ಕರ್ನಾಟಕ

karnataka

ಬೀದಿ ನಾಯಿಗಳಿಗೆ ಊಟ ಹಾಕುವ ವಿಚಾರಕ್ಕೆ ಮಾರಾಮಾರಿ: ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್

By

Published : May 18, 2023, 1:02 PM IST

ಬೀದಿ ನಾಯಿಗಳಿಗೆ ಊಟ ಹಾಕಿದ್ದಕ್ಕೆ ಜಗಳವಾಗಿ ಅದೀಗ ಪೊಲೀಸ್​ ಪ್ರಕರಣವಾಗಿ ತನಿಖೆ ನಡೆಯುತ್ತಿದೆ.

fight
ಬೀದಿ ನಾಯಿ ವಿಚಾರ ಗಲಾಟೆ

ಬೆಂಗಳೂರು: ಬೀದಿ ನಾಯಿಗಳಿಗೆ ಊಟ ಹಾಕುವ ವಿಚಾರಕ್ಕೆ ಆರಂಭವಾದ ಜಟಾಪಟಿ ಪೊಲೀಸ್ ಠಾಣಾ ಮೆಟ್ಟಿಲೇರಿರುವ ಘಟನೆ ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯ ಕೊಕೊನಟ್ ಗಾರ್ಡನ್‌ನಲ್ಲಿ ಮೇ 14ರಂದು ರಾತ್ರಿ ನಡೆದಿದ್ದು, ತಡವಾಗಿ ಬೆಳಗೆ ಬಂದಿದೆ. ಐಶ್ವರ್ಯ ಎಂಬುವರು ನಿತ್ಯ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದು, ತನಗೆ ಹುಷಾರಿಲ್ಲದ ಕಾರಣ ನಾಯಿಗಳಿಗೆ ಊಟ ಹಾಕುವಂತೆ ಸ್ನೇಹಿತೆ ಯಮುನಾಗೆ ಹೇಳಿದ್ದರು.

ಮೇ 14ರಂದು ರಾತ್ರಿ ಯಮುನಾ, ನಾಯಿಗಳಿಗೆ ಊಟ ಹಾಕುತ್ತಿದ್ದಂತೆ ಬಂದು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ನಂದನ್, ಲಕ್ಷ್ಮೀ ಎಂಬುವವರು ಸೇರಿದಂತೆ ನಾಲ್ವರ ವಿರುದ್ಧ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಬೀದಿ ನಾಯಿಗಳಿಂದಾಗಿ ಏರಿಯಾದ ಜನ ಬೇಸತ್ತಿದ್ದು ನಾಯಿಗಳಿಗೆ ಊಟ ಹಾಕುವುದರಿಂದ ಅವುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಮಕ್ಕಳನ್ನು ಹೊರಗಡೆ ಆಟಕ್ಕೆ ಬಿಡಲು ಸಹ ಭಯವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸದ್ಯ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

ನಾಯಿ ಗಲೀಜು ವಿಚಾರಕ್ಕೆ ವೃದ್ಧನ ಹತ್ಯೆ: ಕಳೆದ ತಿಂಗಳ ಎಪ್ರಿಲ್​ನಲ್ಲಿ ಸಾಕು ನಾಯಿ ಗಲೀಜಿನ ವಿಚಾರಕ್ಕೆ ವೃದ್ಧನ ಹತ್ಯೆಯೇ ನಡೆದಿದೆ. ಬೆಂಗಳೂರಿನ ಯಲಹಂಕ ಮೂಲದ ಮುನಿರಾಜು ನಗರದಲ್ಲೇ ಕುಟುಂಬ ಸಮೇತ ವಾಸಿಸುತ್ತಿದ್ದರು. ಅದೇ ಏರಿಯಾದಲ್ಲಿ ರವಿಕುಮಾರ್ ಎಂಬಾತ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಲ್ಲದೇ ನಾಯಿಗಳನ್ನು ಸಾಕಿಕೊಂಡಿದ್ದರು. ಈ ರವಿ ತನ್ನ ನಾಯಿಗಳನ್ನು ಮುನಿರಾಜು ಅವರ ಮನೆ ಮುಂದೆ ಕರೆದೊಯ್ದು ಮಲ ಮೂತ್ರ ಮಾಡಿಸುತ್ತಿದ್ದರು. ಅಲ್ಲದೇ ಅದೇ ಜಾಗದಲ್ಲಿ ಸಿಗರೇಟ್​ ಸೇದುತ್ತಿದ್ದ ಎಂದು ರವಿ ಮತ್ತು ಮುನಿರಾಜು ನಡುವೆ ಆಗಾಗ್ಗೆ ಮಾತಿನ ಚಕಮಕಿ ನಡೆದಿತ್ತು.

