ಕರ್ನಾಟಕ

karnataka

ಲಕ್ನೋ ಸೂಪರ್ ಜೈಂಟ್ಸ್ ತೊರೆದು ಕೆಕೆಆರ್‌ಗೆ​ ಮರಳಿದ ಗೌತಮ್​ ಗಂಭೀರ್

By ETV Bharat Karnataka Team

Published : Nov 22, 2023, 1:14 PM IST

Gautam Gambhir joins Kolkata Knight Riders: ಲಕ್ನೋ ಸೂಪರ್ ಜೈಂಟ್ಸ್​ನ ಎರಡು ವರ್ಷದ ಮೆಂಟರ್​ ಹುದ್ದೆಗೆ ಗೌತಮ್​ ಗಂಭೀರ್​ ರಾಜೀನಾಮೆ ನೀಡಿದ್ದು, ಮತ್ತೆ ಕೆಕೆಆರ್​ ಸೇರುತ್ತಿದ್ದಾರೆ.

Gautam Gambhir
Gautam Gambhir

ಹೈದರಾಬಾದ್​:ಎರಡು ವರ್ಷಗಳ ಕಾಲ ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿ ಮೆಂಟರ್ ಪಾತ್ರ ನಿರ್ವಹಿಸಿದ ಗೌತಮ್ ಗಂಭೀರ್ ಇದೀಗ ತಂಡದೊಂದಿಗೆ ತಮ್ಮ ಪ್ರಯಾಣಕ್ಕೆ ಅಂತ್ಯ ಹಾಡಿದ್ದಾರೆ. ಅಲ್ಲದೇ ಮತ್ತೆ ಕೋಲ್ಕತ್ತಾ ನೈಟ್​ ರೈಡರ್ಸ್​ ಸೇರಿಕೊಂಡಿದ್ದಾರೆ. 2012 ಮತ್ತು 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ಗೌತಿ ನಾಯಕತ್ವದಲ್ಲಿ ಚಾಂಪಿಯನ್​ ಆಗಿತ್ತು. 2024ರ ಐಪಿಎಲ್​ ಆವೃತ್ತಿಗೆ ತಂಡದ ಮಾರ್ಗದರ್ಶಕರಾಗಿ ಫ್ರಾಂಚೈಸಿಗೆ ಮರಳಲಿದ್ದಾರೆ.

ಎಕ್ಸ್​ ಖಾತೆಯಲ್ಲಿ ಮಾಹಿತಿ ನೀಡಿರುವ ಗಂಭೀರ್, ಲಕ್ನೋ ಸೂಪರ್ ಜೈಂಟ್ಸ್ ಜೊತೆಗಿನ ನನ್ನ ಪಯಣ ಅಂತ್ಯವಾಗಿದೆ ಎಂದು ರಾಜೀನಾಮೆ ಪತ್ರವನ್ನು ಪ್ರಕಟಿಸಿ, ಎರಡು ವರ್ಷ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಪೋಸ್ಟ್​ ಶೇರ್​ ಮಾಡಿದ್ದು, ಅದರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ 23 ನಂ. ಜರ್ಸಿ ಹಾಕಿಕೊಂಡಿದ್ದು ಮತ್ತೆ ತಂಡಕ್ಕೆ ಮರಳುವುದಾಗಿ ತಿಳಿಸಿದ್ದಾರೆ.

"ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗಿನ ನನ್ನ ಪ್ರಯಾಣ ಮುಗಿದಿದೆ. ಈ ಪ್ರಯಾಣವನ್ನು ಸ್ಮರಣೀಯವಾಗಿಸಿದ ಎಲ್ಲಾ ಆಟಗಾರರು, ತರಬೇತುದಾರರು, ಸಹಾಯಕ ಸಿಬ್ಬಂದಿ ಮತ್ತು ಪ್ರತಿಯೊಬ್ಬರಿಗೆ ಅಪಾರ ಪ್ರೀತಿ ಮತ್ತು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಈ ಮಹತ್ವದ ಫ್ರಾಂಚೈಸಿಯನ್ನು ರಚಿಸುವಾಗ ಸ್ಪೂರ್ತಿದಾಯಕ ನಾಯಕತ್ವ ಮತ್ತು ನನ್ನೆಲ್ಲಾ ಪ್ರಯತ್ನಗಳಿಗೆ ನೀಡಿದ ಬೆಂಬಲಕ್ಕಾಗಿ ನಾನು ಡಾ.ಸಂಜೀವ್ ಗೋಯೆಂಕಾರಿಗೆ ಧನ್ಯವಾದ ಹೇಳಬಯಸುತ್ತೇನೆ. ತಂಡವು ಭವಿಷ್ಯದಲ್ಲಿ ಅದ್ಭುತಗಳನ್ನು ಮಾಡುತ್ತದೆ. ಪ್ರತಿಯೊಬ್ಬ ಎಲ್​ಎಸ್​ಜಿ ಅಭಿಮಾನಿಯನ್ನೂ ಹೆಮ್ಮೆಪಡಿಸುತ್ತದೆ ಎಂದು ನನಗೆ ಖಾತ್ರಿಯಿದೆ" ಎಂದು ಬರೆದಿದ್ದಾರೆ.

