ಕರ್ನಾಟಕ

karnataka

ಭಾರತ ವಿರುದ್ಧ ಐಸಿಸಿಗೆ ಮತ್ತೊಂದು ದೂರು ನೀಡಿದ ಪಾಕಿಸ್ತಾನ: ಈ ಬಾರಿ ವೀಸಾ, ಅಭಿಮಾನಿಗಳ ಬಗ್ಗೆ ಖ್ಯಾತೆ!

By ETV Bharat Karnataka Team

Published : Oct 17, 2023, 10:58 PM IST

ವಿಶ್ವಕಪ್​ಗೂ ಮುನ್ನ ಖ್ಯಾತೆ ತೆಗೆದಿದ್ದ ಪಾಕಿಸ್ತಾನ, ಭಾರತದ ವಿರುದ್ಧ ಈಗ ಮತ್ತೊಂದು ದೂರು ಹಿಡಿದುಕೊಂಡು ಐಸಿಸಿ ಮುಂದೆ ಹೋಗಿದೆ.

ಭಾರತ ವಿರುದ್ಧ ಐಸಿಸಿಗೆ ದೂರು
ಭಾರತ ವಿರುದ್ಧ ಐಸಿಸಿಗೆ ದೂರು

ಹೈದರಾಬಾದ್:ಭಾರತದೊಂದಿಗೆ ಕಿರಿಕ್​ ಮಾಡುತ್ತಲೇ ಇರುವ ಪಾಕಿಸ್ತಾನಕ್ಕೆ ಕೇಂದ್ರ ಸರ್ಕಾರದ ಬಿಗಿ ಕ್ರಮಗಳು ಬಿಸಿ ಮುಟ್ಟಿಸಿವೆ. ಅದು ಕ್ರೀಡೆಗೂ ತಟ್ಟಿದೆ. ವಿಶ್ವಕಪ್​ನ ಆಡಲು ಭಾರತಕ್ಕೆ ಬಂದಿರುವ ತಂಡ ಸೋಲು ಗೆಲುವು ಕಾಣುತ್ತಿದ್ದರೆ, ಅದನ್ನು ಚಿಯರ್​ ಮಾಡಲು ಅಭಿಮಾನಿಗಳೇ ಇಲ್ಲವಾಗಿದ್ದಾರೆ. ಜೊತೆಗೆ ತಮ್ಮ ಪತ್ರಕರ್ತರು ವರದಿ ಮಾಡಲು ಭಾರತಕ್ಕೆ ಬರಲು ಸರ್ಕಾರ ಬಿಡುತ್ತಿಲ್ಲ. ಅಭಿಮಾನಿಗಳನ್ನೂ ಇದೇ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಐಸಿಸಿಗೆ ಮಂಗಳವಾರ ದೂರು ನೀಡಿದೆ.

ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ಅನ್ನು ವರದಿ ಮಾಡಲು ಪಾಕಿಸ್ತಾನಿ ಜರ್ನಲಿಸ್ಟ್​​ಗಳಿಗೆ ವೀಸಾ ವಿಳಂಬ ಮಾಡಲಾಗುತ್ತಿದೆ. ಅಭಿಮಾನಿಗಳಿಗೂ ಬರಲು ಅವಕಾಶ ನೀಡಲಾಗುತ್ತಿಲ್ಲ. ಜೊತೆಗೆ ವಿಶ್ವಕಪ್​ನಲ್ಲಿ ತಂಡವನ್ನು ಗುರಿ ಮಾಡಲಾಗಿದೆ ಎಂದು ಆರೋಪಿಸಿ ಪಾಕ್​ ಕ್ರಿಕೆಟ್​ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಔಪಚಾರಿಕ ಪ್ರತಿಭಟನೆ ಸಲ್ಲಿಸಿದೆ.

