ಕರ್ನಾಟಕ

karnataka

ಮುಧೋಳ ಬಳಿ ಟ್ರ್ಯಾಕ್ಟರ್ ಅಪಘಾತದಲ್ಲಿ ಇಬ್ಬರು ಸಾವು.. ಅಥಣಿಯಲ್ಲಿ ರಸ್ತೆಯಲ್ಲೇ ಯುವಕನ ಕೊಲೆ

By

Published : Jan 6, 2023, 7:21 PM IST

ತಾನೇ ಪೂಜೆ ಮಾಡುತ್ತಿದ್ದ ದೇವಾಲಯದಲ್ಲಿ ಅರ್ಚಕ ಹಾಗೂ ಆತನ ಸ್ನೇಹಿತರು ಕಳವು ಮಾಡಿ ಸಿಕ್ಕಿಬಿದ್ದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ 25ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದೆ.

two-killed-in-tractor-accident-in-bagalakote
ಮುಧೋಳ ಬಳಿ ಟ್ರ್ಯಾಕ್ಟರ್ ಅಪಘಾತದಲ್ಲಿ ಇಬ್ಬರು ಸಾವು.. ಅಥಣಿಯಲ್ಲಿ ರಸ್ತೆಯಲ್ಲೇ ಯುವಕನ ಕೊಲೆ

ಬಾಗಲಕೋಟೆ/ಬೆಳಗಾವಿ/ಚಾಮರಾಜನಗರ:ಓವರ್ ಟೇಕ್ ಮಾಡುವ ಭರದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ ಸಂಭವಿಸಿದೆ. ಗೋವಿಂದ್ ಪಾಟೀಲ್ (20) ಹಾಗೂ ಹನಮಂತ್ ಬೊಮ್ಮಕ್ಕನವರ್ (20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನುಮಂತ ಹುನಸಿಕಟ್ಟಿ ಎಂಬುವರ ಟ್ರ್ಯಾಕ್ಟರ್ ಅಪಘಾತಕ್ಕೀಡಾಗಿದೆ. ಒಟ್ಟಿಗೆ ತೆರಳುತ್ತಿದ್ದ ಎರಡು ಟ್ರ್ಯಾಕ್ಟರ್ ಚಾಲಕರು ಓವರ್ ಟೇಕ್ ಮಾಡಲು ಯತ್ನಿಸಿ ದುರಂತ ಸಂಭವಿಸಿದೆ.

ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್​​ಗೆ ಹಿಂಬದಿಯಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಆಗ ಮುಂದಿನ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮುಧೋಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯದಿಂದ ವಾಪಸ್​​ ಬರುವಾಗ ಘಟನೆ ಸಂಭವಿಸಿದೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕೊಲೆಯಾದ ಯುವಕ

ಯುವಕನ ಕೊಲೆ:ನಡುರಸ್ತೆಯಲ್ಲಿ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಡತರವಾಡಿ ಗ್ರಾಮ ಹೊರವಲಯದಲ್ಲಿ ನಡೆದಿದೆ. ಕೋಹಳ್ಳಿ (ಬಾವನಡ್ಡಿ) ಗ್ರಾಮದ ಕುಮಾರ ಮರಗಾಲೆ (48) ಕೊಲೆಯಾದ ವ್ಯಕ್ತಿ. ಪಡತರವಾಡಿ - ಕನಾಳ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಪ್ರವಾಸದ ಟ್ರ್ಯಾಕ್ಟರ್​ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿಗಳ ಟ್ರ್ಯಾಕ್ಟರ್ ಪಲ್ಟಿಯಾಗಿ 25ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿಯ ಕೊಳಗಿಯಲ್ಲಿ ನಡೆದಿದೆ. ಮಳಗಿಯ ಪದವಿ ಪೂರ್ವ ಕಾಲೇಜಿನ 45 ವಿದ್ಯಾರ್ಥಿನಿಯರಿದ್ದ ಟ್ರ್ಯಾಕ್ಟರ್ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ 8 ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೂಜೆ ಮಾಡುತ್ತಿದ್ದ ದೇಗುಲದಲ್ಲೇ ಕಳ್ಳತನ:ತಾನು ಪೂಜೆ ಮಾಡುತ್ತಿದ್ದ ದೇವಾಲಯದಲ್ಲೇ ಅರ್ಚಕ ಹಾಗೂ ಆತನ ಗ್ಯಾಂಗ್ ಕಳವು ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಡೆದಿದೆ. ದೇವಾಲಯದ ಅರ್ಚಕ ಸಿದ್ದೇಗೌಡ ಹಾಗೂ ಈತನ ಸ್ನೇಹಿತರಾದ ಕಿರಣ್, ಚೇತನ್ ಹಾಗೂ ಸಿದ್ದರಾಜು ಬಂಧಿತ ಆರೋಪಿಗಳಾಗಿದ್ದಾರೆ. ಗ್ರಾಮದ ಅಂಕಾಳಪರಮೇಶ್ವರಿ ದೇವಾಲಯದಲ್ಲಿ ಸಿದ್ದೇಗೌಡ ಅರ್ಚಕನಾಗಿದ್ದು, ಈತ ತನ್ನ ಸ್ನೇಹಿತರ ಜೊತೆ ಸೇರಿ ಗೋಲಕ ಕಳವು ಮಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದಾನೆ. ಬಂಧಿತರಿಂದ 9,800 ರೂ. ಹಣ, ಬೈಕ್ ವಶಪಡಿಸಿಕೊಂಡಿದ್ದು, ರಾಮಾಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನ್ನದಾತ ಆತ್ಮಹತ್ಯೆ:ಸಾಲಬಾಧೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದಲ್ಲಿ ನಡೆದಿದೆ‌. ಗುಂಡ್ಲುಪೇಟೆ ತಾಲ್ಲೂಕಿನ ರಂಗೂಪುರ ಗ್ರಾಮದ ಮಹದೇವೇಗೌಡ(50) ಮೃತ ದುರ್ದ್ಯೆವಿ. ಜಮೀನಿನಲ್ಲಿ ಬೆಳೆಗೆ ಸರಿಯಾದ ಬೆಲೆ ಸಿಗದೇ ಹಾಗೂ ಸತತ ಮಳೆಗೆ ನಾಶವಾಗಿತ್ತು. ಬ್ಯಾಂಕುಗಳು ಹಾಗೂ ಕೈ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೈತನ ಕುಟುಂಬವು ಮನೆಯ ಆಧಾರವನ್ನೇ ಕಳೆದುಕೊಂಡಿದೆ.