ಗಂಭೀರ್​ ಕೆಕೆಆರ್​ ಪಯಣ: ಗೌತಮ್ ಗಂಭೀರ್ ಏಳು ವರ್ಷಗಳ ಕಾಲ ಕೆಕೆಆರ್‌ ಭಾಗವಾಗಿದ್ದರು. 2011-17ರವರೆಗೆ ತಂಡದ ನಾಯಕರಾಗಿದ್ದರು. ಗೌತಿ ನಾಯಕತ್ವದಲ್ಲಿ ತಂಡವು ಎರಡು ಬಾರಿ (2012 ಮತ್ತು 2014 ಐಪಿಎಲ್ ಸೀಸನ್) ಪ್ರಶಸ್ತಿ ಗೆದ್ದುಕೊಂಡಿತ್ತು. ಐದು ಬಾರಿ ಪ್ಲೇಆಫ್‌ಗೆ ಅರ್ಹತೆ ಗಳಿಸಿದೆ. 2014ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಫೈನಲ್‌ಗೆ ತಲುಪಿತ್ತು.

ಕೆಕೆಆರ್​ಗೆ ಮರಳಿರುವ ಬಗ್ಗೆ ಮಾತನಾಡಿರುವ ಗೌತಿ, "ನಾನು ಭಾವನಾತ್ಮಕ ವ್ಯಕ್ತಿಯಲ್ಲ. ನಾನು ಹೆಚ್ಚಿನ ವಿಷಯಗಳ ಬಗ್ಗೆ ಚಿಂತಿಸುವುದಿಲ್ಲ. ಇದು ವಿಭಿನ್ನವಾಗಿದೆ. ಏಕೆಂದರೆ ನನ್ನ ಪಯಣ ಎಲ್ಲಿಂದ ಆರಂಭವಾಯಿತೋ ಅಲ್ಲಿಗೆ ಮರಳುತ್ತಿದ್ದೇನೆ. ಮತ್ತೊಮ್ಮೆ ನೇರಳೆ ಮತ್ತು ಚಿನ್ನದ ಜೆರ್ಸಿ ತೊಡುತ್ತಿದ್ದೇನೆ. ನಾನು ಕೆಕೆಆರ್‌ಗೆ ಹಿಂತಿರುಗುವುದು ಮಾತ್ರವಲ್ಲ, ಸಂತೋಷದ ನಗರಕ್ಕೆ ಮರಳುತ್ತಿದ್ದೇನೆ" ಎಂದಿದ್ದಾರೆ.

ಕೆಕೆಆರ್​ ಸಹಮಾಲೀಕರಾದ ಶಾರುಖ್ ಖಾನ್​ ಗಂಭೀರ್ ಅವರನ್ನು ಸ್ವಾಗತಿಸಿದ್ದಾರೆ. "ಗೌತಮ್ ಯಾವಾಗಲೂ ಕುಟುಂಬದ ಭಾಗವಾಗಿದ್ದಾರೆ. ಇದೀಗ ನಮ್ಮ ಕ್ಯಾಪ್ಟನ್ ವಿಭಿನ್ನ ಅವತಾರದಲ್ಲಿ "ಮಾರ್ಗದರ್ಶಕರಾಗಿ" ಮರಳುತ್ತಿದ್ದಾರೆ. ನಾವು ಅವರನ್ನು ಮಿಸ್​ ಮಾಡಿಕೊಂಡಿದ್ದೆವು, ಈಗ ನಾವೆಲ್ಲರೂ ಚಂದು ಸರ್ ಮತ್ತು ಗೌತಮ್ ಅವರನ್ನು ಎದುರು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾ​ ಕ್ರಿಕೆಟಿಗರು, ಕುಟುಂಬವನ್ನು ಟ್ರೋಲ್​ ಮಾಡುವುದು ಕೆಟ್ಟ ಅಭಿರುಚಿ: ಹರ್ಭಜನ್​ ಸಿಂಗ್

ABOUT THE AUTHOR

...view details