೆಯನ್ನು ವಿವರಿಸಿದರು.

ತಂದೆಯನ್ನ ಅಪಘಾತದಲ್ಲಿ ಕಳೆದುಕೊಂಡ ನನಗೆ ಆ ನೋವಿನ ಅರಿವಿದೆ: ಅಪಘಾತದ ಬಳಿಕ ಆ ಕ್ಷಣದಲ್ಲಿ ಒಬ್ಬ ಮನುಷ್ಯನಾಗಿ ನಾನು ಏನು ಮಾಡಲು ಸಾಧ್ಯ ಅದೆಲ್ಲವನ್ನ ಮಾಡಿದ್ದೀನಿ. ಯಾಕಂದರೆ ಆ ನೋವು ಏನು ಎಂಬುದು ನನಗೆ ಗೊತ್ತು. ನಾನೂ ಸಹ ನನ್ನ ತಂದೆಯನ್ನ ನಾನು ಅಪಘಾತದಲ್ಲಿ ಕಳೆದುಕೊಂಡೆ. ಆ ಪರಿಸ್ಥಿತಿ ಅನುಭವಿಸಿರುವುದರಿಂದ ಈ ನೋವಿನಲ್ಲಿ ಮೃತರ ಕುಟುಂಬದ ಜೊತೆ ಇದ್ದೇನೆ ಎಂದರು.

ಹಿಟ್ & ರನ್ ಅಲ್ಲ, ನಾನು ಓಡಿ ಹೋಗಿರಲಿಲ್ಲ:ದಯವಿಟ್ಟು ಯಾರಿಂದಲೇ ಅಪಘಾತವಾದರೂ ಓಡಿ ಹೋಗಬೇಡಿ. ‌ಯಾಕಂದ್ರೆ ಅವರಿಗೋಸ್ಕರ ಅವರ ಕುಟುಂಬ ಕಾಯುತ್ತಿರುತ್ತೆ. ನಾನು ಅವರ ಕುಟುಂಬವನ್ನು ಭೇಟಿಯಾಗಿಲ್ಲ. ನನ್ನಿಂದ ಒಂದು ಜೀವ ಹೋಗಿದೆ. ಹೇಗೆ ನಾನು ಅವರ ಮುಂದೆ ಹೋಗಿ ನಿಲ್ಲಲಿ? ಎಂದು ನಾಗಭೂಷಣ ಭಾವುಕರಾದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನಾಗಭೂಷಣ ಪರ ವಕೀಲ ದಿಲೀಪ್ ಕುಮಾರ್, 'ಇಷ್ಟು ದಿನ ಕಾರಣಾಂತರಗಳಿಂದ ಪ್ರತಿಕ್ರಿಯೆ ಕೊಡದಿರುವುದಕ್ಕೆ ಕ್ಷಮಾಪಣೆ ಕೇಳುತ್ತಿದ್ದೇವೆ. ಅಪಘಾತದಲ್ಲಿ ಮೃತರ‌ ಕುಟುಂಬದೊಂದಿಗೆ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇವೆ. ಅವರಿಗೆ ಸಾಂತ್ವನ ಹೇಳಬೇಕು, ಆ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದೇವೆ' ಎಂದರು.

ನಗರದ ಕೋಣನಕುಂಟೆ ಕ್ರಾಸ್ ಬಳಿ ಸೆಪ್ಟಂಬರ್ 30 ರ ರಾತ್ರಿ ನಡೆದ ಕಾರು ಅಪಘಾತ ಪ್ರಕರಣ ಕುರಿತು ನಟ ನಾಗಭೂಷಣ ಮತ್ತು ಅವರ ಪರ ವಕೀಲ ದಿಲೀಪ್ ಕುಮಾರ್ ಮಾಧ್ಯಮಗೋಷ್ಟಿ ನಡೆಸಿ ಅಂದು ನಡೆದ ಘಟನೆಯ ಕುರಿತು ಮಾಹಿತಿ ನೀಡಿದರು.

ನಟ ನಾಗಭೂಷಣ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಪರಿಣಾಮ ಪ್ರೇಮ (48) ಎಂಬ ಮಹಿಳೆ ಮೃತಪಟ್ಟು, ಅವರ ಪತಿ ಕೃಷ್ಣ (58) ಗಾಯಗೊಂಡಿದ್ದರು. ಈ ಕುರಿತು ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಸಂಬಂಧ ನಟ ನಾಗಭೂಷಣ ಅವರನ್ನು ಪೊಲೀಸರು ವಿಚಾರಣೆ ಮಾಡಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಕಾರು ಅಪಘಾತ ಪ್ರಕರಣ: ನಟ ನಾಗಭೂಷಣ್ ಠಾಣಾ ಜಾಮೀನಿನ ಮೇಲೆ ಬಿಡುಗಡೆ- ಡಿಸಿಪಿ

Last Updated : Oct 9, 2023, 2:32 PM IST

ABOUT THE AUTHOR

...view details