ಕರ್ನಾಟಕ

karnataka

ರಾಜ್ಯದಲ್ಲಿ SSLC ಪರೀಕ್ಷೆ ಸುಸೂತ್ರ: ಶೇ. 99.64 ವಿದ್ಯಾರ್ಥಿಗಳು ಹಾಜರು

By

Published : Jul 19, 2021, 7:41 PM IST

ಇಂದು SSLC ಮೊದಲ ದಿನದ ಪರೀಕ್ಷೆಗಳು ಅಡತಡೆಯಿಲ್ಲದೆ ಮುಕ್ತಾಯವಾಗಿವೆ. ಜು. 22 ರಂದು ಎಸ್ಎಸ್ಎಲ್​ಸಿ ಪರೀಕ್ಷೆ ಮುಗಿಯಲಿದ್ದು, ಮೌಲ್ಯ ಮಾಪನ ಪ್ರಕ್ರಿಯೆಯನ್ನ ಶುರು ಮಾಡಲಾಗುವುದು. ಹಾಗೇ ಆ. 10ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್​​ ತಿಳಿಸಿದರು. ‌

SSLC exam
SSLC ಪರೀಕ್ಷೆ ಸುಸೂತ್ರ

ಬೆಂಗಳೂರು: ರಾಜ್ಯದಲ್ಲಿಂದು SSLC ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಪರೀಕ್ಷೆ ಕುರಿತ ವಿವರಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸಮಗ್ರ ಶಿಕ್ಷಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ವಿವರಣೆ ನೀಡಿದರು.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು.‌ ಕಳೆದ ಬಾರಿ ಶೇ. 98.30 ರಷ್ಟು ಹಾಜರಾಗಿದ್ದರೆ, ಈ ಬಾರಿ ಶೇ. 99.64% ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದಾರೆ.

ವಿಷಯವಾರು ಹಾಜರು ಮಾಹಿತಿ ಹೀಗಿದೆ..

ಗಣಿತ ವಿಷಯ:

7,83,882 ಫ್ರೆಶರ್ಸ್ ನೋಂದಣಿಯಾಗಿದ್ದು, ಸುಮಾರು 7,81,531 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಒಟ್ಟು 2,352 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಾಗೇ 21,803 ಖಾಸಗಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ 21,548 ವಿದ್ಯಾರ್ಥಿಗಳು ಹಾಜರಾಗಿ, 255 ಮಕ್ಕಳು ಗೈರಾಗಿದ್ದಾರೆ. 46,506 ಪುನರಾವರ್ತಿತ ವಿದ್ಯಾರ್ಥಿಗಳು ನೋಂದಣಿಯಾಗಿದ್ದರೆ 46,121 ಹಾಜರಾಗಿ 385 ಮಂದಿ ಗೈರು ಹಾಜರಾಗಿದ್ದಾರೆ. ಈ ಮೂರು ವಿಭಾಗವಾರು ಸೇರಿ 8,52,191 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದು, 8,49,191 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಉಳಿದಂತೆ 2,992 ವಿದ್ಯಾರ್ಥಿಗಳು ಗೈರಾಗಿದ್ದಾರೆ‌.

ವಿಜ್ಞಾನ ವಿಷಯ:

8,43,976 ನೋಂದಣಿಯಾಗಿದ್ದು, 8,40,841 (ಶೇ. 99.62) ಪರೀಕ್ಷೆ ಬರೆದಿದ್ದಾರೆ. 3127 ಮಂದಿ ಗೈರಾಗಿದ್ದಾರೆ‌.

ಸಮಾಜ ವಿಜ್ಞಾನ ವಿಷಯ: 8,24,689 ನೋಂದಣಿಯಾಗಿದ್ದರೆ, 8,21,823 ವಿದ್ಯಾರ್ಥಿಗಳು (ಶೇ.99.68) ಹಾಜರಾಗಿದ್ದಾರೆ. 2867 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಕೋವಿಡ್ ಕೇರ್ ಸೆಂಟರ್​​ನಲ್ಲಿ ಪರೀಕ್ಷೆ ಬರೆದ 58 ವಿದ್ಯಾರ್ಥಿಗಳು:

