ಕರ್ನಾಟಕ

karnataka

ವಿಶ್ವಕಪ್​ನಲ್ಲಿ ಬೌಲಿಂಗ್​ ವಿಭಾಗ ಅತ್ಯುತ್ತಮ ಪ್ರದರ್ಶನ ನೀಡಿದೆ: ರೋಹಿತ್​ ಶರ್ಮಾ

By ETV Bharat Karnataka Team

Published : Nov 18, 2023, 9:21 PM IST

Rohit Sharma on World Cup grand finale: ಏಕದಿನ ವಿಶ್ವಕಪ್​ನ ಫೈನಲ್​ ಪಂದ್ಯದ ಬಗ್ಗೆ ಮಾತನಾಡಿರುವ ರೋಹಿತ್​ ಶರ್ಮಾ, ಎದುರಾಳಿ ಯಾರೆಂದು ನೋಡುವ ಬದಲು ನಮ್ಮ ಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತೇವೆ ಎಂದಿದ್ದಾರೆ.

Rohit Sharma
Rohit Sharma

ಅಹಮದಾಬಾದ್ (ಗುಜರಾತ್​): ಹಿಂದಿನ ಅಂಕಿ - ಅಂಶಗಳು ಮತ್ತು ಗೆಲುವು - ಸೋಲು ನಾಳಿನ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅವುಗಳು ಕೇವಲ ಅನುಭವ ಆಗಿರುತ್ತದೆ. 2011ರ ಗೆದ್ದ ತಂಡದಲ್ಲಿ ವಿರಾಟ್​ ಆಡಿದ್ದರು. ವಿರಾಟ್​ ಅನುಭವ ತಂಡಕ್ಕೆ ಒತ್ತಡ ನಿವಾರಿಸುವಲ್ಲಿ ಸಹಕಾರಿ ಆಗಲಿದೆ. ಕಳೆದ 10 ಪಂದ್ಯಗಳನ್ನು ಏನು ಮಾಡಿದ್ದೇವೋ ಅದನ್ನೇ ಮುಂದುವರೆಸಲು ಇಚ್ಛಿಸುತ್ತೇವೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಪಂದ್ಯಕ್ಕೂ ಮುನ್ನಾದಿನ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

2023ರ ವಿಶ್ವಕಪ್​ನಲ್ಲಿ ಮೊದಲ ನಾಲ್ಕು ಪಂದ್ಯದಲ್ಲಿ ಹೊರಗುಳಿದಿದ್ದ ಮೊಹಮ್ಮದ್​ ಶಮಿ ಹಾರ್ದಿಕ್​ ಪಾಂಡ್ಯ ಅವರ ಗಾಯಗೊಂಡು ತಂಡದಿಂದ ಹೊರಗುಳಿದ ನಂತರ ಹನ್ನೊಂದರ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡರು. ಈ ವಿಶ್ವಕಪ್​ನಲ್ಲಿ ಮೊದಲ ಪಂದ್ಯವನ್ನಾಡಿದ ಶಮಿ 5 ವಿಕೆಟ್​ ಪಡೆದು ಮಿಂಚಿದರು. ನಂತರ ಶಮಿಯನ್ನು ಹಿಮ್ಮೆಟಿಸಲು ಯಾರಿಂದಲೂ ಆಗಲಿಲ್ಲ. ಸದ್ಯ ಈ ವಿಶ್ವಕಪ್​ನಲ್ಲಿ ಹೆಚ್ಚು ವಿಕೆಟ್​ ಪಡೆದ ಆಟಗಾರ​ ಆಗಿದ್ದಾರೆ.

ಬೌಲಿಂಗ್​ ಪ್ರದರ್ಶನ ಮೆಚ್ಚಿದ ನಾಯಕ:ಮೊಹಮ್ಮದ್​ ಶಮಿಯ ಪ್ರದರ್ಶನದ ಬಗ್ಗೆ ಕೇಳಿದಾಗ ಶರ್ಮಾ,"ಶಮಿ ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಆಡಿಸುವುದು ಕಠಿಣವಾಗಿತ್ತು. ಆದರೆ ಅವರು ಸಿರಾಜ್ ಮತ್ತು ಬುಮ್ರಾ ತಂಡಕ್ಕೆ ಸಹಾಯ ಮಾಡಲು ತಂಡದಲ್ಲಿದ್ದರು. ಹೊರಗಿದ್ದು ಅವರು ಮಾಡುತ್ತಿದ್ದ ಕೆಲಸಗಳು ತಂಡದ ಆಟಗಾರನಾಗಿ ಅವರ ಗುಣಮಟ್ಟವನ್ನು ತೋರಿಸುತ್ತದೆ. ಅವರಿಗೆ ಒಮ್ಮೆ ಅವಕಾಶ ಸಿಕ್ಕಿತು, ಅದನ್ನು ಸರಿಯಾಗಿ ಬಳಿಸಿಕೊಂಡರು. ನಂತರ ಅವರ ಪ್ರದರ್ಶನವನ್ನು ನಾವೆಲ್ಲರೂ ನೋಡಿದ್ದೇವೆ" ಎಂದರು.