ಲಾರಿ ಪಲ್ಟಿ

ಲಾರಿ ಪಲ್ಟಿ ಚಾಲಕ ಸಾವು:ಲಾರಿ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಅಸುನೀಗಿರುವ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಸಮೀಪದ ಸೀನಪ್ಪನ ದೊಡ್ಡಿ ಎಂಬಲ್ಲಿ ನಡೆದಿದೆ. ಊಟಿ ಮೂಲದ ಅನೀಶ್ (27) ಮೃತ ಚಾಲಕನಾಗಿದ್ದು, ಲಾರಿಯಲ್ಲಿದ್ದ ಕ್ಲೀನರ್​​ಗೆ ಗಂಭೀರ ಗಾಯಗಳಾಗಿದೆ. ತಮಿಳುನಾಡಿನಿಂದ ಬರುತ್ತಿದ್ದ ವೇಳೆ ತಿರುವಿನಲ್ಲಿ ನಿಯಂತ್ರಣ ತಪ್ಪಿ, ರಸ್ತೆಬದಿಯ ಹಳ್ಳಕ್ಕೆ ಪಲ್ಟಿಯಾಗಿದೆ. ಸ್ಥಳಕ್ಕೆ ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿ, ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಲಾರಿ ಚಾಲಕ ಸೆರೆ: ಲಾರಿ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನ್ನಪ್ಪಿದ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಲಾರಿ ಚಾಲಕನನ್ನು ಪೊಲೀಸರು ಸೆರೆ ಹಿಡಿದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2016ರಲ್ಲಿ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿತ್ತು.

ಆರೋಪಿ ಲಾರಿ ಚಾಲಕ, ಕೇರಳದ ಕಾಸರಗೋಡು ಜಿಲ್ಲೆಯ ನೆಲ್ಲಿಕಾರು ನಿವಾಸಿ ನಜಾರ್ ಎನ್.ಎ. ಎಂಬಾತ ಕಳೆದ ಐದು ವರ್ಷಗಳಿಂದ ವಿದೇಶದಲ್ಲಿದ್ದು, ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಬಗ್ಗೆ ನ್ಯಾಯಾಲಯವು ಈತನ ಮೇಲೆ ಬಂಧನ ವಾರೆಂಟ್ ಜಾರಿ ಮಾಡಿತ್ತು. ಈತ ವಿದೇಶದಿಂದ ಬಂದಿದ್ದು, ಡಿ. 5ರಂದು ಬಿಸಿರೋಡು ಕಡೆಗೆ ಬರುತ್ತಿದ್ದ ಮಾಹಿತಿ ತಿಳಿದ ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ:ಪುತ್ತೂರಿನ ಇಬ್ಬರ ವಿರುದ್ಧ ಪೋಕ್ಸೋ ಕೇಸ್​ ದಾಖಲು: ಪ್ರೀತ್ಸೇ ಅಂತ ಕಿರುಕುಳ ನೀಡುತ್ತಿದ್ದವನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ

ABOUT THE AUTHOR

...view details