ಪಾಕಿಸ್ತಾನ ಪ್ರತಿಭಟನೆ:ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಇಬ್ಬರು ಪಾಕಿಸ್ತಾನಿ ಕ್ರೀಡಾ ಪತ್ರಕರ್ತರು ಮಾತ್ರ ಹಾಜರಿದ್ದರು. 1.32 ಲಕ್ಷ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಪಾಕಿಸ್ತಾನಿ ಅಭಿಮಾನಿಗಳು ಯಾರೂ ಇರಲಿಲ್ಲ. ಇಲ್ಲಿನ ಸರ್ಕಾರ ತನ್ನ ಅಭಿಮಾನಿಗಳಿಗೆ ವೀಸಾ ಮಂಜೂರು ಮಾಡುತ್ತಿಲ್ಲ ಎಂದು ವೀಸಾ ರಹಿತ ನೀತಿಯ ವಿರುದ್ಧ ಪ್ರತಿಭಟನಾತ್ಮಕ ದೂರು ನೀಡಿದೆ.

ಇದನ್ನು ತನ್ನ ಅಧಿಕೃತ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿರುವ ಪಿಸಿಬಿ ಮೀಡಿಯಾ, 'ಪಾಕಿಸ್ತಾನಿ ಪತ್ರಕರ್ತರಿಗೆ ವೀಸಾ ವಿಳಂಬ ಮತ್ತು ಅಭಿಮಾನಿಗಳಿಗೆ ವೀಸಾ ನಿರಾಕರಿಸಲಾಗಿದೆ. ಈ ಬಗ್ಗೆ ಐಸಿಸಿಗೆ ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಲಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದ ವೇಳೆ ಪಾಕಿಸ್ತಾನ ತಂಡವನ್ನು ಗುರಿಯಾಗಿಸಿಕೊಂಡು ಅನುಚಿತ ವರ್ತನೆ ತೋರಲಾಗಿದೆ ಎಂದು ಬರೆದುಕೊಂಡಿದೆ.

ಅಭಿಮಾನಿಗಳಿಂದ ಅನುಚಿತ ವರ್ತನೆ ಆರೋಪ:ಮಾಧ್ಯಮಗಳಲ್ಲಿ ವರದಿಯಾದ ಪ್ರಕಾರ, ಭಾರತ ವಿರುದ್ಧದ ಪಂದ್ಯದಲ್ಲಿ ರೋಹಿತ್​ ಶರ್ಮಾ ಭರ್ಜರಿ ಬ್ಯಾಟಿಂಗ್​ ನಡೆಸುತ್ತಿರುವಾಗ ಪಾಕಿಸ್ತಾನ ಕ್ರಿಕೆಟಿಗರನ್ನು ಭಾರತದ ಅಭಿಮಾನಿಗಳು ಛೇಡಿಸಿದ್ದಾರೆ. ಅವರನ್ನೇ ಗುರಿಯಾಗಿಸಿಕೊಂಡು ಬೊಬ್ಬೆ ಹಾಕಿದ್ದಾರೆ. ಇದು ಅನುಚಿತ ವರ್ತನೆ ಎಂದು ಪಿಸಿಬಿ ದೂರಿದೆ. ಅಹಮದಾಬಾದ್​ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯವನ್ನು ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಅವರ ವೀಕ್ಷಿಸಿದರು.

ಪಾಕಿಸ್ತಾನ ತಂಡವು ವಿಶ್ವಕಪ್ ಅಭಿಯಾನವನ್ನು ಹೈದರಾಬಾದ್‌ನಿಂದ ಪ್ರಾರಂಭಿಸಿತು. ಎರಡೂ ಪಂದ್ಯಗಳನ್ನು ಇಲ್ಲಿಯೇ ಆಡಿದ್ದ ತಂಡ ನೆದರ್​ಲ್ಯಾಂಡ್​ ಮತ್ತು ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದೆ. ಭಾರತ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸೋತು ಸತತ 8ನೇ ಬಾರಿಗೆ ಮಂಡಿಯೂರಿತು. ಮುಂದಿನ ಪಂದ್ಯವನ್ನು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಅಕ್ಟೋಬರ್ 20 ರಂದು ಬೆಂಗಳೂರಿನಲ್ಲಿ ಎದುರಿಸಲಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ; ಹಲವರಿಗೆ ವೈರಲ್​ ಫೀವರ್​​, ವೈದ್ಯಕೀಯ ನಿಗಾ

ABOUT THE AUTHOR

...view details