ಕರ್ನಾಟಕ

karnataka

ಕಳ್ಳನೊಂದಿಗೆ ಶಾಮೀಲಾಗಿ ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ರೈಲ್ವೆ ಹೆಡ್​ಕಾನ್ಸ್​ಟೇಬಲ್​ ಅರೆಸ್ಟ್

By ETV Bharat Karnataka Team

Published : Nov 6, 2023, 10:24 PM IST

ಕಳ್ಳನೊಂದಿಗೆ ಸೇರಿ ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ರೈಲ್ವೆ ಹೆಡ್​ಕಾನ್ಸ್​ಟೇಬಲ್​​​ನನ್ನ ಬೆಂಗಳೂರು ದಂಡು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆರೋಪಿಗಳು
ಆರೋಪಿಗಳು

ಬೆಂಗಳೂರು :ಬೇಲಿಯೇ ಎದ್ದು ಹೊಲ ಮೇಯ್ದಂತೆ ಖದೀಮರನ್ನ ಸದೆ ಬಡಿಯಬೇಕಾದ ರೈಲ್ವೇ ಹೆಡ್​ಕಾನ್ಸ್​ಟೇಬಲ್​ ಬಬ್ಬರನ್ನು ಕಳ್ಳನೊಂದಿಗೆ ಶಾಮೀಲಾಗಿ ರೈಲುಗಳಲ್ಲಿ ಕಳ್ಳತನವೆಸಗುತ್ತಿದ್ದ ಜಾಲವನ್ನ ಬೆಂಗಳೂರು ದಂಡು ರೈಲ್ವೇ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಚಿಕ್ಕಬಳ್ಳಾಪುರ ರೈಲ್ವೆ ಹೊರ ಪೊಲೀಸ್ ಠಾಣೆಯಲ್ಲಿ ಹೆಡ್​ಕಾನ್ಸ್​ಟೇಬಲ್ ಆಗಿರುವ ಸಿದ್ದರಾಮರೆಡ್ಡಿ ಹಾಗೂ ಖದೀಮ ಸಾಬಣ್ಣ ಎಂಬುವರನ್ನ ಬಂಧಿಸಿ, ಪೊಲೀಸ್ ಕಸ್ಟಡಿ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. 2011ರ ಬ್ಯಾಚ್ ಸಿಬ್ಬಂದಿಯಾಗಿದ್ದ ಸಿದ್ದರಾಮರೆಡ್ಡಿ, ರೈಲ್ವೇ ಹೆಡ್​ಕಾನ್ಸ್​ಟೇಬಲ್ ಆಗಿ ರಾಯಚೂರಿನಲ್ಲಿ ಸೇವೆಗೆ ಸೇರಿದ್ದರು. ಸಾಬಣ್ಣ ಸಹ ರಾಯಚೂರು ಮೂಲದವನಾಗಿದ್ದು, ಇಬ್ಬರ ನಡುವೆ ಪರಿಚಯವಾಗಿತ್ತು. ಕಾಲ ಕ್ರಮೇಣ ಹೆಡ್​ಕಾನ್ಸ್​ಟೇಬಲ್ ಆಗಿ ಬಡ್ತಿ ಪಡೆದು ಸಿದ್ದರಾಮ ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದ. ಮತ್ತೊಂದೆಡೆ ಸಾಬಣ್ಣ ಬೆಂಗಳೂರಿನ ಚಿಕ್ಕಬಾಣವಾರ ಬಳಿ ಮನೆ ಮಾಡಿಕೊಂಡಿದ್ದ. ಈ ಮಧ್ಯೆ ಇಬ್ಬರ ನಡುವೆ ಸಂಪರ್ಕ ಬೆಸೆದುಕೊಂಡಿದ್ದರು.

