ಕರ್ನಾಟಕ

karnataka

ಹಾಲಶ್ರೀ ಮಠದಲ್ಲಿದ್ದ 56 ಲಕ್ಷ ಸೇರಿ 76 ಲಕ್ಷ ನಗದು ವಶ: ಚೈತ್ರಾಳಿಂದ 2 ಕೋಟಿ ಹಣ, ಚಿನ್ನಾಭರಣ ಜಪ್ತಿ- ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ

By ETV Bharat Karnataka Team

Published : Sep 21, 2023, 3:30 PM IST

Updated : Sep 21, 2023, 4:23 PM IST

ಚೈತ್ರಾ ಕುಂದಾಪುರ ಅವರಿಂದ 2 ಕೋಟಿ ಹಣ, ಚಿನ್ನಾಭರಣ ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಬಿ ದಯಾನಂದ
ನಗರ ಪೊಲೀಸ್ ಆಯುಕ್ತ ಬಿ ದಯಾನಂದ

ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ಮಾತನಾಡಿದ್ದಾರೆ

ಬೆಂಗಳೂರು :ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದಡಿ ಬಂಧಿತರಾಗಿರುವ 8 ಮಂದಿ ಆರೋಪಿಗಳ ವಿಚಾರಣೆಯನ್ನ ಸಿಸಿಬಿ ತನಿಖಾಧಿಕಾರಿಗಳು ಚುರುಕುಗೊಳಿಸಿದ್ದಾರೆ. ಹಾಲಶ್ರೀ ಮಠಕ್ಕೆ ಹಣ ತಲುಪಿಸುವಂತೆ ಆರೋಪಿತ ಅಭಿನವ ಹಾಲಶ್ರೀ ಚಾಲಕ ರಾಜು ಎಂಬಾತ ತನಗೆ 56 ಲಕ್ಷವನ್ನ ನೀಡಿರುವ ಬಗ್ಗೆ ಪ್ರಣವ್ ಎಂಬುವರು ಮಠಕ್ಕೆ ಹಣ ತಲುಪಿಸಿರುವ ಕುರಿತು ನಿನ್ನೆ ವಿಡಿಯೋ ಮಾಡಿದ್ದರು. ಬಳಿಕ ಸಿಸಿಬಿಗೂ ಮಾಹಿತಿ ನೀಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತಗೊಂಡ ಸಿಸಿಬಿ ಹಿರೇಹಡಗಲಿಯ ಹಾಲಶ್ರೀ‌ ಮಠಕ್ಕೆ‌ ತೆರಳಿ 56 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮತ್ತೊಂದೆಡೆ ಆಡುಗೋಡಿಯ ಟೆಕ್ನಿಕಲ್ ಸೆಂಟರ್​ನಲ್ಲಿ‌ ವಿಚಾರಣೆ ಎದುರಿಸುತ್ತಿರುವ ಹಾಲಶ್ರೀ, ಉದ್ಯಮಿ ಗೋವಿಂದ ಬಾಬು‌ ಪೂಜಾರಿಯಿಂದ ಟಿಕೆಟ್ ಕೊಡಿಸುವುದಾಗಿ 1.50 ಕೋಟಿ ಹಣ ಪಡೆದಿದ್ದರು. ಈ ಪೈಕಿ 56 ಲಕ್ಷ ಹಣ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಹತ್ತಾರು ಎಕರೆಗಳನ್ನು 21 ಲಕ್ಷ ಹಣ ನೀಡಿ ಲೀಜ್‌ಗೆ ಪಡೆದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಬಂಧಿತ ವ್ಯಕ್ತಿಯಿಂದ 21 ಲಕ್ಷ ಹಣ ವಶಕ್ಕೆ‌ ಪಡೆಯಲಾಗಿದೆ.‌ ಬಾಕಿ ಉಳಿದ ಹಣ ಎಲ್ಲಿದೆ‌? ಬೇರೆಯವರ ಮೂಲಕ ಹಣ ಹೂಡಿಕೆ ಮಾಡಲಾಗಿದೆಯಾ? ಎಂಬುದರ ಬಗ್ಗೆ ಸ್ವಾಮೀಜಿಯನ್ನು ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಪ್ರತಿಕ್ರಿಯಿಸಿದ್ದು, ವಂಚನೆ ಪ್ರಕರಣದಲ್ಲಿ ಈವರೆಗೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಆರೋಪಿ ಚೈತ್ರಾ ಕುಂದಾಪುರಳಿಂದ 2 ಕೋಟಿ ರೂ. ಹಣ, ಚಿನ್ನಾಭರಣ ಹಾಗೂ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ, ಹಾಲಶ್ರೀಯಿಂದ ಮಠದಲ್ಲಿ 56 ಲಕ್ಷ ಹಣ ಹಾಗೂ ಸಂಬಂಧಿತ ವ್ಯಕ್ತಿಯಿಂದ 20 ಲಕ್ಷ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಣವ್ ಪ್ರಸಾದ್, ತಿಪ್ಪೇಸ್ವಾಮಿ ಸೇರಿದಂತೆ ನಾಲ್ವರಿಗೆ ಸಿಸಿಬಿ ನೋಟಿಸ್ ನೀಡಿದ್ದು, ಇದರಂತೆ ಸದ್ಯ ಪ್ರಣವ್ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿಸಿದರು.