ಈ ಕುರಿತು ಮುನಿರಾಜು ರವಿ ವಿರುದ್ಧ ಪೊಲೀಸ್​ ಠಾಣೆಗೆ ತೆರಳಿ ದೂರು ಸಹ ನೀಡಿದ್ದರು. ಇದರಿಂದ ಪೊಲೀಸರು ಇಬ್ಬರನ್ನು ಕರೆಯಿಸಿ ಮಾತುಕತೆ ಮೂಲಕ ಮುಚ್ಚಳಿಕೆ ಬರೆಸಿಕೊಂಡಿದ್ದರು. ಆದರೆ ಮಾರನೆಯ ದಿನ ಪುನಃ ಇದೇ ವಿಚಾರಕ್ಕೆ ಗಲಾಟೆ ನಡೆದಿತ್ತು. ಸಂದರ್ಭದಲ್ಲಿ ಮುನಿರಾಜು ಪರವಾಗಿದ್ದ ಮುರಳಿ ಎಂಬುವವರನ್ನು ನಿಂದಿಸಿ ತಲೆಗೆ ಬ್ಯಾಟ್​ನಿಂದ ಹಲ್ಲೆ ಮಾಡಿದ ರವಿ ಹಾಗು ಅವರ ಗೆಳೆಯ ಪ್ರಮೋದ್​ ಮುನಿರಾಜುವಿಗೂ ಸಹ ಬ್ಯಾಟ್​ನಿಂದ ಹಲ್ಲೆ ನಡೆಸಿದ್ದರು. ಪರಿಣಾಮ ಮುನಿರಾಜು ಮೃತಪಟ್ಟರೆ, ಮುರುಳಿಯನ್ನು ತುರ್ತುನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಹಾಗೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ವೈದ್ಯರಿಗೆ ಕಚ್ಚಿದ ಬೀದಿ ನಾಯಿ: ಇಲ್ಲಿನ ಕಿಂಗ್​ ಜಾರ್ಜ್​ ವೈದ್ಯಕೀಯ ವಿಶ್ವವಿದ್ಯಾಲಯ (ಕೆಜಿಎಂಯು) ಕ್ಯಾಂಪಸ್​ ಬೀದಿ ನಾಯಿಯೊಂದು ಮೊನ್ನೆ ತಾನೇ ಇಬ್ಬರು ವೈದ್ಯರು ಸೇರಿದಂತೆ ಒಟ್ಟು ಐದು ಜನರ ಮೇಲೆ ದಾಳಿ ನಡೆಸಿತ್ತು. ದಾಳಿ ನಡೆಸಿದ ನಾಯಿ ರೇಬಿಸ್​ನಿಂದ ಬಳಲುತ್ತಿದ್ದು, ಆ ದಿನವೇ ಸಾವನ್ನಪ್ಪಿದೆ. ಈ ಘಟನೆ ಉತ್ತರ ಪ್ರದೇಶ ರಾಜ್ಯದಲ್ಲಿ ಒಂದೇ ವರ್ಷದಲ್ಲಿ ದಾಖಲೆಯಾದ 16 ನೇ ಪ್ರಮುಖ ಬೀದಿ ನಾಯಿ ದಾಳಿ ಪ್ರಕರಣ ಇದಾಗಿತ್ತು.

ಇದನ್ನೂ ಓದಿ:ವೈದ್ಯಕೀಯ ವಿವಿ ಕ್ಯಾಂಪಸ್‌ನಲ್ಲಿ ವೈದ್ಯರು ಸೇರಿ ಐವರಿಗೆ ಕಚ್ಚಿದ ಬೀದಿನಾಯಿ

ABOUT THE AUTHOR

...view details