ಕರ್ನಾಟಕ

karnataka

ಜಮಖಂಡಿ ಸಹೋದರರ ಕೊಲೆ ಪ್ರಕರಣ: 12 ಆರೋಪಿಗಳ ಹೆಸರು ಪತ್ತೆ

By

Published : Aug 29, 2021, 12:59 PM IST

ಬಾಗಲಕೋಟೆಯ ಜಮಖಂಡಿಯಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿ ನಾಲ್ವರು ಸಹೋದರರನ್ನು ಕೊಲೆ ಮಾಡಲಾಗಿತ್ತು. ಪೊಲೀಸರು ಪ್ರಕರಣದ ತನಿಖೆ ತೀವ್ರಗೊಳಿಸಿ 12 ಜನ ಆರೋಪಿಗಳ ಹೆಸರು ಪತ್ತೆ ಹಚ್ಚಿದ್ದಾರೆ.

jamkhandi
ಸಹೋದರರ ಕೊಲೆಯಾದ ಸ್ಥಳ

ಬಾಗಲಕೋಟೆ: ಜಮೀನು ವಿಚಾರಕ್ಕೆ ಹೊಡೆದಾಟ ನಡೆದು ಒಂದೇ ಕುಟುಂಬದ ನಾಲ್ವರು ಹತ್ಯೆಯಾಗಿರುವ ಘಟನೆ ಜಮಖಂಡಿಯಲ್ಲಿ ನಡೆದಿತ್ತು. ಸಿನಿಮೀಯ ರೀತಿಯಲ್ಲಿ ಮೊದಲೇ ಸಂಚು ರೂಪಿಸಿ ಕೊಲೆಗೈದಿರುವುದು ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು 12 ಜನ ಆರೋಪಿಗಳ ಹೆಸರನ್ನು ಪತ್ತೆ ಹಚ್ಚಿದ್ದಾರೆ.

ಪುಟಾಣಿ ಮನೆತನಕ್ಕೆ ಸೇರಿದ ನಂದೀಶ್, ನಾಗಪ್ಪ, ಪರಪ್ಪ, ಈರಪ್ಪ, ಶಿವಾನಂದ, ಶಂಕರ್, ಅಂಬವ್ವ, ರುಕ್ಮವ್ವ, ಮಾಲಾಶ್ರಿ, ಸುನಂದಾ ಹಾಗೂ ನಿಡೋಣಿ ಮನೆತನಕ್ಕೆ ಸೇರಿದ ಪ್ರೇಮಾ ನಿಡೋಣಿ, ಚನ್ನಬಸಪ್ಪ ನಿಡೋಣಿ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ 9 ಜನರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಗಲಾಟೆಯಲ್ಲಿ ಮುದರೆಡ್ಡಿ ಎಂಬ ಕುಟುಂಬಕ್ಕೆ ಸೇರಿದ ನಾಲ್ವರು ಸಹೋದರರ ಹತ್ಯೆಯಾಗಿದ್ದು, ಹನಮಂತ (48), ಮಲ್ಲಪ್ಪ (44), ಈಶ್ವರ (40), ಬಸವರಾಜ್ (36) ಕೊಲೆಯಾಗಿದ್ದರು. ಮನೆಯಲ್ಲಿನ ಗಂಡು ಮಕ್ಕಳನ್ನು ಕಳೆದುಕೊಂಡ ವೃದ್ಧ ದಂಪತಿ ಹಾಗೂ ಪತಿಯನ್ನು ಕಳೆದುಕೊಂಡ ಪತ್ನಿಯರು ಕಣ್ಣೀರು ಹಾಕುತ್ತಿದ್ದಾರೆ.

ಮಹಾರಾಷ್ಟ್ರದಿಂದ ಬಂದ ಗೂಂಡಾಗಳು:ಹತ್ಯೆ ಮಾಡಲು ಮಹಾರಾಷ್ಟ್ರದಿಂದ ಕೆಲವು ಗುಂಡಾಗಳನ್ನು ಕರೆಸಿಕೊಂಡು ಬಂದಿದ್ದರು ಎನ್ನಲಾಗಿದೆ. ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಕಿರಾತಕರು, ಇಬ್ಬರು ಸಹೋದರರು ಹೊಲದಲ್ಲಿದ್ದ ಸಮಯದಲ್ಲಿ ಅವರ ಜೊತೆಗೆ ಗಲಾಟೆ ಮಾಡಿದ್ದಾರೆ. ಈ ಸಮಯದಲ್ಲಿ ಇಬ್ಬರು ಸಹೋದರರು ತಮ್ಮ ಇನ್ನಿಬ್ಬರು ಸಹೋದರರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾರೆ. ಆದರೆ ಸಹೋದರರು ಬರುವ ಮುನ್ನ ಜಮೀನಿನಲ್ಲಿದ್ದವರನ್ನು ಕೊಲೆಯಾಗಿದ್ದರು. ಅದಾದ ಬಳಿಕ ಮತ್ತೆ ಬಂದ ಸಹೋದರರನ್ನು ಹಲ್ಲೆ ಮಾಡಿ, ಹತ್ಯೆಗೈದಿದ್ದಾರೆ. ಇನ್ನು ಓರ್ವ ಸಹೋದರ ತನ್ನ ಹೆಂಡತಿ, ಮಕ್ಕಳ ಸಮೇತ ಆಗಮಿಸಿದ್ದಾನೆ. ಆದರೆ ಹತ್ಯೆಯ ದೃಶ್ಯ ಕಂಡ ಮಹಿಳೆ ತನ್ನಿಬ್ಬರು ಮಕ್ಕಳ ಜೊತೆಗೆ ಕಬ್ಬಿನ ಜಮೀನು ಮೂಲಕ ಪರಾರಿ ಆಗಿದ್ದಾಳೆ.

ಜಮೀನು ಗಲಾಟೆ:24 ಗುಂಟೆ ಜಾಗಕ್ಕೆ ಸಂಬಂಧಿಸಿ ಮುದರೆಡ್ಡಿ ಮತ್ತು ಪುಠಾಣಿ ಕುಟುಂಬಸ್ಥರ ಮಧ್ಯೆ ಕಳೆದ ಹಲವು ದಿನಗಳಿಂದ ವೈಮನಸ್ಸು ಇತ್ತು ಎನ್ನಲಾಗಿದೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ 2014ರಲ್ಲೇ ರಾಜಿಯಾಗಿ ವಿವಾದ ಅಂತ್ಯಗೊಂಡಿತ್ತು. ಮತ್ತೆ ಇತ್ತೀಚೆಗೆ ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು, ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ.

ಈ ಗಲಾಟೆಯಲ್ಲಿ ಮುದರೆಡ್ಡಿ ಕುಟುಂಬದ ಒಂದೇ ತಾಯಿಯ ಮಕ್ಕಳು, ನಾಲ್ವರು ಸಹೋದರರು ಸಾವನ್ನಪ್ಪಿದ್ದಾರೆ. ಈ ಸಹೋದರರಿಗೆ ಒಟ್ಟು 12 ಜನ ಮಕ್ಕಳು ಇದ್ದು, ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಘಟನೆಯಿಂದ ಇಡೀ ಜಮಖಂಡಿ ತಾಲೂಕು ತಲ್ಲಣಗೊಂಡಿದೆ. ಸ್ಥಳಕ್ಕೆ ಎಸ್​ಪಿ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details