ಆರೋಪಿಗಳ ಬ್ಯಾಂಕ್ ಖಾತೆ ಸ್ಥಗಿತ, ಕಾರು ಜಪ್ತಿ :ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಹಂತ-ಹಂತವಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿಗಳ ಆಸ್ತಿ ಶೋಧ ಪ್ರಕ್ರಿಯೆಯನ್ನು ಸಿಸಿಬಿ ಪೊಲೀಸರು (ಸೆಪ್ಟೆಂಬರ್ 18-2023) ಮುಂದುವರಿಸಿದ್ದರು. ಆರೋಪಿಗಳ ಬ್ಯಾಂಕ್‌ ಖಾತೆಯಲ್ಲಿದ್ದ ಠೇವಣಿ ಹಾಗೂ ಕಾರು ಜಪ್ತಿ ಮಾಡಲಾಗಿತ್ತು. ಶನಿವಾರ 81 ಲಕ್ಷ ನಗದು ಜಪ್ತಿ ಮಾಡಲಾಗಿತ್ತು. ನಂತರ ಆರೋಪಿಗಳ ಎಫ್.ಡಿ ಖಾತೆಯಲ್ಲಿ ಒಟ್ಟು 1.08 ಕೋಟಿ ಠೇವಣಿ ಪತ್ತೆಯಾಗಿತ್ತು. ಬ್ಯಾಂಕ್‌ಗಳ ಮೂಲಕ ಠೇವಣಿಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದರು.

ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಂದ ಪಡೆದಿದ್ದ 3.50 ಕೋಟಿ ರೂಪಾಯಿ ಹಣವನ್ನು ಚೈತ್ರಾ ಕುಂದಾಪುರ, ಶ್ರೀಕಾಂತ್ ಮತ್ತಿತರ ಆರೋಪಿಗಳು ಹಂಚಿಕೊಂಡಿದ್ದರು. ಹಣವನ್ನು ಆರೋಪಿಗಳು ಹಲವೆಡೆ ಹೂಡಿಕೆ ಮಾಡಿದ್ದರು. ಹೀಗಾಗಿ, ಅವರ ಖಾತೆಗಳಿರುವ ಬಾಗಲಕೋಟೆ, ಕುಂದಾಪುರ ಹಾಗೂ ಇತರೆಡೆಯ ಬ್ಯಾಂಕ್‌ಗಳಲ್ಲಿ ಭಾನುವಾರ ಶೋಧ ನಡೆದಿತ್ತು. ವಂಚನೆ ಹಣದಲ್ಲಿ ಆರೋಪಿಗಳು 12 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿದ್ದರು.

ಇದನ್ನೂ ಓದಿ:ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಆರೋಪಿಗಳ ಬ್ಯಾಂಕ್ ಖಾತೆ ಸ್ಥಗಿತ, ಕಾರು ಜಪ್ತಿ

Last Updated :Sep 21, 2023, 4:23 PM IST

ABOUT THE AUTHOR

...view details