ರಾಜ್ಯದಲ್ಲಿ ಅನಾರೋಗ್ಯ ಕಾರಣಕ್ಕೆ ವಿಶೇಷ ಕೊಠಡಿಯಲ್ಲಿ 111 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡ್ ಪಾಸಿಟಿವ್ ಇದ್ದರೂ ಪಾಸಿಟಿವ್ ಮೈಂಡ್ ಮೂಲಕ ಹತ್ತಿರದ ಕೋವಿಡ್ ಕೇರ್ ಸೆಂಟರ್​​ನಲ್ಲಿ 58 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.‌

ಯಾವ ಭಾಗದಲ್ಲಿ ಎಷ್ಟು?:

ಬೆಂಗಳೂರು ಉತ್ತರ-1, ಬೆಂಗಳೂರು ದಕ್ಷಿಣ-2, ಮೈಸೂರು-1, ಮಂಡ್ಯ- 4 ಉಡುಪಿ-3, ಮಂಗಳೂರು-14, ಕೊಡುಗು-5, ಚಿತ್ರದುರ್ಗ-7, ಚಿಕ್ಕಮಗಳೂರು-7, ಶಿವಮೊಗ್ಗ-1, ಹಾಸನ-3, ಗದಗ-1,ಬೆಳಗಾವಿ-2, ಉತ್ತರಕನ್ನಡ-5, ಕಲಬುರಗಿ-1, ಕೊಪ್ಪಳ-1 ವಿದ್ಯಾರ್ಥಿಗಳು ಕೊರೊನಾ ಪಾಸಿಟಿವ್ ಇದ್ದರೂ ಪರೀಕ್ಷೆ ಬರೆದಿದ್ದಾರೆ.

ಹಾಸ್ಟೆಲ್​​ ನಿಂದ 2,870 ಬಂದು ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ, ಸುಮಾರು 10,693 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ನೆರೆ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ಗೋವಾ, ತಮಿಳುನಾಡಿನಿಂದ ಬಂದು, 760 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಆ. 10ರೊಳಗೆ SSLC ಪರೀಕ್ಷಾ ಫಲಿತಾಂಶ ನಿರೀಕ್ಷೆ:

ಜು. 22 ರಂದು ಎಸ್ಎಸ್ಎಲ್​ಸಿ ಪರೀಕ್ಷೆ ಮುಗಿಯಲಿದ್ದು, ಮೌಲ್ಯಮಾಪನ ಪ್ರಕ್ರಿಯೆಯನ್ನ ಶುರು ಮಾಡಲಾಗುವುದು. ಹಾಗೇ ಆ. 10ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್​​ ತಿಳಿಸಿದರು. ‌ಈ ಹಿಂದೆ ಉತ್ತರ ಪತ್ರಿಕೆ ಮೌಲ್ಯ ಮಾಪನಕ್ಕೆ ಒಂದು ತಿಂಗಳ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಓಎಂಆರ್​​ ಶೀಟ್ ಆಗಿರುವುದರಿಂದ 15 ದಿನದೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ:

ಎಸ್ಎಸ್ಎಲ್​​ಸಿ ಹಾಗೂ ಪ್ರಥಮ ಪಿಯುಸಿಯ ಅಂಕಗಳ ಆಧಾರದ ಮೇಲೆ ನಾಳೆ ದ್ವಿತೀಯ ಪಿಯುಸಿ ಫಲಿತಾಂಶವನ್ನ ನೀಡಲಾಗುತ್ತಿದೆ. ನಾಳೆ ಮಧ್ಯಾಹ್ನ 4-00ಕ್ಕೆ ಫಲಿತಾಂಶ ಪ್ರಕಟಿಸಲಾಗುವುದು. ಹಾಗೇ 5 ಗಂಟೆ ನಂತರ ಇ ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ ಸೈಟ್ www.pue.kar.nic.in ನಲ್ಲಿ ಫಲಿತಾಂಶ ಲಭ್ಯವಿರಲಿದೆ ಎಂದು ಸಚಿವ ಸುರೇಶ್ ಕುಮಾರ್ ಇದೇ ವೇಳೆ ಮಾಹಿತಿ ನೀಡಿದರು.

ಇದನ್ನೂ ಓದಿ: ಮೊದಲ ದಿನದ SSLC ಪರೀಕ್ಷೆ ಮುಕ್ತಾಯ: ಮೆಲು ಧ್ವನಿಯಲ್ಲೇ ವಿದ್ಯಾರ್ಥಿಗಳನ್ನು ಮಾತನಾಡಿಸಿದ ಶಿಕ್ಷಣ ಸಚಿವರು

ABOUT THE AUTHOR

...view details