"ಈ ಪಂದ್ಯಾವಳಿಯಲ್ಲಿ ಬೌಲರ್‌ಗಳು ನಮಗೆ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ವೇಗಿಗಳು ಮತ್ತು ಸ್ಪಿನ್ನರ್‌ಗಳು ಅದ್ಭುತವಾಗಿದ್ದಾರೆ. ನಾವು ಡಿಫೆಂಡ್ ಮಾಡುವಾಗ ಬೌಲಿಂಗ್​ ಕ್ಷೇತ್ರ ಅತ್ಯುತ್ತಮ ನಿರ್ವಹಣೆ ಮಾಡಿದೆ. ಜಸ್ಪ್ರೀತ್​ ಬುಮ್ರಾ, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್ ಅತ್ಯುತ್ತಮವಾಗಿದ್ದಾರೆ. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್​ಗಳು ವಿಕೆಟ್‌ ಕಬಳಿಸಿ ಅದೇ ಕೆಲಸವನ್ನು ಮಾಡಿದ್ದಾರೆ" ಎಂದು ನಾಯಕ ಟೂರ್ನಿಯ ಕೊನೆಯ ಪಂದ್ಯಕ್ಕೂ ಮುನ್ನ ಬೌಲಿಂಗ್​ ವಿಭಾಗಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೆಟ್ಸ್​ನಲ್ಲಿ ಅಶ್ವಿನ್​ ಅವರು ಬ್ಯಾಟಿಂಗ್​ ಮತ್ತು ಬೌಲಿಂಗ್​ ತರಬೇತಿಯಲ್ಲಿ ಹೆಚ್ಚು ಹೊತ್ತು ಕಂಡುಬಂದಿದ್ದರು. ಹೀಗಾಗಿ ಫೈನಲ್​ನಲ್ಲಿ ಅವರಿಗೆ ಸ್ಥಾನ ಸಿಗಲಿದೆಯೇ ಎಂದು ಕೇಳಿದ ಪ್ರಶ್ನೆಗೆ,"ಫೈನಲ್​ ಪಂದ್ಯವನ್ನು ಆಡುವ ಹನ್ನೊಂದರ ಬಳಗದ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ಪಿಚ್​ಗೆ ಅನುಗುಣವಾಗಿ ತಂಡದ ಆಯ್ಕೆ ಮಾಡುತ್ತೇವೆ" ಎಂದು ಹೇಳಿದ್ದರು.

ಹಿಂದಿನ ಸೋಲಿನ ಬಗ್ಗೆ ಮಾತನಾಡಿದ ಅವರು, 2015 ವಿಶ್ವಕಪ್​ನ ಸೆಮೀಸ್​ ಗೆಲುವು ಆಸ್ಟ್ರೇಲಿಯಾಕ್ಕೆ ಹೆಚ್ಚಿನ ಲಾಭವಾಗಲಿದೆ ಎಂದು ನಾನು ಭಾವಿಸುವುದಿಲ್ಲ. 2015ರ ವಿಶ್ವಕಪ್ ಎಂಟು ವರ್ಷಗಳ ಹಿಂದೆ ಸಂಭವಿಸಿದೆ. ನಮ್ಮಲ್ಲಿ ಇಬ್ಬರು ಆಟಗಾರರು 2011 ವಿಶ್ವಕಪ್ ಆಡಿದ (ರವಿಚಂದ್ರನ್ ಅಶ್ವಿನ್ ಮತ್ತು ವಿರಾಟ್ ಕೊಹ್ಲಿ). ಫೈನಲ್ ಪಂದ್ಯದಲ್ಲಿ ವಿರಾಟ್ ಆಡಿದ್ದರು'' ಎಂದಿದ್ದಾರೆ.

ಫೈನಲ್​ ಪಂದ್ಯವನ್ನು ಆಡುತ್ತಿರುವ ಕ್ಷಣದ ಬಗ್ಗೆ ಮಾತನಾಡಿದ ರೋಹಿತ್​,"ನಿಸ್ಸಂದೇಹವಾಗಿ, ಇದು ಒಂದು ದೊಡ್ಡ ಸಂದರ್ಭವಾಗಿದೆ. ಇದು ನಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ದೊಡ್ಡ ಕ್ಷಣವಾಗಿದೆ. ಶಾಂತ, ಸಂಯೋಜಿತವಾಗಿರುವುದು ಮುಖ್ಯ ಏಕೆಂದರೆ ಯೋಜನೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸಬಹುದು. ವಿಶ್ವಕಪ್‌ಗಳನ್ನು ನೋಡುತ್ತಾ ಬೆಳೆದ ನನಗೆ ಇದು ದೊಡ್ಡ ಸಂದರ್ಭವಾಗಿದೆ" ಎಂದರು.