ಕಾನ್ಸ್​ಟೇಬಲ್ ಸೂಚನೆ ಮೇರೆಗೆ ಕಳ್ಳತನ:ಕಳೆದ ಆಗಸ್ಟ್ 23ರಂದು ತ್ರಿಶೂರ್​ನಿಂದ ನಗರದ ಬೈಯ್ಯಪ್ಪನಹಳ್ಳಿಯ ಸರ್. ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ‌ ಬಂದಿದ್ದ ರೈಲಿನಲ್ಲಿ ನಿದ್ದೆಯ ಮಂಪರಿನಲ್ಲಿರುವಾಗಲೇ ಪ್ರಯಾಣಿಕರೊಬ್ಬರ ಬ್ಯಾಗ್​ನಲ್ಲಿದ್ದ 168 ಗ್ರಾಂ ಬಂಗಾರ, ಎರಡು ಮೊಬೈಲ್ ಕಸಿದು ಸಾಬಣ್ಣ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಂಟೊನ್ಮೆಂಟ್ ರೈಲ್ವೇ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಎಂ ಜಿ ನಟರಾಜ್ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು. ಕೆ. ಆರ್ ಪುರ ರೈಲ್ವೇ ನಿಲ್ದಾಣ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಸಾಬಣ್ಣನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ‌ ಕೃತ್ಯವೆಸಗಿರುವ ಬಗ್ಗೆ ಬಾಯ್ಬಿಟ್ಟಿದ್ದಾ‌ನೆ.‌ ಕೃತ್ಯದಲ್ಲಿ ಹೆಡ್​ಕಾನ್ಸ್​ಟೇಬಲ್ ಭಾಗಿಯಾಗಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ.

ವಿಚಾರಣೆ ವೇಳೆ‌ ಆರೋಪಿಯು ಹೆಡ್​ಕಾನ್ಸ್​ಟೇಬಲ್ ಹೆಸರು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಸಿದ್ದರಾಮನನ್ನ ವಶಕ್ಕೆ ಪಡೆದು ಪ್ರಶ್ನಿಸಿದಾಗ ಕೃತ್ಯವೆಸಗಿರುವುದನ್ನ ಒಪ್ಪಿಕೊಂಡಿದ್ದಾನೆ‌.‌ ಆರೋಪಿ ಸಾಬಣ್ಣ ರಾಯಚೂರು ಮಾತ್ರವಲ್ಲದೇ ನಗರದ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಗೊತ್ತಾಗಿದೆ.

ಕಳ್ಳತನ ಮಾಡಿದ‌ ಹಣ ಸಮನಾಗಿ ಹಂಚಿಕೊಳ್ಳುತಿದ್ರು. ಕೆ. ಆರ್‌ ಪುರ, ಯಶವಂತಪುರ, ಬಾಣಸವಾಡಿ ಹಾಗೂ ಯಲಹಂಕ ರೈಲು ನಿಲ್ದಾಣಗಳಲ್ಲಿ ಬೆಳಗ್ಗಿನ ಅವಧಿಯಲ್ಲಿ ಹೋಗಿ ಪ್ರಯಾಣಿಕರು ನಿದ್ದೆ ಮಂಪರಿನಲ್ಲಿರುವಾಗಲೇ ನಗ-ನಾಣ್ಯವಿರುವ ಬ್ಯಾಗ್​ಗಳನ್ನ ದೋಚುತ್ತಿದ್ದರು. ಕದ್ದ ಹಣವನ್ನ ಹೆಡ್​ಕಾನ್ಸ್​ಟೇಬಲ್ ನೊಂದಿಗೆ ಸಾಬಣ್ಣ ಹಂಚಿಕೊಳ್ಳುತ್ತಿದ್ದ. ಬ್ಯಾಗ್​ನಲ್ಲಿ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನ‌ ಗಿಡಗಂಟೆಗಳಲ್ಲಿ ಬಿಸಾಕುತ್ತಿದ್ದರು.

ಸಾಲ ತೀರಿಸಲು ಇಬ್ಬರು ಅಪರಾಧ‌ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಅಲ್ಲದೆ‌‌ ಜೂಜಾಟದಲ್ಲಿ ಕದ್ದ ಹಣವನ್ನ ವಿನಿಯೋಗಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ರಾಯಚೂರಿನಲ್ಲಿ ಕರ್ತವ್ಯನಿರತನಾಗಿದ್ದಾಗ ಅಲ್ಲಿ ಏನಾದರೂ ಕಳ್ಳತನ‌ ಕೃತ್ಯಗಳಲ್ಲಿ ಭಾಗಿಯಾಗಿದ್ದನಾ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಂಧನ ಹಿನ್ನೆಲೆಯಲ್ಲಿ ಹೆಡ್ ಹೆಡ್​ಕಾನ್ಸ್​ಟೇಬಲ್ ನನ್ನ ಅಮಾನತುಗೊಳಿಸಲಾಗಿದೆ ಎಂದು ರೈಲ್ವೆ ಎಸ್ಪಿ ಡಾ ಸೌಮ್ಯಲತಾ ತಿಳಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಸಿಇಎನ್ ಪೊಲೀಸರ ದಾಳಿ: ಜೂಜಾಟದಲ್ಲಿ ತೊಡಗಿದ್ದ 70 ಮಂದಿ ಬಂಧನ

ABOUT THE AUTHOR

...view details