ಒತ್ತಡ ಏನು ಎಂದು ಅರಿವಿದೆ:ಅಭಿಮಾನಿಗಳ ನಿರೀಕ್ಷೆ ಬಗ್ಗೆ ಮಾತನಾಡಿದ ಅವರು, "ಹೊರಗಿನ ವಾತಾವರಣ, ನಿರೀಕ್ಷೆಗಳು ಮತ್ತು ಒತ್ತಡ ಏನು ಎಂಬುದು ನಮಗೆ ತಿಳಿದಿದೆ. ಆದರೆ ನಾವು ನಮ್ಮ ಆಟಕ್ಕೆ ಏನುಬೇಕೂ ಅದನ್ನು ಮಾಡುವುದು ಮುಖ್ಯ. ನಾವು ಡ್ರೆಸ್ಸಿಂಗ್ ಕೋಣೆಯಲ್ಲಿ ಶಾಂತತೆಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡಿದ್ದೇವೆ. ಅದು ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ" ಎಂದು ರೋಹಿತ್ ಹೇಳಿದ್ದಾರೆ.

ದ್ರಾವಿಡ್ ಉತ್ತಮ ತರಬೇತುದಾರ:ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಅವರ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ, "ರಾಹುಲ್ ದ್ರಾವಿಡ್ ಅವರ ಪಾತ್ರವು ಸಂಪೂರ್ಣವಾಗಿ ದೊಡ್ಡದಾಗಿದೆ, ವಿಶೇಷವಾಗಿ ಆಟಗಾರರಿಗೆ ಪಾತ್ರದ ಸ್ಪಷ್ಟತೆ ನೀಡುವ ವಿಷಯದಲ್ಲಿ. ದ್ರಾವಿಡ್​ ಆಡಿದ ಆಟ, ನಾವು ಆಡುತ್ತಿರುವ ಆಟಕ್ಕೆ ಬಹಳ ವ್ಯತ್ಯಾಸ ಇರಬಹುದು ಆದರೆ, ಅವರು ತೆಗೆದುಕೊಳ್ಳುವ ನಿರ್ಧಾರ ಮತ್ತು ನಮಗೆ ತಂಡದಲ್ಲಿ ನೀಡಿರುವ ಸ್ವಾತಂತ್ರ್ಯ ಪ್ರದರ್ಶನಕ್ಕೆ ನೆರವಾಗುತ್ತಿದೆ" ಎಂದರು.

ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತೇವೆ:ಎದುರಾಳಿ ತಂಡದ ಬಗ್ಗೆ ಮಾತನಾಡಿ ರೋಹಿತ್​,"ಆಸ್ಟ್ರೇಲಿಯಾ ಉತ್ತಮ ಕ್ರಿಕೆಟ್ ಆಡಿದೆ ಮತ್ತು ಎರಡೂ ತಂಡಗಳು ಫೈನಲ್‌ಗೆ ಅರ್ಹವಾಗಿವೆ. ಆಸ್ಟ್ರೇಲಿಯಾ ಏನು ಮಾಡಬಹುದೆಂದು ನಮಗೆ ತಿಳಿದಿದೆ. ನಾವು ಏನು ಮಾಡ ಬಹುದು ಎಂಬುದರ ಬಗ್ಗೆ ಹೆಚ್ಚು ಕೇಂದ್ರೀಕರಿಸಲು ಬಯಸುತ್ತೇವೆ. ಅವರು ಯಾವ ರೀತಿಯ ಫಾರ್ಮ್‌ನಲ್ಲಿದ್ದಾರೆ ಎಂಬುದರ ಬಗ್ಗೆ ನಾವು ಚಿಂತಿಸುವುದಿಲ್ಲ, ನಮ್ಮ ಕ್ರಿಕೆಟ್ ಮತ್ತು ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತೇವೆ" ಎಂದಿದ್ದಾರೆ.

ಇದನ್ನೂ ಓದಿ:ಟೀಮ್​ ಇಂಡಿಯಾಕ್ಕೆ ದೊಡ್ಡ ಬೆಂಬಲ ಇರುತ್ತದೆ, ಅದನ್ನು ಎದುರಿಸುವುದೇ ತಂಡಕ್ಕೆ ಸವಾಲು: ಕಮಿನ್ಸ್​​

ABOUT THE AUTHOR

...view details